ಭಟ್ಕಳ: ಧಾರಕಾರ ಮಳೆಗೆ ಕೊಚ್ಚಿಹೋದ ಅಳ್ವೆಕೋಡಿಗೆ ಸಂಪರ್ಕಿಸುವ ಪಳ್ಳಿಹಕ್ಕಲ್ ಸೇತುವೆ
ಭಟ್ಕಳ: ಶಿರಾಲಿಯಿಂದ ಅಳ್ವೆಕೋಡಿಗೆ ಸಂಪರ್ಕಿಸುವ ಪಳ್ಳಿಹಕ್ಕಲ್ ಸೇತುವೆ ನಿರ್ಮಾಣ ಹಂತದಲ್ಲಿದ್ದು ತಾತ್ಕಾಲಿಕವಾಗಿ ನಿರ್ಮಿಸಿದ ಸೇತುವೆ ಮಳೆಯಿಂದಾಗಿ ಕೊಚ್ಚಿ ಹೋಗಿದ್ದು ಈಗ ಶಿರಾಲಿಯಿಂದ ಪಳ್ಳಿಹಕ್ಕಲ್ ಹಾಗೂ ಅಳ್ವೆಕೋಡಿಗೆ ಸಂಪರ್ಕ ಕಡಿತಕೊಂಡಿದೆ. ಅಳ್ವೆಕೋಡಿ ಹಾಗೂ ಪಳ್ಳಿಹಕ್ಕಲ್ ಜನತೆ ಸಂಪೂರ್ಣವಾಗಿ ಭಟ್ಕಳ ಹಾಗೂ ಶಿರಾಲಿಯಿಂದ ಸಂಪರ್ಕ ಕಡಿದುಕೊಂಡಂತಾಗಿದ್ದು ಬಹಳಷ್ಟು ತೊಂದರೆಯನ್ನು ಅನುಭವಿಸುವಂತಾಗಿದೆ.
ಭಟ್ಕಳ ತಾಲೂಕಿನಾದ್ಯಂತ ಗುರುವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮೀಣ ಭಾಗದ ನದಿ, ಹೊಳೆ, ಹಳ್ಳಗಳು ತುಂಬಿ ತುಳುಕುತ್ತಿದ್ದು ಶಿರಾಲಿಯಿಂದ ಅಳ್ವೆಕೋಡಿಗೆ ಸಂಪರ್ಕ ಕಲ್ಪಿಸುವ ಪಳ್ಳಿಹಕ್ಕಲ್ ಹೊಳೆಯ ಸೇತುವೆ ನಿರ್ಮಾಣಕ್ಕೆ ಕಳೆದ ಎರಡು ತಿಂಗಳ ಹಿಂದೆ ಚಾಲನೆ ನೀಡಿದ್ದು ಈ ನಿಟ್ಟಿನಲ್ಲಿ ಜನರ ಸಂಪರ್ಕಕ್ಕಾಗಿ ತಾತ್ಕಾಲಿಕ ಸೇತುವೆಯೊಂದನ್ನು ನಿರ್ಮಿಸಲಾಗಿತ್ತು. ಆದರೆ ಹೊಳೆಯಲ್ಲಿ ನೀರು ತುಂಬಿಕೊಂಡು ತಾತ್ಕಾಲಿಕ ಸೇತುವೆ ಕೊಚ್ಚಿಕೊಂಡು ಹೋಗಿದೆ. ಇದರಿಂದಾಗಿ ಆ ಭಾಗದ ಜನರು ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಸುನಿಲ್ ನಾಯ್ಕ ಹಾಗೂ ತಾಲೂಕಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಹಳೆಯ ಸೇತುವೆಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಿ ಅಳ್ವೆಕೋಡಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ದೋಣಿಗಳ ಮೂಲಕ ಜನರನ್ನು ಸಾಗಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ.
ಈ ಕುರಿತಂತೆ ಸ್ಥಳೀಯರು ಮಾಧ್ಯಮಗಳೊಂದಿಗೆ ಮಾತನಾಡಿ ಪಳ್ಳಿ ಹೊಳೆ ಸೇತುವೆ ಸಂಪರ್ಕ ಕಡಿತಗೊಂಡಿದ್ದರಿಂದಾಗಿ ಭಟ್ಕಳ, ಶಿರಾಲಿ, ಹೊನ್ನಾವರ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಮಕ್ಕಳು ಶಾಲೆಗೆ ಹೋಗದ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.
ಭಟ್ಕಳದಲ್ಲಿ ದಾಖಲೆಯ ಮಳೆ: ಜೂನ್ ೭ ರಿಂದ ೮ಜೂನ್ ವರೆಗೆ ಭಟ್ಕಳದಲ್ಲಿ ೭೫.೪ಮಿಮಿ ಮಳೆ ದಾಖಲಾಗಿದೆ. ತಾಲೂಕಿನಲ್ಲಿ ಇದುವರೆಗೆ ೪೪೯.೯ಮಿಮಿ ಮಳೆ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ೧೨೭.೩ ಮಿಮಿ ಮಳೆ ಹೆಚ್ಚು ಬಿದ್ದಿದೆ ಎಂದು ತಿಳಿದುಬಂದಿದೆ.