ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75ರ ಪಂಪ್ ವೆಲ್ ಸಮೀಪದ ನಾಗುರಿ ಎಂಬಲ್ಲಿ ಶನಿವಾರ ಸಂಜೆ ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ ಆಕಸ್ಮಿಕವಲ್ಲ. ಅದೊಂದು ಭಯೋತ್ಪಾದಕ ಕೃತ್ಯವಾಗಿದೆ ಎಂದು ಡಿಜಿಪಿ ಪ್ರವೀಣ್ ಸೂದ್ ಸ್ಪಷ್ಟಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ರವಿವಾರ ಬೆಳಗ್ಗೆ ಟ್ವಿಟ್ ಮಾಡಿರುವ ಅವರು, 'ಇದು ಆಕಸ್ಮಿಕವಾಗಿ ನಡೆದ ಸ್ಫೋಟವಲ್ಲ. ಉಗ್ರರ ಕೃತ್ಯ ಎಂಬುದು ಖಚಿತವಾಗಿದೆ. ಕೇಂದ್ರ ತನಿಖಾ ಏಜೆನ್ಸಿಯ ಜೊತೆಗೂಡಿ ಕರ್ನಾಟಕ ಪೊಲೀಸರು ಸಮಗ್ರವಾಗಿ ತನಿಖೆ ಕೈಗೊಳ್ಳಲಿದ್ದಾರೆ' ಎಂದು ತಿಳಿಸಿದ್ದಾರೆ.
ರವಿವಾರ ಸಂಜೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್, 'ಸ್ಫೋಟ ಪ್ರಕರಣದ ರಿಕ್ಷಾ ಚಾಲಕನ ಗುರುತು ಸಿಕ್ಕಿದೆ. ಆದರೆ ರಿಕ್ಷಾದಲ್ಲಿ ಪ್ರಯಾಣಿಸಿದ್ದ ಗಾಯಾಳುವಿನ ಗುರುತು ಇನ್ನೂ ಪತ್ತೆಯಾಗಿಲ್ಲ. ಸೋಮವಾರ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ನೀಡಲಾಗುವುದು' ಎಂದು ಸ್ಪಷ್ಟಪಡಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಸದ್ಯ ಅವರ ಬಗ್ಗೆ ಹೆಚ್ಚಿನ ವಿವರ ನೀಡಲಾಗುತ್ತಿಲ್ಲ. ತನಿಖೆಯ ಬಳಿಕ ಮಾಹಿತಿ ನೀಡಲಾಗು ವುದು ಎಂದು ಎಡಿಜಿಪಿ ತಿಳಿಸಿದ್ದಾರೆ.
ರವಿವಾರ ಸಂಜೆ ಘಟನೆ ನಡೆದ ನಾಗುರಿಗೆ ಭೇಟಿ ನೀಡಿದ ಎಡಿಜಿಪಿ ಅಲೋಕ್ ಕುಮಾರ್, ರಿಕ್ಷಾವನ್ನು ಪರಿಶೀಲಿಸಿದರು. ಅಲ್ಲದೆ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳಿಂದ ಹಾಗೂ ಸ್ಥಳೀಯ ಗ್ಯಾರೇಜು, ಸೆಲೂನ್, ಜಿನಸಿ ಅಂಗಡಿಯ ಮಾಲಕರಿಂದಲೂ ಮಾಹಿತಿ ಪಡೆದುಕೊಂಡರು.
ಶಾಂತಿ, ಸುವ್ಯವಸ್ಥೆ ಕದಡುವ ಪ್ರಯತ್ನ ನಳಿನ್ ಕುಮಾರ್ ಕಟೀಲು: ಮಂಗಳೂರಿನ ಆಟೊರಿಕ್ಷಾದಲ್ಲಿ ಸಂಭವಿಸಿದ ಸ್ಫೋಟದ ಹಿಂದೆ ಮತೀಯ ಶಕ್ತಿಗಳ ಕೈವಾಡವಿದೆ. ಜಿಲ್ಲೆಯ ಶಾಂತಿ, ಸುವ್ಯವಸ್ಥೆ ಕದಡುವ ಪ್ರಯತ್ನ ಮಾಡಿರುವುದು ಮೇಲ್ನೋಟಕ್ಕೆ ಪತ್ತೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಅವರು ಮೂಲಭೂತವಾದಿಗಳ ಇಂತಹ ಭಯೋತ್ಪಾದಕ ಕೃತ್ಯಕ್ಕೆ ಬೆಂಬಲ ಅಥವಾ ನೆರವು ನೀಡುವವರನ್ನೂ ಹೆಡೆಮುರಿ ಕಟ್ಟಲು ನಮ್ಮ ಪೊಲೀಸ್ ವ್ಯವಸ್ಥೆ ಸನ್ನದ್ಧವಾಗಿದೆ ಎಂದಿದ್ದಾರೆ. ಪ್ರಕರಣದ ವಿವರ: ಶನಿವಾರ ಸಂಜೆ ಸುಮಾರು 4:30ರ ವೇಳೆಗೆ ಪಡೀಲ್ನಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಆಟೊ ರಿಕ್ಷಾ ನಾಗುರಿ ತಲುಪಿದಾಗ ಸ್ಫೋಟ ಸಂಭವಿಸಿತ್ತು. ಪ್ರಯಾಣಿಕನ ಬಳಿಯಿದ್ದ ಚೀಲದಲ್ಲಿ ಕುಕ್ಕರ್ ಸಹಿತ ಕೆಲವು ಪರಿಕರ ಇದ್ದು, ರಿಕ್ಷಾ ಚಲಿಸುತ್ತಿದ್ದಂತೆಯೇ ಸ್ಫೋಟಗೊಂಡಿತ್ತು. ಇದರಿಂದ ರಿಕ್ಷಾದ ಸೀಟು ಸಹಿತ ಒಳಭಾಗ ಭಾಗಶಃ ಸುಟ್ಟು ಹೋಗಿತ್ತು. ಅಲ್ಲದೆ ರಿಕ್ಷಾ ಪ್ರಯಾಣಿಕನಿಗೆ ಗಂಭೀರ ಗಾಯವಾಗಿದ್ದರೆ, ಚಾಲಕನಿಗೂ ಗಾಯವಾಗಿತ್ತು. ಇಬ್ಬರನ್ನೂ ಸ್ಥಳೀಯರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ರಿಕ್ಷಾ ಚಾಲಕನನ್ನು ನಗರದ ಗೋರಿಗುಡ್ಡ ನಿವಾಸಿ ಪುರುಷೋತ್ತಮ ಎಂದು ಗುರುತಿಸಲಾಗಿದ್ದರೆ, ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಬಳಿ ಇದ್ದ ಆಧಾರ್ ಕಾರ್ಡ್ ಆಧಾರದ ಮೇಲೆ ಪ್ರೇಮ್ ರಾಜ್ ಎಂದು ಗುರುತಿಸಲಾಗಿತ್ತು. ಆದರೆ ಅದು ನಕಲಿ ಕಾರ್ಡ್ ಎಂಬುದಾಗಿ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣ ದಾಖಲು: ಘಟನೆಗೆ ಸಂಬಂಧಿಸಿದಂತೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿ ಪಿ.ಎ.ಹೆಗಡೆ ಪ್ರಕರಣದ ತನಿಖಾಧಿಕಾರಿಯಾಗಿದ್ದಾರೆ.