ಪರೀಕ್ಷೆ ಮತ್ತು  ಬಲಿದಾನಗಳ  ಪ್ರತೀಕ : ಹಜ್ಜ್  ಮತ್ತು ಬಕ್ರೀದ್

Source: sonews | By Staff Correspondent | Published on 30th July 2020, 10:44 PM | Special Report | Islam |

ಪರೀಕ್ಷೆ ಮತ್ತು  ಬಲಿದಾನಗಳ  ಪ್ರತೀಕ : ಹಜ್ಜ್  ಮತ್ತು ಬಕ್ರೀದ್

ಹಜ್ಜ್  ಮತ್ತು  ಬಕ್ರೀದ್  ಇವೆರಡರಲ್ಲೂ  ಪ್ರವಾದಿ ಅಬ್ರಹಾಮರ ಜೀವನ ಮತ್ತು ಸಂದೇಶವಿದೆ.  ಕುರಾನ್ ನಲ್ಲಿ ಹಲವೆಡೆ  ಇವರ   ವೃತ್ತಾಂತವಿದೆ.   ಆದಿಮಾನವ  ಮತ್ತು  ಪ್ರವಾದಿಯೂ  ಆಗಿದ್ದ ಆದಮರ  ನಂತರ ನೋಹ(ಮನು)  ಮತ್ತು  ಅಬ್ರಹಾಮರಂತಹ  ಲಕ್ಷಾಂತರ  ದೇವ ಸಂದೇಶವಾಹಕರು  ಅಖಂಡ  ಬೃಹ್ಮಾಂಡ  ಹಾಗೂ  ನಮ್ಮೆಲ್ಲರ ಸೃಷ್ಟಿಕರ್ತನಿಂದಲೇ  ನೀಡಲ್ಪಟ್ಟ ಯಶಸ್ವೀ    ಜೀವನ ಪದ್ಧತಿಯನ್ನು ಅನುಸರಿಸುವಂತೆ  ಕರೆನೀಡುತ್ತಿದ್ದರು.  ಆ  ಮಾರ್ಗದಲ್ಲಿ ಅನಿವಾರ್ಯವಾಗಿ  ಬರುವ  ಸಂಕಷ್ಟಗಳನ್ನು ಸಹಿಸುತ್ತಲೇ   ಮತ್ತು ಪರೀಕ್ಷೆಗಳನ್ನು  ಎದುರಿಸುತ್ತಲೇ  ತ್ಯಾಗಗಳನ್ನು  ನೀಡಿ  ಕರ್ತವ್ಯ ನಿರತರಾಗಿ  ನಿರ್ಗಮಿಸಿದ ಮಹಾ  ನಾಯಕರಲ್ಲಿ ಒಬ್ಬರು  ಅಬ್ರಾಹಂ.

ತಾವೇ  ಅತಿದೊಡ್ಡ  ದೇವರೆಂಬಂತೆ  ವರ್ತಿಸುತ್ತಿದ್ದ  ತಮ್ಮ ತಮ್ಮ ಕಾಲದ ಪುರೋಹಿತರು  ಮತ್ತು  ಸರ್ವಾಧಿಕಾರಿಗಳ  ಶೋಷಣೆಗಳ ಮುಷ್ಠಿಗಳಿಂದ ಮರ್ದಿತ  ಜನಸಾಮಾನ್ಯರನ್ನು ವಿಮೋಚಿಸಿ  ನೈಜ ಸೃಷ್ಟಿಕರ್ತ ನೀಡಿರುವ ಜೀವನಕ್ರಮದ  ಅಧೀನಕ್ಕೆ  ತರುವುದು ಸಾಮಾನ್ಯವಾಗಿ ಪ್ರವಾದಿಗಳ ದೌತ್ಯವಾಗಿತ್ತು.

ಬೃಹ್ಮಾಂಡವನ್ನು  ಸೃಷ್ಟಿಸಿ, ಮಾನವರಿಗಾಗಿ ಅಗತ್ಯ  ಸೌಲಭ್ಯಗಳನ್ನು ಒದಗಿಸಿರುವ  ಒಡೆಯನೊಂದಿಗೆ  ದೇವೇತರರನ್ನು   ಭಾಗಿಗೊಳಿಸುವುದು ಅಕ್ಷಮ್ಯ  ಅಪರಾಧವೆಂಬ ಘೋಷಣೆ  ಆ  ಏಕೈಕ  ದೇವನದ್ದಾಗಿದೆ.  ಈ ಕರೆಯನ್ನು   ಘಂಟಾಘೋಷವಾಗಿ,  ಹೆಚ್ಚಿನ ಬಲದೊಂದಿಗೆ  ಘೋಷಿಸುವುದೇ  ಇಬ್ರಾಹಿಮರ  ವಿಶೇಷತೆಯಾಗಿತ್ತು.

ಅಪ್ಪ ಮೂರ್ತಿ ತಯಾರಕ, ಮಗ ಭಂಜಕ

ಅಬ್ರಹಾಮರು ಇರಾಕ್ ನ ಉರ್  ಪಟ್ಟಣದಲ್ಲಿ ಹುಟ್ಟಿದರು.  ಅವರ  ತಂದೆ ಮೂರ್ತಿಗಳನ್ನು  ತಯಾರಿಸಿ  ಮಾರುವ  ಪ್ರಖ್ಯಾತ ಉದ್ಯೋಗಿಯಾಗಿದ್ದರು. ನಮ್ರೂದ್  ರಾಜನ ಆಸ್ಥಾನದಲ್ಲಿ ಪ್ರತಿಷ್ಟಿತ ಸ್ಥಾನ ಪಡೆದಿದ್ದರು. ತನ್ನ  ಮುಂದೆಯೇ  ತಯಾರಾಗುತ್ತಿದ್ದ  ವಿವಿಧ ಮೂರ್ತಿಗಳನ್ನು ಕಂಡು  ಅಬ್ರಹಾಮರು  ತಮ್ಮ ತಂದೆಯವರನ್ನು ಕೇಳಿದುದು  ಕುರಾನ್ ನಲ್ಲಿ  ಈ  ರೀತಿಯಿದೆ   ‘ನೀವೇನು  ವಿಗ್ರಹಗಳನ್ನು ದೇವರಾಗಿಸಿಕೊಂಡಿರುವಿರೋ? ನಾನಂತು  ನಿಮ್ಮನ್ನು  ಮತ್ತು ನಿಮ್ಮ ಜನಾಂಗವನ್ನು  ಸ್ಪಷ್ಟವಾಗಿ  ದಾರಿಗೆಟ್ಟ  ಸ್ಥಿತಿಯಲ್ಲಿ  ಕಾಣುತ್ತಿದ್ದೇನೆ.’ ( ೬- ೭೪).

ಆಗ  ತಂದೆಯು  ನೀನು  ನನ್ನ ನಂತರ  ನನ್ನ  ಈ  ಸ್ವತ್ತು  ಸಂಪತ್ತು, ಐಶ್ವರ್ಯಗಳ  ಒಡೆಯನಾಗಲಾರೆಯೋ  ಎಂದು  ಪ್ರಲೋಭಿಸುತ್ತಾರೆ.   ಪರೀಕ್ಷೆ  ಮತ್ತು  ತ್ಯಾಗಗ   ಇಲ್ಲಿಂದ  ಆರಂಭ  ಆಗುತ್ತದೆ. ಸಿದ್ದಾಂತದೊಂದಿಗಿನ  ರಾಜಿಮಾಡದೆ  ಆಡಂಬರ ವಿಲಾಸದ ಜೀವನವನ್ನು ತ್ಯಜಿಸುತ್ತಾರೆ.  ಎಲ್ಲಾ  ಪರಿಣಾಮಗಳ ಅಪಾಯವನ್ನರಿತೂ,  ಲೆಕ್ಕಿಸದೆ ಅಬ್ರಹಾಮರು   ದೇವೇತರರ   ಆರಾಧನೆಯ   ಅನುಸರಣೆಯ ವಿರುದ್ಧ ಏಕೈಕ ದೇವನ  ಆರಾಧನೆಯ   ಕರೆಯನ್ನೂ  ಮೊಳಗಿಸಿದರು,   ಕೂಡಲೇ  ಇದರ  ಪ್ರತಿಕ್ರಿಯೆ  ಮನೆ, ಸಮಾಜ  ಮತ್ತು  ಸರ್ವಾಧಿಕಾರಿ ನಮ್ರೂದನಿಂದ ಆಯ್ತು.

ಒಮ್ಮೆ  ಹಲವಾರು  ಮೂರ್ತಿಗಳಿರುವ  ಆರಾಧನಾಲಯದೊಳೊಕ್ಕೆ ಯಾರೂ  ಇಲ್ಲದಾಗ  ಬಾಲಕ  ಅಬ್ರಹಾಮ   ಹೊಕ್ಕಿ,   ಮೂರ್ತಿಗಳೆಲ್ಲವನ್ನು  ತುಂಡು ತುಂಡಾಗಿಸಿ,   ಕೊಡಲಿಯನ್ನು   ದೊಡ್ಡ   ಮೂರ್ತಿಯ  ಕೈಯಲ್ಲಿರುಸುತ್ತಾನೆ. ಈ ಕೆಲಸವು   ಅಬ್ರಹಾಮ  ಅಲ್ಲದೆ   ಯಾರದೂ   ಅಲ್ಲವೆಂದರಿತ  ಗ್ರಾಮಸ್ಥರು   ಆತನನ್ನು  ಹಿಡಿದು ತರುತ್ತಾರೆ.   ಇದು ಯಾರು   ಮಾಡಿದ್ದೆಂದು   ಆತನಲ್ಲಿ   ಕೇಳಿದಾಗ, ಕೊಡಲಿ   ಹಿಡಿದು  ಕೊಂಡಿರುವ   ದೊಡ್ಡ   ಮೂರ್ತಿಯನ್ನೇ ಕೇಳಿರಿಯೆನ್ನುತ್ತಾರೆ. ಅದು  ಮಾತನಾಡುವುದಿಲ್ಲವೆಂದಾಗ  ಹಾಗಾದರೆ ತನ್ನ ಮೇಲೆ  ಕುಳಿತ  ನೊಣವನ್ನೂ  ಓಡಿಸಲಾಗದ, ನಿಮ್ಮ ಕೈಗಳಿಂದಲೇ ರಚಿಸಿದವುಗಳನ್ನೇಕೆ   ಪೂಜಿಸುತ್ತೀರೆಂದು  ಮರು ಪ್ರಶ್ನೆ ಹಾಕುತ್ತಾರೆ. ಅಲ್ಲಿದ್ದವರಿಗೆ  ತನ್ನ ವಿಚಾರವನ್ನು  ಮನವರಿಕೆ ಮಾಡುವುದು ಇದೆಲ್ಲದರ ಉದ್ದೇಶವಾಗಿತ್ತು.

ಕುರಾನ್  ಹೇಳುತ್ತದೆ;  “ತರುವಾಯ  ಅವರು  ಬೆಳಗಿದ  ಚಂದ್ರನನ್ನು ಕಂಡು  ಇದುವೇ  ನನ್ನ ದೇವರು  ಎಂದರು. ಅದು  ಕಣ್ಮರೆಯಾದಾಗ, ನನ್ನ ದೇವರೇ  ನನಗೆ  ಸರಿದಾರಿಯನ್ನು  ತೋರದಿದ್ದರೆ  ನಾನು ದಾರಿಗೆಟ್ಟ ಸಮುದಾಯ  ಸೇರುವುದು  ಖಚಿತ  ಎಂದರು. ಮುಂದೆ ಅವರು ಉರಿಯುವ  ಸೂರ್ಯನನ್ನು  ಕಂಡಾಗ ಇದುವೇ  ನನ್ನ  ದೇವರು. ಇದು ಇತರೆಲ್ಲರಿಗಿಂತ  ದೊಡ್ಡದಾಗಿದೆ ಎಂದರು.  ಕೊನೆಗೆ  ಅದು ಕಣ್ಮರೆಯಾದಾಗ  ಅವರು  ಹೇಳಿದರು,  ಓ  ನನ್ನ  ಜನಾಂಗವೇ,  ನೀವು ದೇವರ  ಜೊತೆಗೆ  ಪಾಲುಗೊಳಿಸುತ್ತಿರುವ  ಎಲ್ಲರಿಗಿಂತಲೂ  ನಾನು ಮುಕ್ತನು  ನಾನು  ಏಕಾಗ್ರಚಿತ್ತನಾಗಿ ನನ್ನ  ಮುಖವನ್ನು  ಆಕಾಶಗಳ ಹಾಗೂ  ಭೂಮಿಯ  ಸೃಷ್ಟಿಕರ್ತನೆಡೆಗೆ   ತಿರುಗಿಸಿಕೊಂಡೆನು. ಖಂಡಿತವಾಗಿಯೂ  ನಾನು ದೇವರಿಗೆ  ಪಾಲುದಾರನನ್ನು ನೇಮಿಸುವವನಲ್ಲ ಎಂದರು, ಅವರ  ಜನಾಂಗವು  ಅವರ  ಜೊತೆ ಜಗಳಾಡಿತು, ಆಗ ಅವರಂದರು ನೀವೇನು  ಅಲ್ಲಾಹನ  ವಿಷಯದಲ್ಲಿ ನನ್ನೊಡನೆ  ಜಗಳಾಡುತ್ತಿರುವಿರೋ?  ಅವನೇ  ನನಗೆ ಸನ್ಮಾರ್ಗವನ್ನು  ತೋರಿರುವನು,  ನೀವು  ಅವನ  ಜೊತೆ ಪಾಲುಗೊಳಿಸುವ ಯಾವದಕ್ಕೂ ನಾನು  ಅಂಜುವುದಿಲ್ಲ.  ಸ್ವತಃ  ನನ್ನ ಒಡೆಯನೇ ಏನನ್ನಾದರೂ ಮಾಡಲು  ಇಚ್ಛಿಸದೆ(ಏನೂ  ಆಗುವುದಿಲ್ಲ). ನನ್ನೊಡೆಯನ ಜ್ಙಾನವು   ಎಲ್ಲವನ್ನೂ  ಆವರಿಸಿಕೊಂಡಿದೆ.  ನೀವೇನು ಚಿಂತಿಸುವುದುಲ್ಲವೇ? ( 6: 77-80)

ಧಗಧಗಿಸುವ ಅಗ್ನಿಕುಂಡಕ್ಕೆಸೆಯಲಾಗುತ್ತದೆ.

ಅವರು  ತನ್ನ  ಕಾರ್ಯದಲ್ಲಿ   ಮುಂದುವರಿಯುತ್ತಲೇ  ಹೋದರು.  ಅದೇ ಪ್ರಮಾಣದಲ್ಲಿ   ಪರೀಕ್ಷೆಗಳೂ  ಹೆಚ್ಚುತ್ತಲೇ   ಬಂದುವು.   ಅದ್ಭುತವಾದ   ಪರೀಕ್ಷೆಗಳ  ಮತ್ತು  ತ್ಯಾಗಗಳ  ಒಂದು  ಸರಣಿಯೇ  ಪ್ರವಾದಿ ಇಬ್ರಾಹೀಮರ  ಜೀವನದಲ್ಲಿ  ಸಿಗುವ   ಅದ್ವಿತೀಯ ಉದಾಹರಣೆ.

ನಮ್ರೂದ್   ಸ್ವೇಚ್ಛಾಧಿಪತಿಯು   ಬೃಹತ್ತಾದ    ಅಗ್ನಿಕುಂಡವನ್ನು   ಹೊತ್ತಿಸುವಂತೆ   ತನ್ನ  ಜನರಿಗೆ  ಆಜ್ಞೆ  ನೀಡುತ್ತಾನೆ. ಏಕ ದೇವತ್ವದ ಕರೆಯಿಂದ  ಇಬ್ರಾಹಿಮರನ್ನು  ಬೆದರಿಸುವ   ತಂತ್ರಗಳ   ಮೂಲಕ ತಡೆಯುವ ಪ್ರಯತ್ನ  ಮಾಡಲಾಗುತ್ತದೆ.   ತನ್ನ  ಪ್ರಾಣಕ್ಕಿಂತಲೂ ಏಕೈಕ ದೇವನ    ಸಂಪ್ರೀತಿಯೇ   ಮುಖ್ಯವೆಂಬುದು  ಇಬ್ರಾಹಿಮರ   ನಂಬಿಕೆಯಾಗಿತ್ತು.   ತನ್ನ   ಕರ್ತವ್ಯವನ್ನು   ಮುಂದುವರಿಸುತ್ತಿರುತ್ತಾರೆ.   ಇಬ್ರಾಹಿಮರನ್ನು   ಧಗಿಸುತ್ತಿರುವ   ಅಗ್ನಿಕುಂಡಕ್ಕೆಸೆಯಲಾಗುತ್ತದೆ. ದೇವಾಜ್ಞೆಯಂತೆ   ಬೆಂಕಿ ಆಶ್ಚರ್ಯಕರವಾಗಿ  ತಣ್ಣಗಾಗುತ್ತದೆ. ಇಬ್ರಾಹಿಮರು   ರಕ್ಶಿಸಲ್ಪಡುತ್ತಾರೆ.  ಒಂದು   ಅಗ್ನಿ ಪರೀಕ್ಷೆಯಿಂದ ಯಶಸ್ವಿಯಾಗಿ  ಹೊರಬರುತ್ತಾರೆ.

ಗಡೀಪಾರು

ಈಗ  ಎರಡನೇ  ಪರೀಕ್ಷೆ;  ಮನೆ, ಸಮಾಜ  ಮತ್ತು  ನಾಡಿನಿಂದಲೇ   ಹೊರಹಾಕಲಾಗುತ್ತದೆ.  ಅಸಾಮಾನ್ಯ  ಸಹನಾ   ಶಕ್ತಿಯ  ಮೂಲಕ  ದೇಶ ಪ್ರದೇಶ  ಅಲೆಯುತ್ತಾರೆ. ಕಲ್ಲು ಮುಳ್ಳು  ಬೆಟ್ಟ, ಮರುಭೂಮಿಗಳ ದುರ್ಗಮ ಹಾದಿ, ಭಯಾನಕ ಪ್ರಾಣಿಗಳ ಅಪಾಯಕಾರೀ  ಕಾಡುಗಳು, ಹಿಡಿದುಕೊಂಡು ಹೋಗಿ  ಗುಲಾಮರಾಗಿಸಬಹುದಾದವರ ಭಯ ಇನ್ನೊಂದೆಡೆ.  ಏಕೈಕ  ದೇವನು  ನೀಡಿರುವ ಸತ್ಯದ  ಮಾರ್ಗದ ದೌತ್ಯದ ಪ್ರಜ್ಞ,  ಒಂದೇ  ಛಲದ  ಅಸಾಮಾನ್ಯ  ಗುಣದ ಪ್ರವಾದಿ  ಏನು ಸಹಿಸಲೂ ಸಿದ್ಧ.  ಈಮಧ್ಯೆ  ಹಾಜಿರಾರನ್ನು  ಮದುವೆ  ಆಗುತ್ತಾರೆ.  ತನ್ನ ಮಿಷನಿನಲ್ಲಿ ತಲ್ಲೀನನಾಗುತ್ತಲೇ  ವಯಸ್ಸಾಗುತ್ತದೆ.   ಮಕ್ಕಳಿಲ್ಲದ ಕೊರಗು,   ನಿರಂತರ   ವಿವಿಧ   ರೀತಿಯ  ಪರೀಕ್ಷೆಗಳು,  ತನ್ನ ಕಾರ್ಯದಲ್ಲಿ ಸಹಕಾರಕ್ಕಾಗಿ   ಮತ್ತು  ಮುಂದುವರಿಸಲಿಕ್ಕಾಗಿ   ಓರ್ವ   ಮಗನ   ಕೊರತೆಯೆಂದು   ಮನಗಾಣುತ್ತಾರೆ.  ಪ್ರಾರ್ಥನೆಯನ್ನು  ಆಲಿಸಿ  ದೇವನು  ಅವರ   ಮುದಿ ವಯಸ್ಸಿನಲ್ಲಿ   ಓರ್ವ  ಮಗ   ದಯಪಾಲಿಸುತ್ತಾನೆ. 

ಮಡದಿ ಮತ್ತು ಹಸುಳೆಯನ್ನು ಮರುಭೂಮಿಯಲ್ಲಿ ಬಿಡಬೇಕೆಂಬ ಆಜ್ಞೆ

ಅದೇ   ಇನ್ನೊಂದು   ಪರೀಕ್ಷೆಗೆ    ಕಾರಣವಾಗುತ್ತದೆ.   ಎಳೆಕೂಸು   ಮತ್ತು   ಮಡದಿಯನ್ನು   ಮರುಭೂಮಿಯಲ್ಲಿ   ಬಿಟ್ಟು   ಬರುವಂತೆ ದೇವಾಜ್ಞೆಯಾಗುತ್ತದೆ.   ಪ್ರವಾದಿಯವರು   ಮರು  ಯೋಚಿಸದೆ   ಶಿರಸಾ ಪಾಲಿಸುತ್ತಾರೆ.  ಏಕಾಏಕಿ ಈ ವರ್ತನೆಯನ್ನು  ಕಂಡು  ಮಡದಿ  ಇದೇನು ದೇವಾಜ್ಞೆಯೇ  ಎಂದು   ಕೇಳುತ್ತಾರೆ.  ಹೌದೆಂದು   ತಲೆಯಾಡಿಸಿದಾಗ ಸುಮ್ಮನಾಗುತ್ತಾರೆ.   ಬೇಡಿ  ಮುದಿ ವಯಸ್ಸಿನಲ್ಲಿ  ಪಡೆದ,  ತನಗೆ   ಶಕ್ತಿ, ಆಸರೆ    ಆಯಿತೆಂದುಕೊಂಡು   ಹಲ   ಆಕಾಂಕ್ಷೆಗಳಿಂದ   ಪುಳಕಿತರಾಗುವಾಗಲೇ   ಈ  ಪರೀಕ್ಷೆಯೂ   ಕಠಿಣವೇ  ಆಗಿತ್ತು.

ಹಾಜಿರಾರಲ್ಲಿದ್ದ   ಖರ್ಜೂರ  ಮತ್ತು  ನೀರು    ಕೆಲವೇ  ದಿನಗಳಲ್ಲಿ ಮುಗಿಯುತ್ತದೆ.   ಮಗುವಿಗೆ ಬಾಯಾರಿಕೆಯಾಗಿರುತ್ತದೆ. ತಾಯಿ ಹೃದಯ ತಲ್ಲಣಗೊಳ್ಳುತ್ತದೆ.  ಆಚೀಚೆ   ಓಡಾಡುತ್ತಿರುತ್ತಾರೆ.  ಒಮ್ಮೆ   ಸಫಾ   ಇನ್ನೊಮ್ಮೆ  ಮರ್ವಾವೆಂಬ  ಬೆಟ್ಟಗಳ  ಮಧ್ಯೆ   ಓಡಾಡುತ್ತಾ, ಏರುತ್ತಾ   ಯಾವುದಾದರೂ   ವ್ಯಾಪಾರತಂಡ  ಕಾಣುವುದೋ    ನೋಡುತ್ತಾರೆ. ನಿರಾಶರಾಗಿ   ಮಗುವಿನ    ಕಡೆಗೆ    ಮರಳಿದಾಗ  ಒಂದು   ಅದ್ಭುತ ಕಾದಿರುತ್ತದೆ.  ಮಗು  ಕಾಲುಗಳ ಅಪ್ಪಳಿಸಿದ   ಸ್ಥಳದಲ್ಲೇ ನೀರಿನ ಚಿಲುಮೆಯೊಂದನ್ನು   ಕಂಡು  ಸಂತೋಷವೂ ಅಶ್ಚರ್ಯವೂಗೊಳ್ಳುತ್ತಾರೆ. ಬೇಕಾದಷ್ಟು   ನೀರನ್ನು   ಸಂಗ್ರಹಿಸಿ    ಝಮ್  ಝಮ್ (ನಿಲ್ಲಿಸು) ಎಂದು ಬಿಡುತ್ತಾರೆ.

ಮಗನ ಬಲಿಯ ಪರೀಕ್ಷೆ 

ಪರೀಕ್ಷೆ  ಮುಗಿಯಲಿಲ್ಲ.  ಮುಂದೆ  ಇದಕ್ಕಿಂತ  ಭಯಾನಕ  ಪರೀಕ್ಷೆ. ಬೆಳೆದ ಮಗ  ಇಸ್ಮಾಯಿಲರನ್ನು ಬಲಿ ಕೊಡಬೇಕೆಂಬ  ಆಜ್ಞೆ  ಆಗುತ್ತದೆ. ದೇವಾಜ್ಞೆಯಿಂದ   ಎಂದೂ   ಹಿಂಜರಿಯದ   ಇಬ್ರಾಹಿಮರು ವಿಷಯವನ್ನು ಕೂಡಲೇ   ಮಗನಿಗೆ   ತಿಳಿಸುತ್ತಾರೆ.  ಉಕ್ಕಿನ ಮನುಷ್ಯನಂತಹ ಇಬ್ರಾಹೀಮರ   ತರಬೇತಿಯಲ್ಲಿ   ಪಳಗಿದ  ತಂದೆಗೆ   ತಕ್ಕ   ಮಗ, ದೇವಾಜ್ಞೆಯಾಗಿದ್ದರೆ  ಸದಾ  ಸಿದ್ಧನೆನ್ನುತ್ತಾರೆ.

ಮಗನನ್ನು  ಮಲಗಿಸುತ್ತಾರೆ.   ಪುತೃವಾತ್ಸಲ್ಯ  ತಡೆಯಾಗದಿರಲಿಯೆಂದು ತನ್ನ   ಕಣ್ಣಿಗೆ  ಬಟ್ಟೆ   ಕಟ್ಟಿಕೊಳ್ಳುತ್ತಾರೆ.  ಹರಿತವಾದ   ಕತ್ತಿಯನ್ನು ಕರುಳ ಕುಡಿಯ   ಕತ್ತಿನ ಮೇಲೆ   ಚಲಿಸಿಯೇ   ಬಿಡುತ್ತಾರೆ.   ದೇವನು ನಿಷ್ಠೆ ಮತ್ತು ನಿಸ್ವಾರ್ಥದ  ತನ್ನ   ದಾಸನ  ಆಜ್ಞಾ  ಪಾಲನೆಯನ್ನು   ಸ್ವೀಕರಿಸಿಯೇ   ಬಿಡುತ್ತಾನೆ.  ಮಗನ ಬದಲಿಗೆ  ಕತ್ತು   ಕೊಯ್ಯಲ್ಪಟ್ಟ   ಟಗರು  ಬಿದ್ದು ಕೊಂಡಿತ್ತು . ಇಸ್ಮಾಯಿಲರು   ಜೀವಂತ    ಎದ್ದು ಮುಗುಳ್ನಗುತ್ತಾ ನಿಂತಿದ್ದರು.    ಇಲ್ಲೂ   ಪರೀಕ್ಷೆಯಲ್ಲಿ  ಇಬ್ರಾಹೀಮ   ಮತ್ತು ಇಸ್ಮಾಯೀಲ   ಇಬ್ಬರೂ    ವಿಜಯಿಗಳು.  

ಹಜ್ಜ್

ಹಜ್ಜ್ ನ  ಸಕಲ  ವಿಧಿಗಳು ಇಬ್ರಾಹೀಮರ ಇದೇ  ಚರಿತ್ರೆಯನ್ನು ನೆನಪಿಸುವುದು.  ಸಂಪತ್ತು,  ಆರೋಗ್ಯ   ಮತ್ತು  ಲ್ಲದರಲ್ಲೂ ಅರ್ಹನಾಗಿರುವ  ವಯಸ್ಕ  ಜೀವನದಲ್ಲೊಮ್ಮೆ   ಹಜ್ಜ್  ಯಾತ್ರೆ   ಕೈಗೊಳ್ಳಬೇಕು.  ವಿಶ್ವದೆಲ್ಲೆಡೆಯಿಂದ   ಲಕ್ಷೋಪಲಕ್ಷ  ಮುಸ್ಲಿಮರು   ವರ್ಷಕ್ಕೊಮ್ಮೆ   ಮಕ್ಕಾನಗರದಲ್ಲಿ  ಹೇಗೆ  ಒಟ್ಟುಗೂಡುತ್ತಾರೆಂದರೆ   ಒಂದೇ   ರೀತಿಯ  ಎರಡು  ತುಂಡು    ಶ್ವೇತ  ಬಟ್ಟೆಯನ್ನು  ದೇಹಕ್ಕೆ   ಸುತ್ತಿ   ಕೊಂಡು   ಆತ   ಯಾವುದೇ   ದೇಶದ   ಆಡಳಿತಗಾರನೋ,   ಸೇವಕನೋ ತಿಳಿಯಲಿಕ್ಕಾಗದು.   ಎಲ್ಲರೂ  ಒಂದೇ   ರೀತಿಯ   ವಿಧಿಗಳನ್ನು   ಅಲ್ಲಿ   ನೆರವೇರಿಸಬೇಕು.   ಸಮಾನತೆಗೆ   ಇಸ್ಲಾಮ್   ಕೊಡುವ   ಪ್ರಾಮುಖ್ಯತೆ   ಇಲ್ಲಿ   ಎದ್ದು   ಕಾಣುತ್ತದೆ.

ಕಾಬಾ  ಬಳಿಯಲ್ಲೇ  ಇರುವ  ಎಂದೂ  ಕಡಿಮೆಯಾಗದೆ  ಸದಾ ಹರಿಯುತ್ತಲೇ   ಇರುವ ಮರುಭೂಮಿಯ  ಬುಗ್ಗೆಯೇ   ಝಮಝಮ್ ನ ಬಾವಿ.   ಅತ್ಯದ್ಭುತ  ಗುಣಗಳುಳ್ಳ  ಇದರ  ನೀರನ್ನು   ಲೋಕದ ಮೂಲೆ ಮೂಲೆಗೆ  ಮಕ್ಕಾ  ಯಾತ್ರಿಗಳು  ಕೊಂಡೊಯ್ಯುತ್ತಾರೆ.  ಇಬ್ರಾಹೀಮ ಮತ್ತು  ಇಸ್ಮಾಯೀಲರು  ಕೂಡಿ  ಅಲ್ಲಾಹನ   ಆಜ್ಞೆಯಂತೆ  ಭೂಮಂಡಲದ ಕೇಂದ್ರ  ಭಾಗದಲ್ಲಿ  ನಿರ್ಮಿಸಿದ,  ಮುಸ್ಲಿಮರೆಲ್ಲರೂ ನಮಾಝಿಗೆ ಅಭಿಮುಖವಾಗಿಸುವ  ಕಾಬಾ  ಭವನಕ್ಕೆ   ಪ್ರದಕ್ಷಿಣೆಯಿಂದ   ಹಿಡಿದು, ಹಾಜಿರಾರು   ನೀರಿಗಾಗಿ   ಓಡಾಡಿದ  ಸಫಾ  ಮರ್ವ ಬೆಟ್ಟಗಳಿಗೆ ಏರುವ ಎಲ್ಲಾ ವಿಧಿಗಳೂ ಹಜ್ಜ್ ನ ಭಾಗಗಳಾಗಿವೆ..

ಮುಹಮ್ಮದ್   ಪೈಗಂಬರರು  ನಿರ್ವಹಿಸಿದ  ಹಜ್ಜ್  ಕ್ರಮದಔತೆ  ಬಕ್ರೀದ್ ನ ಮುನ್ನಾ  ದಿನ  ಅರಫ  ಎಂಬ  ವಿಶಾಲ ಮೈದಾನದಲ್ಲಿ  ಹಾಜಿಗಳೆಲ್ಲರೂ ಸೇರುವುದು  ಹಜ್ಜ್ ನ   ಪ್ರಮುಖ ಮತ್ತು  ಕಡ್ಡಾಯ ವಿಧಿಗಳಲ್ಲೊಂದು.   ಅರಫಾದಲ್ಲಿ  ಎರಡು  ಹೊತ್ತಿನ  ಕಡ್ಡಾಯ  ನಮಾಝ್  ಸಾಮೂಹಿಕವಾಗಿ ನಿರ್ವಹಿಸಿದ ಬಳಿಕ ಜನಸ್ತೋಮಕ್ಕೆ ಉದ್ಬೋದೆ  ನಡೆಸಲಾಗುತ್ತದೆ.  ಆ ನಂತರ  ಪ್ರತಿಯೊಬ್ಬರೂ   ವೈಕ್ತಿಕವಾಗಿ  ಹೃದಯಾಂತರಾಳದಿಂದ ತಮ್ಮ ಗತ ತಪ್ಪುಗಳ ಬಗ್ಗೆ ಪಶ್ಚಾತ್ತಾಪ  ಪಟ್ಟು  ರೋದಿಸಿ  ಕ್ಷಮೆಯಾಚಿ ಪ್ರಾರ್ಥಿಸಿದರೆ ದೇವನು ಪ್ರಾಥನೆಯನ್ನು ಸ್ವೀಕರಿಸಿ ಪರಿಶುದ್ಧಗೊಳಿಸುತ್ತಾನೆಯೆಂದು  ಪ್ರವಾದಿ  ನುಡಿದಿರುತ್ತಾರೆ.  ವಿವಿಧ ವಿಧಿಗಳ  ಮೂಲಕ  ತನ್ನನ್ನು  ಸಂಸ್ಕರಿಸಿ,  ದೇವವಿಶ್ವಾಸ  ಮತ್ತು  ದೇವ ಭಯ  ವೃದ್ಧಿಸಿ ಹೊಸ  ಜೀವನ ಆರಂಭಿಸುವ  ಬದ್ಧತೆಯೊಂದಿಗೆ ಹಾಜಿಗಳು  ಮರಳುತ್ತಾರೆ.   

ಬಕ್ರೀದ್

ದೇವನು    ತನ್ನ   ದಾಸರಲ್ಲಿ   ಯಾರನ್ನು   ಹೆಚ್ಚು    ಇಷ್ಟಪಡುತ್ತಾನೋ   ಅವರನ್ನು   ಹೆಚ್ಚು   ತನ್ನ   ನಿಕಟಗೊಳಿಸುತ್ತಾನೆ  ಮತ್ತು   ಏಕೈಕ  ಪ್ರಭು   ನೀಡಿದ   ಜೀವನ   ಪದ್ಧತಿಯ  ಸ್ಥಾಪನೆಯ  ಕಾರ್ಯವನ್ನು    ಅವರಿಂದ   ತೆಗೆದು ಕೊಳ್ಳುತ್ತಾನೆ.  ಅದಕ್ಕಾಗಿ  ವಿವಿಧ   ರೀತಿಯ   ಪರೀಕ್ಷೆಗಳ ಮೂಲಕ  ಹದಗೊಳಿಸಿ   ಕೊಳ್ಳುತ್ತಾನೆ.   ಈ ರೀತಿ   ಇಬ್ರಾಹಿಮರು   ದೇವನ   ಅತ್ಯಂತ   ಪ್ರಿಯ   ಪ್ರವಾದಿ   ಎಣಿಸಿಕೊಳ್ಳುತ್ತಾರೆ    ಮತ್ತು   ಅವರ   ಸ್ಥಾನವನ್ನು   ಮೇಲಕ್ಕೇರಿಸುತ್ತಾನೆ. 

ಹಜ್ಜ್ ನ  ಪ್ರಮುಖ ಕರ್ಮವಾಗಿ  ಅಲ್ಲಿ  ಒಂದೇ  ಹೊತ್ತು   ಎಲ್ಲ ಹಜ್ಜ್  ಯಾತ್ರಿಗಳೂ  ಅರಫಾ  ಮೈದಾನದಲ್ಲಿ ಸೇರುವ  ದಿನದಂದು ಹಾಜಿಗಳ ಜೊತೆಗೆ ಸಾಮರಸ್ಯ ತೋರುವ ಸಲುವಾಗಿ ಲೋಕದೆಲ್ಲೆಡೆ ಇತರ  ಮುಸ್ಲಿಮರು ಆ ಒಂದು ದಿನದ  ಉಪವಾಸ ಆಚರಿಸುತ್ತಾರೆ. ಮರುದಿನ  ಬಕ್ರೀದ್ ನಂದು  ನಡೆಯುವ  ವಿಶೇಷ  ನಮಾಝ್  ನಂತರದ ಉದ್ಭೋಧನೆಯಲ್ಲಿ  ಇಬ್ರಾಹೀಮರ  ದೇವಾರ್ಪಣೆಯ ಮಾದರಿ ನೆನಪಿಸಲಾಗುತ್ತದೆ.   ಅಂದಿನಿಂದ   ಮೂರು   ದಿನಗಳಲ್ಲಿ ಲೋಕದೆಲ್ಲೆಡೆಯ  ಮುಸ್ಲಿಮರು  ಆಹಾರದ  ಪ್ರಾಣಿಗಳ  ಬಲಿಕೊಡುವುದು ಈ  ಅವಿಸ್ಮರಣೀಯ  ಪರೀಕ್ಷೆ ಮತ್ತು ತ್ಯಾಗದ  ಸ್ಮರಣಾರ್ಥ  ಮತ್ತು ಅನುಕರಣೀಯ  ದೈವ  ಸಮರ್ಪಣಾಭಾವವಾಗಿದೆ

ಪ್ರವಾದಿಗಳ ಪಿತನೆಂಬ ಸ್ಥಾನ ಪ್ರಾಪ್ತಿ

ತನ್ನ  ಸಂತತಿಯನ್ನು    ಸಜ್ಜನರನ್ನಾಗಿ ಮಾಡೆಂದು   ಒಮ್ಮೆ   ಇಬ್ರಾಹೀಮರು   ದೇವನಲ್ಲಿ  ಪ್ರಾರ್ಥಿಸಿರುತ್ತಾರೆ.    ತನ್ನ  ಅತ್ಯಂತ   ಪ್ರಿಯಪಾತ್ರ   ದಾಸನ  ಪ್ರಾರ್ಥನೆಯನ್ನು   ಆಲಿಸಿ,   ಇಸ್ಮಾಯೀಲರ   ನಂತರ   ಐಸಾಕ,   ಜೇಕಬ, ಜೋಸೆಫರಂತಹ   ಅನೇಕ ಪ್ರವಾದಿಗಳನ್ನು ಕೊಡುಗೆಯಾಗಿ   ಮಾತ್ರವಲ್ಲ  ಅಂತಿಮ   ಪ್ರವಾದಿ  ಮುಹಮ್ಮದರೂ   ಇಬ್ರಾಹೀಮರ   ಸಂತತಿಯಲ್ಲೇ   ಆಗಿದ್ದರು.

ನಮಾಝ್, ಉಪವಾಸ, ಝಕಾತ್ ಗಳಂತೇ  ಹಜ್ಜ್  ಕೂಡಾ  ಪ್ರಭುವಿನ ಸಾಮೀಪ್ಯಗಳಿಸಿ,   ದೇವವಿಶ್ವಾಸ   ವೃದ್ಧಿಸಿಕೊಂಡು  ಅದರ   ಪರಿಣಾಮವಾಗಿ   ಸಮಾಜದ   ನಿರ್ಮಾಣದಲ್ಲಿ  ಭಾಗಿಗಳಾಗಿ   ದೈವ ಸಂಪ್ರೀತಿಗಳಿಸಲಿಕ್ಕಿರುವ  ಕಡ್ಡಾಯ   ಕರ್ಮಗಳಲ್ಲೊಂದಾಗಿದೆ. ಈ ಶಿಕ್ಷಣಗಳೇ   ಎಲ್ಲಾ   ಪ್ರವಾದಿಗಳ   ಜೀವನಗಳ   ಮಾದರಿ.    ಪ್ರವಾದಿ ಮುಹಮ್ಮದರು ಅಲ್ಪ ಕಾಲದಲ್ಲೇ   ಸ್ತಾಪಿಸಿದ  ಸಾಮಾಜಿಕ ಕ್ರಾಂತಿ ಚರಿತ್ರೆಯಲ್ಲೇ  ಬೇರಿಲ್ಲ.  ಇದುವೇ ಎಲ್ಲಾ   ಮಹಾಪುರುಷರ  ಜೀವನದಲ್ಲಿ ಸಿಗುವ  ಪಾಠ.

ಪರಿಶ್ರಮ  ಮತ್ತು   ತ್ಯಾಗಗಳಿಲ್ಲದೆ  ಸಾಧನೆ  ಅಸಾಧ್ಯ.  ಮನುಷ್ಯನ ವಿಜಯಾಪಜಯವು ಅಖಂಡ  ಭೂಮಂಡಲದ ಏಕೈಕ  ಒಡೆಯನು ನೀಡಿದ ಶಿಕ್ಷಣದಂತೆ ಮಾನವೀಯತೆಯ  ಸಮಾಜ ಮತ್ತು  ರಾಷ್ಟ್ರದ ನಿರ್ಮಾಣದಲ್ಲಿ  ಆತ  ವಹಿಸಿದ ಪಾತ್ರಕ್ಕೆ ಅನುಗುಣವಾಗಿರುತ್ತದೆ. ಇದೇ ಕುರಾನ ನ ಸಾರ!  ದೇವಸಂದೇಶಕವಾಹಕರ ಜೀವನದಲ್ಲಿನ ಮಾದರಿ!!

Profile photoಆರೆಮ್ ಸಿದ್ದೀಕ್,  ಉಡುಪಿ

 

 

 

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಟ್ಕಳ: ಕುರಾನ್ ಕಂಠಪಾಠ ಮಾಡಿದ ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಚೀಫ್ ಖಾಝಿ

ಭಟ್ಕಳ: ಇಲ್ಲಿನ ಖಲಿಫಾ ಮರ್ಕಝಿ ಜಮಾಅತುಲ್ ಮುಸ್ಲಿಮೀನ್ ನ ಚೀಫ್ ಖಾಜಿ ಹಾಗೂ ಜಾಮಿಯಾ ಇಸ್ಲಾಮಿ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಮೌಲಾನ ...

ಜಿಲ್ಲಾಮಟ್ಟದ ಸೀರತ್ ಪ್ರಬಂಧ ಸ್ಪರ್ಧೆ ಫಲಿತಾಂಶ; ಹೊನ್ನಾವರದ ಜಿ.ಎಸ್.ಹೆಗಡೆ ಪ್ರಥಮ

ಭಟ್ಕಳ: ‘ಪ್ರವಾದಿ ಮುಹಮ್ಮದ್(ಸ) ಎಲ್ಲರಿಗಾಗಿ’ ಸೀರತ್ ಅಭಿಯಾನದ ಅಂಗವಾಗಿ ‘ಪ್ರವಾದಿ ಮುಹಮ್ಮದ್(ಸ) ಮತ್ತು ಸಮಾನತೆ’ ಎಂಬ ವಿಷಯದಲ್ಲಿ ...