ಧರ್ಮದ ಹೆಸರಿನಲ್ಲಿ ದ್ವೇಷ ಹರಡುವ ಪಕ್ಷ ಅಧಿಕಾರದಲ್ಲಿ ಬರಬಾರದು : ರಾಮ್ ಪುಣ್ಯಾನಿ
ಬೆಂಗಳೂರು : ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಪಕ್ಷ ಎಂದಿಗೂ ಅಧಿಕಾರಕ್ಕೆ ಬರಬಾರದು ಅದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಖ್ಯಾತ ಇತಿಹಾಸ ತಜ್ಞ, ಸಾಮಾಜಿಕ ಕಾರ್ಯಕರ್ತ ರಾಮ್ ಪುಣ್ಯಾನಿ ಹೇಳಿದರು.
ಅವರು ಬೆಂಗಳೂರಿನಲ್ಲಿ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ವತಿಯಿಂದ ಆಯೋಜಿಸಿದ್ದ ಕಾನೂನು ಕಾರ್ಯಾಗಾರದಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು .
ಇಂದು ಮುಸ್ಲಿಮರು ಎಷ್ಟು ಬೆದರಿಕೆಯನ್ನು ಅನುಭವಿಸುತ್ತಿದ್ದಾರೆಯೋ, ಹಾಗೆಯೇ ನಮ್ಮಂತಹ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ನಂಬಿಕೆಯುಳ್ಳವರು ಸಹ ಬೆದರಿಕೆಯನ್ನು ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದರು.
ನವದೆಹಲಿಯಿಂದ ಆಗಮಿಸಿದ ಎಪಿಸಿಆರ್ ರಾಷ್ಟ್ರೀಯ ಕಾರ್ಯದರ್ಶಿ ನದೀಮ್ ಖಾನ್ ಈ ಸಂದರ್ಭದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಯಿಂದ ಆಗಮಿಸಿದ್ದ ಎಪಿಸಿಆರ್ ಕಾರ್ಯಕರ್ತರಿಗೆ ಎಪಿಸಿಆರ್ ನ ಉದ್ದೇಶ ಮತ್ತು ಕಾರ್ಯ ಚಟುವಟಿಕೆಗಳನ್ನು ಪರಿಚಯಿಸಲಾಯಿತು.
ಎಪಿಸಿಆರ್ ಕರ್ನಾಟಕ ಚಾಪ್ಟರ್ ನ ಧರ್ಮದರ್ಶಿ ಮೌಲಾನಾ ಮಹಮ್ಮದ್ ಯೂಸುಫ್ ಕಣ್ಣಿ ಮಾತನಾಡಿ, ಎಪಿಸಿಆರ್ ಗೆ ಹಾಕಿರುವ ಚೌಕಟ್ಟಿನಲ್ಲಿ ಕೆಲಸ ಮಾಡುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಿದರು. ದಬ್ಬಾಳಿಕೆ ನಡೆದರೆ ಅದರ ವಿರುದ್ಧ ಧ್ವನಿ ಎತ್ತುವುದು ಎಪಿಸಿಆರ್ ನ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಬೆಂಗಳೂರಿನ ಇಂಡಿಯನ್ ಸೋಶಿಯಲ್ ಇನ್ಸ್ಟಿಟ್ಯೂಟ್ ಸಭಾಂಗಣದಲ್ಲಿ ನಡೆದ ಕಾರ್ಯಾಗಾರ ಹಸನ್ ಮುಜಾಹಿದ್ ಅವರ ಪವಿತ್ರ ಕುರಾನ್ ಪಠಣದೊಂದಿಗೆ ಪ್ರಾರಂಭವಾಯಿತು. ಎಪಿಸಿಆರ್ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಮುಹಮ್ಮದ್ ನಿಯಾಝ್ ಅವರು ಎಲ್ಲಾ ಅತಿಥಿಗಳನ್ನು ಮತ್ತು ಕಾರ್ಯಕರ್ತರನ್ನು ಸ್ವಾಗತಿಸಿದರು.
ಎಪಿಸಿಆರ್ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಕರ್ನಾಟಕ ಘಟಕದ ಅಧ್ಯಕ್ಷ ನ್ಯಾಯವಾದಿ ಪಿ.ಉಸ್ಮಾನ್ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಪರಿಸ್ಥಿತಿ ಅದರಲ್ಲೂ ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಎಪಿಸಿಆರ್ ಕಾರ್ಯಕರ್ತರು ತಮ್ಮ ವ್ಯಾಪ್ತಿಯಲ್ಲಿ ನಡೆದಿರುವ ಚಟುವಟಿಕೆಗಳ ವರದಿಯನ್ನು ಮಂಡಿಸಿದರು.
ಎಪಿಸಿಆರ್ ರಾಜ್ಯ ಸಂಯೋಜಕ ಶೇಖ್ ಶಫಿ ಅಹಮದ್ ಅವರು ರಾಜ್ಯ ಎಪಿಸಿಆರ್ ನಡೆಸುತ್ತಿರುವ ಚಟುವಟಿಕೆಗಳ ವರದಿಯನ್ನು ಮಂಡಿಸಿದರು.
ಫೋರಂ ಫಾರ್ ಡೆಮಾಕ್ರಸಿ ಆ್ಯಂಡ್ ನ್ಯಾಷನಲ್ ಅಮಿಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರೊ.ಸಲೀಂ ಇಂಜಿನಿಯರ್, ಜಮಾಅತೆ ಇಸ್ಲಾಮಿ ಹಿಂದ್, ಕರ್ನಾಟಕ ಅಧ್ಯಕ್ಷ ಡಾ.ಸಾದ್ ಬೆಳಗಾಮಿ, ಎಪಿಸಿಆರ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಲಿಕ್ ಮೋತೆಸಂ ಅಭಿಪ್ರಾಯ ವ್ಯಕ್ತಪಡಿಸಿದರು.
ಅಂತಿಮವಾಗಿ ವಕೀಲ ಅಮೀನ್ ಎಹ್ಸಾನ್ ಧನ್ಯವಾದ ಸಲ್ಲಿಸಿದರು.