ಆರೆಸಸ್ ಜೊತೆ ಸಭೆ ನಡೆಸಿದ ಜಮಾಅತೆ ಇಸ್ಲಾಮ ಸಂಘಟನೆಯ ಮುಖಂಡರು: ವ್ಯಾಪಕ ಟೀಕೆ, ಸಭೆಯ ಮಾಹಿತಿಗಳನ್ನು ಬಹಿರಂಗಪಡಿಸಲು ಪಿಣರಾಯಿ ಒತ್ತಾಯ
ಹೊಸದಿಲ್ಲಿ: ಜನವರಿ 14ರಂದು ಬಲಪಂಥೀಯ ಆರೆಸ್ಸೆಸ್ ಸಂಘಟನೆಯ ಮುಖ್ಯಸ್ಥರೊಂದಿಗೆ ಮುಸ್ಲಿಮ್ ಸಂಘಟನೆ ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ಉನ್ನತ ನಾಯಕರು ಮಾತುಕತೆ ನಡೆಸಿರುವ ಕುರಿತು ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ, ಈ ಸಭೆಯಲ್ಲಿನ ಮಾಹಿತಿಗಳನ್ನು ಬಹಿರಂಗಪಡಿಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಒತ್ತಾಯಿಸಿದ್ದಾರೆ.
ಫೇಸ್ಬುಕ್ ಪೋಸ್ಟ್ನಲ್ಲಿ ಈ ಸಭೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ ಪಿಣರಾಯಿ ವಿಜಯನ್, ಸಂಘಪರಿವಾರದೊಂದಿಗಿನ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಮಾತುಕತೆಯ ಅಗತ್ಯವಿದೆ ಎಂಬ ಜಮಾಅತೆ ಇಸ್ಲಾಮಿ ಸಂಘಟನೆಯ ವಾದವು ಅದರ ಬೂಟಾಟಿಕೆಯನ್ನು ಬಹಿರಂಗಪಡಿಸುತ್ತದೆ ಎಂದು ಹೇಳಿದರು.
'ದೇಶದ ಆಡಳಿತವನ್ನು ನಿಯಂತ್ರಿಸುವ ಆರೆಸ್ಸೆಸ್ನ ಮುಂದೆ ಭಾರತೀಯ ಅಲ್ಪ ಸಂಖ್ಯಾತರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳನ್ನು ಪ್ರಸ್ತುತಪಡಿಸಲು ಚರ್ಚೆ ನಡೆಸಲಾಗಿದೆ ಎಂದು ವಾದಿಸುವುದು ವಿಚಿತ್ರವಾಗಿದೆ? ಎಲ್ಲ ಅಲ್ಪ ಸಂಖ್ಯಾತರ ಪರವಾಗಿ ಮಾತನಾಡುವ ಹಕ್ಕನ್ನು ಜಮಾಅತೆ ಇಸ್ಲಾಮಿಗೆ ನೀಡಿದವರು ಯಾರು? ಚರ್ಚೆಯ ವಿಷಯ ಏನೇ ಇರಲಿ, ಅದು ಅಲ್ಪ ಸಂಖ್ಯಾತರಿಗೆ ಸಹಾಯ ಮಾಡಲಂತೂ ಅಲ್ಲ, ಅಲ್ಪ ಸಂಖ್ಯಾತರ ರಕ್ಷಣೆ ಎಂದರೆ ಜಾತ್ಯತೀತತೆಯ ರಕ್ಷಣೆ ಎಂದು ಹೇಳಿದ್ದಾರೆ.
ಸಮಸ್ತ ಕೇರಳ ಜಮಿಯ್ಯತುಲ್ ಉಲಮಾದ ಮುಶಾವರ ಸದಸ್ಯ ಉಮರ್ ಫೈಝಿ, ಜಮಾಅತೆ ಇಸ್ಲಾಮಿ ಹಿಂದ್ ಆರೆಸ್ಸೆಸ್ಗೆ ಭಯಪಡುತ್ತಿದೆ ಎಂದು ಹೇಳಿದ್ದಾಗಿ thehindu.com ವರದಿ ಮಾಡಿದೆ. ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ನೇತೃತ್ವದ ಕೇರಳ ಮುಸ್ಲಿಮ್ ಜಮಾಅತ್, ಆರೆಸ್ಸೆಸ್ ಜೊತೆ ಸೌಹಾರ್ದ ಚರ್ಚೆ ನಡೆಸುವ ಮೂಲಕ ಜಮಾಅತೆ ಇಸ್ಲಾಮಿ ಹಿಂದ್ ಐತಿಹಾಸಿಕ ಪ್ರಮಾದ ಎಸಗಿದೆ ಎಂದು ಹೇಳಿದ್ದಾಗಿ ವರದಿ ಉಲ್ಲೇಖಿಸಿದೆ.
ಮುಸ್ಲಿಮ್ ಜಮಾತ್ ಪ್ರಕಾರ, ಆರೆಸ್ಸೆಸ್ ಭಾರತ ಮತ್ತು ಭಾರತೀಯ ಜಾತ್ಯತೀತ ಮೌಲ್ಯಗಳ ಶತ್ರುವಾಗಿದೆ ಮತ್ತು ಅಂತಹ ಸಂಘಟನೆಯೊಂದಿಗಿನ ಯಾವುದೇ ಮಾತುಕತೆಯು ಶತ್ರುವನ್ನು ಅಪ್ಪಿಕೊಂಡಂತೆ ಆಗುತ್ತದೆ. ಜಮಾಅತೆ ಇಸ್ಲಾಮಿ ಸಂಘಟನೆಯು ಆರೆಸ್ಸೆಸ್ಗೆ ಬಿಳಿ ಬಣ್ಣ ಬಳಿಯಲು ಮುಂದಾಗಿದೆ ಎಂದು ತಿಳಿಸಿದೆ.
ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ ಮುಖಂಡರಾದ ಪಿ.ಕೆ. ಕುನಾಲಿಕುಟ್ಟಿ ಮತ್ತು ಎಂ.ಕೆ.ಮುನೀರ್ thehindu.com ನೊಂದಿಗೆ ಮಾತನಾಡಿ, ಆರೆಸ್ಸೆಸ್ ನೊಂದಿಗೆ ಸಂವಾದಕ್ಕೆ ತೆರಳುವಂತಹ ವಿಶೇಷ ಪರಿಸ್ಥಿತಿ ಏನೂ ಇಲ್ಲಿ ಉಂಟಾಗಿಲ್ಲ ಎಂದು ಹೇಳಿದ್ದಾರೆ. ಕೇರಳ ನದ್ದತುಲ್ ಮುಜಾಹಿದೀನ್ ರಾಜ್ಯಾಧ್ಯಕ್ಷ ಟಿ.ಪಿ. ಅಬ್ದುಲ್ಲ ಕೋಯ ಮದನಿ ಜಮಾಅತೆ ಇಸ್ಲಾಮಿ ಮತ್ತು ಆರೆಸ್ಸೆಸ್ ನಡುವೆ ನಡೆದಿರುವುದು ಏಕಪಕ್ಷೀಯ ಮಾತುಕತೆಯಾಗಿದ್ದು, ಜಮಾಅತೆ ಇಸ್ಲಾಮಿಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ರಕ್ಷಣೆ ಇದೆ ಎಂಬ ಅನುಮಾನ ಈ ಸಂದರ್ಭದಲ್ಲಿ ಮೂಡುವುದು ಸಹಜ ಎಂದಿದ್ದಾರೆ.
ಸುನ್ನಿ ಯುವಜನ ಸಂಘದ ಮುಖಂಡ ಅಬ್ದುಸ್ಸಮದ್ ಪೂಕೋಟೂರ್ ಮಾತನಾಡಿ, ಆರೆಸ್ಸೆಸ್ ನೊಂದಿಗೆ ಸಂವಾದ ನಡೆಸುವ ಜಮಾಅತೆ ಇಸ್ಲಾಮಿಯ ನಿಲುವನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದಿದ್ದಾಗಿ ವರದಿ ಉಲ್ಲೇಖಿಸಿದೆ.
ವಿವಾದಾತ್ಮಕ ಮಾತುಕತೆ ನಡೆದ ಸುಮಾರು ಒಂದು ತಿಂಗಳ ನಂತರ ಪ್ರತಿಕ್ರಿಯಿಸಿದ್ದ ಜಮಾಅತೆ ಇಸ್ಲಾಮಿ ಹಿಂದ್ ಪ್ರಧಾನ ಕಾರ್ಯದರ್ಶಿ ಟಿ. ಆರಿಫ್ ಅಲಿ, ಆರೆಸ್ಸೆಸ್ ಸರಕಾರ ನಿಯಂತ್ರಿಸುತ್ತಿರುವುದರಿಂದ ನಾವು ಅವರೊಂದಿಗೆ ಚರ್ಚೆ ನಡೆಸಿದ್ದೆವು. ಚರ್ಚೆಗಳು ದೇಶದ ಹಲವು ಭಾಗಗಳಲ್ಲಿ ಗುಂಪು ಹತ್ಯೆ ಮತ್ತು ಅಲ್ಪ ಸಂಖ್ಯಾತರ ಮೇಲಿನ ದಾಳಿಯ ಮೇಲೆ ಕೇಂದ್ರೀಕೃತವಾಗಿತ್ತು ಎಂದು ಹೇಳಿದ್ದರು.
ಸಂವಾದದಲ್ಲಿ ಪಾಲ್ಗೊಳ್ಳುವ ನಿರ್ಧಾರವನ್ನು ನಮ್ಮ ರಾಷ್ಟ್ರೀಯ ನಾಯಕತ್ವವು ಕೈಗೊಂಡಿತ್ತು. ಜಮೀಯತುಲ್ ಉಲವಾದ ಎರಡು ಬಣಗಳು ಚರ್ಚೆಯಲ್ಲಿ ಭಾಗವಹಿಸಿದ್ದವು. ಅವರು ಸಮುದಾಯದ ದೊಡ್ಡ ವಿಭಾಗವನ್ನು ಪ್ರತಿನಿಧಿಸುತ್ತಾರೆ. ಅಷ್ಟೇ ಹದೀಸ್, ಶಿಯಾ ಮತ್ತು ಅಣ್ಣೀರ್ ಚಿಸ್ತಿಯ ಪ್ರತಿನಿಧಿಗಳು ಮತ್ತು ಮುಸ್ಲಿಮ್ ವಿದ್ವಾಂಸರೂ ಭಾಗವಹಿಸಿದ್ದರು ಎಂದು ಅಲಿ ಹೇಳಿದ್ದರು.