ಕಾಸರಗೋಡು: ಕಾರು ಮತ್ತು ಲಾರಿ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂಭತ್ತು ವರ್ಷದ ಬಾಲಕ ಸಹಿತ ಕಾಸರಗೋಡಿನ ಒಂದೇ ಕುಟುಂಬದ ಐವರು ಮೃತಪಟ್ಟ ಘಟನೆ ಕಣ್ಣೂರು ಜಿಲ್ಲೆಯ ಚೆರುಕುನ್ನು ಸಮೀಪದ ಪುನ್ನಚ್ಚೇರಿ ಎಂಬಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.
ನೀಲೇಶ್ವರ ಕಾಲಿಚ್ಚಿನಡ್ಕದ ಶಾಸ್ತ್ರಂಪಾರ ನಿವಾಸಿ ಕೆ.ಎನ್. ಪದ್ಮಕುಮಾರ್(59), ಕರಿವೆಳ್ಳೂರು ಕೊಯಮ್ಮಲ್ ನಿವಾಸಿ ಕೃಷ್ಣನ್(65), ಅವರ ಪುತ್ರಿ ಅಜಿತಾ(35), ಅಜಿತಾರ ಪತಿ ಚಿತ್ತಾರಿಕಲ್ ಚೂರಿಕ್ಕಾಡ್ ನಿವಾಸಿ ಸಿ.ಸುಧಾಕರನ್ (52) ಮತ್ತು ಅಜಿತಾಳ ಸಹೋದರ ಪುತ್ರ ಆಕಾಶ್ (9) ಮೃತಪಟ್ಟವರು ಎಂದು ತಿಳಿದುಬಂದಿದೆ.
ಸೋಮವಾರ ರಾತ್ರಿ 10:45ರ ಸುಮಾರಿಗೆ ಪುನ್ನಚ್ಚೇರಿಯ ಪೆಟ್ರೋಲ್ ಬಂಕ್ ಬಳಿ ಈ ಅಪಘಾತ ಸಂಭವಿಸಿದೆ. ಪದ್ಮಕುಮಾರ್ರ ಪುತ್ರ ಗೌರವ್ ಕೋಝಿಕ್ಕೋಡ್ನ ಶಿಕ್ಷಣ ಸಂಸ್ಥೆಯೊಂದರಲ್ಲಿ ಸಿಎಗೆ ಪ್ರವೇಶಾತಿ ದೊರೆತಿದ್ದು, ಸೋಮವಾರ ಆತನನ್ನು ಹಾಸ್ಟೆಲ್ಗೆ ದಾಖಲಿಸಲು ಕುಟುಂಬ ಸಮೇತ ತೆರಳಿದ್ದರು. ಗೌರವನನ್ನು ಹಾಸ್ಟೆಲ್ಗೆ ಸೇರಿಸಿ ಊರಿಗೆ ಹಿಂದಿರುಗುತ್ತಿದ್ದವೇಳೆ ಈ ಅಪಘಾತ ನಡೆದಿದೆ.
ಪದ್ಮಕುಮಾರ್ ಚಲಾಯಿಸುತ್ತಿದ್ದ ಕಾರಿಗೆ ಪುನ್ನಚ್ಚೇರಿ ಬಳಿ ಲಾರಿಯೊಂದು ಹಿಂಬದಿಯಿಂದ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಇದೇ ವೇಳೆ ವಿರುದ್ಧ ದಿಕ್ಕಿನಲ್ಲಿ ಮಂಗಳೂರು ಕಡೆಯಿಂದ ಅಡುಗೆ ಅನಿಲ ಸಿಲಿಂಡರ್ ಹೇರಿಕೊಂಡು ಬರುತ್ತಿದ್ದಲಾರಿಗೆ ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಆಕಾಶ್ ಆಸ್ಪತ್ರೆಗೆ ಕರೆದೊಯ್ಯುವ ದಾರಿಮಧ್ಯೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಅಪಘಾತದಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ದೆ. ಲಾರಿ ಚಾಲಕ ಕೂಡಾ ಗಾಯಗೊಂಡಿದ್ದಾನೆ.
ಅಪಘಾತಕ್ಕೆ ಕಾರಣವಾದ ಎರಡು ಲಾರಿಗಳನ್ನು ಹಾಗೂ ಅವುಗಳ ಚಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಕಣ್ಣಾಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.