ನಮ್ಮ ರಾಜ್ಯದ ಪ್ರತಿ ಪಟ್ಟಣದಲ್ಲಿ ಒಂದು ಚಿರಪರಿಚಿತ ದೃಶ್ಯವೆಂದರೆ ದೂರದಲ್ಲೂ ಕೇಳವಂತಹ ನೋಡುವಂತಹ, ಕೆಂಪು ದೀಪ, ಅಂಬ್ಯುಲೆನ್ಸ್ ಶಬ್ಧ ಮಾಡುತ್ತಾ ಓಡಾಡುವ ಅಂಬ್ಯುಲೆನ್ಸ್ ವಾಹನ. ಅಂಬ್ಯುಲೆನ್ಸ್ ಉತ್ಕಟ ಸ್ಥಿತಿಯಲ್ಲಿರುವ ರೋಗಿಗಳನ್ನು ಅಪಘಾತಕ್ಕೆ ಒಳಗಾದವರನ್ನು ತಕ್ಷಣ ಚಿಕಿತ್ಸೆಗೆಂದು ಹೊತ್ತು ಓಡುತ್ತದೆ. ಬೀದಿಯಲ್ಲಿ ವಾಹನಗಳೂ ಜನರು ಇದಕ್ಕೆ ಮೊದಲು ಎಡೆ ಮಾಡಿಕೊಡಬೇಕು.
ರೆಡ್ ಕ್ರಾಸ್ ಸಂಸ್ಥೆ ಹುಟ್ಟಿದ್ದು ಒಂದು ಯುದ್ಧ ಸನ್ನಿವೇಶದಲ್ಲಿ, ಜಿನೀವಾದ ಹೆನ್ರಿ ಡ್ಯುನಾನ್ ಎಂಬವನ ಮನಸ್ಸಿನಲ್ಲಿ. ಈತ ಲೇವಾದೇವಿಗಾರನಾಗಿದ್ದ. 1859 ಬೇಸಿಗೆ ಆಸ್ಟ್ರಿಯನ್ನರಿಗೂ ಫ್ರೆಂಚರು ಹಾಗೂ ಇಟಾಲಿಯನ್ನರಿಗೂ ಹಿಂದಿನ ದಿನವಷ್ಟೇ ಸೊಲ್ಫೆರಿನೊ ಎಂಬಲ್ಲಿ ಭೀಕರ ಯುದ್ಧ ನಡೆದಿದ್ದಿತ್ತು. 40,000 ಕ್ಕೂ ಮೀರಿದ ಸಂಖ್ಯೆಯಲ್ಲಿ ಗಾಯಾಳುಗಳು ಜೀವಚ್ಛವವಾಗಿದ್ದವರೂ, ಸತ್ತವರೊಂದಿಗೆ ಯುದ್ಧಭೂಮಿಯಲ್ಲಿ ಉರುಳಿದ್ದರು. ಅಸಹಾಯಕವಾಗಿ ನರಳುತ್ತಿದ್ದ ಈ ಯೋಧರನ್ನೂ ಕಂಡ ಡ್ಯುನಾನ್ ಕೂಡಲೇ ಹಲವರನ್ನು ಕೂಡಿಸಿ ಒಂದು ಸಣ್ಣ ಚಿಕಿತ್ಸಾಲಯವನ್ನು ಆರಂಭಿಸಿದ. ಇದರಲ್ಲಿ ಮಿತ್ರ, ಶತ್ರುಗಳೆನ್ನದೆ, ಎಲ್ಲರಿಗೂ ಸೇವೆ ಸಂದಿತು.
ಎಲ್ಲ ಕಾಲ ಎಲ್ಲ ದೇಶಗಳಲ್ಲಿ, ಎಂದೆಂದಿಗೂ ನೆರವಿಗೆ ಬರುವ, ಮಿತ್ರ ಶತ್ರುಗಳೆನ್ನದೆ ಸೇವೆ ಮಾಡುವ ಸ್ವಯಂಸೇವಕ ದಳದ ಅಪೂರ್ವ ಕಲ್ಪನೆಯನ್ನು ಡ್ಯುನಾನ್ ಚಿತ್ರಿಸಿದ. ಇಂಥ ದಳದ ಸ್ಥಾಪನೆಗಾಗಿ ಕಾರ್ಯಾರಂಭ ಮಾಡಿದ. 1901 ರಲ್ಲಿ ಶಾಂತಿ ಸಾಧನೆಗಾಗಿ ನೀಡಿದ ಪ್ರಥಮ ನೊಬೆಲ್ ಬಹುಮಾನ ಹೆನ್ರಿ ಡ್ಯುನಾನನಿಗೆ ದೊರಕಿತು. ತನಗೆ ಬಂದ ಪ್ರಶಸ್ತಿಯ ಹಣವನ್ನು ಧರ್ಮ ಸಂಸ್ಥೆಗಳಿಗೆ ಡ್ಯುನಾನ್ ನೀಡಿದ. ಇವನ ಜನ್ಮದಿನ ಮೇ 8, ಜಾಗತಿಕ ರೆಡ್ ಕ್ರಾಸ್ ದಿನವೆಂದು ಆಚರಿಸಲ್ಪಡುತ್ತದೆ.
ರೆಡ್ ಕ್ರಾಸಿಗೆ ತನ್ನದೆಲ್ಲವನ್ನು ಧಾರೆಯೆರೆದ ಡ್ಯುನಾನ್ 1867 ರಲ್ಲಿ ಈ ಸಂಸ್ಥೆಗೆ ರಾಜಿನಾಮೆ ನೀಡುವ ಪರಿಸ್ಥಿತಿಯೊದಗಿತು. 13 ವರ್ಷಗಳ ಕಾಲ ಅಜ್ಞಾತನಾಗಿದ್ದು 1910 ರಲ್ಲಿ ಮರಣ ಹೊಂದಿದ.
1864 ರ ತರುವಾಯ ಜಿನೀವಾ ಒಪ್ಪಂದವನ್ನು ಮೂರು ಬಾರಿ ಪುನರ್ವಿಮರ್ಶಿಸಲಾಗಿದೆ. ಈ ಒಪ್ಪಂದದ ಮೂಲ ತತ್ವಗಳು ಹೀಗಿವೆ:_ ಯುದ್ಧ ರಾಷ್ಟ್ರಗಳು ಯುದ್ಧ ಖೈದಿಗಳಿಗೆ ಮತ್ತು ಗಾಯಗೊಂಡ ಯೋಧರಿಗೆ ರಾಷ್ಟ್ರ ಭೇದವೆನಿಸದೆ ಇಂಥ ಚಿಕಿತ್ಸೆಯ ನೆರವನ್ನು ಒದಗಿಸಬೇಕು. ಈ ಕಾರ್ಯದಲ್ಲಿ ತೊಡಗಿರುವ ವಾಹನಗಳು, ಚಿಕಿತ್ಸಾಲಯಗಳು, ವೈದ್ಯರು, ದಾದಿಯರು ಮತ್ತಿತರ ಸಂಬಂಧಪಟ್ಟವರೆಲ್ಲರಿಗೂ ರಕ್ಷಣೆ ನೀಡಬೇಕು. ಸಂಸ್ಥೆಯ ಸಿಬ್ಬಂದಿ ಮತ್ತು ಕಾರ್ಯಸ್ಥಳಗಳನ್ನು ಗುರುತಿಸಲು ಒಂದು ಚಿಹ್ನೆ ಅಗತ್ಯವಾಯಿತು. ಡ್ಯುನಾನ್ನ ದೇಶವಾದ ಸ್ವಿಟ್ಜರ್ ಲೆಂಡಿನ ಬಾವುಟದಲ್ಲಿ ಕೆಂಪು ಭಾಗದ ಮೇಲೆ ಬಿಳಿಯ ಶಿಲುಬೆಯಿದೆ. ಇದನ್ನೇ ಆದರಿಸಿ ಬಿಳಿಬಣ್ಣದ ಮೇಲೆ ಕೆಂಪು ಶಿಲುಬೆ ಮೂಡಿಸಿ ರೆಡ್ ಕ್ರಾಸ್ ಸಂಸ್ಥೆ ತನ್ನ ಸಂಕೇತವನ್ನು ಅಳವಡಿಸಿಕೊಂಡಿತು. ಕೆಲವು ರಾಷ್ಟ್ರಗಳ ರೆಡ್ ಕ್ರಾಸ್ ಸಂಸ್ಥೆಗಳು ಚಿಹ್ನೆಯನ್ನು ಸ್ವಲ್ಪ ಮಾರ್ಪಡಿಸಿಕೊಂಡಿವೆ.
ರೆಡ್ ಕ್ರಾಸ್ ಸಂಸ್ಥೆಯ ಚಟುವಟಿಕೆಗಳು ಯುದ್ಧಕಾಲದಲ್ಲಿ ಮಾತ್ರವಲ್ಲ. ಶಾಂತಿ ಕಾಲದಲ್ಲೂ ಹೇರಳವಾಗಿ ನಡೆಯುತ್ತವೆ. ಬೆಂಕಿ, ಪ್ರವಾಹ, ಭೂಕಂಪ, ಸಾಂಕ್ರಾಮಿಕ ರೋಗ ಮೊದಲಾದ ಅನಾಹುತಗಳಾದಾಗ ಜನರ ಸೇವೆಗೆ ರೆಡ್ ಕ್ರಾಸ್ ಸಂಸ್ಥೆ ಸರ್ವದಾ ಸಿದ್ಧವಿರುತ್ತದೆ. ಆದರೆ ಈ ಪರಿಹಾರ ಕಾರ್ಯಗಳು ಮಾತ್ರ ಆಯಾ ದೇಶದ ನಿರ್ದಿಷ್ಟ ಸಮಸ್ಯೆಗಳಿಗೆ ಅನುಗುಣವಾಗಿರುತ್ತವೆ. ಪ್ರಥಮ ಚಿಕಿತ್ಸೆ ರೆಡ್ ಕ್ರಾಸಿನ ಮೂಲೋದ್ದೇಶ. ಇದಲ್ಲದೇ ರಕ್ತದ ಸಂಗ್ರಹಣೆ, ಪ್ರವಾಹ, ಬೆಂಕಿ, ಭೂಕಂಪಗಳಿಂದ ಪೀಡಿತರಾದವರಿಗೆ ಬಟ್ಟೆ, ಆಹಾರ, ಮೊದಲಾದುವುಗಳನ್ನು ಒದಗಿಸಿ ಕಷ್ಟ ಪರಿಹಾರ ಮಾಡುತ್ತದೆ. ರೆಡ್ ಕ್ರಾಸ್ ಸದಸ್ಯರು ಆಸ್ಪತ್ರೆಗಳ ರೋಗಿಗಳನ್ನು ಗೆಲುವಾಗಿಸಿ, ಉಲ್ಲಾಸಗೊಳ್ಳುವಂತೆ ಮಾಡುತ್ತಾರೆ. ಅವರಿಗೆ ಹಲವು ರೀತಿಗಳಲ್ಲಿ ನೆರವಾಗುತ್ತಾರೆ.
ರೆಡ್ ಕ್ರಾಸ್ ಸಂಸ್ಥೆಯ ಎಳೆಯರ ವಿಭಾಗವು ಪ್ರಚಾರಕ್ಕೆ ಬಂದದ್ದು 1917 ರಲ್ಲಿ. ಶಾಂತಿ ಸೌಹಾರ್ದ ಹಾಗೂ ಸೇವಾ ಧರ್ಮ ಮನೋಭಾವನೆಯನ್ನು ಅವರಲ್ಲಿ ಜಾಗೃತಗೊಳಿಸುವುದಕ್ಕಾಗಿ ಈ ವಿಭಾಗವು ಆರಂಭವಾಯಿತು. ಒಬ್ಬರು ಇನ್ನೊಬ್ಬರಿಗೆ ನೆರವಾಗಬೇಕು ಎಂಬುದೇ ‘ಜೂನಿಯರ್ ರೆಡ್ ಕ್ರಾಸ್’ ಸಂಸ್ಥೆಯ ನಿಯಮ. ಈ ವಿಭಾಗದಲ್ಲಿ ಜೀವ ಮತ್ತು ಆರೋಗ್ಯದ ರಕ್ಷಣೆ, ಗಾಯಗೊಂಡವರಿಗೆ, ರೋಗಿಗಳಿಗೆ ದುಃಖಗಳಿಗೆ ಸೇವೆ, ಅಂತರರಾಷ್ಟ್ರೀಯ ಸ್ನೇಹ ಇವು ಮೂರು ಕಿರಿಯರ ಸಂಸ್ಥೆಯ ಮುಖ್ಯ ಉದ್ದೇಶಗಳು, ಆಸ್ಪತ್ರೆ, ಕುರುಡರ ಶಾಲೆ, ಅನಾಥ ಶಿಶುವಿಹಾರ ಮೊದಲಾದ ಸಂಸ್ಥೆಗಳಲ್ಲಿ ಈ ಕಿರಿಯರು ಕೆಲಸ ಮಾಡುತ್ತಾರೆ. ಶಾಲೆಗಳಲ್ಲಿ ಪ್ರಥಮ ಚಿಕಿತ್ಸೆ ಮತ್ತಿತರ ರೆಡ್ ಕ್ರಾಸ್ ಚಟುವಟಿಕೆಗಳ ಬಗೆಗೆ ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಟ್ಟು ಪರೀಕ್ಷೆ ನಡೆಸುತ್ತಾರೆ. ಉತ್ತೀರ್ಣರಾದವರಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ರೆಡ್ ಕ್ರಾಸ್ ಸಂಸ್ಥೆ ಸ್ವಯಂಸೇವಕರ ಒಂದು ಮಹಾತಂಡ. ಅಂದರೆ ಇದು ತಾವಾಗಿಯೇ ಇಷ್ಟಪಟ್ಟು ಸೇವೆಗಾಗಿ ಟೊಂಕಕಟ್ಟಿ ನಿಲ್ಲುವವರ ಸಂಸ್ಥೆ. ರೆಡ್ ಕ್ರಾಸ್ ಸಂಸ್ಥೆಯು 1920 ರಲ್ಲಿ ಭಾರತೀಯ ವಿಧಾಯಕ ಸಭೆಯ ಕಾಯಿದೆಯೊಂದಕ್ಕೆ ಅನುಗುಣವಾಗಿ ಸ್ಥಾಪಿಸಲ್ಪಟ್ಟಿತು. 1970 ರಲ್ಲಿ ಇದರ ಚಿನ್ನದ ಹಬ್ಬ. ರೆಡ್ ಕ್ರಾಸ್ ಯುದ್ದ ಜಂಜಾಟಗಳಲ್ಲಿ ತೊಡಗಿರುವ ರಾಷ್ಟ್ರಗಳ ಮಧ್ಯೆ ಮಾನವೀಯತೆಯ ಧ್ಯೇಯಗಳುಳ್ಳ ಸಂಸ್ಥೆಯಾಗಿ ಮೆರೆಯುತ್ತಿದೆ.
ಜಗದೀಶ ವಡ್ಡಿನ
ಗ್ರಂಥಪಾಲಕರು
ಶಿವಾಜಿ ಶಿಕ್ಷಣ ಮಹಾವಿದ್ಯಾಲಯ
ಬಾಢ, ಕಾರವಾರ
9632332185