ಕಲಬುರಗಿ : ಚಿಂಚೋಳಿ ತಾಲೂಕು ಆಡಳಿತ, ತಾಲೂಕು ಸ್ವೀಪ್ ಸಮಿತಿ ಹಾಗೂ ತಾಲೂಕು ಪಂಚಾಯತ ವತಿಯಿಂದ ಹಮ್ಮಿಕೊಳ್ಳಲಾದ "ಮತದಾನ ಜಾಗೃತಿ ಜಾಥಾ ಅಭಿಯಾನ" ಕ್ಕೆ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಾದ ಸಂತೋಷ ಇನಾಮದಾರ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಂಕರ ರಾಠೋಡ ಅವರು ಬುಧವಾರ ಚಿಂಚೋಳಿಯಲ್ಲಿ ಚಾಲನೆ ನೀಡಿದರು.
ಮತದಾನ ಜಾಗೃತಿ ಜಾಥಾ ಅಂಗವಾಗಿ ಹಮ್ಮಿಕೊಳ್ಳಲಾದ ಬೈಕ್ ಜಾಥಾದ ಮೆರವಣಿಗೆಯು ಚಿಂಚೋಳಿ ತಹಶೀಲ್ದಾರ ಕಚೇರಿಯಿಂದ ಆರಂಭಗೊಂಡು ತಾಂಡೂರ ಕ್ರಾಸ್, ಬಸವೇಶ್ವರ ವೃತ್ತ ನಂತರ ಚಿಂಚೋಳಿ ಬಸ್ನಿಲ್ದಾಣ ಹಾಗೂ ಬೀದರ್ ಕ್ರಾಸ್ನ ಡಾ|| ಬಿ ಆರ್ ಅಂಬೇಡ್ಕರ್ ವೃತ್ತದಿಂದ ಚಿಂಚೋಳಿ ಮುಖ್ಯ ರಸ್ತೆಯಲ್ಲಿ "ಮತದಾನ ನಮ್ಮ ಹಕ್ಕು ನಮ್ಮ ಶಕ್ತಿ" ಮತ್ತು "ಪ್ರಜಾಪ್ರಭುತ್ವ ನಮ್ಮಿಂದ ಮತದಾನ ಹೆಮ್ಮೆಯಿಂದ", ಮತದಾನಕ್ಕಿಂತ ಪವಿತ್ರ ಮತ್ತೋಂದಿಲ್ಲ. ನಾನು ಕಡ್ಡಾಯವಾಗಿ ಮತದಾನ ಮಾಡುತ್ತೇನೆ ಎಂಬ ಘೋಷಣೆಯೊಂದಿಗೆ ಜಾಥಾ ಹಮ್ಮಿಕೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಗ್ರೇಡ್-1 ಹಾಗೂ ಗ್ರೇಡ್-2, ಚಿಂಚೋಳಿ ತಹಶೀಲ್ದಾರರು ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರು, ತಾಲೂಕಿನ ಎಲ್ಲಾ ಪಿಡಿಓ, ಡಿಇಓ, ಬಿಲ್ ಕಲೆಕ್ಟರ್, ತಾಲೂಕು ಮತ್ತು ಗ್ರಾಮ ಪಂಚಾಯಿತಿಗಳ ಕಚೇರಿಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.