ಮಂಗಳೂರು: ಮಾದಕ ವಸ್ತುಗಳ ಮಾರಾಟದ ವಿರುದ್ಧ ಧ್ವನಿ ಎತ್ತಿದ್ದೇ ಝುಬೈರ್ ಹತ್ಯೆಗೆ ಕಾರಣವಾಯಿತೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ. ಮುಕ್ಕಚ್ಚೇರಿ ನಿವಾಸಿ ಝುಬೈರ್ ಅವರನ್ನು ಬುಧವಾರ ಸಂಜೆ ಇಲ್ಲಿನ ಮಸೀದಿಯ ಮುಂದೆ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದರು.
ಉಳ್ಳಾಲ ಕೇಂದ್ರವಾಗಿ ಸುತ್ತಮುತ್ತ ಪ್ರದೇಶಗಳಲ್ಲಿ ಕಳೆದ ಕೆಲವು ವರ್ಷಗಳಿಂದ ನಿಷೇಧಿತ ವಸ್ತುಗಳಾದ ಗಾಂಜಾ, ಅಫೀಮು, ಡ್ರಗ್ಸ್ ಗಳು ನಿರಾತಂಕವಾಗಿ ಮಾರಾಟವಾಗುತ್ತಿವೆ ಎಂಬ ಆರೋಪಗಳು ಹಿಂದಿನಿಂದಲೂ ಕೇಳಿ ಬರುತ್ತಿವೆ. ಮುಕ್ಕಚ್ಚೇರಿ ಮಸೀದಿಯ ಮುಂದೆ ಹತ್ಯೆಗೀಡಾದ ಝುಬೈರ್ ಈ ಅಮಲು ಪದಾರ್ಥಗಳ ವಿರುದ್ಧ ಧ್ವನಿ ಎತ್ತಿದ್ದರು. ಯುವಕರಿಗೆ, ವಿದ್ಯಾರ್ಥಿಗಳ ಕೈಗೆ ಸುಲಭವಾಗಿ ಸಿಗುತ್ತಿರುವ ಇಂತಹ ನಿಷೇಧಿತ ವಸ್ತುಗಳ ವಿರುದ್ಧ ಝುಬೈರ್ ಬುದ್ಧಿಮಾತು ಹೇಳಿದ್ದೇ ಅವರ ಹತ್ಯೆಗೆ ಕಾರಣವಾಗಿದೆ ಎಂದೂ ಝುಬೈರ್ ಆಪ್ತರು ಆರೋಪ ಮಾಡಿದ್ದಾರೆ.
ಉಳ್ಳಾಲ, ತೊಕ್ಕೊಟ್ಟು, ಉಳ್ಳಾಲ ಬೀಚ್, ತೊಕ್ಕೊಟ್ಟು ರೈಲ್ವೆ ಸ್ಟೇಷನ್, ಬೊಟ್ಟು ಮೊದಲಾದ ಕಡೆಗಳಲ್ಲಿ ಅಮಲು ಪದಾರ್ಥಗಳ ಮಾರಾಟಗಳು ನಿರಾತಂಕವಾಗಿ ನಡೆಯುತ್ತಿದ್ದು, ಇಂತಹ ವಸ್ತುಗಳು ಶ್ರೀಮಂತರ ಮಕ್ಕಳು, ವೈದ್ಯಕೀಯ ವಿದ್ಯಾರ್ಥಿಗಳು ಸಹಿತ ಸ್ಥಳೀಯವಾಗಿ ಮಕ್ಕಳ ಕೈಗೆ ಸುಲಭದಲ್ಲಿ ಸಿಗುತ್ತಿವೆ. ಇದೀಗ ಸ್ಥಳೀಯ ಯುವಕರ ಗುಂಪುಗಳು ಇಂತಹ ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿಕೊಂಡಿದ್ದು, ಇಂತಹ ವಸ್ತುಗಳ ಮಾರಾಟಕ್ಕೆ ಕಡಿವಾಣ ಬೀಳದಿರುವುದೇ ಕೊಲೆ, ಹಲ್ಲೆಗಳಂತಹ ಘಟನೆಗಳು ಮರುಕಳುಸುತ್ತಿವೆ ಎಂಬ ಅಪವಾದ ವ್ಯಕ್ತವಾಗುತ್ತಿದೆ.
ಉತ್ತಮ ವ್ಯಕ್ತಿತ್ವದ ಯುವಕ: ಫಾರೂಕ್ ಉಳ್ಳಾಲ ; ಬುಧವಾರ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿರುವ ಝುಬೈರ್ (39) ಉತ್ತಮ ವ್ಯಕ್ತಿತ್ವದ ಯುವಕ. ಪತ್ನಿ, ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಝುಬೈರ್ ಯಾವುದೇ ಗಲಾಟೆ, ಗ್ಯಾಂಗ್ ನಲ್ಲಿ ಗುರುತಿಸಿಕೊಂಡವರಲ್ಲ. ಫಿಶ್ ಮಿಲ್ ಪ್ಲಾಂಟ್ ನಲ್ಲಿ ಎಲೆಕ್ಟ್ರಿಶಿಯನ್ ಸಹಿತ ಇತರ ಕೆಲಸ ಮಾಡಿಕೊಂಡಿದ್ದರು. ಧಾರ್ಮಿಕವಾಗಿಯೂ ಎಲ್ಲರಿಗೂ ಬೇಕಾದವರು. ಬುಧವಾರ ಮುಕ್ಕಚ್ಚೇರಿ ಮಸೀದಿಯಲ್ಲಿ ನಮಾಝ್ ನಿರ್ವಹಿಸಿ ಹಿಂದಿರುಗುತ್ತಿದ್ದಾಗ ಅವರನ್ನು ಕೊಲೆ ಮಾಡಲಾಗಿದೆ.
ಉಳ್ಳಾಲ ಕೇಂದ್ರವಾಗಿ ಮಾರಾಟವಾಗುತ್ತಿರುವ ಅಫೀಮು, ಗಾಂಜಾ, ಡ್ರಗ್ಸ್ ವಿರುದ್ಧ ಧ್ವನಿ ಎತ್ತಿದ್ದರು. ಅದರಲ್ಲಿ ತೊಡಗಿದ್ದ ಹುಡುಗರನ್ನು ಹತ್ತಿರಕ್ಕೆ ಕರೆದು ಬುದ್ಧಿವಾದ ಹೇಳುತ್ತಿದ್ದರು. ಇದು ಅವರ ಹತ್ಯೆಗೆ ಕಾರಣವಾಗಿರಬಹುದು ಎಂದು ಮೇಲಂಗಡಿ ಹೊಸಪಳ್ಳಿ ಮಸೀದಿ ಸಮಿತಿಯ ಅಧ್ಯಕ್ಷ ಫಾರೂಕ್ ಉಳ್ಳಾಲ ಪ್ರತಿಕ್ರಿಯಿಸಿದ್ದಾರೆ.
ಗಾಂಜಾ ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಠಾಣೆಗೆ ಮುತ್ತಿಗೆ: ಡಿವೈಎಫ್ಐ ಎಚ್ಚರಿಕೆ
ಉಳ್ಳಾಲ ಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ಗಾಂಜಾ ಮಾಫಿಯಾವನ್ನು ಪತ್ತೆ ಹಚ್ಚಿ ಅದರಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಡಿವೈಎಫ್ ಐ ಉಳ್ಳಾಲ ವಲಯ ಸಮಿತಿ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ.
ಮುಕ್ಕಚ್ಚೇರಿಯಲ್ಲಿ ಗಾಂಜಾ ಸೇವನೆಯ ಹುಡುಗರಿಂದ ಸಾರ್ವಜನಿಕರು ಅನುಭವಿಸುತ್ತಿದ್ದ ತೊಂದರೆಯ ಹಿನ್ನೆಲೆಯಲ್ಲಿ ಝುಬೈರ್ ಆ ಹುಡುಗರಿಗೆ ಬುದ್ಧಿವಾದ ಹೇಳಿದ್ದಾರೆ. ಇಂತಹ ಹುಡುಗರ ವಿರುದ್ಧ ಝುಬೈರ್ ಪೊಲೀಸರಿಗೆ ದೂರು ನೀಡಿದ್ದಾರೆಂಬ ಅನುಮಾನದ ಮೇಲೆ ಗಾಂಜಾ ವ್ಯಸನಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಡಿವೈಎಫ್ ಐ ಉಳ್ಳಾಲ ವಲಯ ಸಮಿತಿಯ ಕಾರ್ಯದರ್ಶಿ ರಝಾಕ್ ಮೊಂಟೆಪದವು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪೊಲೀಸರು ಗಾಂಜಾ, ಅಫೀಮುಗಳ ಮಾರಾಟ ಜಾಲವನ್ನು ಪತ್ತೆ ಹಚ್ಚಬೇಕು. ಮಾರಾಟದಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.