* 300ಕ್ಕೂ ಹೆಚ್ಚು ವಿದ್ವಾಂಸರು, ಚಿಂತಕರು ಉಪಸ್ಥಿತಿ
* 88 ಪ್ರಬಂಧಗಳ ಮಂಡನೆ
ಭಟ್ಕಳ: ಜಗತ್ತು ಕಂಡ ಅಪ್ರತಿಮ ವಿದ್ವಾಂಸರಲ್ಲಿ ನದ್ವತುಲ್ ಉಲೇಮಾದ ಸಂಸ್ಥಾಪಕ, ಅಖಿಲಾ ಭಾರತ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ನ ಸ್ಥಾಪಕಾಧ್ಯಕ್ಷ ದಿವಂಗತ ಮೌಲಾನ ಸೈಯ್ಯದ್ ಅಬುಲ್ ಹಸನ್ ಅಲಿ ಹಸನಿ ನದ್ವಿ (ಅಲಿಮೀಯಾ) ರ ಹೆಸರು ಮುಂಚೂಣಿಯಲ್ಲಿದ್ದು ಇವರ ಸಂದೇಶ ಪ್ರಚಾರ ಹಾಗೂ ಸುಧಾರಣಾ ಕಾರ್ಯಗಳ ಕುರಿತಂತೆ ಆಲಮಿ ರಾಬ್ತೆ ಅದಬೆ ಇಸ್ಲಾಮಿ ವತಿಯಿಂದ ಇಲ್ಲಿನ ಜಾಮಿಯಾ ಇಸ್ಲಾಮೀಯ ಶಿಕ್ಷಣ ಸಂಸ್ಥೆಯಲ್ಲಿ ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಯಶಸ್ವಿಯಾಗಿ ನಡೆದಿದ್ದು, ದೇಶದ ನಾನಾ ರಾಜ್ಯಗಳಿಂದ 300ಕ್ಕೂ ಹೆಚ್ಚು ವಿದ್ವಾಂಸರು, ಚಿಂತಕರು, ಶಿಕ್ಷಣ ತಜ್ಞರು ಭಾಗವಹಿಸಿ ಸುಮಾರು 88ಕ್ಕು ಅಧಿಕ ಆಗ್ರ ಪ್ರಬಂಧಗಳನ್ನು ಮಂಡಿಸಿದರು.
ಮಂಗಳವಾರ ನಡೆದ ಸಮಾರೋಪ ಸಮಾರಂಭದಲ್ಲಿ ಇಸ್ಲಾಮಿ ಚಿಂತಕ ಹಝರತ್ ಮೌಲಾನ ಅಬುಲ್ ಹಸನ್ ನದ್ವಿ ಹುಟ್ಟುಹಾಕಿದ ಚಿಂತನೆಗಳು, ಅವರ ಕಾರ್ಯಸಾಧನೆಯನ್ನು ಮುನ್ನೆಡೆಸಿಕೊಂಡು ಹೋಗುವ ಪಣ ತೊಟ್ಟಿದ್ದು ಅವರ ಬದುಕು ಸಾರ್ವತ್ರಿಕ ಹಾಗೂ ಪ್ರಯೋಗಿಕವಾಗಿತ್ತು ಎನ್ನುವ ಮಾತು ವಿದ್ವಾಂಸರಿಂದ ಬಂದವು. ಮೌಲಾನರು, ಯುವ ಸಮುದಾಯಗಳಲ್ಲಿ ಹೆಚ್ಚುತ್ತಿರುವ ನಾಸ್ತಿಕತೆ ಧರ್ಮಭ್ರಷ್ಟತೆಯನ್ನು ಬಲವಾಗಿ ಎದುರಿಸಿದ್ದರು. ಅವರು ಅತ್ಯಂತ ಮೃದು ಸ್ವಭಾವದವರಾಗಿದ್ದರೂ ಸುಧಾರಣೆಯ ದೃಷ್ಟಿಯಿಂದಾಗಿ ಕೆಲವೊಮ್ಮೆ ಕಠೋರರಾಗುತ್ತಿದ್ದರು. ತಮ್ಮ ಲೇಖನಿ, ಭಾಷಣಗಳ ಮೂಲಕ ಜಗತ್ತಿನ ಎಲ್ಲ ಸಮುದಾಯಗಳ ಹೃದಯವನ್ನು ಗೆದ್ದುಕೊಂಡಿದ್ದರು. ತಮ್ಮ ಕೊನೆಯ ಉಸಿರಿರುವ ತನಕ ಇಸ್ಲಾಂ ಧರ್ಮದ ಏಳಿಗೆಗಾಗಿ ಶ್ರಮಿಸಿದ್ದಾರೆ. ಇವರನ್ನು ಇಸ್ಲಾಮಿ ಚಿಂತಕರನ್ನಾಗಿ ಮಾಡುವಲ್ಲಿ ತಾಯಿಯ ಪ್ರಾರ್ಥನೆ, ನಿಸ್ವಾರ್ಥ ಸೇವೆ, ಮತ್ತು ಅಲ್ಲಾಹನ ಅನುಗ್ರಹ. ಇವುಗಳಿಂದಾಗಿಯೇ ಅವರು ಜಗತ್ವಿಖ್ಯಾತರಾದರು ಎಂಬ ಅಭಿಪ್ರಾಯವು ಪ್ರಬಂಧಗಳಲ್ಲಿ ಮೂಡಿಬಂದಿದೆ.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಖಿಲಾ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಅಧ್ಯಕ್ಷ ಮೌಲಾನ ಸೈಯ್ಯದ್ ಮುಹಮ್ಮದ್ ರಾಬೆಅ ಹಸನಿ ನದ್ವಿ ವಹಿಸಿದ್ದರು. ವಿದ್ವಾಂಸರಾದ ಮೌಲಾನ ಉಮ್ರಿನ್ ಮಹಫೂಝ್ ರಹ್ಮಾನಿ, ಮೌಲಾನ ಖಾಲಿದ್ ಗಾಝಿಪುರಿ ನದ್ವಿ, ಮೌಲಾನ ಸಲ್ಮಾನ್ ಹುಸೇನಿ ನದ್ವಿ, ಮತ್ತಿತರರು ಉಪಸ್ಥಿತರಿದ್ದರು ಮೌಲಾನ ಅಲಿಮೀಯರ ಸಂದೇಶ ಪ್ರಚಾರ ಮತ್ತು ಸುಧಾರಣಾ ಕಾರ್ಯದ ಕುರಿತಂತೆ ಬೆಳಕುಚೆಲ್ಲಿದರು.