ಭಟ್ಕಳ: ಭಟ್ಕಳದಲ್ಲಿ ಪರಿಸರ ಸ್ನೇಹಿ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ನೊಟೀಸ್ ಜಾರಿ ಮಾಡುತ್ತಿದ್ದಂತೆಯೇ ಸ್ಥಳೀಯವಾಗಿ ಆಕಾಶಕ್ಕೆ ಹಾರುವ ಕನಸು ಚಿಗುರೊಡೆದಿದೆ.
ವ್ಯಾಪಾರ ವ್ಯವಹಾರಕ್ಕೆ ಸಂಬಂಧಿಸಿದಂತೆ ಮುಂಬಯಿ, ದೆಹಲಿ, ಜೊತೆಗೆ ಮಂಗಳೂರು ಮಾತ್ರವಲ್ಲ, ಕೇರಳದ ಕೊಚ್ಚಿನ್ನೊಂದಿಗೂ ಭಟ್ಕಳದ ಸಂಪರ್ಕ ದಿನದಿಂದ ದಿನಕ್ಕೆ ಗಾಢವಾಗುತ್ತಲೇ ಇದೆ. ಭಟ್ಕಳದ 10 ಸಾವಿರಕ್ಕೂ ಅಧಿಕ ಜನರು ದುಬೈ, ಸೌದಿಅರೇಬಿಯಾ ಸೇರಿದಂತೆ ವಿವಿಧ ದೇಶಗಳಲ್ಲಿ ನೆಲೆಸಿದ್ದು, ಪರ ದೇಶಗಳೊಂದಿಗೆ ಭಟ್ಕಳದ ಸಂಬಂಧಕ್ಕೆ ಸಾಕ್ಷಿಯಾಗಿದೆ. ಜಿಲ್ಲೆಯಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ಭಟ್ಕಳದಲ್ಲಿ ಸಂಚಾರ ವ್ಯವಸ್ಥೆ ಇನ್ನೂ ತಳಮಟ್ಟದಲ್ಲಿಯೇ ಇದೆ. ಕೊಂಕಣ ರೈಲು ಭಟ್ಕಳದ ಮೂಲಕವೇ ಹಾದು ಹೋಗಿದ್ದರೂ ರಾಜಧಾನಿ ಬೆಂಗಳೂರನ್ನು ತಲುಪಲು ಬಸ್ಸುಗಳೇ ಸೂಕ್ತ ಎನ್ನುವ ಅಭಿಪ್ರಾಯ ಇದೆ. ಇಂತಹ ಪರಿಸ್ಥಿತಿಯಲ್ಲಿ ಕಾರವಾರ ನಿವಾಸಿ ಸಂಜಯ ರೇವಣ್ಕರ ಪರ ನ್ಯಾಯವಾದಿ ಆರ್.ಜಿ.ಕೊಲ್ಲೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸ್ವೀಕರಿಸಿ, ಹೈಕೋರ್ಟ ಸರಕಾರಕ್ಕೆ ನೀಡಿರುವ ನೋಟೀಸು ಭಟ್ಕಳಗಿರಷ್ಟೇ ಅಲ್ಲ, ಜಿಲ್ಲೆಯ ಜನರಲ್ಲಿ ಆಶಾಭಾವನೆಯನ್ನು ಹೆಚ್ಚಿಸಿದೆ.
ಭಟ್ಕಳದಲ್ಲಿ ವಿಮಾನ ನಿಲ್ದಾಣ ಆಗಲೇ ಬೇಕಾಗಿದೆ. ರೇಲ್ವೇ ಸೆಕೆಂಡ್ ಕ್ಲಾಸ್ ಎಸಿ ದರಕ್ಕಿಂತ ವಿಮಾನ ಯಾನದ ದರ ಕಡಿಮೆ ಇರುವುದರಿಂದ ಪ್ರಯಾಣಿಕರಿಗೆ ದುಬಾರಿ ಎನ್ನಿಸದು. ಅಲ್ಲದೇ ವಿಮಾನ ನಿಲ್ದಾಣ ನಿರ್ಮಾಣವಾಗುವುದರಿಂದ ಭಟ್ಕಳದ ಸಾವಿರಾರು ಜನರಿಗೆ ಉದ್ಯೋಗ ದೊರೆಯಲಿದೆ. ಹುಬ್ಬಳ್ಳಿಯಲ್ಲಿ 2 ವಿಮಾನ ಯಾನದಿಂದ ಆರಂಭವಾಗಿ ಇದೀಗ ದಿನಕ್ಕೆ 36 ವಿಮಾನಗಳು ಹಾರಾಟ ನಡೆಸುತ್ತಿವೆ. ಹುಬ್ಬಳ್ಳಿ ಅಭಿವೃದ್ಧಿಯಾಗುತ್ತಿರುವುದಕ್ಕೆ ಇದು ಪ್ರಮುಖ ಕಾರಣವಾಗಿದೆ ಎನ್ನುವುದನ್ನು ಗಮನಿಸಬೇಕು. |
ಏನಿದು ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ: ಕೇಂದ್ರ ಸರಕಾರದ ಈ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ಯೋಜನೆಯನ್ನು 2008ರಲ್ಲಿ ಅನುಷ್ಠಾನಕ್ಕೆ ಬಂದಿದೆ. ಸ್ಥಳೀಯವಾಗಿ ಲಭ್ಯ ಇರುವ ಮೂಲಭೂತ ಸೌಕರ್ಯವನ್ನು ಬಳಸಿಕೊಂಡು ಶಾಶ್ವತವಲ್ಲದ ಕಟ್ಟಡ ಕಾಮಗಾರಿಯ ಮೂಲಕ ವಿಮಾನ ನಿಲ್ದಾಣವನ್ನು ನಿರ್ವಹಿಸಲಾಗುತ್ತದೆ. ವಿಶೇಷ ಎಂದರೆ ಈ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣವನ್ನು ಈಗ ಇರುವ ನಾಗರಿಕ ವಿಮಾನ ನಿಲ್ದಾಣದಿಂದ 150ಕಿ.ಮೀ. ಅಂತರದಲ್ಲಿ ನಿರ್ಮಿಸಲಾಗುತ್ತದೆ. ಹೈದರಾಬಾದ್ನ ಹೊರವಲಯದ ಶಮ್ಶಾಬಾದ್ ವಿಮಾನ ನಿಲ್ದಾಣ ಮೊಟ್ಟ ಮೊದಲ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣವಾಗಿದೆ. ಕೇಂದ್ರ ಸರಕಾರ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಜನರಿಗೂ ವಿಮಾನ ಯಾನ ಸೇವೆ ಒದಗಿಸಲು `ಉಡಾನ್' ಹೆಸರಿನ ಯೋಜನೆಯನ್ನು ಆರಂಭಿಸಿದ್ದು, ಭಟ್ಕಳದಲ್ಲಿ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣಕ್ಕೆ ಉಡಾನ್ ನೆರವು ಪಡೆಯುವುದು ಕಷ್ಟಕರವಲ್ಲ.
ಎಷ್ಟು ಜಾಗ ಬೇಕು?: ಸುಮಾರು 90718ಕೆಜಿ. ತೂಕದ ಸಾಮಥ್ರ್ಯವನ್ನು ಹೊಂದಿರುವ ವಿಮಾನಕ್ಕೆ ನಿಲ್ದಾಣವನ್ನು ಒದಗಿಸಲು 6000 ಅಡಿ (1829ಮೀ) ಜಾಗ ಬೇಕಾಗುತ್ತದೆ. ವಿಶಾಲ ದೇಹವನ್ನು ಹೊಂದಿರುವ ದೊಡ್ಡ ವಿಮಾನಕ್ಕೆ ಕನಿಷ್ಠ ಎಂದರೂ 8000 ಅಡಿ (2438ಮೀ.) ಭೂಮಿಯ ಅಗತ್ಯ ಇರುತ್ತದೆ. ಒಟ್ಟಾರೆಯ ಲೆಕ್ಕವನ್ನು ತೆಗೆದುಕೊಂಡರೆ ಸಮುದ್ರ ಮಟ್ಟದಲ್ಲಿ ಯಾವುದೇ ವಿಮಾನಕ್ಕೆ ಸರಿಯಾದ ನಿಲ್ದಾಣವನ್ನು ಕಟ್ಟಿಕೊಡಲು 10000 ಅಡಿ (3048ಮೀ) ನಿವೇಶನವನ್ನು ಒದಗಿಸಬೇಕಾಗುತ್ತದೆ.
ಭಟ್ಕಳದಲ್ಲಿ ಪ್ರಸ್ತಾವನೆ ಏಕೆ: ಜಿಲ್ಲೆ ಅತ್ಯುತ್ತಮ ಪ್ರವಾಸಿ ತಾಣವಾಗಿದ್ದು, ದೇಶ ವಿದೇಶಗಳಿಂದ ಜನರನ್ನು ಆಕರ್ಷಿಸುತ್ತಲೇ ಇದೆ. ಗೋಕರ್ಣ, ಮುರುಡೇಶ್ವರ, ಇಡಗುಂಜಿ, ಪಕ್ಕದ ಕೊಲ್ಲೂರಿಗೆ ನಿತ್ಯವೂ ಸುಲಭ ಸಂಪರ್ಕಕ್ಕೆ ಯತ್ನ ನಡೆದುಕೊಂಡೇ ಇದೆ. ಇದೀಗ ನೇತ್ರಾಣಿ ಸ್ಕೂಬಾ ಡೈವಿಂಗ್ ಜಗತ್ತಿನಲ್ಲಿಯೇ ವಿಶಿಷ್ಟ ಹಾಗೂ ಅದ್ಭುತ ಜಲಕ್ರೀಡಾ ನೆಲೆಯಾಗಿ ಗಮನ ಸೆಳೆದಿದೆ. ಇಂತಹ ಸನ್ನಿವೇಶದಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಬೇಕು ಎನ್ನುವ ಕೂಗು ಸಹಜವಾಗಿ ಕೇಳಿ ಬಂದಿದೆ. ಆದರೆ ನೌಕಾ ನೆಲೆಗೆ ನೆಲಕೊಟ್ಟ ಅಂಕೋಲಾದ ಆಲಗೇರಿ ಜನರು ವಿಮಾನ ನಿಲ್ದಾಣಕ್ಕೂ ಜಾಗ ಬೇಕು ಎಂದಾಗ ಸಹಜವಾಗಿ ಕುಪಿತರಾದರು. ನಂತರ ಕುಮಟಾದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ನಿರ್ಮಾಣಕ್ಕೆ ರಾಜ್ಯ ಸರಕಾರ ಪ್ರಸ್ತಾವನೆಯನ್ನು ಕೈಗೆತ್ತಿಕೊಂಡಿತು. ಕುಮಟಾ ಮೂರೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು 800 ಎಕರೆ ಜಾಗವನ್ನು ಗೊತ್ತುಪಡಿಸಲಾಯಿತು. ಕುಮಟಾದಲ್ಲಿ ವಿಮಾನ ನಿಲ್ದಾಣವಾಗಲಿದೆ ಎನ್ನುವುದನ್ನು ನಂಬಿಕೊಂಡು ಹೊಟೆಲ್ಗಳನ್ನು ಅಭಿವೃದ್ಧಿಪಡಿಸುವ ಕಾರ್ಯವೂ ವೇಗವನ್ನು ಪಡೆದುಕೊಂಡಿತ್ತು. ಅಲ್ಲಿನ ಜನರ ದೌರ್ಭಾಗ್ಯವೋ, ಸೌಭಾಗ್ಯವೋ ಆ ಜಾಗದಲ್ಲಿ ಹಲವಾರು ಅತಿಕ್ರಮಣದಾರರು ಬದುಕು ಕಟ್ಟಿಕೊಂಡಿರುವುದು ಗಮನಕ್ಕೆ ಬಂತು. ಸಾಲದೆಂಬಂತೆ ಅದೇ ಭೂಮಿ ಮೀಸಲು ಅರಣ್ಯ ಪ್ರದೇಶವನ್ನೂ ಒಳಗೊಂಡ ಕಾರಣ ಕ್ಲಿಯರೆನ್ಸ್ ಸುಲಭವಲ್ಲ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಕುಮಟಾ ವಿಮಾನ ನಿಲ್ದಾಣ ಪ್ರಸ್ತಾವನೆಯೂ ನೆನೆಗುದಿಗೆ ಬಿದ್ದಿತು. ಇಲ್ಲಿಯೇ ಪಕ್ಕದ ಬೈಂದೂರಿನಲ್ಲಿಯೂ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಯತ್ನಿಸಲಾಯಿತು. ಆದರೆ ಅಲ್ಲಿ ಕೈಕೊಟ್ಟ ಮಣ್ಣಿನ ಪರೀಕ್ಷೆ ಅಲ್ಲಿನ ಜನರ ಆಸೆಗೆ ತಣ್ಣೀರೆರಚುವಂತೆ ಮಾಡಿತು.
ಭಟ್ಕಳದಲ್ಲಿ ಎಲ್ಲಿದೆ ಜಾಗ?: ವಿಮಾನ ನಿಲ್ದಾಣದ ಕನಸನ್ನು ನನಸಾಗಿಸಲು ಎಲ್ಲಿಂದ ಭೂಮಿ ಒದಗಿಸುವುದು ಎನ್ನುವುದು ಸದ್ಯದ ಪ್ರಶ್ನೆಯಾಗಿದೆ. ಇಲ್ಲಿನ ಹಲವಾರು ಉದ್ಯಮಿಗಳು ಭಟ್ಕಳದ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಕ್ಕೆ ಇಲ್ಲಿನ ಮುಂಡಳ್ಳಿಯ ಗುಡ್ಡದ (ಮುತ್ತನಕಿ ಮೈದಾನ) ವಿಶಾಲ ಪ್ರದೇಶವೇ ಸೂಕ್ತ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಮುಂಡಳ್ಳಿ ಗುಡ್ಡದ ಮೇಲೆ ಜನ ವಸತಿ ಇಲ್ಲದಿರುವುದರಿಂದ ಜನರಿಗೆ ಅಂತಹ ಸಮಸ್ಯೆ ಎದುರಾಗದು ಎನ್ನುವುದು ಅವರ ಅಭಿಮತವಾಗಿದೆ. ವಿಶೇಷ ಎಂದರೆ ಇದೇ ಜಾಗವನ್ನು ಗುರುತಿಸಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆದಿದೆ.