ಕೋಲಾರ:- ಬಡವರ ಸಂಕಷ್ಟಕ್ಕೆ ಸ್ಪಂದಿಸಿ ಬದುಕು ಸಾಗಿಸು, ಕಷ್ಟದ ಅರಿವು ನಿನಗಾಗುತ್ತದೆ ಎಂಬ ನನ್ನ ತಾಯಿಯ ಮಾತಿಗೆ ಕಟ್ಟಬಿದ್ದು, ನನ್ನನ್ನು ಮನೆ ಮಗಳಾಗಿ ಸ್ವೀಕರಿಸಿರುವ ಕೆಜಿಎಫ್ ವಿಧಾನಸಭಾ ಕ್ಷೇತ್ರದ ತಾಯಂದಿರ ನೆರವಿಗೆ ನಿಲ್ಲುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕಿ ರೂಪಶಶಿಧರ್ ತಿಳಿಸಿದರು.
ಜಿಲ್ಲೆಯ ಆಂಧ್ರ ಗಡಿ ಕುಗ್ರಾಮವಾದ ಶ್ರೀನಿವಾಸಸಂದ್ರ ಪಂಚಾಯಿತಿಯ ಬೆನ್ನವಾರದಲ್ಲಿ ಸಾಮೂಹಿಕ ಗೌರಿ ಪೂಜೆ ನಡೆಸಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ವತಿಯಿಂದ ಸಾಲವನ್ನು ತಾಯಂದಿರಿಗೆ ಹರಿಸಿನ,ಕುಂಕುಮ,ಕುಪ್ಪಸ,ಬಳೆ, ತಾಂಬೂಲದೊಂದಿಗೆ ವಿತರಿಸಿ ಅವರು ಮಾತನಾಡುತ್ತಿದ್ದರು.
ಸದಾ ನನ್ನ ಮನೆಯಲ್ಲಿ ಮಾಡುತ್ತಿದ್ದ ಗೌರಿಪೂಜೆಯನ್ನು ಈಬಾರಿ ಈ ಬಾರಿ ನನ್ನನ್ನು ಆಶೀರ್ವದಿಸಿರುವ ಬಡ ಮಹಿಳೆಯರೊಂದಿಗೆ ಆಚರಿಸಲು ನಿರ್ಧರಿಸಿ ಬಂದಿದ್ದೇನೆ, ಸಾಲ ಪಡೆದು ಆರ್ಥಿಕವಾಗಿ ಬಲವರ್ಧನೆ ಹೊಂದುವ ಮೂಲಕ ನಿಮ್ಮ ಆಶೀರ್ವಾದ ಕೋರಿ ಬಂದಿರುವ ನನ್ನನ್ನು ಹರಿಸಿದರೆ ಸಾಕು ಎಂದು ಕೋರಿದರು.
ಮೀಟರ್ ಬಡ್ಡಿ ಹಾಗೂ ಖಾಸಗಿ ಲೇವಾದಾರರಿಂದ ಸಾಲ ಪಡೆದು ಶೋಷಣೆಗೊಳಗಾಗಿರುವ ತಾಯಂದಿರಿಗೆ ಡಿಸಿಸಿ ಬ್ಯಾಂಕಿನಿಂದ ಶೂನ್ಯ ಬಡ್ಡಿ ಸಾಲ ಕೊಡಿಸುವ ಶಕ್ತಿ ನನಗೆ ಸಿಕ್ಕಿದೆ, ಈ ಕಾರ್ಯದಲ್ಲಿ ನಾನು ಬಡವರ ಕೈಹಿಡಿಯುವ ಕೆಲಸ ಮಾಡುತ್ತಿದ್ದೇನೆ, ತಾಯಂದಿರು ಯಾವುದೇ ಶಿಫಾರಸ್ಸುಗಳಿಲ್ಲದೇ ನೇರವಾಗಿ ಬನ್ನಿ ನಿಯಮಾನುಸಾರ ಸಾಲ ಕೊಡಿಸುತ್ತೇನೆ ಎಂದರು.
ಕೆಜಿಎಫ್ ವಿಧಾನಸಭಾ ಕ್ಷೇತ್ರದ ನಗರ ಹಾಗೂ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ತಮ್ಮ ಕಾಲ ಮೇಲೆ ನಿಂತು ಕುಟುಂಬವನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು, ಸ್ವಾವಲಂಬಿಗಳಾಗಿ ಬದುಕು ರೂಪಿಸಿಕೊಳ್ಳಬೇಕು ಎಂಬುದು ತಮ್ಮ ಇಚ್ಚೆಯಾಗಿದೆ ಎಂದರು.
ಮಹಿಳೆಯರಿಗೆ ಮಾತ್ರವಲ್ಲದೆ ಬರಪೀಡಿತ ಪ್ರದೇಶದಲ್ಲಿ ಮಳೆಯಿಲ್ಲದೆ ಬೆಳೆಯಿಲ್ಲದೆ ಸಂಕಷ್ಟದಲ್ಲಿ ಇರುವ ರೈತರಿಗೂ ಕೃಷಿಕರಿಗೂ ಸಹ ಮುಂದಿನ ದಿನಗಳಲ್ಲಿ ಮನೆಗೆ ಸಾಲವನ್ನು ತಲುಪಿಸುವ ಕೆಲಸವನ್ನು ಡಿಸಿಸಿ ಬ್ಯಾಂಕ್ ಮೂಲಕ ಮಾಡುವುದಾಗಿ ತಿಳಿಸಿದರು.
ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡರು ರೈತರಿಗೆ ಈಗಾಗಲೇ ಸೊಸೈಟಿ ಮೂಲಕ ಸಾಲ ಸೌಲಭ್ಯ ಕಲ್ಪಿಸಿದ್ದು, ಅದನ್ನು ಮತ್ತಷ್ಟು ಹೆಚ್ಚಿಸಲು ಚಿಂತನೆ ನಡೆಸಿದ್ದಾರೆ, ಸಾಲ ಪಡೆದ ಮಹಿಳೆಯರು ಸಕಾಲಕ್ಕೆ ಸಾಲ ಮರು ಪಾವತಿ ಮಾಡಿದ್ದಲ್ಲಿ ಇನ್ನೂ ಹೆಚ್ಚಿನ ಸಾಲವನ್ನು ಪಡೆಯಲು ಅರ್ಹರಾಗುತ್ತೀರಿ ಎಂದರು.
ಈ ಬಾರಿಯ ಗೌರಿಗಣೇಶ ಹಬ್ಬ ನಿಮ್ಮ ಮತ್ತು ಕುಟುಂಬಕ್ಕೆ ಸಂತಸ ನೀಡಲಿ ಎಂದು ಹೇಳಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಅರಿಶಿನ, ಕುಂಕುಮ, ಕುಪ್ಪಸ,ಬಳೆ,ತಾಂಬೂಲ ವಿತರಿಸಿ ಅವರಿಂದ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಕ್ಯಾಸಂಬಳ್ಳಿ, ಬೆನ್ನವಾರ, ಶ್ರೀನಿವಾಸಸಂದ್ರ ಗ್ರಾಮಗಳ ಸುಮಾರು 30 ಸ್ವಸಹಾಯ ಸಂಘಗಳಿಗೆ 2.16ಕೋಟಿ ಸಾ¯ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕೆ.ವಿ.ಕುಮಾರಿ, ಮುಖಂಡರಾದ ಅ.ಮು.ಲಕ್ಷ್ಮೀನಾರಾಯಣ, ವಿಜಯರಾಘವರೆಡ್ಡಿ, ವಿಜಯಶಂಕರ್, ಅಪ್ಪಿರೆಡ್ಡಿ, ರಾಧಾಕೃಷ್ಣ, ಸುಬ್ಬಾರೆಡ್ಡಿ, ಆನಂದರೆಡ್ಡಿ, ಭಾಗ್ಯಮ್ಮ ಜಯರಾಮರೆಡ್ಡಿ, ಪ್ರಸನ್ನ, ಮೂರ್ತಿ, ವಕೀಲರಾದ ಸುಬ್ರಮಣಿ, ಶ್ರಿನಿವಾಸ್, ಪಿಎಲ್ಡಿ ಬ್ಯಾಂಕ್ ವೆಂಕಟೇಶ್, ಬೆಸ್ಕಾಂ ವೆಂಕಟೇಶ್ ಸೇರಿದಂತೆ ಇತರೆ ಮುಖಂಡರು, ಕಾರ್ಯಕರ್ತರು, ಗ್ರಾಮಸ್ಥರು, ತಾಯಂದಿರು ಹಾಜರಿದ್ದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ