ಭಟ್ಕಳ: ಇಲ್ಲಿನ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುಟ್ಠಳ್ಳಿ ಎಂಬಲ್ಲಿ ಯುವತಿಯೋರ್ವಳು ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತಂತೆ ಮಂಗಳವಾರ ವರದಿಯಾಗಿದ್ದು ಆತ್ಮಹತ್ಯೆಗೆ ಶರಣಾದ ಯುವತಿಯನ್ನು ಮುಟ್ಠಳ್ಳಿ ನಿವಾಸಿ ಚೇತನಾ ಲಕ್ಷ್ಮಣ ನಾಯ್ಕ(22) ಎಂದು ಗುರುತಿಸಲಾಗಿದೆ.
ಮೃತ ಚೇತನಾ ಮನೆಯಲ್ಲಿ ಅನಾರೋಗ್ಯ ಪೀಡಿತ ತಾಯಿಯನ್ನು ನೋಡಿಕೊಳ್ಳುವುದರ ಜತೆಗೆ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದ್ದು ಸ್ವತಃ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು ಎಂಬ ಮಾಹಿತಿಯಿದೆ. ಬಡತನ ಹಾಗೂ ಆರೋಗ್ಯ ಸಮಸ್ಯೆಯೇ ಆತ್ಮಹತ್ಯೆಗೆ ಮೂಲ ಕಾರಣ ಎಂದು ಹೇಳಲಾಗುತ್ತಿದೆ.
ಚೇತನಾ ನಾಯ್ಕ ಅಕಸ್ಮಿಕವಾಗಿ ಆತ್ಮಹತ್ಯೆಗೆ ಶರಣಾದ ಹಿನ್ನೆಲೆಯಲ್ಲಿ ಆಕೆಯ ಅನಾರೋಗ್ಯಪೀಡಿತ ತಾಯಿ ಪಾರ್ವತಿ ನಾಯ್ಕರನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ಆತಂಕ ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ಪಾರ್ವತಿ ನಾಯ್ಕ ಕಳೆದ ಹಲವು ವರ್ಷಗಳ ಹಿಂದೆಯೇ ತನ್ನ ಪತಿಯನ್ನು ಕಳೆದುಕೊಂಡಿದ್ದಾರೆ.
ಬಾವಿಯಲ್ಲಿದ್ದ ಮೃತದೇಹವನ್ನು ಸ್ಥಳಿಯರು ಹೊರ ತೆಗೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅಗತ್ಯಕ್ರಮ ಜರಗಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.