ಗಂಗೊಳ್ಳಿ: ಮೀನುಗಾರಿಕಾ ಬೋಟೊದು ರಿಪೇರಿಗೆ ತರುತ್ತಿರುವ ವೇಳೆ ಮುಳುಗಿದ ಘಟನೆ ಗಂಗೊಳ್ಳಿ ಅಳಿವೆ ಸಮೀಪ ನಡೆದಿದೆ.
ವಡಭಾಂಡೇಶ್ವರ ನಿವಾಸಿ ಗೋಪಾಲ ಸುವರ್ಣ ಮಾಲೀಕತ್ವದ ಮಾಲ್ತಿದೇವಿ ಬೋಟ್ ಅವಘಡಕ್ಕೆ ಈಡಾದ ಬೋಟ್ ಆಗಿದೆ. ಬೋಟಿನಲ್ಲಿದ್ದ ಶಂಕರ ಕುಂದರ್, ಸುರೇಶ ಕುಂದರ್, ಶಂಕರ ಪೂಜಾರಿ, ಯೋಗೇಂದ್ರ, ಫರೀದ್ ಅಬ್ದುಲ್ ಘನಿ ಶೇಖ್ ಎಂಬುವವರನ್ನ ರಕ್ಷಣೆ ಮಾಡಲಾಗಿದೆ. ರಕ್ಷಣೆಗೊಳಗಾದವರು ಸಾಸ್ತಾನ ಕೋಡಿ ಕನ್ಯಾನದ ನಿವಾಸಿಗಳಾಗಿದ್ದಾರೆ.
ಮೇ 16ರಂದು ರಾತ್ರಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದರು. ಮೇ 17ರಂದು ಬೆಳಗ್ಗೆ 5ಕ್ಕೆ ಭಟ್ಕಳ ಸಮೀಪ ಮತ್ತೊಂದು ಬೋಟ್ ಡಿಕ್ಕಿ ಹೊಡೆದ ಪರಿಣಾಮ ಬೋಟ್ ಅವಘಡಕ್ಕೆ ಸಿಲುಕಿದೆಯೆನ್ನಲಾಗಿದೆ. ಬೋಟ್ನ ಅಡಿಭಾಗದಲ್ಲಿ ನೀರು ಬಂದಿದ್ದರಿಂದ ಈ ಘಟನೆ ನಡೆದಿದೆ. ಮತ್ತೊಂದು ಬೋಟ್ ಸಹಾಯದಿಂದ ಮೀನುಗಾರರನ್ನ ರಕ್ಷಿಸಲಾಗಿದೆ. ನಂತರ ಬೋಟನ್ನ ಗಂಗೊಳ್ಳಿ ಬಂದರಿಗೆ ತರುವಾಗ ಅಳಿವೆಯಿಂದ ಸುಮಾರು 10 ಮಾರು ದೂರದಲ್ಲಿ ಬೋಟ್ ನೀರಿನಲ್ಲಿ ಮುಳುಗಿದೆ.
ಘಟನೆಯಲ್ಲಿ ಬೋಟ್ನಲ್ಲಿದ್ದ ಟ್ರಾಲ್ ಬಲೆ, ಎರಡೂವರೆ ಸಾವಿರ ಲೀ. ಡೀಸೆಲ್, ಇಂಜಿನ್, ಇನ್ನಿತರ ಸಲಕರಣೆಗಳು ಸೇರಿ ಲಕ್ಷಾಂತರ ರೂ ಮೌಲ್ಯದ ವಸ್ತುಗಳು ಹಾನಿಯಾಗಿವೆ. ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.