ಶಿಕ್ಷಣ ಇಲಾಖೆ ಸತ್ವಯುತಗೊಳಿಸಲು ಸಹಕರಿಸಿ
ಕೋಲಾರ:- ಶಿಕ್ಷಣ ಇಲಾಖೆಯನ್ನು ಸತ್ವಯುತಗೊಳಿಸಲು ಸಹಕಾರ ನೀಡಿ, ನಾವು ಇತರೆ ಇಲಾಖೆಗಳಿಗೆ ಮಾದರಿಯಾಗಿರಬೇಕು ಎಂಬ ಬದ್ದತೆಯಿಂದ ಕೆಲಸ ಮಾಡಿ ಎಂದು ವಿವಿಧ ಸಂಘಟನೆಗಳ ಮುಖಂಡರಿಗೆ ನೂತನ ಡಿಡಿಪಿಐ ಸ್ವಾಮಿ ಕರೆ ನೀಡಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘ ಹಾಗೂ ಮಿತ್ರ ಬಳಗದಿಂದ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನೇನು ಸ್ವಇಚ್ಚೆಯಿಂದ ಡಿಡಿಪಿಐ ಆಗಿ ಹಾಕಿಸಿಕೊಂಡು ಬರಲಿಲ್ಲ, ಸರ್ಕಾರ ನೀಡಿದ ಜವಾಬ್ದಾರಿ ನಿರ್ವಹಿಸಲು ಬಂದಿದ್ದೇನೆ ಎಂದರು.
ಇಲಾಖೆಯ ಸರ್ವಾಂಗೀಣ ಅಭಿವೃದ್ದಿಗೆ ನೀವು ನೀಡುವ ಸಲಹೆ ಸ್ವೀಕರಿಸುತ್ತೇನೆ, ದೇಶದ ಭವಿಷ್ಯವೇ ನಮ್ಮ ಇಲಾಖೆಯ ಕೈಯಲ್ಲಿದೆ ಎಂಬ ಸತ್ಯ ಅರಿತು ನಾವು ಕೆಲಸ ಮಾಡಬೇಕಾಗಿದೆ, ನನಗೆ ನೀಡುತ್ತಿರುವ ಸ್ವಾಗತಕ್ಕೆ ನಾನು ಋಣಿಯಾಗಿದ್ದೇನೆ ಎಂದರು.
ಪ್ರಾಥಮಿಕ,ಪ್ರೌಢ,ಪದವಿ ಪೂರ್ವ ಶಿಕ್ಷಣದ ನಡುವೆ ಬೇಧ ಅಗತ್ಯವಿಲ್ಲ, ನಾವೆಲ್ಲಾ ಸಹೋದರರೇ, ನಮ್ಮ ಇಲಾಖೆಯೂ ಒಂದೇ ಆಗಿದೆ, ನಮ್ಮ ಗುರಿ ಗುಣಮಟ್ಟದ ಶಿಕ್ಷಣ ನೀಡುವುದೇ ಆಗಿದೆ ಎಂದು ತಿಳಿಸಿದರು.
ಆಧುನಿಕತೆ ಬೆಳೆದಂತೆ ಶಿಕ್ಷಣದ ಕಲಿಕಾ ವಿಧಾನವೂ ವಿಕಾಸಗೊಳ್ಳುತ್ತಿದೆ, ಸ್ವರ್ಧಾ ಪೈಪೋಟಿಗೆ ತಕ್ಕಂತೆ ಶಿಕ್ಷಣ ನೀಡಬೇಕಾದಲ್ಲಿ ಶಿಕ್ಷಕರಲ್ಲಿನ ಸಾಮಥ್ರ್ಯವೂ ಹೆಚ್ಚುವುದು ಅನಿವಾರ್ಯ ಎಂದ ಅವರು ಈನಿಟ್ಟಿನಲ್ಲೇ ಪಿಯುಸಿ ಉಪನ್ಯಾಸಕರಿಗೆ ಸರ್ಕಾರ ಬಿಇಡಿ ಶಿಕ್ಷಣ ಪಡೆಯಲು ಸೂಚಿಸಿರುವುದು ಎಂದರು.
ನಾವಿಂದು ಮಕ್ಕಳಿಗೆ ಕೌಶಲ್ಯಭರಿತ ಶಿಕ್ಷಣ ನೀಡುವ ಅಗತ್ಯವಿದೆ, ಈ ಸಂದರ್ಭಗಳಲ್ಲಿ ಇಂದಿನ ಮಕ್ಕಳ ಪ್ರತಿಭೆಗೆ ತಕ್ಕಂತೆ ನಮ್ಮ ಕಲಿಕಾ ವಿಧಾನ ಬದಲಿಸಿಕೊಳ್ಳದಿದ್ದರೆ ನಾವು ಉತ್ತಮ ಶಿಕ್ಷಕರಾಗಲು ಸಾಧ್ಯವಿಲ್ಲ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಪಾರದರ್ಶಕ ಆಡಳಿತ ನನ್ನ ಉದ್ದೇಶವಾಗಿದೆ, ಶಿಕ್ಷಕರ ಸಮಸ್ಯೆಗಳಿದ್ದರೆ ನೇರವಾಗಿ ಬಂದು ತಿಳಿಸಿ ಸರಿಪಡಿಸುವ ಪ್ರಾಮಾಣಿಕ ಪ್ರಯತ್ನ ನನ್ನದು ಎಂದು ತಿಳಿಸಿದರು.
ಜಿಲ್ಲಾ ನೌಕರರ ಸಂಘದ ಖಜಾಂಚಿ ಎಸ್.ಚೌಡಪ್ಪ, ಶಿಕ್ಷಣ ಇಲಾಖೆಯಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ನೌಕರರ ಸಂಘ ಸಂಪೂರ್ಣ ಸಹಕಾರ ನೀಡಲಿದೆ, ನಿಮ್ಮೊಂದಿಗೆ ನಾವು ಇದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿವೈಪಿಸಿ ರಂಗಯ್ಯ, ಇಒ ಮಾಧವರೆಡ್ಡಿ, ಉಪನ್ಯಾಸಕ ಜಿ.ಎಂ.ಗೋಪಿಕೃಷ್ಣನ್, ಇಸಿಒ ರವಣಪ್ಪ, ಬಡ್ತಿ ಜಿಲ್ಲಾಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ರುದ್ರಪ್ಪ, ಡಿ.ವಿ.ರಾಮಚಂದ್ರಪ್ಪ, ಬಡ್ತಿ ಶಿಕ್ಷಕರ ಸಂಘದ ಅಧ್ಯಕ್ಷ ಮುನಿಯಪ್ಪ, ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ಸಿ.ಎಲ್.ಶ್ರೀನಿವಾಸಲು, ಮುನಿರಾಜು, ಶಿವಕುಮಾರ್, ಬ್ಯಾಟಪ್ಪ, ನಾರಾಯಣರೆಡ್ಡಿ, ಕವಿತಾ, ಪದ್ಮಾವತಿ, ಬೈರಾರೆಡ್ಡಿ, ಕೆ.ಚಂದ್ರಯ್ಯ, ಸೈಯದ್ ಮುಜಾಮಿಲ್ ಮತ್ತಿತರರು ಉಪಸ್ಥಿತರಿದ್ದರು.