ಹುಲಿಯ ಜಾಡು ಹಿಡಿದು....

Source: S O News service | By Staff Correspondent | Published on 27th October 2016, 6:01 PM | Special Report | Islam | Public Voice | Don't Miss |

.


ಟಿಪ್ಪು ಕಾಲದಲ್ಲಿ ಸಮಾಜದ ಪುರೋಗಮನಕ್ಕೆ ಪ್ರಧಾನವಾಗಿ ಅಡ್ಡಿಯಾಗಿದ್ದ ವರ್ಗ ಎಂದರೆ ಪಾಳೆಯಗಾರರು. ದಕ್ಷಿಣ ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ಕರ್ನಾಟಕ ಭಾಗದಲ್ಲಿ ಈಗಿನ ಜಿಲ್ಲೆ ಅಥವಾ ತಾಲ್ಲೂಕುಗಳ ಗಾತ್ರದಲ್ಲಿ ಈ ಪಾಳೆಗಾರ ಸಂಸ್ಥಾನಗಳಿದ್ದವು. ಈ ಪಾಳೆಗಾರರು ಬೃಹತ್ ಪ್ರಮಾಣದ ಭೂಮಿಗೆ ಒಡೆಯರಾಗಿದ್ದು ಅವುಗಳನ್ನು ಬಡ ರೈತರಿಗೆ ಗೇಣಿ ಕೊಟ್ಟಿದ್ದರು. ತಮ್ಮದೇ ಚಿಕ್ಕಪುಟ್ಟ ಸೈನ್ಯವನ್ನು ಹೊಂದಿದ್ದ ಇವರು ಸಮಾಜದ ಕೆಳವರ್ಗದ ಜನರನ್ನು ನಿರ್ದಯವಾಗಿ ಶೋಷಿಸುತ್ತಿದ್ದರು. ಜನಕಂಠಕವಾಗಿದ್ದ ಇಂತಹ ಪರಾವಲಂಬಿ ಪಾಳೆಗಾರರನ್ನು ನಿರ್ನಾಮ ಮಾಡುವ ಕೆಲಸವನ್ನು ಮೈಸೂರಿನ ದೊರೆ ಚಿಕ್ಕರಾಜ ಒಡೆಯರ್ ಆಗಲೇ ಪ್ರಾರಂಭಿಸಿದ್ದರಾದರೂ ಅದು ಪೂರ್ಣಗೊಂಡಿರಲಿಲ್ಲ. ಆ ಕೆಲಸವನ್ನು ಹೈದರ್ ಮತ್ತು ಟಿಪ್ಪು ಸುಲ್ತಾನ್ ಇಬ್ಬರೂ ಪರಿಣಾಮಕಾರಿಯಾಗಿ ಮಾಡಿ ಮುಗಿಸಿದರು. ಚಿಕ್ಕದೇವರಾಜ ಒಡೆಯರು ಮಂಡ್ಯ, ಮೈಸೂರು ಮತ್ತು ಬೆಂಗಳೂರು ಭಾಗಗಳಲ್ಲಿನ ಪಾಳೆಗಾರರನ್ನು ನಿರ್ನಾಮ ಮಾಡಿದರೆ ಹೈದರ್ ಮತ್ತು ಟಿಪ್ಪು ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿತ್ರದುರ್ಗ, ರಾಯಚೂರು, ಬಳ್ಳಾರಿ, ಧಾರವಾಡ, ತುಮಕೂರು ಮತ್ತು ಕೋಲಾರ ಭಾಗದಲ್ಲಿದ್ದ ಸುಮಾರು ೨೦೦ ಪಾಳೆಗಾರರನ್ನು ಧ್ವಂಸ ಮಾಡಿ ಇಡೀ ಭಾಗವನ್ನು ಮೈಸೂರು ಸಂಸ್ಥಾನಕ್ಕೆ ಸೇರಿಸಿದರು. ಪಾಳೆಗಾರರ ಒಡೆತನದಲ್ಲಿದ್ದ ಭೂಮಿಯನ್ನು ಉಳುವ ರೈತರಿಗೆ ಹಂಚಿದರು. 

ಜಮೀನ್ದಾರಿ ಮತ್ತು ಜಾಗೀರ್ದಾರಿ ಪದ್ಧತಿಗಳನ್ನು ನಾಶಪಡಿಸುವುದಕ್ಕೆ ಟಿಪ್ಪು ಸುಲ್ತಾನ್ ಬಹಳ ಉತ್ಸುಕನಾಗಿದ್ದ. ಯಾರು ಭೂಮಿಯನ್ನು ಊಳುತ್ತಾರೋ, ಜಾತಿ, ಮತ, ಧರ್ಮ ಯಾವುದೇ ಆಗಿದ್ದರೂ, ಅವರು ಮಾತ್ರವೇ ಭೂಮಿಯ ಒಡೆತನ ಹೊಂದಿರಬೇಕು ಎಂದು ಟಿಪ್ಪು ಘೋಷಿಸಿದ್ದ ಎಂದು ಕಬೀರ್ ಕೌಸರ್ ದಾಖಲಿಸಿದ್ದಾರೆ. ಅಂತೆಯೇ ಪಾಳೆಗಾರರನ್ನು ನಿರ್ದಯವಾಗಿ ಹತ್ತಿಕ್ಕಿ ಅವರ ಒಡೆತನದ ಭೂಮಿಯನ್ನು ಉಳುವ ಗೇಣಿದಾರ ಜನಸಮೂಹಕ್ಕೆ ಹಂಚಿದ್ದು ಆಗಿನ ಕಾಲದಲ್ಲಿ ಕ್ರಾಂತಿಕಾರಕ ಬೆಳವಣಿಗೆಯೇ ಹೌದು. ನಿಜ ಹೇಳಬೇಕೆಂದರೆ ಚರಿತ್ರೆಯಲ್ಲಿ ದಲಿತರು ಮೊಟ್ಟ ಮೊದಲ ಬಾರಿಗೆ ಭೂಮಿಯ ಒಡೆತನದ ರುಚಿಯನ್ನು ಕಂಡಿದ್ದು ಹೈದರ್ ಮತ್ತು ಟಿಪ್ಪೂ ಕಾಲದಲ್ಲೇ ಎಂದರೆ ಅತಿಶಯೋಕ್ತಿಯಾಗಲಾರದು! ಈ ವಿಚಾರದಲ್ಲಿ ಟಿಪ್ಪು ತನ್ನ ತಂದೆ ಹೈದರ್ಗಿಂತಲೂ ಒಂದು ಹೆಜ್ಜೆ ಮುಂದಿದ್ದ. ಬೃಹತ್ ದೇವಸ್ಥಾನಗಳು, ಬ್ರಾಹ್ಮಣ ಮಠಗಳು ನೂರಾರು ಎಕರೆ ಭೂಮಿಯ ಮೇಲೆ ಹೊಂದಿದ್ದ ’ಮುಕ್ತ ಒಡೆತನದ ಹಕ್ಕಿಗೂ’ ಟಿಪ್ಪು ಕತ್ತರಿ ಹಾಕಿದ್ದ. ಇನ್ನೂ ಕೆಲವು ಕಡೆ ಮಠಗಳ, ದೇವಾಲಯಗಳ ಬೃಹತ್ ಪ್ರಮಾಣದ ಜಮೀನನ್ನು ವಶಪಡಿಸಿಕೊಂಡು ಉಳುವ ಶೂದ್ರ ಸಮುದಾಯಕ್ಕೆ ಹಂಚಿದ್ದ! ಸರ್ಕಾರಿ ಹಣ, ಭೂಮಿಗಳನ್ನು ತಮ್ಮ ಸ್ವಂತ ಆಸ್ತಿಯಂತೆ ಮಠ, ದೇವಾಲಯಗಳಿಗೆ ಹಂಚುವ ಮನಸ್ಸುಗಳು ಟಿಪ್ಪುವನ್ನು ವಿರೋಧಿಸುವುದು ಸಹಜ ಅಲ್ಲವೆ? ಈ ಪಾಳೆಗಾರ ವಿರೋಧಿ ಮಿಲಿಟರಿ ಅಭಿಯಾನದ ಪ್ರಕ್ರಿಯೆಯಲ್ಲಿಯೇ ಕರ್ನಾಟಕದ ಏಕೀಕರಣವೂ ದೊಡ್ಡ ಮಟ್ಟದಲ್ಲಿ ಆಯಿತು. ಬೆಳಗಾಂ ಮತ್ತು ಬಿಜಾಪುರದ ಕೆಲವು ಭಾಗಗಳು ಹಾಗೂ ಬೀದರ್ ಮತ್ತು ಗುಲ್ಬರ್ಗಾಗಳ ಸಂಪೂರ್ಣ ಭಾಗಗಳನ್ನು ಹೊರತುಪಡಿಸಿ ಇಡೀ ಕರ್ನಾಟಕ ಟಿಪ್ಪು ಆಳ್ವಿಕೆಗೆ ಒಳಪಟ್ಟಿತ್ತು. ಆದರೆ ಈ ಐಕ್ಯ ಕರ್ನಾಟಕ ಕೇವಲ ನಲ್ವತ್ತು ವರ್ಷ ಮಾತ್ರ ಬಾಳಿ ಟಿಪ್ಪು ಮರಣದ ನಂತರ ಮತ್ತೆ ಹರಿದು ಹಂಚಿಹೋಯಿತು ಎಂಬುದು ಬೇರೆ ವಿಷಯ. 

ಈ ಭೂಸುಧಾರಣೆಯ ಜೊತೆಗೆ ಒಟ್ಟಾರೆ ಗ್ರಾಮೀಣ ಪ್ರದೇಶದ ಆಡಳಿತ ಯಂತ್ರಾಂಗವನ್ನೇ ಟಿಪ್ಪು ಉಳುವ ಶೂದ್ರಪರವಾಗಿ ಪುನರ್ರೂಪಿಸಿದ್ದು ಟಿಪ್ಪು ಸುಲ್ತಾನನ ಮತ್ತೊಂದು ಕೊಡುಗೆ. ಜೊತೆಗೆ ಉಳುವ ಭೂಮಿಗೆ ನೀರಾವರಿ ಒದಗಿಸಲು ಸಾಕಷ್ಟು ಶ್ರಮಿಸಿದ್ದು ಇನ್ನೊಂದು ಸಾಧನೆ. ದಕ್ಷಿಣ ಕರ್ನಾಟಕದಲ್ಲಿ ಹಳ್ಳಿಹಳ್ಳಿಗಳಲ್ಲಿ ನಾವಿಂದು ಕಾಣುವ ಹತ್ತಾರು ಕರೆಕಟ್ಟೆಗಳು ನಿರ್ಮಾಣವಾಗಿದ್ದು ಟಿಪ್ಪು ಕಾಲದಲ್ಲೇ. ಅಂದಿನ ಮೈಸೂರು ರಾಜ್ಯದ ಒಟ್ಟು ಉಳುವ ಭೂಮಿಯಲ್ಲಿ ಶೇಕಡ 35ಕ್ಕೂ ಹೆಚ್ಚು ಭೂಮಿ ನೀರಾವರಿ ಸೌಲಭ್ಯಕ್ಕೊಳಪಟ್ಟಿತ್ತು ಎಂಬುದು ಸಾಮಾನ್ಯ ಸಾಧನೆಯಲ್ಲ. ಇಂದಿನ ಕರ್ನಾಟಕವೂ ಆ ಸಾಧನೆಯನ್ನು ಮಾಡಿಲ್ಲ ಎಂಬುದುನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕು. 

ಅಲ್ಲದೇ ಟಿಪ್ಪು ಸುಲ್ತಾನ್ ದುಡಿಯುವ ರೈತಾಪಿ ಜನಸಮುದಾಯಕ್ಕೆ ಬಡ್ಡಿರಹಿತ ಸಾಲ ಕೊಡುವ ವ್ಯವಸ್ಥೆ ಮಾಡಿದ್ದ! ಒಂದು ಸ್ವರೂಪದ ಸಾಲವನ್ನು ಎರಡು ವರ್ಷಗಳೊಳಗೆ ಹಾಗೂ ಇನ್ನೊಂದು ಸ್ವರೂಪದ ಸಾಲವನ್ನು ನಾಲ್ಕು ವರ್ಷಗಳ ಒಳಗೆ ತೀರಿಸುವ ಅವಕಾಶ ರೈತಾಪಿಗಿತ್ತು. ಪ್ರಾಯಶಃ ಟಿಪ್ಪುಗಿಂತ ಮುಂಚಿನ ಯಾವ ರಾಜನಾಗಲೀ ಅಥವಾ ಟಿಪ್ಪು ನಂತರದಲ್ಲಿ ಇಂದಿನ ಸರ್ಕಾರದ ತನಕವಾಗಲೀ ಈ ರೀತಿಯ ವ್ಯವಸ್ಥೆ ಮಾಡಿದ ಯಾವೊಂದು ಉದಾಹರಣೆಗಳೂ ನಮಗೆ ಸಿಗುವುದಿಲ್ಲ. ಅಂತೆಯೇ ಆಗಿನ ಕಾಲದಲ್ಲಿ ಇಡೀ ದೇಶದಾದ್ಯಂತ ಅಷ್ಟೊಂದು ಜನಪ್ರಿಯವಾಗಿರದ ಹತ್ತು ಹಲವು ಬಗೆಯ ಕಾಳುಗಳು, ಎಣ್ಣೆ ಕಾಳುಗಳು, ಔಷಧೀಯ ಸಸ್ಯಗಳು, ತರಕಾರಿಗಳು, ಹಣ್ಣುಗಳು ಮುಂತಾದ ಬೆಳೆಗಳನ್ನು ಬೆಳೆಯುವುದಕ್ಕೆ ಟಿಪ್ಪು ರೈತಾಪಿ ಸಮುದಾಯವನ್ನು ಪ್ರೇರೇಪಿಸಿದ. ಒಟ್ಟಾರೆಯಾಗಿ ಸಮಾಜವನ್ನು ಒಂದು ಹೆಜ್ಜೆ ಮುಂದಕ್ಕೊಯ್ಯುವ ಆತನ ದೂರದೃಷ್ಟಿ ನಿಜಕ್ಕೂ ಶ್ಲಾಘನೀಯ.

ಒಟ್ಟಾರೆ ಭಾರತೀಯ ಸಮಾಜ ಹಳೆಯ ಜಮೀನ್ದಾರಿ ವ್ಯವಸ್ಥೆಯಿಂದ ಆಧುನಿಕ ಬಂಡವಾಳಶಾಹಿ ವ್ಯವಸ್ಥೆಯಡೆಗೆ ಪರಿವರ್ತನೆಯಾಗುತ್ತಿದ್ದ ಕಾಲಘಟ್ಟದಲ್ಲಿ ಹೈದರ್ ಮತ್ತು ಟಿಪ್ಪು ಸುಲ್ತಾನ್ ಮೈಸೂರನ್ನು ಆಳುತ್ತಿದ್ದರು. ನಿಸ್ಸಂದೇಹವಾಗಿ ಅವರಿಬ್ಬರೂ ಹಳೆಯ ಊಳಿಗಮಾನ್ಯ ವ್ಯವಸ್ಥೆಗೆ ವಿರುದ್ಧವಾಗಿ ಹೊಸ ಬಂಡವಾಳಶಾಹಿ ವ್ಯವಸ್ಥೆಯ ಹರಿಕಾರರಾಗಿ ನಿಂತಿದ್ದರು. ಅಂದರೆ ಆ ನಿರ್ದಿಷ್ಟ ಚಾರಿತ್ರಿಕ ಘಟ್ಟದಲ್ಲಿ ಅವರು ಕ್ರಾಂತಿಕಾರಿಗಳೇ ಆಗಿದ್ದರು. (ಈಗ ಬಂಡವಾಳಶಾಹಿ ವ್ಯವಸ್ಥೆಗಿಂತಲೂ ಇನ್ನೂ ಮುಂದೆ ಸಮಾಜವಾದಿ ವ್ಯವಸ್ಥೆಯೆಡೆಗೆ ಹೋಗುವುದು ಹೇಗೆ ಕ್ರಾಂತಿಕಾರಿ ಬೆಳವಣಿಗೆಯಾಗುತ್ತದೆಯೋ ಹಾಗೆ ಆ ಕಾಲಘಟ್ಟದಲ್ಲಿ ಊಳಿಗಮಾನ್ಯ ವ್ಯವಸ್ಥೆಯಿಂದ ಬಂಡವಾಳವಾದದೆಡೆಗೆ ಹೋಗುವುದೂ ಆ ಚಾರಿತ್ರಿಕ ಘಟ್ಟದಲ್ಲಿ ಕ್ರಾಂತಿಕಾರಕ ಬೆಳವಣಿಗೆಯಾಗುತ್ತದೆ.) ಊಳಿಗಮಾನ್ಯ ವ್ಯವಸ್ಥೆಯನ್ನು ಪ್ರತಿನಿಧಿಸುತ್ತಿದ್ದ ಪಾಳೆಗಾರ-ಭೂಮಾಲೀಕ ವರ್ಗವನ್ನು ಟಿಪ್ಪು-ಹೈದರ್ ಇಬ್ಬರೂ ನಿರ್ನಾಮ ಮಾಡಿದ್ದು ಇದಕ್ಕೆ ಒಂದು ಉದಾಹರಣೆಯಾದರೆ ಹೊಸ ಬಂಡವಾಳಶಾಹಿ ವ್ಯವಸ್ಥೆಯ ಆಧಾರ ಸ್ಥಂಬಗಳಾದ ವ್ಯಾಪಾರ ಮತ್ತು ಕೈಗಾರಿಕೆಗಳನ್ನು ಅಮೋಘವಾಗಿ ಪ್ರೋತ್ಸಾಹಿಸಿದ್ದು ಆ ಕ್ರಾಂತಿಕಾರಿ ಬೆಳವಣಿಗೆಗೆ ಇನ್ನೊಂದು ಉದಾಹರಣೆಯಾಗಿ ಕಾಣುತ್ತದೆ. ಬ್ರಿಟಿಷ್ ಚರಿತ್ರೆಕಾರರೇ ಬರೆದಿರುವಂತೆ ಅಂದಿನ ಮೈಸೂರು ರಾಜ್ಯದಲ್ಲಿ ಪ್ರತಿ ಮೂರು ಮೈಲಿಗಳಿಗೆ ಒಂದರಂತೆ ಸಾಪೇಕ್ಷ ದೊಡ್ಡ ಪಟ್ಟಣಗಳಲ್ಲಿ ಸಂತೆಗಳು ನಡೆಯುತ್ತಿದ್ದವು. ಅದಲ್ಲೂ ಗುಬ್ಬಿ ಮತ್ತು ಹರಿಹರ ಪಟ್ಟಣಗಳಂತೂ ಇಡೀ ಮೈಸೂರು ರಾಜ್ಯದ ಬೃಹತ್ ವ್ಯಾಪಾರಿ ಕೇಂದ್ರಗಳಾಗಿ ಮಾರ್ಪಟ್ಟಿದ್ದವು. ನಗರಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲಾಗಿತ್ತು. ಬಂಡವಾಳಶಾಹಿ ವ್ಯವಸ್ಥೆಯ ಭ್ರೂಣ ರೂಪವಾಗಿ ಕೃಷಿಯೇತರ ವ್ಯಾಪಾರಿ ವರ್ಗವೊಂದು ಸದೃಡವಾಗಿ ಮೈದಳೆಯುತ್ತಿದ್ದುದು ನಿಜಕ್ಕೂ ಅಂದಿನ ಸಂಕ್ರಮಣ ಘಟ್ಟದಲ್ಲಿ ಕ್ರಾಂತಿಕಾರಕ ಬೆಳವಣಿಗೆಯೇ ಹೌದು. ಆಧುನಿಕ ಪ್ರಭುತ್ವದ ನಿರ್ಮಾಣ, ತಂತ್ರಜ್ಞಾನದ ಬೆಳವಣಿಗೆ, ವ್ಯಾಪಾರ-ವಾಣಿಜ್ಯದಲ್ಲಿ ಅಪಾರ ಪ್ರಗತಿ, ಕೃಷಿಯ ವಾಣಿಜ್ಯೀಕರಣ, ಕೈಗಾರಿಕಾ ಉತ್ಪಾದನೆಯಲ್ಲಿ ಜಿಗಿತ ಮುಂತಾದ ಎಲ್ಲಾ ಕ್ಷೇತ್ರಗಳಲ್ಲೂ ಬಂಡವಾಳಶಾಹಿ ಸಮಾಜದ ಬೀಜರೂಪಗಳು ಟಿಪ್ಪು ಸುಲ್ತಾನನ ಮೈಸೂರು ರಾಜ್ಯದಲ್ಲಿ ಕಾಣುತ್ತಿದ್ದವು.  ನಿಜ ಹೇಳಬೇಕೆಂದರೆ ಅಂದಿನ ಯೂರೋಪಿಗಿಂತಲೂ ಟಿಪ್ಪು ನೇತೃತ್ವದ ಅಂದಿನ ಮೈಸೂರು ರಾಜ್ಯ ಬಹಳಷ್ಟು ಮುಂದಿತ್ತು. ಬ್ರಿಟಿಷರು ಟಿಪ್ಪುವನ್ನು ಕೊಂದು, ಹಳೆಯ ಮೈಸೂರು ರಾಜರಿಗೆ ರಾಜ್ಯವನ್ನೊಪ್ಪಿಸಿ, ಪಾಳೆಗಾರ, ಭೂಮಾಲಿಕರಂತಹ ಹಳೆಯ ಊಳಿಗಮಾನ್ಯ ಪ್ರಭುಗಳನ್ನು ಗ್ರಾಮೀಣ ಪ್ರದೇಶದಲ್ಲಿ ಪ್ರತಿಷ್ಠಾಪಿಸಿ ಆಗ ತಾನೆ ಭ್ರೂಣಾವಸ್ಥೆಯಲ್ಲಿದ್ದ ಬಂಡವಾಳಶಾಹಿ ಬೆಳವಣಿಗೆಯನ್ನು ಹೊಸಕಿ ಹಾಕಿ ಹಳೆಯ ಊಳಿಗಮಾನ್ಯ ವ್ಯವಸ್ಥೆಯನ್ನು ಪುನರ್ಸ್ಥಾಪಿಸದೇ ಹೋಗಿದ್ದರೆ ಇಂದಿನ ಯೂರೋಪಿಗಿಂತಲೂ ಇಂದಿನ ಇಂಡಿಯಾ ಬಹಳ ಮುಂದಿರುತ್ತಿತ್ತು ಎಂಬುದರಲ್ಲಿ ಅನುಮಾನವಿಲ್ಲ. ಹಾಗಾಗಿ, 1799ರ ಮೇ 4ರಂದು ಶ್ರೀರಂಗಪಟ್ಟಣದಲ್ಲಿ ನಡೆದ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪೂ ಟಿಪ್ಪು ಸುಲ್ತಾನನಿಗೆ ಉಂಟಾದ ಸೋಲು ಇಡೀ ಇಂಡಿಯಾದ ಸೊಲೇ ಆಗಿದೆ!

ಟಿಪ್ಪು ಹಿಂದೂಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿದ ಎಂಬುದು ಚಿದಾನಂದಮೂರ್ತಿ ಅವರ ಪ್ರಧಾನ ತಕರಾರು. ಟಿಪ್ಪು ಕಾಲದಲ್ಲಿ ಮತಾಂತರ ಆಗಲೇ ಇಲ್ಲ ಎಂದು ಹೇಳುವುದು ಇನ್ನೊಂದು ತುದಿಯ ಅತಿರೇಕದ ವಾದವಷ್ಟೇ ಆಗುತ್ತದೆಯೇ ಹೊರತು ಅಂದಿನ ಕಾಲಘಟ್ಟದ ವಸ್ತುನಿಷ್ಠ ಚಿತ್ರಣವಾಗುವುದಿಲ್ಲ. ಹೌದು, ಆ ಕಾಲದ ಎಲ್ಲಾ ರಾಜರೂ ತಮ್ಮ ತಮ್ಮ ಧರ್ಮದಲ್ಲಿ ಶ್ರದ್ಧೆ ಇದ್ದಂತೆ, ಚಿದಾನಂದಮೂರ್ತಿಗಳನ್ನೂ ಒಳಗೊಂಡಂತೆ ಇಂದಿನ ಎಲ್ಲಾ ಮಂದಿಗೂ ತಮ್ಮ ತಮ್ಮ ಧರ್ಮದಲ್ಲಿ ಶ್ರದ್ಧೆ ಇರುವಂತೆ ಟಿಪ್ಪುಗೂ ಕೂಡ ಇಸ್ಲಾಂನಲ್ಲಿ ಅಪಾರ ಶ್ರದ್ಧೆ ಇತ್ತು. ಆತ ಇಸ್ಲಾಂ ಧರ್ಮದ ಪ್ರತಿಪಾದಕನಾಗಿದ್ದದ್ದೂ ನಿಜ. ಇಸ್ಲಾಂ ಧರ್ಮಕ್ಕೆ ಅನ್ಯ ಧರ್ಮೀಯರು ಮತಾಂತರಗೊಳ್ಳುವಂತೆ ಉತ್ತೇಜಿಸಿದ್ದೂ ನಿಜ. ಅಂತೆಯೇ ದೊಡ್ಡ ಸಂಖ್ಯೆಯ ಹಿಂದೂಗಳು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದೂ ನಿಜ. ಆದರೆ, ಅವು ಯಾವೂ ಬಲವಂತದ ಮತಾಂತರಗಳಾಗಿರಲಿಲ್ಲ. ಅವನ ಕಾಲದಲ್ಲಿ ದಲಿತರು, ಸಮಾಜದ ಇನ್ನಿತರ ದಮನಿತ ಶೂದ್ರ ತಳಸಮುದಾಯಗಳು ಹಿಂದೂ ಧರ್ಮದಲ್ಲಿನ ಉಸಿರು ಕಟ್ಟಿಸುವ ವಾತಾವರಣದಿಂದ ಹೊರಬರುವುದಕ್ಕೆ ಉತ್ಸುಕರಾಗಿದ್ದರು. ಅಸ್ಪ್ರುಶ್ಯತೆಗಳಂತಹ ಅಮಾನವೀಯ ಆಚರಣೆಗಳ ಮೂಲಕ, ಶೋಷಣೆಯ ಮೂಲಕ ತಮ್ಮನ್ನು ಪ್ರಾಣಿಗಳಿಗಿಂತಲೂ ನಿಕೃಷ್ಟವಾಗಿ ಕಾಣುತ್ತಿದ್ದ ಹಿಂದೂ ಧರ್ಮದ ಪರಿಸರದಿಂದ ಹೊರಬರುವುದಕ್ಕೆ ತುದಿಗಾಲಲ್ಲಿ ನಿಂತಿದ್ದ ದಲಿತರ ಮತ್ತಿತರ ತಳಸಮುದಾಯಗಳಿಗೆ ಟಿಪ್ಪೂನ ನೀತಿಗಳು ಒಂದಿಷ್ಟು ಪ್ರಚೋದನೆ ನೀಡಿದವಷ್ಟೆ. 

ಈ ಸ್ವಪ್ರೇರಿತ ಮತಾಂತರಗಳಲ್ಲದೇ ಅಲ್ಪ ಪ್ರಮಾಣದಲ್ಲಿ ’ಒತ್ತಾಯದ ಮತಾಂತರ’ಗಳೂ ನಡೆದವು. ಭವಿಷ್ಯವಿಲ್ಲದೇ ನಿಕೃಷ್ಟ ಜೀವನ ಸಾಗಿಸುತ್ತಿದ್ದ ಖೈದಿಗಳು, ನಿರ್ಗತಿಕರು, ವೇಶ್ಯೆಯರು, ಭಿಕ್ಷುಕರು ಮುಂತಾದವರಿಗೆ ಉತ್ತಮ ಭವಿಷ್ಯದ ಭರವಸೆ ತೋರಿಸಿಯೂ ಮತಾಂತರ ಮಾಡಿಕೊಳ್ಳಲಾಯಿತು. ಹೀಗೆ ಮತಾಂತರಗೊಂಡವರು ಟಿಪ್ಪು ನೇತೃತ್ವದ ಮೈಸೂರು ರಾಜ್ಯದಲ್ಲಿ ಅನೇಕ ಉದ್ಯೋಗಗಳನ್ನು ಪಡೆದುಕೊಂಡು ಭವಿಷ್ಯವನ್ನು ರೂಪಿಸಿಕೊಂಡರು. ವಾಸ್ತವದಲ್ಲಿ ಮೈಸೂರು ಸೈನ್ಯದ ಚೇಲಾ ಬೆಟಾಲಿಯನ್ ಇಂತಹ ಮತಾಂತರಗೊಂಡ ವರ್ಗಗಳ ಜನರಿಂದಲೇ ನಿರ್ಮಾಣವಾದ ಸೈನಿಕ ತುಕಡಿಯಾಗಿತ್ತು. ವಿಶೇಷ ಎಂದರೆ ಇದು ಮೈಸೂರು ಸೈನ್ಯದ ಅತ್ಯುತ್ತಮವಾಗಿ ತರಬೇತುಗೊಂಡ ನಿಷ್ಠ ಮತ್ತು ಧೈರ್ಯಶಾಲಿ ಸೈನಿಕ ತುಕಡಿ ಎಂಬ ಪ್ರಶಂಶೆಗೆ ಒಳಗಾಗಿತ್ತು! ಉತ್ತಮ ಬದುಕಿನ ಭರವಸೆಯ ’ಆಮೀಷ’ಒಡ್ಡಿ ನಡೆಸಲಾದ ಈ ’ಬಲವಂತದ ಮತಾಂತರ’ವನ್ನು ವಿರೋಧಿಸುವಾಗಲೂ, ಈ ನಿರ್ಗತಿಕ ಜನವರ್ಗಗಳಿಗೆ ಪರ್ಯಾಯ ಆಯ್ಕೆಯೇನಾದರೂ ಇತ್ತೆ ಎಂಬ ಕೋನದಿಂದಲೂ ನೋಡಬೇಕಾಗುತ್ತದೆ.

ಇನ್ನೊಂದು ವಿಷಯವನ್ನೂ ಇಲ್ಲಿ ಗಮನಿಸಿ. ಮುಸ್ಲಿಂ ರಾಜರಾದ ಹೈದರಾಬಾದಿನ ನಿಜಾಮರು ಆಳಿದ ಪ್ರದೇಶಕ್ಕೂ, ಅದಕ್ಕೂ ಹಿಂದೆ ಮುಸ್ಲಿಂ ದೊರೆಗಳು ಆಳಿದ ಉತ್ತರ ಪ್ರದೇಶಕ್ಕೂ ಟಿಪ್ಪು ಮತ್ತು ಹೈದರ್ ಆಳಿದ ದಕ್ಷಿಣ ಕರ್ನಾಟಕಕ್ಕೂ ಹೋಲಿಸಿ ನೋಡಿ. ನಿಜಾಮರು ಆಳಿದ ಹೈದರಾಬಾದು ಮತ್ತು ಮುಸ್ಲಿಂ ದೊರೆಗಳು ಆಳಿದ ಉತ್ತರ ಪ್ರದೇಶದಗಳಲ್ಲಿ ಈಗಲೂ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿದ್ದರೆ ದಕ್ಷಿಣ ಕರ್ನಾಟಕದಲ್ಲಿ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿಲ್ಲ. ಟೀಪೂ ಮತ್ತು ಹೈದರಾಲಿಗಳ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣ ಮತ್ತದರ ಸುತ್ತಮುತ್ತಲಿನ ಪ್ರದೇಶಗಳೂ ಈ ಕಟು ಸತ್ಯಕ್ಕೆ ಇಂದಿಗೂ ಸಾಕ್ಷಿಯಾಗಿ ನಿಂತಿವೆ. ಅದಕ್ಕೆ ಪ್ರಧಾನ ಕಾರಣ ಹೈದರ್ ಮತ್ತು ಟಿಪ್ಪು ಅನ್ಯ ಧರ್ಮಿಯರನ್ನು ಬೃಹತ್ ಪ್ರಮಾಣದಲ್ಲಿ ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡದಿರುವುದೇ ಆಗಿದೆ. 

ಟಿಪ್ಪು ಪರಧರ್ಮ ಸಹಿಷ್ಣು ಆಗಿದ್ದ ಎನ್ನುವುದಕ್ಕೆ ನಮ್ಮೆದುರು ಬೇಕಾದಷ್ಟು ನಿದರ್ಶನಗಳಿವೆ. ನೆನಪಿರಲಿ, ನಾವು ಯಾವ ಮರಾಠರನ್ನು ಹಿಂದೂಗಳು ಎಂದು ಕರೆಯುತ್ತೇವೆಯೋ ಅದೇ ಮರಾಠರು ಹಿಂದೂಗಳ ಪವಿತ್ರ ಸ್ಥಳವೆನಿಸಿದ ಶೃಂಗೇರಿಯ ಮೇಲೆ ದಾಳಿ ಮಾಡಿ ಶಾರದಾಪೀಠವನ್ನು ಧ್ವಂಸಗೊಳಿದರು. ಆದರೆ, ಮುಸ್ಲಿಂ ಆಗಿದ್ದ ಟಿಪ್ಪು ಶೃಂಗೇರಿ ರಕ್ಷಣೆಗೆ ವಿಫಲನಾಗಿದ್ದಕ್ಕೆ ಕ್ಷಮೆಯಾಚಿಸಿ ಶಾರದಾಪೀಠದ ಮರುಸ್ಥಾಪನೆಗೆ, ಅದರ ಜೀರ್ಣೋದ್ಧಾರಕ್ಕೆ ಅಪಾರ ನೆರವು ನೀಡಿದ ದಾಖಲೆಗಳು ಇಂದಿಗೂ ಶೃಂಗೇರಿ ಮಠದಲ್ಲಿವೆ. 

ಅಷ್ಟೇ ಏಕೆ, ನಂಜನಗೂಡಿನ ದೇವಾಲಯದಲ್ಲಿ ಪಚ್ಚೆಲಿಂಗ ಸ್ಥಾಪನೆ, ದೇವನಹಳ್ಳಿಯ ಕೋಟೆಯ ವೇಣುಗೋಪಾಲಸ್ವಾಮಿ, ತಮಿಳುನಾಡಿನ ನಾಮಕಲ್ ಕೋಟೆಯಲ್ಲಿರುವ ರಂಗನಾಥಸ್ವಾಮಿ ಮತ್ತು ನರಸಿಂಹಸ್ವಾಮಿ, ಬಾದಾಮಿಯ ವಾತಾಪಿ, ಬೆಂಗಳೂರು ಕೋಟೆಯಲ್ಲಿರುವ ಗಣೇಶನ ದೇವಸ್ಥಾನ, ಮೇಲುಕೋಟೆಯ ದೇವಸ್ಥಾನ ಮುಂತಾದವುಗಳಿಗೆ ಆತ ನೀಡಿದ ಅಪಾರ ಹಣಕಾಸಿನ ನೆರವವನ್ನು ಯಾರಾದರೂ ಮರೆಮಾಚಲಾದೀತೆ? ಅಷ್ಟೆಲ್ಲಾ ದೂರ ಹೋಗಬೇಡಿ. ಆತ ಮುಸ್ಲಿಂ ಮತಾಂಧನಾಗಿದ್ದರೆ, ಹಿಂದೂ ವಿರೋಧಿಯಾಗಿದ್ದರೆ ತನ್ನ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲೇ ನೂರಾರು ವರ್ಷಗಳಿಂದ ತಲೆಯೆತ್ತಿ ನಿಂತಿದ್ದ ಶ್ರೀರಂಗನಾಥಸ್ವಾಮಿ ದೇವಸ್ಥಾನವನ್ನು ಯಾಕೆ ಕೆಡವಲಿಲ್ಲ? ಬದಲಿಗೆ ಅದಕ್ಕೆ ದಾನದತ್ತಿಗಳನ್ನು ಏಕೆ ಮಾಡಿದ? ಒಂದೆಡೆ ಮಸೀದಿಯಿಂದ ನಮಾಜು, ಇನ್ನೊಂದೆಡೆ ಶ್ರೀರಂಗನಾಥಸ್ವಾಮಿ ದೇವಸ್ಥಾನದಿಂದ ಘಂಟಾನಾದ ಕೇಳುತ್ತಲೇ ಪ್ರಶಾಂತಚಿತ್ತದಿಂದ ಶ್ರೀರಂಗಪಟ್ಟಣದಲ್ಲಿ ಟಿಪ್ಪು ನೆಲೆಸಿದ್ದಕ್ಕೆ ಬೇರೇನಾದರೂ ಕಾರಣಗಳಿದ್ದವೆ? ಬೆಂಗಳೂರಿನ ಕೋಟೆ ವೆಂಕಟರಮಣ ದೇವಾಸ್ಥಾನದ ಬಳಿಯಲ್ಲಿಯೇ ತನಗೊಂದು ಅರಮನೆಯನ್ನೇಕೆ ಕಟ್ಟಿಕೊಂಡ? ತನ್ನ ಕಾಲದಲ್ಲಿ ಚಾಲ್ತಿಯಲ್ಲಿದ್ದ ತ್ರಿಶೂಲ, ಲಕ್ಷ್ಮಿದೇವಿಯ ಕೆತ್ತನೆಗಳಿರುವ ನಾಣ್ಯಗಳನ್ನು ಹಿಂತೆಗೆದುಕೊಳ್ಳಲಿಲ್ಲ? ಅಷ್ಟೇ ಏಕೆ, ಆತ ಬೆರಳಿಗೆ ಹಾಕಿಕೊಂಡಿದ್ದ ಉಂಗುರದ ಮೇಲೆ ದೇವನಾಗರಿ ಲಿಪಿಯಲ್ಲಿ 'ರಾಮ' ಎಂದು ಕೆತ್ತಲಾಗಿತ್ತು! (ಟೀಪೂ ಮರಣಾನಂತರ ಆತನ ಬಹಳಷ್ಟು ವಸ್ತುಗಳ ಜೊತೆ ಈ ಉಂಗುರವನ್ನೂ ಬ್ರಿಟಿಷರು ಒಯ್ದಿದ್ದರು. ಇದನ್ನು 2014ನೇ ಸಾಲಿನಲ್ಲಿ ಇಂಗ್ಲೆಂಡಿನಲ್ಲಿ ಹರಾಜು ಹಾಕಲಾಯಿತು)

ಟಿಪ್ಪು ಹಿಂದೂ ದೇವಾಲಯಗಳಿಗೆ ದಾನದತ್ತಿ ಕೊಟ್ಟಿದ್ದು ತನ್ನ ಅನಿಷ್ಟ ನಿವಾರಣೆಗೇ ಹೊರತು ಭಕ್ತಿಯಿಂದಲ್ಲ ಎಂದು ಚಿದಾನಂದಮೂರ್ತಿಯವರು ವಾದಿಸುತ್ತಾರೆ! ಶೃಂಗೇರಿ ಮಠಕ್ಕೆ ಟಿಪ್ಪು ಬರೆದ ಪತ್ರದಲ್ಲಿ ಆತನ ಶ್ರದ್ಧೆ ವ್ಯಕ್ತವಾಗಿರುವುದನ್ನು ಒಪ್ಪಿಕೊಳ್ಳುತ್ತಲೇ ಅದು ತೋರಿಕೆಗೆ ಮಾತ್ರ ಎಂದು ಜರಿಯುತ್ತಾರೆ! ಸುಮ್ಮನೆ ಚರ್ಚೆಗಾಗಿ ಮಾತಾಡುವುದಾದರೆ, ಕಟ್ಟಾ ಹಿಂದೂ ಧರ್ಮಿಯರಾಗಿರುವ ಚಿದಾನಂದಮೂರ್ತಿಯವರಿಗೆ ಇಸ್ಲಾಂ ಧರ್ಮದಲ್ಲಿ ಶ್ರದ್ಧೆ ಇರಬೇಕು, ಅಲ್ಹಾನಲ್ಲಿ ಭಕ್ತಿ ಬರಬೇಕು ಎಂದು ನಿರೀಕ್ಷಿಸುವುದು ಎಷ್ಟು ಅಸಮಂಜಸವೋ ಹಾಗೆಯೇ ಕಟ್ಟಾ ಮುಸ್ಲಿಂ ಧರ್ಮಿಯನಾಗಿದ್ದ ಟಿಪ್ಪುಗೆ ಹಿಂದೂ ಧರ್ಮದಲ್ಲಿ ಶ್ರದ್ಧೆ, ಶಾರದಾಪೀಠ, ಮೇಲುಕೋಟೆ ಬಗ್ಗೆ ಭಕ್ತಿ ಇರಬೇಕಿತ್ತು ಎಂದು ನಿರೀಕ್ಷಿಸುವುದೂ ಅಷ್ಟೇ ಅಸಮಂಜಸವಾಗುತ್ತದೆಯಲ್ಲವೆ? ಕಷ್ಟ ಕಾಲದಲ್ಲಿ ಆ ದೇವಸ್ಥಾನಗಳ ನೆರವಿಗೆ ನಿಂತ ಆತನ ಪರಧರ್ಮ ಸಹಿಷ್ಣು ಭಾವನೆಯನ್ನು ಅರಿಯಲು ಇಷ್ಟವಿಲ್ಲದವರಿಗೆ ಇಂತಹ ಮೊಂಡುವಾದಗಳು ಹುಟ್ಟಿಕೊಳ್ಳುತ್ತವೆಯಷ್ಟೆ.

ಇನ್ನು ಹೈದರ್ ಮತ್ತು ಟಿಪ್ಪು ನಡೆಸಿದ ಬ್ರಿಟಿಷ್ ವಿರೋಧಿ ಯುದ್ಧಗಳು ಇಡೀ ಬ್ರಿಟಿಷ್ ಚಕ್ರಾಧಿಪತ್ಯವನ್ನೇ ಅಲುಗಾಡಿಸಿಬಿಟ್ಟಿದ್ದವು ಎಂಬ ಸತ್ಯವನ್ನು ಹೇಗೆ ಮರೆಯಲು ಸಾಧ್ಯ? ’ನಮ್ಮವರೇ’ ಆದ ಮರಾಠರು, ನಿಜಾಮರು ಹೊರಗಿನ ಬ್ರಿಟಿಷ್ ವಸಾಹತುಶಾಹಿಗಳೊಂದಿಗೆ ಕೈಜೋಡಿಸಿದರೆ ಹೈದರ್ ಮತ್ತು ಟಿಪ್ಪು ಕೊನೆಯ ಉಸಿರಿರುವ ತನಕವೂ ಬ್ರಿಟಿಷರಿಗೆ ಶರಣಾಗದೇ ಧೀರೋದ್ಧಾತವಾಗಿ ಹೋರಾಡಿ ರಣರಂಗದಲ್ಲೇ ವೀರಮರಣವನ್ನಪ್ಪಿದವರು. ಸೈನ್ಯಾಧಿಕಾರಿಗಳ ನೇತೃತ್ವದಲ್ಲಿ ಬಡಸೈನಿಕರನ್ನು ಯುದ್ಧಭೂಮಿಗೆ ಕಳುಹಿಸಿ ಅಂತಪುರದಲ್ಲಿ ಆರಾಮಾಗಿರುವ ರಾಜರು ಭಾರತದ ಚರಿತ್ರೆಯಲ್ಲಿ ಪುಟಕ್ಕೊಬ್ಬರಂತೆ ಸಿಗುತ್ತಾರೆ. ಆದರೆ, ಒಬ್ಬ ಸಾಮಾನ್ಯ ಸೈನಿಕನಂತೆ ರಣರಂಗದಲ್ಲಿ ಕಾದಾಡಿ ಸಾಯುವ ಟಿಪ್ಪುನಂತಹ ರಾಜರು ಚರಿತ್ರೆಯಲ್ಲಿ ಕಾಣಸಿಗುವುದು ಬಹಳ ಅಪರೂಪ. 

ಹೈದರ್ ಮತ್ತು ಟಿಪ್ಪು ಆಳಿದ್ದು 1761 ರಿಂದ 1799ರ ತನಕ. ಈ ಮೂವತ್ತೆಂಟು ವರ್ಷಗಳಲ್ಲಿ ಅವರು ಯುದ್ಧ ಮಾಡದ ಒಂದೇ ಒಂದು ವರ್ಷವೂ ಇಲ್ಲ ಎಂಬುದು ನಂಬಲು ಕಷ್ಟವಾದರೂ ನಂಬಲೇಬೇಕಾದ ಸತ್ಯ. ಅವರು ಸಿಂಹಾಸನದ ಮೇಲೆ ಕುಳಿತು ಕಳೆದ ಸಮಯಕ್ಕಿಂತಲೂ ರಣರರಂಗದಲ್ಲಿ ಕುದುರೆಯ ಮೇಲೆ ಕುಳಿತು ಕಳೆದ ಸಮಯವೇ ಹೆಚ್ಚು ಎಂದು ಚರಿತ್ರೆಕಾರರು ಬೊಟ್ಟುಮಾಡಿ ತೋರಿಸುತ್ತಾರೆ!

ಅದರಲ್ಲೂ ಬ್ರಿಟಿಷರ ವಿರುದ್ಧ ಅವರು ನಡೆಸಿದ ನಾಲ್ಕು ವಸಾಹತುಶಾಹಿ ವಿರೋಧಿ ಯುದ್ಧಗಳು ಅತ್ಯಂತ ಪ್ರಮುಖವಾಗಿವೆ. ಈ ಯುದ್ಧಗಳಲ್ಲೇ ಅವರು ಬರೊಬ್ಬರಿ ಒಂಬತ್ತು ವರ್ಷಗಳನ್ನು ಕಳೆದರು! ಯುದ್ಧಗಳ ನಡುವಿನ ಅವಧಿಯಲ್ಲಿ ಮುಂದಿನ ಯುದ್ಧಕ್ಕಾಗಿನ ಸಿದ್ಧತೆಗಳು! ಹೀಗಾಗಿ, ತಮ್ಮ ಮೂವತ್ತೆಂಟು ವರ್ಷಗಳ ಆಡಳಿತದುದ್ದಕ್ಕೂ ಅವರ ಪ್ರಧಾನ ಧ್ಯೇಯ ಅಂತ ಇದ್ದದ್ದು ಬ್ರಿಟಿಷರನ್ನು ಈ ನೆಲದಿಂದ ಒದ್ದೋಡಿಸಿ ಭರತಖಂಡವನ್ನು ಸ್ವತಂತ್ರಗೊಳಿಸುವುದೇ ಆಗಿತ್ತು. ಶಸ್ತ್ರಾಸ್ತ್ರಗಳ ತಯಾರಿಕೆಯಿರಲಿ ಅಥವಾ ಅವುಗಳ ಬಳಕೆಯಿರಲಿ, ಸೈನಿಕರ ನೇಮಕಾತಿಯಿರಲಿ ಅಥವಾ ಅವರ ನಿಯೋಜನೆಯಿರಲಿ, ತೆರಿಗೆ ಸಂಗ್ರಹವಿರಲಿ ಅಥವಾ ಅದರ ಉಪಯೋಗವಿರಲಿ - ಅವು ಏನೇ ಮಾಡಿದರೂ ಅದು ಬ್ರಿಟೀಷರನ್ನು ಸೋಲಿಸಿ ಸಾಗರದಾಚೆಗೆ ಎಸೆಯುವ ಪ್ರಧಾನ ಉದ್ದೇಶಕ್ಕೆ ನೆರವಾಗುವಂತೆ ಮಾಡುತ್ತಿದ್ದರು. ಬ್ರಿಟೀಷರನ್ನು ಶತಗತಾಯ ಈ ನೆಲದಿಂದ ಹೊರ ದಬ್ಬುವುದಕ್ಕಾಗಿಯೇ ಟಿಪ್ಪು ಸುಲ್ತಾನ್ ಶಿಸ್ತುಬದ್ಧ 1,43,000 ಸೈನಿಕರನ್ನು ಸಜ್ಜುಗೊಳಿಸಿದ್ದ! ಅಂದಿನ ಕರ್ನಾಟಕದ ಜನಸಂಖ್ಯೆಯೇ ಹೆಚ್ಚೆಂದರೆ 35 ಲಕ್ಷವಿತ್ತು. ರಾಜ್ಯದ ಪ್ರತೀ 40 ಪ್ರಜೆಗಳಿಗೊಬ್ಬರಂತೆ ರೆಗ್ಯೂಲರ್ ಮೈಸೂರು ಸೈನ್ಯದಲ್ಲಿ ಒಬ್ಬ ಸೈನಿಕನಿದ್ದ! 1799 ರಲ್ಲಿ ಟಿಪ್ಪು ಸತ್ತಾಗ ಬ್ರಿಟೀಷರಿಗೆ ಇಂದಿನ ಮದ್ದೂರಿನಲ್ಲಿ ಸಿಕ್ಕ ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ನೋಡಿ ಬ್ರಿಟಿಷರು ದಂಗಾಗಿ ಹೋಗಿದ್ದರು. ಆ ಕಾರಣಕ್ಕೇನೇ ಅದಕ್ಕೆ ಮದ್ದೂರು (ಮದ್ದುಗುಂಡುಗಳ ಊರು) ಅಂತ ಹೆಸರು ಬಂದಿದ್ದು!

ಇಡೀ ವಿಶ್ವದ ಚರಿತ್ರೆಯಲ್ಲೇ ಮೊಟ್ಟ ಮೊದಲ ಬಾರಿಗೆ ಕ್ಷಿಪಣಿಗಳನ್ನು ತಯಾರಿಸಿ ಬಳಸಿದವರು ಹೈದರ್ ಮತ್ತು ಟಿಪ್ಪು ಸುಲ್ತಾನ್. ವಿಶ್ವದ ಮೊಟ್ಟ ಮೊದಲ ಕ್ಷಿಪಣಿಗಳನ್ನು 1780ರಲ್ಲೇ ಬ್ರಿಟೀಷರ ವಿರುದ್ಧ ಹೈದರ್ ಬಳಸಿದ್ದ ಎಂಬುದನ್ನು ಹಾಗೂ ಅದನ್ನು ಅನುಕರಿಸಿ 1805ರಲ್ಲಿ ವಿಲಿಯಂ ಕಾಂಗ್ರೀವ್ ಎಂಬ ಬ್ರಿಟಿಷ್ ವಿಜ್ಞಾನಿ ಕ್ಷಿಪಣಿಗಳನ್ನು ರೂಪಿಸಿದ ಹಾಗೂ 1806ರ ಬೌಲೋಗ್ನ್ ಯುದ್ಧದಲ್ಲಿ ಅದನ್ನು ಬಳಸಲಾಯಿತು ಎಂದು ಕೆನೆತ್ ಮ್ಯಾಕ್ಸೆ ಅವರು ಗಿನ್ನಿಸ್ ಹಿಸ್ಟರಿ ಆಫ್ ಲ್ಯಾಂಡ್ ವಾರ್ಫೇರ್ ಪುಸ್ತಕದಲ್ಲಿ ಸ್ವಷ್ಟವಾಗಿ ದಾಖಲಿಸಿದ್ದಾನೆ. ಸುಮಾರು 1.4 ಕಿ.ಮೀ. ವರೆಗೆ ಚಿಮ್ಮಬಲ್ಲ ಈ ಕ್ಷಿಪಣಿ ತಂತ್ರಜ್ಞಾನದ ಬಗ್ಗೆ ಬ್ರಿಟೀಷರಿಗಿರಲಿ, ಇಡೀ ವಿಶ್ವಕ್ಕೇ ಗೊತ್ತಿರಲಿಲ್ಲ. ಹೈದರ್ ಅವುಗಳನ್ನು ಬಳಸಿದ ಬರೊಬ್ಬರಿ ಮೂವತ್ತೇಳು ವರ್ಷಗಳ ನಂತರವಷ್ಟೇ ಆ ತಂತ್ರಜ್ಞಾನವನ್ನು ಅರಿಯಲು ಬ್ರಿಟೀಷರಿಗೆ ಸಾಧ್ಯವಾಗಿದ್ದು. ಟಿಪ್ಪೂ ಮರಣದ ನಂತರವಷ್ಟೇ ಬ್ರಿಟೀಷರು ಶ್ರೀರಂಗಪಟ್ಟಣದಿಂದ ಆ ತಂತ್ರಜ್ಞಾನವನ್ನು ಕದ್ದು ನಕಲು ಮಾಡಿ ಹೊಸ ಕ್ಷಿಪಣಿಗಳನ್ನು ರೂಪಿಸಿದ್ದು.
 
ಟಿಪ್ಪು ಮತ್ತು ಹೈದರ್ ಸೃಷ್ಟಿಸಿದ್ದ ಮಾಹಿತಿದಾರರ ಜಾಲವಂತೂ ಅದ್ಭುತವಾಗಿತ್ತು. ಮೈಸೂರು ರಾಜ್ಯದಾದ್ಯಂತ ಎಲ್ಲಿ ಏನೇ ನಡೆದರೂ ಅವರಿಗೆ ಕೂಡಲೇ ತಿಳಿಯುವಂತೆ ಸುಮಾರು ಒಂದು ಲಕ್ಷ ಮಾಹಿತಿದಾರರನ್ನು ಇಡೀ ರಾಜ್ಯದಾದ್ಯಂತ ಮತ್ತು ಹೊರಗಡೆ ಹರಡಿದ್ದರು. ಈ ವಿಸ್ತೃತ ಮಾಹಿತಿದಾರರ ಜಾಲದ ಕಾರಣದಿಂದಲೇ ಅವರು ತಿಂಗಳುಗಟ್ಟಲೇ ರಾಜಧಾನಿಯಿಂದ ದೂರದ ರಾಜ್ಯ ಗಡಿಗಳಲ್ಲಿ ಯುದ್ಧದಲ್ಲಿ ನಿರತರಾಗಿದ್ದರೂ ಆಡಳಿತ ಹಾದಿತಪ್ಪದಂತೆ ನೋಡಿಕೊಂಡಿದ್ದರು. 

ಯುದ್ಧ ಮಾಡುತ್ತಿರುವಾಗಲೇ ಹೈದರ್ ಅಸ್ವಸ್ಥನಾಗುತ್ತಾನೆ. ತಾನು ಸಾಯುವ ಕೆಲವೇ ಗಂಟೆಗಳ ಮೊದಲು ಆತನ ತನ್ನ ಮಗ ಟಿಪ್ಪು ಸುಲ್ತಾನನಿಗೆ ಒಂದು ಪತ್ರವನ್ನು ಬರೆಸಿಟ್ಟು ಸಾಯುತ್ತಾನೆ. ವಾಸ್ತವದಲ್ಲಿ ಅದು ಹೈದರ್ನ ರಾಜಕೀಯ ದೃಷ್ಟಿಕೋನಕ್ಕೆ ಹಿಡಿದ ಕನ್ನಡಿಯಾಗಿದೆ. ಹಿಂದೂಸ್ತಾನವನ್ನು ಬ್ರಿಟಿಷರಿಂದ ರಕ್ಷಿಸುವ ಶಕ್ತಿಯೀಗ ಹಿಂದೂಗಳಲ್ಲಿಲ್ಲವಾದ್ದರಿಂದ ಆ ಕೆಲಸವನ್ನು ನೀನೇ ಮಾಡಬೇಕು ಎಂದು ಟಿಪ್ಪುಗೆ ಆ ಪತ್ರದಲ್ಲಿ ಹೈದರ್ ಸ್ಪಷ್ಟವಾಗಿ ಹೇಳುತ್ತಾನೆ. ಟಿಪ್ಪು ಆ ಕೆಲಸವನ್ನು ತನ್ನ ಕೊನೆಯ ಉಸಿರಿರುವ ತನಕವೂ ಮಾಡುತ್ತಲೇ ರಣರಂಗದಲ್ಲಿ ಸಾಯುತ್ತಾನೆ. ಕೇವಲ ಮೈಸೂರು ರಾಜ್ಯವನ್ನು ಮಾತ್ರವಲ್ಲ, ಇಡೀ ಹಿಂದೂಸ್ತಾನವನ್ನು ಬ್ರಿಟಿಷರಿಂದ ರಕ್ಷಿಸಬೇಕು, ಅದಕ್ಕಾಗಿ ಹಿಂದೂಸ್ತಾನದ ಎಲ್ಲಾ ರಾಜರನ್ನು ಬ್ರಿಟಿಷರ ವಿರುದ್ಧ ಒಗ್ಗೂಡಿಸಬೇಕು ಎಂಬ ಹೈದರ್ನ ಉಪದೇಶವನ್ನು ಪಾಲಿಸುವುದಕ್ಕೆ ಟಿಪ್ಪು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾನೆ. ಆದರೆ, ಕೊನೆಗೂ ಅದರಲ್ಲಿ ಆತ ಸಫಲನಾಗುವುದಿಲ್ಲ. 

1792ರಲ್ಲಿ ನಡೆದ ಮೂರನೇ ಬ್ರಿಟಿಷ್ ವಸಾಹತುಶಾಹಿ ವಿರೋಧಿ ಯುದ್ಧದಲ್ಲಿ ಟಿಪ್ಪು ಸೋಲುತ್ತಾನೆ. ಇದರಿಂದ ಮೈಸೂರು ರಾಜ್ಯದ ಅರ್ಧದಷ್ಟು ಭಾಗವನ್ನು ಕಳೆದುಕೊಳ್ಳಬೇಕಾಯಿತಲ್ಲದೇ ಯುದ್ಧ ನಷ್ಟವಾಗಿ ಕೇವಲ ಬ್ರಿಟೀಷರಿಗೆ ಮಾತ್ರವಲ್ಲದೇ ಅವರೊಂದಿಗೆ ಕೈಜೋಡಿಸಿದ ಮರಾಠರಿಗೂ ಅಪಾರ ಪ್ರಮಾಣದ ಹಣ ನೀಡಬೇಕಾಗಿ ಬರುತ್ತದೆ. ನಷ್ಟ ಪರಿಹಾರವಾಗಿ 3,3೦,೦೦,೦೦೦ ರೂಪಾಯಿ ಹಣವನ್ನು ನೀಡುವುದಕ್ಕೆ ಟಿಪ್ಪು ಬಳಿ ಅಷ್ಟೊಂದು ಹಣ ಇರುವುದಿಲ್ಲ. ಅದನ್ನು ಪೂರ್ತಿಯಾಗಿ ನೀಡುವ ತನಕ ತನ್ನ ಇಬ್ಬರು ಮಕ್ಕಳನ್ನು ಒತ್ತೆಯಾಳುಗಳಾಗಿ ಬ್ರಿಟಿಷರಿಗೆ ಒಪ್ಪಿಸುತ್ತಾನೆ ಟಿಪ್ಪು ಸುಲ್ತಾನ್! ರಾಜ್ಯದ ರಕ್ಷಣೆಗಾಗಿ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ತನ್ನ ಸ್ವಂತ ಮಕ್ಕಳನ್ನೇ ಒತ್ತೆಯಾಳುಗಳಾಗಿ ಇಟ್ಟ ರಾಜ ಕೇವಲ ಭಾರತದಲ್ಲಲ್ಲ, ಇಡೀ ವಿಶ್ವದಲ್ಲೇ ಎಲ್ಲೂ ಕಾಣಸಿಗುವುದಿಲ್ಲ. ಈ ಯುದ್ಧದಲ್ಲಿ ಕೇವಲ ಹಣ ಮಾತ್ರವಲ್ಲದೇ ಅರ್ಧದಷ್ಟು ರಾಜ್ಯ, 70 ಕೋಟೆಗಳು, 800 ಫಿರಂಗಿಗಳನ್ನು ಟಿಪ್ಪು ಕಳೆದುಕೊಳ್ಳುತ್ತಾನೆ. ಜೊತೆಗೆ ತನ್ನ 50,000 ಧೀರ ಸೈನಿಕರೂ ಕೊಲ್ಲಲ್ಪಡುತ್ತಾರೆ. ಯುದ್ಧ ಮುಗಿದ ತಕ್ಷಣವೇ ಶ್ರೀರಂಗಪಟ್ಟಣದಿಂದ ಹೊರಟ ಟಿಪ್ಪು ಮರಾಠರನ್ನು ಭೇಟಿಯಾಗಿ ನಾನು ಎಂದೂ ನಿಮ್ಮ ಶತ್ರುವಲ್ಲ. ಬ್ರಿಟಿಷರು ನಮ್ಮಿಬ್ಬರ ಸಮಾನ ಶತ್ರುಗಳು. ಅವರ ಬಗ್ಗೆ ಎಚ್ಚರವಿರಲಿ ಎಂದು ಎಚ್ಚರಿಸಿ ಬರುತ್ತಾನೆ. ಆದರೆ ಮರಾಠರು ಟಿಪ್ಪು ಮಾತುಗಳನ್ನು ಕೇಳುವುದಿಲ್ಲ. ಟಿಪ್ಪು ಈ ಮಾತುಗಳನ್ನು ಹೇಳಿದ ಸರಿಯಾಗಿ 22 ವರ್ಷಕ್ಕೆ ಬ್ರಿಟಿಷರು ಕಿರ್ಕಿ ಕದನದಲ್ಲಿ ಮಹಾನ್ ಮರಾಠರನ್ನು ಬಗ್ಗುಬಡಿದು ತಮ್ಮ ಚಕ್ರಾಧಿಪತ್ಯವನ್ನು ಹೇರುತ್ತಾರೆ! ಟೀಪೂ ಮಾತನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಟೀಪೂ ಜೊತೆ ಅವರು ಕೈಜೋಡಿಸಿದ್ದರೆ ಅಥವಾ ಬೇಡ ಅನ್ನಿಸಿದರೆ ಕನಿಷ್ಠ ಟಿಪೂ ವಿರುದ್ಧ ಬ್ರಿಟೀಷರೊಂದಿಗೆ ಅವರು ಕೈಜೋಡಿಸದಿದ್ದರೆ ಮರಾಠರಿಗೆ ಈ ಗತಿ ಬರುತ್ತಿರಲಿಲ್ಲ.  ಈ ವಿಷಯವನ್ನು ಫ್ರಾಕ್ಸಿ ಫರ್ನಾಂಡಿಸ್ ಎಂಬ ಚರಿತ್ರೆಕಾರ ಸ್ಪಷ್ಟವಾಗಿ ಬರೆದಿಟ್ಟಿದ್ದಾರೆ. 

ಮೂರನೇ ಬ್ರಿಟಿಷ್ ವಸಾಹತುಶಾಹಿ ವಿರೋಧಿ ಯುದ್ಧದಿಂದ ಟಿಪ್ಪೂ ತುಂಬಾ ಬಸವಳಿದಿದ್ದ. ಆತ ಸಂಪೂರ್ಣವಾಗಿ ಚೇತರಿಸಿಕೊಂಡು ಮತ್ತೊಮ್ಮೆ ಬ್ರಿಟೀಷರಿಗೆ ಸೆಡ್ಡು ಹೊಡೆದರೆ ತಮಗೆ ಉಳಿಗಾಲವಿಲ್ಲ ಎಂಬುದು ಬ್ರಿಟಿಷರಿಗೆ ಮನವರಿಕೆಯಾಗಿತ್ತು. ನೇರ ಮತ್ತು ನ್ಯಾಯಯುತ ಯುದ್ಧದಲ್ಲಿ ವೀರೋಚಿತವಾಗಿ ಕಾದಾಡುವ ಶಿಸ್ತುಬದ್ಧ ಮೈಸೂರು ಸೈನ್ಯವನ್ನು ಸೋಲಿಸುವುದು ಅಷ್ಟು ಸುಲಭವಲ್ಲ ಎಂಬುದು ಅವರಿಗೆ ಮನವರಿಕೆಯಾಗಿತ್ತು. ಆದ್ದರಿಂದಲೇ ಅವರು ಟಿಪ್ಪು ಸೈನ್ಯ ಮತ್ತು ಆಸ್ಥಾನದಲ್ಲಿದ್ದ ಕೆಲವರನ್ನು ರಹಸ್ಯವಾಗಿ ಖರೀದಿಸಿ ಟಿಪ್ಪು ವಿರುದ್ಧ ಮೋಸದ ಯುದ್ಧಕ್ಕೆ ಸಿದ್ಧವಾಗುತ್ತಾರೆ. 1799ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಕೋರ್ಟ್ ಡೈರೆಕ್ಟರ್ ಸೆಲೆಕ್ಟ್ ಕಮಿಟಿಗೆ ಜನರಲ್ ವೆಲ್ಲೆಸ್ಲಿ ಬರೆದ ಪತ್ರದಲ್ಲಿ ಟಿಪ್ಪು ಆಡಳಿತದ ಕೆಲವು ಪ್ರಮುಖರು ತಮ್ಮೊಂದಿಗೆ ಕೈಜೋಡಿಸಿರುವ ಬಗ್ಗೆ, ಯುದ್ಧದ ನಿರ್ಣಾಯಕ ಸಂದರ್ಭದಲ್ಲಿ ಅವರೆಲ್ಲರೂ ಟಿಪ್ಪು ವಿರುದ್ಧ ತಮಗೆ ಸಹಾಯ ಮಾಡುವ ಬಗ್ಗೆ ವೆಲ್ಲೆಸ್ಲಿ ಖಾತರಿಯಾಗಿ ಹೇಳಿದ್ದ. ಮೈಸೂರು ಸೈನ್ಯದ ಸೇನಾಧಿಪತಿ ಮೀರ್ ಸಾದಕ್ ಮತ್ತು ಟಿಪ್ಪು ಆಡಳಿತದ ಪ್ರಮುಖ ಮಂತ್ರಿ ಪೂರ್ಣಯ್ಯ ಅವರನ್ನು ಖರೀದಿಸಿದ ಮೇಲೆ ಬ್ರಿಟಿಷರ ಮೋಸ-ವಂಚನೆಗಳ ಯೋಜನೆಗೆ ಅಂತಿಮ ರೂಪ ಬರುತ್ತದೆ.  1799ರಲ್ಲಿ ಬ್ರಿಟಿಷರು ಬೃಹತ್ ಸೈನ್ಯದೊಂದಿಗೆ ಎರಡು ದಿಕ್ಕಿನಿಂದ ಮೈಸೂರು ರಾಜ್ಯಕ್ಕೆ ಮುತ್ತಿಗೆ ಹಾಕುತ್ತಾರೆ. ಜನರಲ್ ವೆಲ್ಲೆಸ್ಲಿ ನೇತೃತ್ವದ ಬ್ರಿಟಿಷ್ ಸೈನ್ಯ ಬಾಂಬೆ ಕಡೆಯಿಂದ ಹೊರಟರೆ ಹೈದರಾಬಾದಿನ ನಿಜಮಾರ ಸೈನ್ಯವನ್ನೂ ಒಳಗೊಂಡ ಪ್ರಧಾನ ಬ್ರಿಟಿಷ್ ಸೇನೆ ಜನರಲ್ ಹ್ಯಾರಿಸ್ ನೇತೃತ್ವದಲ್ಲಿ ಮದ್ರಾಸ್ನಿಂದ ಹೊರಡುತ್ತದೆ. ಬ್ರಿಟಿಷ್ ಸೇನಾ ತುಕಡಿಗಳು ತಮ್ಮ ನೆಲೆಗಳನ್ನು ಬಿಟ್ಟ ಕೇವಲ ಎರಡೇ ತಿಂಗಳಲ್ಲಿ ಶ್ರೀರಂಗಪಟ್ಟಣದ ಹೊಸ್ತಿಲಿಗೆ ಬಂದು ನಿಲ್ಲುತ್ತವೆ. ಹಾದಿಯುದ್ದಕ್ಕೂ ಒಂದಾದ ಮೇಲೆ ಒಂದರಂತೆ ಮೈಸೂರು ರಾಜ್ಯದ ಕೋಟೆಗಳು ಸೋತು ಬ್ರಿಟಿಷರ ವಶವಾಗುತ್ತವೆ. ಉನ್ನತ ಮಟ್ಟದಲ್ಲೇ ಹಲವರು ತಮ್ಮೊಂದಿಗೆ ಕೈಜೋಡಿಸಿ ಟಿಪ್ಪು ವಿರುದ್ಧ ನಿಂತರೂ ವೀರೋಚಿತವಾಗಿ ಕಾದಾಡುತ್ತಿದ್ದ ಮೈಸೂರು ಸೇನೆಯನ್ನು ಕಂಡು ವೆಲ್ಲೆಸ್ಲಿ, ಹ್ಯಾರಿಸ್ ನಿಜಕ್ಕೂ ಹೌಹಾರುತ್ತಾರೆ. ತಮ್ಮವರೇ ತಮಗೆ ಮೋಸ ಮಾಡಿದ್ದು ಟಿಪ್ಪುಗೆ ಅರಿವಾಗುತ್ತದೆ. ಸೋಲು ಖಚಿತವೆನಿಸುತ್ತದೆ. ಬ್ರಿಟಿಷರೊಂದಿಗೆ ರಾಜಿಮಾಡಿಕೊಂಡು, ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿಕೊಂಡರೆ ಮೈಸೂರು ರಾಜ್ಯದ ಸಿಂಹಾಸನದಲ್ಲಿ ಮುಂದುವರಿಯುವ ಅವಕಾಶ ಆಗಲೂ ಟಿಪ್ಪು ಎದುರಿಗಿರುತ್ತದೆ. ಆದರೆ, ಟಿಪ್ಪು ಅಂತಹ ಯೋಚನೆಯನ್ನೇ ಮಾಡುವುದಿಲ್ಲ. ಬ್ರಿಟಿಷರನ್ನು ಭಾರತದ ಪ್ರಧಾನ ಶತ್ರುಗಳೆಂದು ಬಗೆದು ಬದುಕಿನುದ್ದಕ್ಕೂ ಅವರ ವಿರುದ್ಧ ಹೋರಾಡಿದ ಟಿಪ್ಪು ಸುಲ್ತಾನ್ಗೆ ಕೊನೆ ಗಳಿಗೆಯಲ್ಲಿ ಸಿಂಹಾಸನಕ್ಕಾಗಿ, ವೈಯಕ್ತಿಕ ಜೀವಕ್ಕಾಗಿ ಶರಣಾಗಬೇಕೆಂದು ಅನ್ನಿಸುವುದೇ ಇಲ್ಲ. ಸಾಮಾನ್ಯ ಸೈನಿಕನಂತೆ ವೀರೋಚಿತವಾಗಿ ಕಾದಾಡಿದ ಈ ಮೈಸೂರು ಹುಲಿ 1799ರ ಮೇ 4ರಂದು ರಣರಂಗದಲ್ಲೇ ಹುತಾತ್ಮವಾಗುತ್ತದೆ. ಆ ಒಂದೇ ದಿನ ಹನ್ನೊಂದು ಸಾವಿರ ಮೈಸೂರು ಸೈನಿಕರ ಮಾರಣಹೋಮ ನಡೆದು ಕಾವೇರಿ ಕೆಂಪಾಗಿ ಹರಿಯುತ್ತದೆ.

- ಕುಮಾರ್ ಬುರಡಿಕಟ್ಟಿ.

 

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಈದ್-ಉಲ್-ಫಿತರ್ ಪ್ರತಿನಿಧಿಸುವ ಮೌಲ್ಯಗಳು; ಮನುಷ್ಯ ಪ್ರೇಮ, ಕರುಣೆ, ಅನುಕಂಪ  ಮತ್ತು ಸಹಾನುಭೂತಿ

ಕೋಮು ಧ್ರುವೀಕರಣ ಮತ್ತು ಧಾರ್ಮಿಕ ಅಸಹಿಷ್ಣುತೆಯ ಹಿನ್ನೆಲೆಯಲ್ಲಿ, ಈದ್-ಉಲ್-ಫಿತರ್‌ನ ಮಹತ್ವವು ಹೆಚ್ಚಿನ ಪ್ರಾಮುಖ್ಯತೆಯನ್ನು ...

ಭಟ್ಕಳ: ಕುರಾನ್ ಕಂಠಪಾಠ ಮಾಡಿದ ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಚೀಫ್ ಖಾಝಿ

ಭಟ್ಕಳ: ಇಲ್ಲಿನ ಖಲಿಫಾ ಮರ್ಕಝಿ ಜಮಾಅತುಲ್ ಮುಸ್ಲಿಮೀನ್ ನ ಚೀಫ್ ಖಾಜಿ ಹಾಗೂ ಜಾಮಿಯಾ ಇಸ್ಲಾಮಿ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಮೌಲಾನ ...

“ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ, ಸಮಾಜಿಕ ಬದಲಾವಣೆ”-ಐಟಾ ದಿಂದ ರಾಷ್ಟ್ರೀಯ ಶೈಕ್ಷಣಿಕ ಅಭಿಯಾನ

ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ ಮತ್ತು ಸಮಾಜಿಕ ಬದಲಾವಣೆ ಈ ಮೂರು ಅಂಶಗಳು ಪರಸ್ಪರ ಸಂಬಂಧ ಹೊಂದಿವೆ. ಬೋಧನಾ ಪ್ರಬುದ್ಧತೆಯು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...