ಜೆ.ಡಿ.ಎಸ್ ಅಭ್ಯರ್ಥಿಗೆ 20ಸಾವಿರಕ್ಕೂ ಅಧಿಕ ಹಿಂದೂಗಳು ಓಟು ಬೀಳದಿದ್ದರೆ ರಾಜಕೀಯ ನಿವೃತ್ತಿ -ಕುಮಾರ ಸ್ವಾಮಿ
ಭಟ್ಕಳ: ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಏನೆಲ್ಲ ತಿರುವು ಪಡೆದುಕೊಳ್ಳುತ್ತೆ ಎಂಬುದಕ್ಕೆ ಇತ್ತಿಚೆಗೆ ಉ.ಪ. ನಡೆದ ಉಪಚುನಾವಣೆ ಸಾಕ್ಷಿಯಾಗಿದ್ದು ಜಾತ್ಯಾತೀತ ಶಕ್ತಿಗಳನ್ನು ಸೇರಿಸಿ ರಾಷ್ಟ್ರ ರಾಜಕಾರಣಕ್ಕೆ ಹೊಸ ಭಾಷ್ಯವನ್ನು ಬರೆಯುವ ಪ್ರಯತ್ನಕ್ಕೆ ಜೆ.ಡಿ.ಎಸ್. ಕೈಹಾಕಿದ್ದು ಅದರ ಪರಿಣಾಮ ಉ.ಪ್ರ. ಉಪಚುನಾವಣೆಯಲ್ಲಿ ನಾವು ಕಂಡಿದ್ದೇವೆ ಎಂದು ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಹೇಳಿದರು.
ಅವರು ಶನಿವಾರ ಭಟ್ಕಳದಲ್ಲಿ ವಿಕಾಸ ಪರ್ವ ಯಾತ್ರೆಯಲ್ಲ ಭಾಗವಹಿಸಿ ಇಲ್ಲಿನ ಮಜ್ಲಿಸೆ ಇಸ್ಲಾಹ್ –ವ-ತಂಝೀಮ್ ಸಂಸ್ಥೆಯ ಕಾರ್ಯಾಲಯದಲ್ಲಿ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಮುಸ್ಲಿಮ್ ಸರ್ವಜಮಾಅತೆ ನಿಯೋಗದೊಂದಿಗೆ ಮಾತನಾಡಿದರು.
ಕೋಮುವಾದಿಗಳನ್ನು ದೂರವಿಡುವ ಉದ್ದೇಶದಿಂದಲೇ ಮಾಜಿ ಪ್ರಧಾನಿ ದೇವೆಗೌಡರು ಮುಂಬರುವ ಲೋಕಸಭಾ ಚುನಾವಣೆಗಾಗಿ ಯಜನೆಯನ್ನು ರೂಪಿಸಿದ್ದಾರೆ. ಈಗಾಗಲೆ ಆಂದ್ರಪ್ರದೇಶದ ತೆಲಗುದೇಶಂ ಪಕ್ಷ ಎನ್.ಡಿ.ಎ ಮಿತ್ರಪಕ್ಷವನ್ನು ತ್ಯಜಿಸಿ ಹೊರಬಂದಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಬಿಎಸ್ಪಿ, ಎಸ್.ಪಿಯೊಂದಿಗೆ ಕೈಜೋಡಿಸಿದ್ದೇವೆ. ಯಾವುದೇ ಕಾರಣಕ್ಕೂ 113 ಕ್ಷೇತ್ರಗಳಲ್ಲೂ ಗೆಲುವು ಸಾಧಿಸುವುದು ನಮ್ಮ ಗುರಿಯಾಗಿದ್ದು ಭಟ್ಕಳ ವಿಧಾನಸಭಾಕ್ಷೇತ್ರದಲ್ಲಿ ಜೆ.ಡಿ.ಎಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಅವರು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ತಂಝೀಮ್ ಮುಖಂಡ ಸೈಯ್ಯದ್ ಮುಹಿದ್ದೀನ್ ಬರ್ಮಾವರ್, ಕಳೆದ ಚುನಾವಣೆಯಲ್ಲಿ ನಾವು ಜೆ.ಡಿ.ಎಸ್. ಅಭ್ಯರ್ಥಿಯನ್ನು ಬೆಂಬಲಿಸಿದ್ದು ಅತ್ಯಂತ ಕಡಿಮೆ ಅಂತರದಿಂದ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದೇವೆ. ಇದಕ್ಕೆ ರಾಜ್ಯದ ಜೆ.ಡಿ.ಎಸ್ ಪಕ್ಷವೇ ಕಾರಣವಾಗಿದ್ದ ತಾವು ಬೇಕೆಂತಲೆ ಮುಸ್ಲಿಮ್ ಅಭ್ಯರ್ಥಿಯನ್ನು ಸೋಲಿಸುವ ಉದ್ದೇಶದೊಂದಿಗೆ ಯಾವುದೇ ಸಹಾಯ ಸಹಕಾರ ಮಾಡದೇ ಹಿಂದೂಗಳ ಒಂದು ಮತವು ಬೀಳದಂತೆ ನೋಡಿಕೊಳ್ಳಲಾಯಿತು. ಒಮ್ಮೆಯೂ ಭಟ್ಕಳ ವಿಧಾನಸಭಾ ಕ್ಷೇತ್ರದ ಕಡೆ ತಾವು ಬಂದಿಲ್ಲ. ಅಲ್ಲದೆ ನಿಮ್ಮ ಪಕ್ಷ ಮುಂದಿನ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿಯೊಂದಿಗೆ ಕೈಜೋಡಿಸಿ ಅಧಿಕಾರ ಪಡೆಯುತ್ತೀರೆಂಬ ಆರೋಪಗಳು ಕೇಳಿ ಬರುತ್ತಿವೆ ಇಂತಹ ಸನ್ನಿವೇಶದಲ್ಲಿ ನಾವು ನಿಮ್ಮನ್ನು ನಂಬುವುದಾದರೂ ಹೇಗೆ? ನಿಮ್ಮ ಅಭ್ಯರ್ಥಿಯ ಕಡೆ ಮುಸ್ಲಿಮರು ಒಲವು ತೋರಿಸುತ್ತಿಲ್ಲ ಎಂದು ನೇರವಾಗಿ ಹಾಗೂ ಮುಕ್ತವಾಗಿ ಪ್ರಶ್ನಿಸಿದರು.
ಇದಕ್ಕೆ ಉತ್ತರವಾಗಿ ಕುಮಾರ್ ಸ್ವಾಮಿ, ಕಳೆದ ಚುನಾವಣೆಯ ಸ್ಥಿತಿಗತಿಗಳು ಬೇರೆಯಾಗಿದ್ದು ಕೆಲವೊಂದು ತಪ್ಪುಗಳು ಘಟಿಸಿ ಹೋಗಿವೆ. ಅದನ್ನು ಮತ್ತೀಗ ಮರುಕಳಿಸದಂತೆ ನೋಡಿಕೊಳ್ಳುತ್ತೇನೆ. ನಾನು ಕೇವಲ 40-50 ಕ್ಷೇತ್ರಗಳನ್ನು ಗೆಲ್ಲುವುದಕ್ಕಾಗಿ ಚುನಾವಣೆಯ ಎದುರಿಸುತ್ತಿಲ್ಲ. ಅತ್ಯಂತ ಸರಳ ಬಹುವiತ ಪಡೆಯುವುದು ನನ್ನ ಗರಿಷ್ಠ ಉದ್ದೇಶವಾಗಿದ್ದು ಇದಕ್ಕಾಗಿ ದಿನ 20 ಗಂಟೆ ಕೆಲಸ ಮಾಡುತ್ತಿದ್ದೇನೆ. ಈ ಬಾರಿ ಜೆ.ಡಿ.ಎಸ್. ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆಗಾರಿಕೆ ನನ್ನದು. ಕನಿಷ್ಠ 20ಸಾವಿರ ಹಿಂದೂಗಳ ಮತಗಳನ್ನು ಜೆ.ಡಿ.ಎಸ್.ಅಭ್ಯರ್ಥಿ ಇನಾಯತುಲ್ಲಾ ಶಾಬಂದ್ರಿಯವರಿಗೆ ಬರುವಂತೆ ನೋಡಿಕೊಳ್ಳುತ್ತೇನೆ. ಒಂದು ವೇಳೆ ಹೀಗೆ ಆಗಿಲ್ಲ ಎಂದರೆ ನಾನು ರಾಜಕೀಯದಿಂದ ನಿವೃತ್ತನಾಗುತ್ತೇನೆ ಎಂದು ಘೋಷಿಸಿದರು. ಇಲ್ಲಿನ ನಾಮಧಾರಿ ಸಮಾಜ, ಒಕ್ಕಲಿಗರು, ಗೊಂಡರು ಇತರ ಹಿಂದುಳಿದ ಸಮಾಜದವರು ಈ ಬಾರಿ ಜೆ.ಡಿ.ಎಸ್ ಪಕ್ಷವನ್ನು ಗೆಲ್ಲಿಸುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾನು ಚುನಾವಣೆಯ ಸಂದರ್ಭದಲ್ಲಿ 2-3 ಬಾರಿ ಭಟ್ಕಳ ಕ್ಷೇತ್ರಕ್ಕೆ ಬರುತ್ತೇನೆ. ಇದು ನನ್ನ ಚುನಾವಣೆ ಎಂದು ತಿಳಿದು ಇನಾಯತುಲ್ಲಾರನ್ನು ಗೆಲ್ಲಿಸುತ್ತೇನೆ. ಅಭ್ಯರ್ಥಿಯ ಕುರಿತಂತೆ ಮಾತನಾಡಿದ ಅವರು, ಇನಾಯತುಲ್ಲಾ ರಿಗೆ ಶಿಕ್ಷಣ ಇರದೇ ಇರಬಹುದು ಆದರೆ ಅವರು ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಮನಸ್ಸಿದೆ. ಅವರು ಕ್ರೂರಿಯಲ್ಲ. ನೇರವಾಗಿ ನುಡಿಯಬಲ್ಲ ಮಕ್ಕಳ ಮನಸ್ಸಿನ ಸ್ವಭಾವದವರು. ಇವರು ಅಭ್ಯರ್ಥಿಯಾಗುವುದು ಬೇಡ ಎಂದಾದರೆ ನಿಮಗೆ ಸರಿಯನಿಸಿದ ಅಭ್ಯರ್ಥಿಯನ್ನು ತೋರಿಸಿ ಅವರಿಗೆ ಟಿಕೇಟ್ ನೀಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕೆಲ ಮುಸ್ಲಿಮ ಮುಖಂಡರೂ ಸಹ ತಮ್ಮ ಜೆ.ಡಿ.ಎಸ್ ಪಕ್ಷದ ಕುರಿತಂತೆ ಇರುವ ಆತಂಕವನ್ನು ತೋಡಿಕೊಂಡರು. ಇದಕ್ಕೆಲ್ಲ ಸಮರ್ಪಕವಾಗಿ ಉತ್ತರಿಸಿದ ಮಾಜಿ ಮುಖ್ಯಮಂತ್ರಿ, ಹಳೆಯದನ್ನು ಕೆದಕದೆ ಸಧ್ಯದ ಪರಿಸ್ಥಿತಿಯಲ್ಲಿ ನಾವೇನು ಮಾಡಬೇಕು ಎಂಬುದರ ಕುರಿತು ಸೂಕ್ತ ನಿರ್ಣಯಗಳನ್ನು ಕೈಗೊಳ್ಳಿ ನನ್ನ ಮೇಲೆ ಒಂದು ಬಾರಿ ನಂಬಿಕೆಯನ್ನು ಇಡಿ ತಪ್ಪುಗಳು ಮರುಕಳಿಸದಂತೆ ನಾನು ನೋಡಿಕೊಳ್ಳುತ್ತೇನೆ. ಒಟ್ಟಿನಲ್ಲಿ ನಮ್ಮ ಉದ್ದೇಶ ಕೋಮುವಾದಿ ಬಿಜೆಪಿಯನ್ನು ರಾಜ್ಯ ಹಾಗೂ ರಾಷ್ಟ್ರದಲ್ಲಿ ಅಧಿಕಾರಕ್ಕೆ ಬರದಂತೆ ತಡೆಯುವುದಾಗಿದೆ. ನನ್ನ ಹಾಗೂ ಅಪ್ಪಾಜಿ ದೇವೆಗೌಡರ ಉಸಿರಿರುವ ತನಕ ಇದು ಜ್ಯಾರಿಯಲ್ಲಿರುತ್ತೆ. ಇನಾಯತುಲ್ಲಾ ಶಾಬಂದ್ರಿಗೆ ಮತ್ತೊಂದು ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡರು.
ಸಭೆಯ ಅಧ್ಯಕ್ಷತೆಯನ್ನು ತಂಝೀಮ್ ಉಪಾಧ್ಯಾಕ್ಷ ಜಾಫರ್ ಮೊಹತೆಶಮ್ ವಹಿಸಿದ್ದರು.
ಈ ಸಂದರ್ಭದಲ್ಲಿ ಶಾಸಕ ಮಧು ಬಂಗಾರಪ್ಪ, ವಿಧಾನಸಭಾ ಉಪ ಸಭಾಪತಿ ಮರಿ ತಿಪ್ಪೆಗೌಡ, ಜೆ.ಡಿ.ಎಸ್. ರಾಜ್ಯಸಭಾ ಅಭ್ಯರ್ಥಿ ಫಾರೂಕ್ ಬಾವಾ, ಜೆ.ಡಿ.ಎಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸೈಯ್ಯದ್ ಮುಹಿದ್ದೀನ್ ಅಲ್ತಾಫ್, ಉ.ಕ.ಜಿಲ್ಲಾಧ್ಯಕ್ಷ ಬಿ.ಆರ್.ನಾಯ್ಕ, ಭಟ್ಕಳ ಜೆ.ಡಿ.ಎಸ್ ಅಭ್ಯರ್ಥಿ ಇನಾಯತುಲ್ಲಾ ಶಾಬಂದ್ರಿ, ತಂಝೀಮ್ ಪ್ರ.ಕಾ. ಮುಹಿದ್ದೀನ್ ಅಲ್ತಾಫ್ ಖರೂರಿ ಸೇರಿದಂತೆ ಕ್ಷೇತ್ರದ ವಿವಿಧ ಜಮಾಅತ್ ಪ್ರತಿನಿಧಿಗಳು, ಮುಖಂಡರು ಉಪಸ್ಥಿತರಿದ್ದರು.