ಉಡುಪಿ: ಗಲ್ಫ್ ರಾಷ್ಟ್ರದಲ್ಲಿದ್ದರೂ ಕೂಡ ಹುಟ್ಟೂರಿನ ಅಭಿಮಾನಕ್ಕೆ ಅನೇಕ ಸಾಮಾಜಿಕ ಸೇವೆಯ ಜೊತೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಕ್ಕೆ ಶಿರೂರಿನ ಮಣೆಗಾರ ಮೀರಾನ್ ರವರಿಗೆ 2020ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಿರೂರಿನ ಮಣೆಗಾರ್ ಮಹ್ಮದ್ ಮೀರಾನ್ ರವರಿಗೆ 2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಸೋಮವಾರ ಸಂಜೆ ವಿಧಾನಸೌಧದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರಧಾನ ಮಾಡಿದರು.
ಕನ್ನಡ ನೆಲ-ಜಲ ನಾಡು ನುಡಿಯ ಅಭಿವೃದ್ಧಿಯಲ್ಲಿ ಹಲವು ಸಾಧಕರ ಪರಿಶ್ರಮ ಮತ್ತು ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಮೀರಾನ್ರವರ ಕೊಡುಗೆ ಜಿಲ್ಲೆಯ ಮತ್ತು ರಾಜ್ಯದ ಅಭಿವೃದ್ಧಿಗೆ ವಿಶೇಷ ಸಹಕಾರಿಯಾಗಿದೆ. ಇಂತಹ ಹಿರಿಯ ಸಾಧಕರ ಕೊಡುಗೆ ಯುವ ಪೀಳಿಗೆಗೆ ಮಾದರಿ ಎಂದು ಸಿಎಂ ಹೇಳಿದರು.
ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ಮಣೆಗಾರ್ ಮೀರಾನ್ ಬೈಂದೂರು ಕ್ಷೇತ್ರದ ಆಸ್ತಿ. ಕೋವಿಡ್ ಸಂದರ್ಭದಲ್ಲಿ ಇವರು ನೀಡಿದ ಕೊಡುಗೆ ಅಪಾರ ಎಂದರು.
ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಲಕ್ಷ ಕೊಡುಗೆ: ಮಣೆಗಾರ್ ಮೀರಾನ್ ಸಾಹೇಬ್ ಅವರು ಮುಖ್ಯಮಂತ್ರಿ ಪರಿಹಾರ ನಿಧಿಗೆ ಐದು ಲಕ್ಷ ರೂಪಾಯಿ ಕೊಡುಗೆ ನೀಡಿದರು. ರಾಜ್ಯೋತ್ಸವ ಪ್ರಶಸ್ತಿ ಪ್ರಯುಕ್ತ ಸರಕಾರ ನೀಡಿದ 1 ಲಕ್ಷ ರೂಪಾಯಿಯನ್ನು ಯುವಶಕ್ತಿ ಗಣೇಶೋತ್ಸವ ಸಮಿತಿ ಕರಾವಳಿ ಹಾಗೂ ಜೆಸಿಐ ಶಿರೂರಿಗೆ ಕೊಡುಗೆ ನೀಡಿದ್ದಾರೆ.
ಶಿರೂರು ಗ್ರೀನ್ವ್ಯಾಲಿ ಸಂಸ್ಥಾಪಕ ನಿರ್ದೇಶಕ ಮತ್ತು ಆಡಳಿತ ಟ್ರಸ್ಟಿಯಾಗಿರುವ ಇವರು ಶಿರೂರಿನ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಕೋವಿಡ್ ಕಾರಣದಿಂದ ಕಳೆದ ಸಾಲಿನಲ್ಲಿ ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗದ ಕಾರಣ ಈ ವರ್ಷ ಪ್ರಶಸ್ತಿ ನೀಡಲಾಗಿದೆ.
ಈ ಸಂದರ್ಭದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್. ರಂಗಪ್ಪ, ಯೂನುಸ್ ಖಾಜಿಯಾ, ಉದ್ಯಮಿ ಮೊಹಮ್ಮೆದ್ ಮುಕ್ತಸರ್, ಇರ್ಷಾದ್ ಮಂಗಳೂರು, ಉದ್ಯಮಿ ವೆಂಕಟೇಶ ಕಿಣಿ ಬೈಂದೂರು, ದುಬೈ ಕನ್ನಡಿಗ ಸಂಘದ ಸಾಧನ ದಾಸ್, ಪತ್ರಕರ್ತ ಅರುಣ ಕುಮಾರ್ ಶಿರೂರು ಉಪಸ್ಥಿತರಿದ್ದರು.