ರಾಮಚಂದ್ರ ನಾಯ್ಕ ಸಾವಿನ ಚಿತೆಯಲ್ಲಿ ಬೇಳೆ ಬೇಯಿಸಲು ರಾಜಕೀಯ ಪುಡಾರಿಗಳ ಹುನ್ನಾರ
* ಎಂ.ಆರ್.ಮಾನ್ವಿ
ಭಟ್ಕಳ: ತನ್ನ ಬದುಕಿಗೆ ಏಕೈಕ ಆಸರೆಯಾಗಿದ್ದ ಗೂಡಂಗಡಿಯನ್ನು ಭಟ್ಕಳ ಪುರಸಭೆ ತೆರವುಗೊಳಿಸಿರುವುದನ್ನು ಪ್ರತಿಭಟಿಸಿ ಪುರಸಭೆಯ ಕಟ್ಟಡದೊಳಗೇ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಆಸರಕೇರಿಯ ರಾಮಚಂದ್ರಪ್ಪ ನಾಯ್ಕರ ಮನೆಯಲ್ಲೀಗ ಸ್ಮಶಾನ ಮೌನ.
ತನ್ನ ನಾಲ್ವರು ಮಕ್ಕಳಲ್ಲಿ ಓರ್ವ ಮಗನನ್ನು ಕಳೆದುಕೊಂಡಿರುವ ರಾಮಚಂದ್ರ ನಾಯ್ಕರ ತಾಯಿ ಮಾದೇವಿ ನಾಯ್ಕ, ಇನ್ನೂ ಆಘಾತದಿಂದ ಚೇತರಿಸಿಕೊಂಡಿಲ್ಲ.
ಕೇವಲ ಆರನೆ ತರಗತಿ ಮಾತ್ರ ಕಲಿತ ರಾಮಚಂದ್ರ ನಾಯ್ಕ ಅವರು ತನ್ನ ಹಿರಿಯ ಸಹೋದರ ವೆಂಕಟೇಶ ನಾಯ್ಕ, ಮಂಜುನಾಥ್ ನಾಯ್ಕರೊಂದಿಗೆ ಪುರಸಭೆಯ ಗೂಡಂಗಡಿಯಲ್ಲಿ ಕಳೆದ 17 ವರ್ಷಗಳಿಂದ ಸಿಯಾಳ, ಕಬ್ಬಿನ ಹಾಲು, ಬೀಡಾ, ಎಲೆ ಅಡಿಕೆ ಮಾರಿ ಕುಟುಂಬ ನಿರ್ವಹಣೆಗೆ ಕೈ ಜೋಡಿ ಸುತ್ತಿದ್ದರು. ಬದುಕಿನ ಬಂಡಿಯನ್ನು ಸಾಗಿಸಲು ಕೇವಲ ಈ ಗೂಡಂಗಡಿಯನ್ನೇ ಅವಲಂಬಿಸಿದ್ದ ಅವರು ಅಲ್ಪಸ್ವಲ್ಪ ಬಾಡಿಗೆ ನೀಡಿ ಬದುಕು ಕಟ್ಟಿಕೊಂಡಿದ್ದರು.
ಆದರೆ, ಪುರಸಭೆಯವರು ಕಳೆದ ವರ್ಷ ಏಕಾಏಕಿ ಅಂಗಡಿಗಳನ್ನು ಹರಾಜು ಮಾಡುವ ಪ್ರಕ್ರಿಯೆ ಕೈಗೊಂಡಿದ್ದು, ಅದರಲ್ಲಿ ತನ್ನ ಅಂಗಡಿಯನ್ನು ಉಳಿಸಿ ಕೊಳ್ಳಲು ಇವರು ಪಡಬಾರದ ಕಷ್ಟ ಪಟ್ಟರಾದರೂ ಕೊನೆಗೆ ಹರಾಜಿನಲ್ಲಿ ಭಾಗವಹಿಸಲಾಗದೆ 34 ಅಂಗಡಿಯವರೊಂದಿಗೆ ತಾವೂ ಕೂಡ ಅತಂತ್ರರಾಗಿದ್ದರು.
ಈ ಕುರಿತಂತೆ ಮಾತನಾಡಿದ ಮೃತ ರಾಮಚಂದ್ರ ನಾಯ್ಕರ ಸಹೋದರರಾದ ವೆಂಕಟೇಶ್ ನಾಯ್ಕ ಹಾಗೂ ಮಂಜುನಾಥ್ ನಾಯ್ಕ, 'ಪುರಸಭೆಯಿಂದ ನಮಗೆ ಮೋಸ ಆಗಿದೆ. ನಮ್ಮ ತಮ್ಮನ ಸಾವಿಗೆ ಪುರಸಭೆ ಅಧಿಕಾರಿಗಳೇ ಕಾರಣ. ಇದು ಆತ್ಮಹತ್ಯೆಯಲ್ಲ, ವ್ಯವಸ್ಥಿತ ಕೊಲೆ ಎಂದು ಆರೋಪಿಸಿದ್ದಾರೆ.
ಪುರಸಭೆ ಕಳ್ಳರ ಹಾಗೆ ಬೆಳಗಿನ 5 ಗಂಟೆಯ ಸುಮಾರಿಗೆ ಅಂಗಡಿಗಳನ್ನು ತೆರವುಗೊಳಿಸಲು ಮುಂದಾದ ಕಾರಣ ನನ್ನ ತಮ್ಮ ಆತ್ಮಹತ್ಯೆಗೆ ಶರಣಾ ಗಿದ್ದಾನೆ. ಎಲ್ಲಾ ಕೆಲಸಕ್ಕೂ 10 ಗಂಟೆಗೆ ಕಚೇರಿಗೆ ಬರುವ ಇವರು ಅಂಗಡಿ ತೆರವುಗೊಳಿಸಲು ಅಂಗಡಿಗಳಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಕಳ್ಳರ ಹಾಗೆ ನಮ್ಮ ಅಂಗಡಿಗಳಿಗೆ ನುಗ್ಗಿದ್ದಾರೆ. ತನ್ನ ಕಣ್ಣ ಮುಂದೆಯೇ ತನ್ನ ಬದುಕು ಸೇರಿದಂತೆ ಸುಮಾರು 34 ಅಂಗಡಿಯವರ ಬದುಕು ನಾಶವಾಗುತ್ತಿರುವುದನ್ನು ಕಂಡು ಸಹಿಸದ ಆತ ತನ್ನ ಜೀವವನ್ನೇ ಅರ್ಪಿಸಿದ. ಪುರಸಭೆ ಕಟ್ಟಡದೊಳಗೆಯೇ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದಾಗ ಅಧಿಕಾರಿಗಳು, ಪೊಲೀಸರು ಏನು ಮಾಡುತ್ತಿದ್ದರು? ಅವರ ಕಣ್ಣ ಮುಂದೆಯೇ ಬೆಂಕಿಯಲ್ಲಿ ಸುಟ್ಟು ಹೋಗುತ್ತಿರುವುದನ್ನು ನೋಡುತ್ತಾ ನಿಂತರು. ‘ನನ್ನ ಮತ್ತೋರ್ವ ತಮ್ಮ ತನ್ನ ಜೀವದ ಹಂಗು ತೊರೆದು ಆತನ ರಕ್ಷಣೆಗೆ ಧಾವಿಸಿದ. ಆದರೂ ಪ್ರಯತ್ನ ಫಲಿಸಲಿಲ್ಲ. ರಕ್ಷಣೆ ಮಾಡಲು ಮೈಕೈಗೆ ಸುಟ್ಟ ಗಾಯಗಳನ್ನು ಮಾಡಿಕೊಂಡ ತನ್ನ ತಮ್ಮನಿಗೆ ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಪೊಲೀಸ್ ಠಾಣೆಯಲ್ಲಿ ೨ಗಂಟೆಗಳ ಕಾಲ ಕೂಡಿಸಿದ್ದಾರೆ. ಭಟ್ಕಳದಿಂದ ಮಣಿಪಾಲಕ್ಕೆ ಕರೆದುಕೊಂಡು ಹೋಗುವಾಗ ಎರಡು ಗಂಟೆ ನಮ್ಮೊಂದಿಗೆ ಮಾತನಾಡಿದ್ದಾನೆ. ನನ್ನ ಜೀವ ಹೋದರೂ ಪರವಾಗಿಲ್ಲ. ಆ ಮೂವತ್ತ ನಾಲ್ಕು ಅಂಗಡಿಕಾರರ ಬದುಕು ಬರಡಾಗಬಾರದು. ಪುರಸಭೆಯ ಎಲ್ಲಾ ಅಂಗಡಿಕಾರರಿಗೂ ಮತ್ತೆ ಅಂಗಡಿಗಳು ಮರಳಿ ಲಭಿಸಬೇಕು' ಇದು ನನ್ನ ಕೊನೆಯ ಆಸೆ ಎಂದು ರಾಮಚಂದ್ರಪ್ಪ ನಾಯ್ಕ ತಿಳಿಸಿದ್ದಾರೆ ಎಂದು ಅವರು ತಿಳಿಸಿದರು.
ನಮಗೆ ನಮ್ಮ ತಮ್ಮನ ಜೀವದ ಪರಿಹಾರಬೇಕು. ನಮಗೆ ಹಣಬೇಡ. ಆತನ ಅಂತಿಮ ಆಸೆಯನ್ನು ನೆರವೇರಿಸಿ. ನಮಗೆ ನ್ಯಾಯ ಕೊಡಿ ಎಂದು ಸಹೋದರರು ಮಾಧ್ಯಮದ ಮೂಲಕ ಜಿಲ್ಲಾಧಿಕಾರಿಯಲ್ಲಿ ಕೇಳಿ ಕೊಂಡಿದ್ದಾರೆ.
ಹಿನ್ನೆಲೆ: ಕಳೆದ ವಾರವಷ್ಟೇ ಅಂಗಡಿ ಮಳಿಗೆಗಳನ್ನು ಖಾಲಿ ಮಾಡಲು ಬಂದಿದ್ದ ಅಧಿಕಾರಿಗಳಿಗೆ ಅಂಗಡಿಕಾರರು ಹಾಗೂ ಸಾರ್ವಜನಿಕರು ಘೇರಾವ್ ಹಾಕಿದ್ದರಿಂದ 5 ದಿನಗಳ ಕಾಲಾವಕಾಶವನ್ನು ನೀಡಿ ತೆರಳಿದ್ದರು. ಮತ್ತೆ ಇಂದು ಅಂಗಡಿಗಳನ್ನು ಖಾಲಿ ಮಾಡಿ ಬೀಗ ಹಾಕಲು ಪುರಸಭೆಯ ಅಧಿಕಾರಿಗಳು, ಸಿಬ್ಬಂದಿ ಬೆಳಗ್ಗೆ 4:30ಕ್ಕೆ ಬಂದಿದ್ದರು. ಅಲ್ಲದೆ, ಕೆಲವು ಅಂಗಡಿಗಳಿಗೆ ಬೀಗ ಹಾಕಿದ್ದರು. ಇದನ್ನು ಕಂಡ ರಾಮಚಂದ್ರಪ್ಪ ನಾಯ್ಕರು ತಮ್ಮ ಅಂಗಡಿಯ ಲ್ಲಿಯೇ ಇದ್ದ ಸೀಮೆ ಎಣ್ಣೆ ಹಾಗೂ ಕತ್ತಿಯನ್ನು ಹಿಡಿದುಕೊಂಡು ಪುರಸಭಾ ಕಚೇರಿಗೆ ತೆರಳಿದ್ದಾರೆ. ಅಲ್ಲಿದ್ದ ಕೆಲವರು ತಡೆಯಲು ಬಂದರಾದರೂ ಬೆದರಿಸಿದ ರಾಮಚಂದ್ರಪ್ಪ, ಅವರ ಎದುರಿನಲ್ಲಿಯೇ ಸೀಮೆ ಎಣ್ಣೆ ಮೈ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ವಿಷಯ ತಿಳಿದು ಆತನ ಸಹೋದರ ಧಾವಿಸಿ ಬಂದು ಬೆಂಕಿಯನ್ನು ಆರಿಸಲು ಪ್ರಯತ್ನಿಸಿದರಾದರೂ ಆಗಲೇ ದೇಹದ ಬಹುತೇಕ ಭಾಗ ಸುಟ್ಟು ಕರಕಲಾಗಿತ್ತು ಎನ್ನಲಾಗಿದೆ.
ಪುರಸಭೆಯ 150ಕ್ಕೂ ಅಧಿಕ ಅಂಗಡಿ ಮಳಿಗೆಗಳಲ್ಲಿ 102 ಅಂಗಡಿಗಳಿಗೆ ಕಳೆದ ವರ್ಷ ಆಗಸ್ಟ್ 20, 2016 ರಂದು ಅಂಗಡಿ ಕಬಜಾ ಪಡೆಯದೇ ಹರಾಜು ಪ್ರಕ್ರಿಯೆ ನಡೆಸಲಾಗಿತ್ತು. ಹರಾಜು ಪ್ರಕ್ರಿಯೆಯಲ್ಲಿ ಕೆಲವು ಅಂಗಡಿಕಾರರು ಭಾಗವಹಿಸಿ ಅಂಗಡಿಗಳನ್ನು ಹೆಚ್ಚಿನ ಬಾಡಿಗೆಗೆ ಪಡೆದಿದ್ದಾರೆ. ಕೆಲವರು ಹರಾಜಿನಲ್ಲಿ ಭಾಗವಹಿಸಿದ್ದರೂ ಬಾಡಿಗೆ ದುಪ್ಪಟ್ಟು ಹೆಚ್ಚಾಗಿದ್ದರಿಂದ ಪಡೆಯಲು ಸಾಧ್ಯವಾಗಿಲ್ಲ. ಇನ್ನೂ ಕೆಲವರು ಹರಾಜಿನಲ್ಲಿ ಪಾಲ್ಗೊಳ್ಳದೇ ಉಳಿದರು. ಹರಾಜು ಪ್ರಕ್ರಿಯೆ ಅವೈಜ್ಞಾನಿಕವಾಗಿ ನಡೆದಿದೆ ಎನ್ನುವ ಮಾತುಗಳೂ ಕೂಡ ಅದೇ ದಿನ ಕೇಳಿ ಬಂದಿತ್ತು.
ವಿಫಲಗೊಂಡ ಸಂಚು: ಪುರಸಭೆ ಅಂಗಡಿ ಮಳಿಗೆಗಳ ತೆರವು ಕಾರ್ಯಾಚರಣೆಯ ಸಂದರ್ಭ ತಾನು ಅಂಗಡಿ ಕಳೆದುಕೊಳ್ಳುವ ಭೀತಿಯಲ್ಲಿ ಆವೇಶದಿಂದ ರಾಮಚಂದ್ರ ನಾಯ್ಕ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆ, ಇತ್ತ ಭಟ್ಕಳದ ಕೆಲ ರಾಜಕೀಯ ಪುಡಾರಿಗಳು ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ರಾಮಚಂದ್ರ ನಾಯ್ಕರ ಚಿತೆಯನ್ನೇ ಒಲೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈ ಘಟನೆಯನ್ನು ಹಿಂದೂ-ಮುಸ್ಲಿಂ ಗಲಭೆಗೆ ಬಳಸಿಕೊಳ್ಳುವ ಎಲ್ಲಾ ಪ್ರಯತ್ನ ಮಾಡಿದ್ದರಾದರೂ ಪೊಲೀಸರ ಮುಂದಾಲೋಚನೆ ಹಾಗೂ ಸಮಯ ಪ್ರಜ್ಞೆಯಿಂದಾಗಿ ಇದು ಅಷ್ಟಕ್ಕೇ ತಣ್ಣಗಾಯಿತು.
ಪೊಲೀಸರ ಎದುರಲ್ಲೇ ಪುರಸಭೆಯ ಕಟ್ಟಡದ ಮೇಲೆ ಕಲ್ಲು ತೂರಾಟ ನಡೆಸಿದ್ದ ಗುಂಪು ಪೊಲೀಸ್ ಅಧಿಕಾರಿಗಳ ಮೇಲೂ ಹಲ್ಲೆ ಮಾಡಿದ್ದಾರೆ. ಈ ಕುರಿತಂತೆ ದೂರು ಕೂಡ ದಾಖಲಾಗಿದೆ. ಗುಂಪಿನಲ್ಲಿ ಕಲ್ಲು ಹೊಡೆಯುವ ಮಂದಿ ಭಟ್ಕಳದಲ್ಲಿ ಹೇಗಾದರೂ ಮಾಡಿ ಅರಾಜಕತೆ ಸೃಷ್ಟಿಸಿ ಅಧಿಕಾರ ಪಡೆಯುವ ಕನಸು ಕಾಣುತ್ತಿದ್ದಾರೆ ಎಂದು ಜನತೆ ದೂರಿದ್ದಾರೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಭಟ್ಕಳ ಭೇಟಿ ತಾನು ಹಿಂದೂಗಳ ರಕ್ಷಣೆಗೆ ಸದಾ ಸಿದ್ದನಾಗಿದ್ದೇನೆ. ನಮ್ಮ ಹುಡುಗರ ಮೈಮುಟ್ಟಿದರೆ ನೆಟ್ಟಗಾಗಿರಲ್ಲ ಎಂಬ ಧಮಕಿಯೂ ಹಾಕಿದ್ದಾರೆ. ಈವೆಲ್ಲ ಬೆಳವಣೆಗೆಗಳಿಂದಾಗಿ ಬೂದಿಮುಚ್ಚಿದ ಕೆಂಡದಂತಿರುವ ಭಟ್ಕಳ ಯಾವ ಸಂದರ್ಭದಲ್ಲಿ ಏನಾಗುತ್ತೋ ಎಂಬ ಭಯದಲ್ಲಿ ಸಾಮನ್ಯ ವ್ಯಕ್ತಿ ಜೀವಿಸುತ್ತಿದ್ದಾನೆ.