ಬೆಂಗಳೂರು: ಕಳೆದ ವರ್ಷ ಆಗಸ್ಟ್ನಲ್ಲಿ ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿನಲ್ಲಿ ನಡೆದ ಗಲಭೆ ಪ್ರಕರಣ ಮತ್ತು ಶಾಸಕ ಅಖಂಡ್ ಶ್ರೀನಿವಾಸಮೂರ್ತಿಯವರ ಮನೆಗೆ ಬೆಂಕಿ ಹಾಕಿದ ಘಟನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿದ್ದ ರೆಹಮಾನ್ ಖಾನ್ ಮತ್ತು ಮೊಹಮ್ಮದ್ ಅದ್ನಾನ್ ಸೇರಿದಂತೆ ನಾಲ್ವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದೆ.
ಎಸ್ಸಿ, ಎಸ್ಟಿ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ, ಆಸ್ತಿಯನ್ನು ನಾಶಪಡಿಸುವುದು ಹಾಗೂ 395, 143, 144, 145, 435, 436, 447, 448 ಸೆಕ್ಷನ್ಗಳು ಸೇರಿದಂತೆ ವಿವಿಧ ಸೆಕ್ಷನ್ ಅಡಿಯಲ್ಲಿ ಅವರನ್ನು ಬಂಧಿಸಲಾಗಿತ್ತು.
ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ರಾಜ್ಯ ಅಧ್ಯಕ್ಷ, ನ್ಯಾಯವಾದಿ ಪಿ.ಉಸ್ಮಾನ್ ಮತ್ತು ಕಾರ್ಯದರ್ಶಿ, ನ್ಯಾಯವಾದಿ ಮುಹಮ್ಮದ್ ನಿಯಾಜ್ ಅವರ ಪ್ರಯತ್ನದಿಂದ ನಾಲ್ವರಿಗೂ ಜಾಮೀನು ನೀಡಲಾಗಿದೆ.
ಎಪಿಸಿಆರ್ ರಾಜ್ಯ ಕಾರ್ಯದರ್ಶಿ, ನ್ಯಾಯವಾದಿ ಮುಹಮ್ಮದ್ ನಿಯಾಜ್ ಮಾತನಾಡಿ, ಈಗ ಇನ್ನೂ 12 ಜನರು ಜೈಲಿನಲ್ಲಿದ್ದಾರೆ. ಆದರೆ ಮಂಗಳವಾರ ನಾಲ್ಕು ಜನರಿಗೆ ಜಾಮೀನು ನೀಡಲಾಗಿದ್ದು, ಇತರ 12 ಜನರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ಸಾಧ್ಯತೆ ಸ್ಪಷ್ಟವಾಗಿದೆ. ವಿಚಾರಣೆ ಜೂನ್ 25 ರಂದು ನಡೆಯಲಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಆಗಸ್ಟ್ನಲ್ಲಿ ಶಾಸಕ ಶ್ರೀನಿವಾಸ್ ಮೂರ್ತಿವರ ಅಕ್ಕನ ಮಗ ನವೀನ್ ಎಂಬಾತ ತಮ್ಮ ಫೇಸ್ಬುಕ್ ನಲ್ಲಿ ಪ್ರವಾದಿ ಮುಹಮ್ಮದ್ ರವರನ್ನು ಅವಹೇಳಿಸುವ ಪೋಸ್ಟ್ ಹಾಕಿದ ಬಳಿಕ ಕೆಜೆ ಹಳ್ಳಿ ಮತ್ತು ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಗಲಭೆ ಸಂಭವಿಸಿತ್ತು.