ಇಂದೋರ್(ಮಧ್ಯಪ್ರದೇಶ): ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ಸೇರಿದ್ದಾರೆ.
ಇದರಿಂದ 2024ರ ಲೋಕಸಭಾ ಚುನಾವಣೆಯ ಸಂದರ್ಭ ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಉತ್ತೇಜನ ಸಿಕ್ಕಿದರೆ, ಕಾಂಗ್ರೆಸ್ಗೆ ಮತ್ತೊಂದು ದೊಡ್ಡ ಹೊಡೆತ ನೀಡಿದೆ.
ಗುಜರಾತ್ ಸೂರತ್ ನಂತರ ಕಾಂಗ್ರೆಸ್ಗೆ ಪ್ರಬಲ ಹೊಡೆತ ನೀಡಿದ ದೇಶದ ಎರಡನೇ ಕ್ಷೇತ್ರ ಇಂದೋರ್, ಉಳಿದೆಲ್ಲಾ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದ ಬಳಿಕ ಸೂರತ್ ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಅವರು ಎಪ್ರಿಲ್ 22ರಂದು ಅವಿರೋಧವಾಗಿ ಆಯ್ಕೆಯಾದರು. ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಗಳಿಸಿದ ಮೊದಲ ಗೆಲುವು ಇದಾಗಿದೆ.
ಸೋಮವಾರ ಬೆಳಗ್ಗೆ ಬಿಜೆಪಿ ಶಾಸಕ ರಮೇಶ್ ಮೆಂಡೋಲಾ ಅವರೊಂದಿಗೆ ಜಿಲ್ಲಾ ಚುನಾವಣಾ ಕಚೇರಿಗೆ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ನಾಮಪತ್ರ ಹಿಂಪಡೆದರು.
ಬಮ್ ಅವರು ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಬಿಜೆಪಿಯ ಹಿರಿಯ ನಾಯಕ, ರಾಜ್ಯ ಸಚಿವ ಹಾಗೂ ಇಂದೋರ್ನ ಶಾಸಕ ಕೈಲಾಸ್ ವಿಜಯವರ್ಗೀಯ ತನ್ನ 'ಎಕ್ಸ್ ನಲ್ಲಿ ಅವರನ್ನು ಬಿಜೆಪಿಗೆ ಸ್ವಾಗತಿಸಿದರು. 'ಇಂದೋರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಜಿ ಅವರನ್ನು ನಾವು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ಮುಖ್ಯಮಂತ್ರಿ ಮೋಹನ್ ಯಾದವ್ ಹಾಗೂ ರಾಜ್ಯಾಧ್ಯಕ್ಷ ವಿ.ಡಿ. ಶರ್ಮಾ ಅವರ ನೇತೃತ್ವದಡಿ ಬಿಜೆಪಿಗೆ ಸ್ವಾಗತಿಸುತ್ತಿದ್ದೇವೆ'' ಎಂದು ವಿಜಯವರ್ಗೀಯ ಅವರು 'ಎಕ್ಸ್'ನಲ್ಲಿ ಬರೆದುಕೊಂಡಿದ್ದಾರೆ.
ನಾಮಪತ್ರ ಹಿಂಪಡೆದ ಅಕ್ಷಯ್ ಕಾಂತಿ ಬಮ್ ಅವರು ಇಂದೋರ್ನಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದರು ಹಾಗೂ ಬಿಜೆಪಿಗೆ ಸೇರ್ಪಡೆಗೊಂಡರು. ಆನಂತರ ಅಕ್ಷಯ್ ಕಾಂತಿ ಬಮ್ ಅವರು ಶಾಸಕ ಮೆಂಡೋಲಾ ಹಾಗೂ ತನ್ನೊಂದಿಗೆ ಕಾರಿನಲ್ಲಿ ಕುಳಿತಿರುವ ಫೋಟೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವಿಜಯ ವರ್ಗೀಯ ಅವರು ಪೋಸ್ಟ್ ಮಾಡಿದ್ದಾರೆ.