ಶಿರಸಿ: ದೇಶದಲ್ಲಿ ಸಂವಿಧಾನ ಸುರಕ್ಷಿತವಾಗಿ ಇರಬೇಕಾದರೆ ಎಲ್ಲ ರಾಜ್ಯದಿಂದ ಬಿಜೆಪಿ ತೊಲಗಬೇಕು. ಕರ್ನಾಟಕದ ಜನತೆಗೆ ಈಗ ಉತ್ತಮ ಅವಕಾಶವಿದ್ದು, ಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಿಂದ ಬಿಜೆಪಿ ಹಾಗೂ ಆರೆಸ್ಸೆಸ್ನ್ನು ಓಡಿಸಿ ಎಂದು ಗುಜರಾತ್ ರಾಜ್ಯದ ವಡಗಾಂವ್ ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿ ಹೇಳಿದ್ದಾರೆ.
ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮನಿಯಾರ್ ಹಾಲ್ನಲ್ಲಿ ಗುರುವಾರ ನಡೆದ 'ಸಂವಿಧಾನ ಉಳಿವಿಗಾಗಿ ಕರ್ನಾಟಕ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 'ಸಂವಿಧಾನದ ರಕ್ಷಣೆ ಇಂದು ಅಗತ್ಯವಾಗಿದೆ. ಅದನ್ನು ಬದಲಿಸುವುದು ಬಿಜೆಪಿ, ಸಂಘಪರಿವಾರದ ಅಜೆಂಡಾ ಆಗಿದೆ. ಅದು ಸಚಿವ ಅನಂತಕುಮಾರ್ ಹೆಗಡೆ ಬಾಯಿಂದ ಬಂದಿದೆ. ರಾಜ್ಯದ ಚುನಾವಣೆಯಲ್ಲಿ ಸಂವಿಧಾನ ಉಳಿಸಲು ದಿಟ್ಟ ನಿರ್ಧಾರವನ್ನು ಜನ ಕೈಗೊಳ್ಳಬೇಕಾಗಿದೆ' ಎಂದು ಕರೆ ನೀಡಿದರು.
ಕರ್ನಾಟಕ ಚುನಾವಣೆ ನಮಗೆ ಮತ್ತು ಸಂವಿಧಾನದ ಅಸ್ತಿತ್ವದ ಪ್ರಶ್ನೆಯಾಗಿದೆ. ಜನರ ಒಂದು ಮತವೂ ಹಾಳಾಗಬಾರದು. ನಮ್ಮ ವೋಟಿನಿಂದ ಬಿಜೆಪಿಗೆ ಲಾಭವಾಗಬಾರದು. ಅಗತ್ಯವಿದ್ದಾಗ ಅಪ್ಪನನ್ನು ಮಾರುವ ಜನ ಈ ಬಿಜೆಪಿಯವರು. ಬಿಜೆಪಿ ವಿರುದ್ಧ ಮನೆ ಮನೆಗೆ ತೆರಳಿ ತಿಳುವಳಿಕೆ ನೀಡಬೇಕಾಗಿದೆ ಎಂದರು.
ದೇಶದಲ್ಲಿ ದಲಿತರ, ಕೃಷಿಕರ, ಕಾಲೇಜು ವಿದ್ಯಾರ್ಥಿಗಳ ದಮನವಾಗುತ್ತಿದೆ. ಇದರಿಂದ ಯಾರೂ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಕರ್ನಾಟಕ ಚುನಾವಣೆ ಸಂದರ್ಭದಲ್ಲಿ ಎಲ್ಲಾ ಜಾತಿ ಮತ ಧರ್ಮ ರಾಜಕೀಯ ಪಕ್ಷದಿಂದ ಹೊರಬಂದು ಸಂಘ ಪರಿವಾರ, ಬಿಜೆಪಿ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಬೇಕು. ಮೋದಿ, ಶಾ ನೋಟಿನ ಕಂತೆ ತೆಗೆದುಕೊಂಡು ಬರುತ್ತಾರೆ. ಕೋಮುವಾದದ ರಾಜನೀತಿ ಮಾಡುತ್ತಾರೆ. ಗೆಲ್ಲಲು ಯಾವ ಹಂತಕ್ಕೆ ಬೇಕಾದರೂ ಇಳಿಯುತ್ತಾರೆ ಎಂದು ಟೀಕಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಭ್ರಷ್ಟಾಚಾರ ವಿರೋಧ ದಳದ ಅಧ್ಯಕ್ಷ ಎಸ್.ಆರ್.ಹಿರೇಮಠ, ಮಾಜಿ ಸಚಿವೆ ಬಿ. ಟಿ. ಲಲಿತಾ ನಾಯಕ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ ಜಯರಾಮ ಹೆಗಡೆ ವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕೆ.ಎಲ್.ಅಶೋಕ, ನೂರ್ ಶ್ರೀಧರ್, ಸುಬ್ರಾಯ ಮತ್ತಿಹಳ್ಳಿ, ರಾಮಕೃಷ್ಣ ಭಟ್, ಗೌರಿ, ಸಿ.ಎಫ್. ಈರೇಶ ಮುಂತಾದವರು ಇದ್ದರು.
ದೇಶದಲ್ಲಿ ಮೋದಿಯವರು ದಲಿತರಿಗೆ, ಮುಸ್ಲಿಮರಿಗೆ, ಹಿಂದುಳಿದವರಿಗೆ ಉದ್ಯೋಗವನ್ನು ನೀಡುತ್ತಿಲ್ಲ. ಆದರೆ ಅದರ ಬದಲಾಗಿ ಸಂಘ ಪರಿವಾರ, ಎಬಿವಿಪಿಯ ಯುವಕರಿಗಾದರೂ ಅವರು ಘೋಷಿಸಿದ 2 ಕೋಟಿ ಉದ್ಯೋಗ ನೀಡಲಿ. ಹಿಂದೂಗಳನ್ನು ಮೋಸ ಮಾಡುವ ಕೆಲಸ ಸಂಘ ಪರಿವಾರ ಮಾಡುತ್ತಿದೆ. ಘರ್ ವಾಪಸಿ, ಗೋ ರಾಜಕೀಯದಲ್ಲಿ ಇವರೆಲ್ಲ ತಲ್ಲೀನರಾಗಿದ್ದಾರೆ. ಆದ್ದರಿಂದ ಈ ಬಾರಿ ಅವರನ್ನು ಸೋಲಿಸಬೇಕು.
-ಜಿಗ್ನೇಶ್ ಮೇವಾನಿ, ಗುಜರಾತ್ ಶಾಸಕ