ಭಟ್ಕಳ: ತಾಲೂಕಿನ ಶಿರಾಲಿ ಪಂಚಾಯತ್ ವ್ಯಾಪ್ತಿಯ ಚಿತ್ರಾಪುರ ರೈಲು ಹಳಿಯ ಮೇಲೆ ಯುವತಿಯೊಬ್ಬರ ಶವವೊಂದು ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಆತ್ಮಹತ್ಯೆಗೆ ಶರಣಾದ ಯುವತಿಯನ್ನು ಚಿತ್ರಾಪುರ ನಿವಾಸಿ ಶೋಭಾ ಮಹದೇವ ನಾಯ್ಕ(24) ಎಂದು ಗುರುತಿಸಲಾಗಿದೆ.
ಮಂಗಳವಾರ ರಾತ್ರಿ 8ಗಂಟೆ ಸುಮಾರು ಮನೆಯಿಂದ ಕಾಣೆಯಾಗಿರುವ ಈಕೆ ಮನೆಯವರು ಸಂಬಂಧಿಕರಲ್ಲಿ ಹಾಗೂ ಆಕೆಯ ಸ್ನೇಹಿತೆಯರಲ್ಲಿ ವಿಚಾರಿಸಿದ್ದು ಅವರಾರ ಬಳಿಯು ಯುವತಿಯ ಕುರಿತು ಮಾಹಿತಿ ಲಭ್ಯವಾಗಲಿಲ್ಲ ಎನ್ನಲಾಗಿದೆ.
ತನ್ನ ಮನೆಯ ಬಳಿಯಿಂದ ಹಾದು ಹೋಗುವ ಕೊಂಕಣ ರೈಲು ಹಳಿಯಲ್ಲಿ ಯುವತಿಯು ರಾತ್ರಿ 1 ಗಂಟೆ ಸುಮಾರು ದೇಹಲಿಯಿಂದ ಕೇರಳಕ್ಕೆ ಹೋಗುವ ಮಂಗಳ ಎಕ್ಸ್ಪ್ರೆಸ್ ರೈಲಿನಡಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ನಂತರ ತಿಳಿದುಬಂದಿದೆ.
ಮೃತ ಯುವತಿ ಕೋಟೆಬಾಗಿಲ ಖಾಸಗಿ ಪ್ರೌಢಶಾಲೆಯೊಂದರಲ್ಲಿ ಕಂಪ್ಯೂಟರ್ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದು ಇತ್ತಿಚೆಗಷ್ಟೆ ಇವರ ತಾಯಿ ನಿಧನರಾಗಿದ್ದು ತಂದೆ ಹಾಗೂ ಸಹೋದರನೊಂದಿಗೆ ಮನೆಯಲ್ಲಿ ವಾಸಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.