ಬಿಬಿಸಿಯ ದಿಲ್ಲಿ, ಮುಂಬೈ ಕಚೇರಿಗಳ ಮೇಲೆ ಐಟಿ ದಾಳಿ; ಎಡಿಟರ್ಸ್ ಗಿಲ್ಡ್ ತೀವ್ರ ಕಳವಳ,ಪ್ರತಿಪಕ್ಷಗಳ ಟೀಕೆ
ಹೊಸದಿಲ್ಲಿ: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ತಂಡಗಳು ಮಂಗಳವಾರ ದಿಲ್ಲಿ ಮತ್ತು ಮುಂಬೈಗಳಲ್ಲಿರುವ ಬಿಬಿಸಿ ಕಚೇರಿಗಳ ಮೇಲೆ ದಾಳಿ ನಡೆಸಿವೆ. ಅಧಿಕಾರಿಗಳು ಕೆಲವು ಉದ್ಯೋಗಿಗಳ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಕಚೇರಿಗಳಿಗೆ ಬೀಗಮುದ್ರೆ ಹಾಕಲಾಗಿದೆ ಎಂದು ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ.
ತೆರಿಗೆ ವಂಚನೆಯ ತನಿಖೆಯ ಭಾಗವಾಗಿ ಆದಾಯ ತೆರಿಗೆ ಇಲಾಖೆಯು 'ಸಮೀಕ್ಷಾ ಕಾರ್ಯಾಚರಣೆ'ಯನ್ನು ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದರು. ಇಲಾಖೆಯ ಸಮೀಕ್ಷೆಯಲ್ಲಿ ಕಂಪೆನಿಯ ಕಚೇರಿ ಆವರಣಗಳು ಮಾತ್ರ ಒಳಗೊಂಡಿರುತ್ತವೆ ಮತ್ತು ಅದರ ಪ್ರವರ್ತಕರು ಅಥವಾ ನಿರ್ದೇಶಕರ ಮನೆಗಳು ಮತ್ತು ಇತರ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಲಾಗುವುದಿಲ್ಲ.
2002ರಲ್ಲಿ ಗುಜರಾತಿನಲ್ಲಿ ಸಂಭವಿಸಿದ್ದ ಕೋಮು ದಂಗೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೊಂದಿದ್ದರೆನ್ನಲಾದ ಪಾತ್ರದ ಕುರಿತು ಪರಿಶೀಲಿಸಿರುವ ಎರಡು ಭಾಗಗಳ ಸಾಕ್ಷ್ಯಚಿತ್ರವನ್ನು ಬಿಬಿಸಿ ಕಳೆದ ಜನವರಿಯಲ್ಲಿ ಬಿಡುಗಡೆಗೊಳಿಸಿದ ಬಳಿಕ ಈ ಬೆಳವಣಿಗೆಗಳು ನಡೆದಿವೆ.
ಪ್ರತಿಪಕ್ಷಗಳ ಟೀಕೆ: ಸಾಕ್ಷಚಿತ್ರಕ್ಕೆ ಸಂಬಂಧಿಸಿದಂತೆ ಬಿಬಿಸಿಯನ್ನು ಸಾರಿಯಾಗಿಸಿಕೊಂಡಿದ್ದಕ್ಕಾಗಿ ಮಂಗಳವಾರ ಪ್ರತಿಪಕ್ಷಗಳು ಸರಕಾರವನ್ನು ಟೀಕಿಸಿವೆ.
ಬಿಜೆಪಿ ಸರಕಾರವು ಪ್ರಜಾಪ್ರಭುತ್ವವನ್ನು ನಾಶಗೊಳಿಸುತ್ತಿದೆ. ಬಿಜೆಪಿ ಸರಕಾರದ ಅಥವಾ ಅದರ ನಾಯಕರ ದಬ್ಬಾಳಿಕೆಯ ವಿರುದ್ಧ ಮಾತನಾಡುವ ಪ್ರತಿಯೊಂದೂ ಧ್ವನಿಯನ್ನು ಅಡಗಿಸಲು ಅದು ಬಯಸಿದೆಯೇ? ಸಮಯ ಮತ್ತು ಅಧಿಕಾರ ಬದಲಾಗುತ್ತಿರುತ್ತದೆ, ಆದರೆ ಪ್ರಜಾಪ್ರಭುತ್ವವು ಶಾಶ್ವತವಾಗಿರುತ್ತದೆ ಎನ್ನುವುದನ್ನು ಸರಕಾರವು ನೆನಪಿಟ್ಟುಕೊಳ್ಳಬೇಕು. ಸಮಾಜವಾದಿ ಪಾರ್ಟಿ |
ಕಾಂಗ್ರೆಸ್ ಸಮೀಕ್ಷೆಯನ್ನು ಅಘೋಷಿತ ತುರ್ತು ಸ್ಥಿತಿ ಎಂದು ಬಣ್ಣಿಸಿದೆ. ಇಲ್ಲಿ ನಾವು ಅದಾನಿ-ಹಿಂಡನ್ ಬರ್ಗ್ ವಿವಾದದಲ್ಲಿ ಜಂಟಿ ಸಂಸದೀಯ ಸಮಿತಿಯಿಂದ ತನಿಖೆಯನ್ನು ಕೋರುತ್ತಿದ್ದೇವೆ, ಅಲ್ಲಿ ಸರಕಾರವು ಬಿಬಿಸಿಯನ್ನು ಬೇಟೆಯಾಡುತ್ತಿದೆ' ಎಂದು ಹೇಳಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು, 'ವಿನಾಶ ಕಾಲೇ ವಿಪರೀತ ಬುದ್ದಿ' ಎಂದು ಕುಟುಕಿದರು.
ಎಡಿಟರ್ಸ್ ಗಿಲ್ಡ್ ತೀವ್ರ ಕಳವಳ: ಬಿಬಿಸಿ ಇಂಡಿಯಾ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿಯ ಕುರಿತು 'ದಿ ಎಡಿಟರ್ಸ್ ಗಿಲ್ ಆಫ್ ಇಂಡಿಯಾ' ಮಂಗಳವಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ, ಇದು ಆಡಳಿತವನ್ನು ಟೀಕಿಸುವ ಮಾಧ್ಯಮ ಸಂಸ್ಥೆಗಳನ್ನು ಬೆದರಿಸಲು ಹಾಗೂ ಕಿರುಕುಳ' ನೀಡಲು ಸರಕಾರಿ ಸಂಸ್ಥೆಗಳನ್ನು ಬಳಸುವ ಪ್ರವೃ ತಿಯ ಮುಂದುವರಿಕೆ ಎಂದಿದೆ. ಪತ್ರಕರ್ತರು ಹಾಗೂ ಮಾಧ್ಯಮ ಸಂಸ್ಥೆಗಳ ಹಕ್ಕುಗಳನ್ನು ಹತ್ತಿಕ್ಕದಂತೆ ಮತ್ತು ಇಂತಹ ಎಲ್ಲ ತನಿಖೆಗಳಲ್ಲಿ ತೀವ್ರ ಕಾಳಜಿ ಹಾಗೂ ಸೂಕ್ಷ್ಮತೆ ತೋರಿಸುವಂತೆ ಎಡಿಟರ್ಸ್ಗಿಲ್ಡ್ ಹೇಳಿಕೆಯಲ್ಲಿ ಆಗ್ರಹಿಸಿದೆ.
ಆದಾಯ ತೆರಿಗೆ ವಂಚನೆ ಆರೋಪದ ಕುರಿತ ತನಿಖೆಯ ಒಂದು ಭಾಗವಾಗಿ ಬಿಬಿಸಿಯ ದಿಲ್ಲಿ ಹಾಗೂ ಮುಂಬೈಯ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಬಳಿಕ ಎಡಿಟರ್ಸ್ ಗಿಲ್ಡ್ ಈ ಹೇಳಿಕೆ ನೀಡಿದೆ.
ಗುಜರಾತ್ನಲ್ಲಿ 2002ರಲ್ಲಿ ನಡೆದ ಹಿಂಸಾಚಾರ ಹಾಗೂ ಭಾರತದಲ್ಲಿ ಅಲ್ಪಸಂಖ್ಯಾತರ ಪ್ರಸಕ್ತ ಪರಿಸ್ಥಿತಿ ಕುರಿತು ಬಿಬಿಸಿ ಎರಡು ಸ್ಪಾಕ್ಷ್ಯ ಚಿತ್ರಗಳನ್ನು ಬಿಡುಗಡೆಗೊಳಿಸಿದ ಬಳಿಕ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿದೆ ಎಂದು ಎಡಿಟರ್ಸ್ ಗಿಲ್ ය ಹೇಳಿದೆ.
ಈ ಸಾಕ್ಷ್ಯಚಿತ್ರ ರಾಜಕೀಯ ಕ್ಷೇತ್ರದಲ್ಲಿ ಕೋಲಾಹಲ ಉಂಟು ಮಾಡಿತು. ಗುಜರಾತ್ ಹಿಂಸಾಚಾರದ ಕುರಿತು ತಪ್ಪಾಗಿ ಹಾಗೂ ಪೂರ್ವಾಗ್ರಹಪೀಡಿತವಾಗಿ ವರದಿ ಮಾಡಲಾಗಿದೆ ಎಂದು ಕೇಂದ್ರ ಸರಕಾರ ಟೀಕಿಸಿತು. ಅಲ್ಲದೆ, ದೇಶದಲ್ಲಿ ಈ ಸಾಕ್ಷಚಿತ್ರದ ವೀಕ್ಷಣೆಗೆ ಹಾಗೂ ಆನ್ಲೈನ್ನಲ್ಲಿ ನಿಷೇಧ ಹೇರಿತು ಎಂದು ಅದು ಹೇಳಿದೆ.
2021ರಲ್ಲಿ ನ್ಯೂಕ್ಲಿಕ್, ನ್ಯೂಸ್ಲಾಂಡ್ರಿ, ದೈನಿಕ್ ಭಾಸ್ಕರ್ ಹಾಗೂ ಭಾರತ್ ಸಮಾಚಾರ್ ಮೇಲೆ ಕೂಡ ಐಟಿ ದಾಳಿ ನಡೆಸಿರುವುದನ್ನು ಎಡಿಟರ್ಸ್ ಗಿಲ್ಡ್ ಸರಿಸಿಕೊಂಡಿದೆ.
ಪ್ರತಿಯೊಂದು ಪ್ರಕರಣದಲ್ಲಿ ಕೂಡ ಸುದ್ದಿ ಸಂಸ್ಥೆಗಳು ಸರಕಾರದ ವಿರುದ್ಧ ಟೀಕೆ ಮಾಡಿದ ಬಳಿಕ ದಾಳಿ ನಡೆದಿದೆ. ಇದು ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಪ್ರವೃತ್ತಿ ಎಂದು ಎಡಿಟರ್ಸ್ ಗಿಲ್ಡ್ ಹೇಳಿದೆ.
ಸರಕಾರ ಇಂತಹ ತನಿಖೆಗಳನ್ನು ನಿಗದಿತ ನಿಯಮಗಳಂತೆ ನಡೆಸುವ ಖಾತರಿ ನೀಡಬೇಕು ಹಾಗೂ ಇದು ಸ್ವತಂತ್ರ ಮಾಧ್ಯಮಕ್ಕೆ ಬೆದರಿಕೆ ಒಡ್ಡಲು ಕಿರುಕುಳ ನೀಡುವ ಅಸ್ತ್ರವಾಗಬಾರದು ಎಂಬ ತನ್ನ ಈ ಹಿಂದಿನ ಆಗ್ರಹವನ್ನು ಎಡಿಟರ್ಸ್ ಗಿಲ್ಡ್ ಮರು ಉಚ್ಚರಿಸಿದೆ.