ದೇವರು, ಧರ್ಮದ ಪರಿಧಿಯ ಹೊರಗೂ ಉಪವಾಸಕ್ಕೆ ತನ್ನದೇ ಆದ ಅರ್ಥ ಮತ್ತು ಮೌಲ್ಯವಿದೆ

Source: sonews | By Staff Correspondent | Published on 7th June 2017, 8:14 PM | Coastal News | State News | Special Report | Islam | Don't Miss |

 -ಪ್ರೊ. ಆರ್. ಎಸ್. ನಾಯಕ, ಭಟ್ಕಳ
ಪವಿತ್ರ ಕುರಾನ್ ಅವತೀರ್ಣಗೊಂಡ ತಿಂಗಳು ರಮ್ಜಾನ್ ತಿಂಗಳು. ಅದೀಗ ಆರಂಭವಾಗಿದೆ. ಇದನ್ನು ಉಪವಾಸದ ತಿಂಗಳು ಎಂದೂ ಕರೆಯುತ್ತಾರೆ. ಮುಸಲ್ಮಾನ್ ಸಹೋದರ ಸಹೋದರಿಯರು ಈ ತಿಂಗಳ ಪೂರ್ತಿ ಉಪವಾಸವೃತವನ್ನು ಆಚರಿಸುತ್ತಾರೆ. ಉಪವಾಸವೆಂದರೆ ಕೇವಲ ಅನ್ನ ಪಾನೀಯಗಳಿಂದ ದೂರವಿರುವುದಲ್ಲ; ಕೆಡುಕಿನಿಂದಲೂ ದೂರವಿರುವುದು. ಉಳಿದ ಧರ್ಮದವರು ತಿಂಗಳಾನುಗಟ್ಟಲೆ ಅಲ್ಲದಿದ್ದರೂ ವಾರಕ್ಕೊಮ್ಮೆಯೋ ಎರಡು ಸಲವೋ ಅಥವಾ ಶಿವರಾತ್ರಿ, ಸಂಕಷ್ಠಿ ಮೊದಲಾದ ದಿನಗಳಲ್ಲಿ ಉಪವಾಸವೃತ ಆಚರಿಸುವುದಿದೆ.
‘ಉಪ’ ಮತ್ತು ‘ವಾಸ’ ಸೇರಿ ಉಪವಾಸ ಆಗಿದೆ. ಅಂದರೆ ಹತ್ತಿರ ವಾಸಿಸುವುದು, ದೇವರ ಹತ್ತಿರ ಇರುವುದು ಎಂಬುದು ಇದರ ಅರ್ಥ. ‘ಉಪವಾಸ’ ಎಂಬ ಶಬ್ದವನ್ನು ದೈವಭಕ್ತರು ವ್ಯಾಖ್ಯಾನಿಸುವ ರೀತಿ ಇದು.
ದೇವರು, ಧರ್ಮದ ಪರಿಧಿಯ ಹೊರಗೂ ಉಪವಾಸಕ್ಕೆ ತನ್ನದೇ ಆದ ಅರ್ಥ ಮತ್ತು ಮೌಲ್ಯವಿದೆ. ಅದು ಎಷ್ಟರ ಮಟ್ಟಿಗೆ ಧಾರ್ಮಿಕವೋ ಅದಕ್ಕಿಂತ ಹೆಚ್ಚಾಗಿ ಸಾಮಾಜಿಕವೂ ಮಾನವೀಯವೂ ಆದ ಪರಿಕಲ್ಪನೆಯನ್ನು ಹೊಂದಿದೆ; ಅಥವಾ ಅದನ್ನು ಆ ರೀತಿಯ ಪರಿಕಲ್ಪನೆಯಾಗಿ ಪರಿವರ್ತಿಸಬೇಕಾಗಿದೆ.
ಬುದ್ಧ, ಬಸವ, ಗಾಂಧೀ ಮೊದಲಾದ ಮಾನವತಾವಾದಿಗಳು ದೀನರಲ್ಲೇ ದೇವರನ್ನು ಕಂಡವರು. ‘ದರಿದ್ರನಾರಾಯಣ’ ಎಂಬ ಪದ ಬಳಿಸಿದವರು. ದರಿದ್ರ ಅಥವಾ ದೀನರಿಗೆ ಹತ್ತಿರವಾಗುವುದೆಂದರೆ ದೇವರಿಗೆ ಹತ್ತಿರವಾಗುವುದು ಎಂದು ಪ್ರತಿಪಾದಿಸಿದವರು. ಉಣ್ಣದಿರುವ ಲಿಂಗಕ್ಕೆ ಹಾಲೆರೆಯುವುದಕ್ಕಿಂತ ಉಣ್ಣುವ ಜಂಗಮನಿಗೆ ತುತ್ತು ಅನ್ನ ನೀಡುವುದು ಅರ್ಥಪೂರ್ಣವೆಂದು ಸಾರಿದವರು. 
ಧರ್ಮಾಧರ್ಮ, ಪಾಪ-ಪುಣ್ಯದ ವಿಚಾರವನ್ನು ಹೊರಗಿಟ್ಟು ‘ಉಪವಾಸ’ದ ಬಗ್ಗೆ ಯೋಚಿಸಬೇಕಾಗಿದೆ. ಉಪವಾಸದಿಂದ ವ್ಯಕ್ತಿ ಮತ್ತು ಸಮಷ್ಟಿಗಳೆರಡಕ್ಕೂ ಅನುಕೂಲವಿದೆ. ವೈಜ್ಞಾನಿಕವಾಗಿ, ಸಾಮಾಜಿಕವಾಗಿ ಯೋಚಿಸಿದಾಗ ಈ ಮಾತಿನ ಸತ್ಯ ಅರಿವಿಗೆ ಬರುತ್ತದೆ. 
ಪಶು-ಪಕ್ಷಿಗಳಿರಲಿ, ಮನುಷ್ಯನಿರಲಿ ಪ್ರತಿಯೊಂದು ಜೀವಕ್ಕೂ ದುಡಿಮೆ, ಬಿಡುವುಗಳೆರಡೂ ಮುಖ್ಯ. ಅಷ್ಟೇ ಅಲ್ಲ ಯಂತ್ರಗಳಿಗೂ ಸಹ ಬಿಡುವು ಬೇಕಾಗುತ್ತದೆ. ನಿರಂತರವಾಗಿ ಕಾರ್ಯನಿರ್ವಹಿಸಿ ಕಾದು ಬಿಸಿಯಾಗುವ ಯಂತ್ರಕ್ಕೂ ಕಾಲಕಾಲಕ್ಕೆ ಬಿಡುವು ನೀಡಿ ಬಳಸಿದರೆ ಬಾಳಿಕೆ ಬರುತ್ತದೆ. ಮನುಷ್ಯನ ಒಡಲು ಸಹ ಒಂದು ಯಂತ್ರವೇ. ತಿಂದ ಆಹಾರವನ್ನು ಅರೆದು ಕರಗಿಸುವ ಜಠರವೂ ಅಂತಹ ಒಂದು ಯಂತ್ರ. ಸದಾ ಕಾಲ ತಿನ್ನುತ್ತಲೇ ಇದ್ದರೆ ಅದಕ್ಕೆ ಬಿಡುವು ಸಿಗುವುದಾದರೂ ಹೇಗೆ? ಅದಕ್ಕೆ ಬಿಡುವು ನೀಡಬೇಕೆಂದರೆ ಕೆಲ ಸಮಯವಾದರೂ ಹೊಟ್ಟೆಯನ್ನು ಖಾಲಿ ಬಿಡಬೇಕು. ಪಚನಕ್ರಿಯೆಯ ಅವಯವಗಳಿಗೆ ಬಿಡುವು ಸಿಕ್ಕಿ ಅವು ಇನ್ನೂ ಹೆಚ್ಚು ಉತ್ತಮವಾಗಿ ಕಾರ್ಯ ನಿರ್ವಹಿಸಲು ಅನುಕೂಲವಾಗುತ್ತದೆ. ಉಪವಾಸದಿಂದ ಇದು ಸಾಧ್ಯವಾಗುತ್ತದೆ. ಇದರಿಂದ ವ್ಯಕ್ತಿಯ ಶಾರೀರಿಕ ಆರೋಗ್ಯ ವೃದ್ಧಿಸುತ್ತದೆ. ದೈಹಿಕವಾಗಿ ಮನುಷ್ಯ ಶಕ್ತಿಶಾಲಿಯಾಗುವುದರೊಟ್ಟಿಗೆ ಮಾನಸಿಕವಾಗಿ, ಬೌದ್ಧಿಕವಾಗಿಯೂ ಶಕ್ತಿಶಾಲಿಯಾಗುತ್ತಾನೆ. ನಮ್ಮ ಹಿರಿಯರು, ಅವರು ಯಾವುದೇ ಧರ್ಮದವರಾದರೂ ಉಪವಾಸ ಎಂಬುದನ್ನು ಒಂದು ಸಂಪ್ರದಾಯವೆಂಬಂತೆ ಪಾಲಿಸಿಕೊಂಡು ಬರುತ್ತಿದ್ದರು. ಇದರಲ್ಲಿ ಮೇಲ್ನೋಟಕ್ಕೆ ಧರ್ಮ, ದೇವರು, ಸಂಪ್ರದಾಯ, ಆಚರಣೆಗಳು ಮಾತ್ರ ಕಂಡಬಂದರೂ ಇಲ್ಲಿ ವಿಜ್ಞಾನವೂ ಇದೆ ಎಂದುದನ್ನು ತಿಳಿಯಬೇಕು. 
ಉಪವಾಸದಿಂದಾಗುವ ಇನ್ನೊಂದ ಪ್ರಮುಖವಾದ ಅನುಭವ ನಮ್ಮನ್ನು ಹೆಚ್ಚು ಸಾಮಾಜಿಕರನ್ನಾಗಿಸುತ್ತದೆ. ಜೊತೆಗೆ ಮಾನವೀಯ ತುಡಿತ ಮಿಡಿತಗಳಿಗೂ ಕಾರಣವಾಗುತ್ತದೆ. ಹೊಟ್ಟೆ ತುಂಬಿದವರಿಗೆ ಹಸಿದವರ ಸಂಕಟ ಅರ್ಥವಾಗುವುದಿಲ್ಲ. ನೊಂದವರಿಗೆ ಮಾತ್ರವೇ ನೋವಿನ ಅನುಭವವಿರುತ್ತದೆ; ಅನ್ನದ ಮಹತ್ವ ಗೊತ್ತಾಗುತ್ತದೆ. ನೊಂದವರ, ದೀನ ದಲಿತರ, ಹಸಿವಿನಿಂದ ಒದ್ದಾಡುವವರ ಸಂಕಟವೇನೆಂಬುದನ್ನು ಉಪವಾಸ ನಮಗೆ ತಿಳಿಸಿಕೊಡುತ್ತದೆ. ಇದು ಸಾಮಾಜಿಕ ಸ್ಪಂದನೆಗೆ ದಾರಿಯಾಗುತ್ತದೆ. ಆ ಅರಿವು ಹಸಿದವರಿಗೆ ತುತ್ತು ಅನ್ನ ನೀಡಲು ಕಲಿಸಿಕೊಡುತ್ತದೆ. ರಮ್ಜಾನ್ ತಿಂಗಳ ಆರಂಭದ ದಿನಗಳಿಗಿಂತ ಕೊನೆಯ ದಿನಗಳಲ್ಲಿ ಹೆಚ್ಚು ಹೆಚ್ಚು ದಾನ ಮಾಡಲು ಹಸಿವಿನ ಅನುಭವದ ಪ್ರೇರಣೆಯೇ ಕಾರಣವೆಂದರೆ ತಪ್ಪಾಗದು. ಉಪವಾಸವು ನೋವಿನ ಸಂಕಟವನ್ನು ಗ್ರಹಿಸುವ ಅನುಭವ ನೀಡುವುದರ ಜೊತೆಗೆ, ಹಸಿದ ಹೊಟ್ಟೆಯನ್ನು ತಣಿಸಬೇಕೆಂಬ ಅರಿವನ್ನೂ ನೀಡುತ್ತದೆ.
ಎಲ್ಲವೂ ಸರಿ. ಆದರೆ ಉಪವಾಸವು ತೋರಿಕೆಯ ವಸ್ತುವಾದಾಗ ಅದು ಕೇವಲ ಒಂದು ಶಬ್ದವಾಗಿರುತ್ತದೆ. ಅದು ಮನುಷ್ಯ ಮತ್ತು ಸಮಾಜದ ಸವಾಂಗೀಣ ಉನ್ನತಿಗೆ ಬಳಸಲ್ಪಟ್ಟಾಗ ಅದೊಂದು ಪರಿಕಲ್ಪನೆ ಅಥವಾ ಕಾನ್ಸೆಪ್ಟ್ ಆಗುತ್ತದೆ. ಸತ್ಯ + ಆಗ್ರಹ = ಸತ್ಯಾಗ್ರಹ. ಇದೊಂದು ಶಬ್ದ. ಇಲ್ಲಿರುವುದು ಸವರ್ಣದೀರ್ಘಸಂಧಿ. ಆದರೆ ಗಾಂಧೀಜಿಯ ಕೈಯಲ್ಲಿ ಸತ್ಯಾಗ್ರಹ ಎನ್ನುವುದು ಕೇವಲ ಇಷ್ಟೇ ಆಗಿ ಉಳಿಯಲಿಲ್ಲ; ಅದೊಂದು ಕಾನ್ಸೆಪ್ಟ್ ಆಯಿತು. ಹಾಗೆಯೇ ಉಪವಾಸವೂ ಒಂದು ಶಬ್ದ ಮಾತ್ರವಾಗಿರದೆ ಅದು ಪರಿಕಲ್ಪನೆಯಾಗಬೇಕು. ಅದಕ್ಕೆ ಹೊರಗಿನ ಬದಲಾವಣೆಗಳಿಗಿಂತ ಆಂತರ್ಯದಿಂದಲೇ ಆಗುವ ಪರಿವರ್ತನೆ ಮುಖ್ಯವಾಗಿರುತ್ತದೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಈದ್-ಉಲ್-ಫಿತರ್ ಪ್ರತಿನಿಧಿಸುವ ಮೌಲ್ಯಗಳು; ಮನುಷ್ಯ ಪ್ರೇಮ, ಕರುಣೆ, ಅನುಕಂಪ  ಮತ್ತು ಸಹಾನುಭೂತಿ

ಕೋಮು ಧ್ರುವೀಕರಣ ಮತ್ತು ಧಾರ್ಮಿಕ ಅಸಹಿಷ್ಣುತೆಯ ಹಿನ್ನೆಲೆಯಲ್ಲಿ, ಈದ್-ಉಲ್-ಫಿತರ್‌ನ ಮಹತ್ವವು ಹೆಚ್ಚಿನ ಪ್ರಾಮುಖ್ಯತೆಯನ್ನು ...

ಭಟ್ಕಳ: ಕುರಾನ್ ಕಂಠಪಾಠ ಮಾಡಿದ ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಚೀಫ್ ಖಾಝಿ

ಭಟ್ಕಳ: ಇಲ್ಲಿನ ಖಲಿಫಾ ಮರ್ಕಝಿ ಜಮಾಅತುಲ್ ಮುಸ್ಲಿಮೀನ್ ನ ಚೀಫ್ ಖಾಜಿ ಹಾಗೂ ಜಾಮಿಯಾ ಇಸ್ಲಾಮಿ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಮೌಲಾನ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...