ಹಾಸನ: ಜಿಲ್ಲೆಯಾದ್ಯಂತ ಅ.14 ರಿಂದ ನವೆಂಬರ್.4 ರವರೆಗೆ ನಡೆಯುವ 16ನೇ ಸುತ್ತಿನ ಸಾಮೂಹಿಕ ಕಾಲು, ಬಾಯಿ ರೋಗ ಲಸಿಕಾ ಕಾರ್ಯಕ್ರಮವನ್ನು ಎಲ್ಲಾ ಜಾನುವಾರುಗಳಿಗೆ ಯಾವುದೇ ಲೋಪದೋಷವಿಲ್ಲದಂತೆ ನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಪಶು ಪಾಲಾನಾ ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು 16 ನೇ ಸುತ್ತಿನ ಸಾಮೂಹಿಕ ಕಾಲು ಮತ್ತು ಬಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮದ ಪೂರ್ವಭಾವಿ ಸಿದ್ದತಾ ಸಭೆ ನಡೆಸಿ ಮಾತನಾಡಿದ ಅವರು ದನ, ಎಮ್ಮೆ, ಕುರಿ, ಮೇಕೆ, ಹಂದಿಗಳಂತಹ ಸಾಕು ಪ್ರಾಣಿಗಳಲ್ಲಿ ವೈರಸ್ ನಿಂದ ಉಂಟಾಗುವ ರೋಗವನ್ನು ನಿಯಂತ್ರಣಕ್ಕೆ ತರುವಲ್ಲಿ ಪಶು ಸಂಗೋಪನಾ ಇಲಾಖೆಯು ಹೆಚ್ಚಿನ ಗಮನಹರಿಸಬೇಕು ಎಂದರು.
ಜಾನುವಾರುಗಳಲ್ಲಿ ರೋಗ ನಿರ್ಮೂಲನೆ ಮಾಡಲು ಸಾಮೂಹಿಕ ರೋಗ ನಿರೋಧಕ ಲಸಿಕೆಯನ್ನು ಹಾಕುವ ಮೂಲಕ ಪ್ರಾಣಿಜನ್ಯ ಉತ್ಪನ್ನಗಳಲ್ಲಿ ಗುಣಮಟ್ಟದ ದೋಷಗಳು ಉಂಟಾಗದಂತೆ ನಿಗಾವಹಿಸಿ ಎಂದು ಪಶು ಸಂಗೋಪನಾ ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು.
ಬಯಲು ಪ್ರದೇಶಗಳಲ್ಲಿ 100 ರಿಂದ 120 ರಾಸುಗಳಿಗೆ ಒಂದು ಬ್ಲಾಕ್ನಂತೆ ಮಲೆನಾಡು ಪ್ರದೇಶದಲ್ಲಿ 60 ರಿಂದ 70 ರಾಸುಗಳಿಗೆ ಒಂದು ಬ್ಲಾಕ್ ನಂತೆ ಪಟ್ಟಿ ಮಾಡಿ ಪರಿಷ್ಕರಿಸಿ ಲಸಿಕಾ ಕಾರ್ಯಕ್ರಮಕ್ಕೆ ಕ್ರಮ ಕೈಗೊಳ್ಳಬೇಕು ಯಾವುದೇ ಜಾನುವಾರುಗಳು ಇದರಿಂದ ಹೊರಗುಳಿಯದಂತೆ ಮುಂಜಾಗೃತೆ ವಹಿಸಿ ಎಂದರಲ್ಲದೇ, ಜಿಲ್ಲಾ ಹಾಲು ಒಕ್ಕೂಟದಿಂದ 40 ವಾಹನಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಪ್ರಬಾರ ಅಪರ ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಡಾ. ಹೆಚ್.ಎಲ್ ನಾಗರಾಜ್ ಅವರು ಮಾತನಾಡಿ ಲಸಿಕಾ ಕಾರ್ಯಕ್ರಮಕ್ಕೆ ಅಗತ್ಯವಿರುವ ಲಸಿಕೆ, ಸಿರಿಂಜ್ಗಳು, ನೀಡಲ್ಗಳನ್ನು ವ್ಯವಸ್ಥಿತವಾಗಿ ಒದಗಿಸಬೇಕು ಎಂದರು.
ಪ್ರತಿ 6 ತಿಂಗಳಿಗೊಮ್ಮೆ ಸರ್ಕಾರದ ಆದೇಶ ಹಾಗೂ ಮಾರ್ಗಸೂಚಿಯನ್ವರ ದನ, ಎಮ್ಮೆ ಮತ್ತು ಹಂದಿಗಳಿಗೆ ಸಾಮೂಹಿಕವಾಗಿ ಕಾಲು ಬಾಯಿ ಜ್ವರ ರೋಗ ನಿರೋಧಕ ಲಸಿಕೆಯನ್ನು ಹಾಕಬೇಕು, ಈ ಸಂಬಂಧ ರೈತರಿಗೆ, ಸಾರ್ವಜನಿಕರಿಗೆ ಹೆಚ್ಚಿನ ರೀತಿಯಲ್ಲಿ ಜಾಗೃತಿ ಮೂಡಿಸಿ ಎಂದು ತಿಳಿಸಿದರು.
ಪಶು ಸಂಗೋಪನಾ ಇಲಾಖೆಯ ಪ್ರಭಾರ ಉಪ ನಿರ್ದೇಶಕರಾದ ಜಾನಕಿ ಅವರು ಮಾತನಾಡಿ ಜಿಲ್ಲೆಯಲ್ಲಿ ವಾಸ್ತವವಾಗಿರುವ ದನ, ಎಮ್ಮೆ ಮತ್ತು ಹಂದಿಗಳಿಗೂ ಕಡ್ಡಾಯವಾಗಿ ಕಾಲು ಮತ್ತು ಬಾಯಿ ಜ್ವರ ರೋಗದ ವಿರುದ್ದ ಲಸಿಕೆ ಹಾಕಲು ಈಗಾಗಲೇ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಲಸಿಕಾ ಕಾರ್ಯಕ್ರಮಕ್ಕೆ ಜಿಲ್ಲೆಯ ಒಟ್ಟು 212 ಪಶು ವೈದ್ಯಕೀಯ ಸಂಸ್ಥೆಗಳು, ಕಾರ್ಯ ನಿರ್ವಹಿಸುತ್ತಿರುವ ಪಶುವೈದ್ಯಾಧಿಕಾರಿಗಳು, ಜಾನುವಾರು ಅಧಿಕಾರಿಗಳು, ಹಿರಿಯ ಪಶುವೈದ್ಯಾಧಿಕಾರಿಗಳು, ಪಶು ವೈದ್ಯಕೀಯ ಪರೀಕ್ಷಕರು, ಪಶುವೈದ್ಯಕೀಯ ಸಹಾಯಕರು ಹಾಗೂ ತರಬೇತಿ ಮೀಡಲಾಗಿರುವ ಡಿ.ದರ್ಜೆ ನೌಕರರನ್ನು ಲಸಿಕಾ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ನಬಾರ್ಡ್ನ ಸಹಾಯಕ ವ್ಯವಸ್ಥಾಪಕರಾದ ವಿ.ಜಿ.ಭಟ್, ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.