ಕೊರೋನಾ ತಡೆಯಲು ಸರ್ಕಾರ ವಿಫಲ. ಮಂತ್ರಿಗಿರಿಗಾಗಿ ಬೆಂಗಳೂರಿನಲ್ಲಿ ಶಾಸಕರ ಠಿಕಾಣಿ : ಸಿದ್ದರಾಮಯ್ಯ ಆರೋಪ.
ಕಾರವಾರ : ರಾಜ್ಯದಲ್ಲಿ ಕೊರೋನಾ ಜಾಸ್ತಿಯಾಗುತ್ತಿರುವ ಲಕ್ಷಣ ಕಾಣುತ್ತಿದೆ. ಕೊರೋನಾ ಕಡೆ ನೋಡುವ ಬದಲು ಸಿಎಂ ಮಂತ್ರಿಮಂಡಲ ಮಾಡಲು ಹೊರಟಿದ್ದಾರೆ. ಪದೇ ಪದೇ ಹೈ ಕಮಾಂಡ್ ಭೇಟಿಗೆ ತೆರಳುತ್ತಿದ್ದಾರೆ ಎಂದು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕಾರವಾರದ ಪ್ರವಾಸಿ ಮಂದಿರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಕೂಡಾ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು. ಎಂಎಲ್ಎ ಗಳೆಲ್ಲಾ ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದಾರೆ. ಅವರಿಗೆ ಮಂತ್ರಿಯಾಗೋದು ಮುಖ್ಯ, ಜನರ ಸಮಸ್ಯೆಯಲ್ಲ ಎಂದು ಹೇಳಿದರು.
ಕೊರೋನಾ ನಿಯಂತ್ರಣ ಮಾಡುವುದು ಸರಕಾರದ ಕರ್ತವ್ಯ. ಕೇರಳದಲ್ಲಿ ಈಗಾಗಲೇ ಮೂರನೇ ಅಲೆ ಬಂದಿದೆ, ಮಹಾರಾಷ್ಟ್ರದಲ್ಲೂ ಜಾಸ್ತಿಯಾಗಿದೆ. ತಮಿಳುನಾಡು, ಕೇರಳ, ಮಹಾರಾಷ್ಟ್ರ, ಗೋವಾ ನೆರೆಯ ರಾಜ್ಯಗಳ ಬಾರ್ಡರ್ನಲ್ಲಿ ಕಟ್ಟೆಚ್ಚರ ಮಾಡಬೇಕು, ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಎರಡು ಡೋಸ್ ವ್ಯಾಕ್ಸಿನ್ ತೆಗೆದುಕೊಳ್ಳದಿದ್ದಲ್ಲಿ ಯಾರಿಗೂ ಕೂಡ ಒಳಗೆ ಬಿಡಬಾರದು. ಆರ್ಟಿಪಿಸಿಆರ್ ಟೆಸ್ಟ್ ಮಾಡಿ ನೆಗೆಟಿವ್ ಬಂದಮೇಲೆ ಮಾತ್ರ ಒಳಗೆ ಬಿಡಬೇಕು ಎಂದ ಅವರು, ಈಗಾಗಲೇ ಜನರು ಆಕ್ಸಿಜನ್, ಬೆಡ್ ಇಲ್ಲದೇ ಕಷ್ಟ ಅನುಭವಿಸಿದ್ದಾರೆ ಮುಂದಕ್ಕೆ ಇಂತದ್ದು ಮರುಕಳಿಸದಂತೆ ನೋಡಬೇಕು.
ಸೆಕ್ಸ್ ಹಾಗೂ ಇತರ ಸ್ಕ್ಯಾಮ್ನಲ್ಲಿ ಬಿಜೆಪಿ ನಾಯಕರು ಸಿಕ್ಕಾಕ್ಕೊಂಡಿದ್ದಾರೆಂದು ಟೀಕಿಸಿದ ಅವರು, ಜೆಡಿಎಸ್ ಸೆಕ್ಯೂಲರ್ ಪಾರ್ಟಿಯಾಗಿ ಉಳಿದಿಲ್ಲ ಎಂದು ಹೇಳಿದರು.
ಬಿಜೆಪಿ ಭ್ರಷ್ಟ ಪಾರ್ಟಿ. ಬಿಜೆಪಿಯದ್ದು ಭ್ರಷ್ಟ ಸರಕಾರ ಎಂದು ಕಿಡಿಕಾರಿದ ಸಿದ್ದರಾಮಯ್ಯ, ಇನ್ನು ಒಂದುವರೆ ವರ್ಷ ಇರುವಾಗ ಯಡಿಯೂರಪ್ಪರವರನ್ನು ಯಾಕೆ ಇಳಿಸಬೇಕಾಗಿತ್ತು. ಬೊಮ್ಮಾಯಿ ನೂತನ ಸಿಎಂ ಆಗಿದ್ದಾರೆ. ಅವರ ಬಗ್ಗೆ ಟೀಕೆ ಮಾಡಲು ಹೋಗಲ್ಲ ಎಂದಿದ್ದಾರೆ. ಬಿಜೆಪಿಯವರು ನಾವು ಸಾಚಾಗಳು, ಸುಸಂಸ್ಕೃತರು ಅಂತಾ ಹೇಳ್ತಾರೆ. ಆದರೆ, ಬಿಜೆಪಿಯವರು ಸಂಸ್ಕೃತಿ ರಹಿತರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.