ಉಡುಪಿ : ಬಡಗುತಿಟ್ಟು ಯಕ್ಷಗಾನದ ಮೇರು ಕಲಾವಿದ ಹಾಗೂ ಖಳಛಾಯೆಯ ಪಾತ್ರಗಳಲ್ಲಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತಿದ್ದ ಹಿರಿಯ ಯಕ್ಷಗಾನ ಕಲಾವಿದ, ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ (84) ಅವರು ಇಂದು ರಾತ್ರಿ 9:30ರ ಸುಮಾರಿಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಚಿಟ್ಟಾಣಿಯವರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ತೀವ್ರ ಜ್ವರದ ಕಾರಣ ಕಳೆದ ಶುಕ್ರವಾರ ರಾತ್ರಿ ಕೆಎಂಸಿಗೆ ದಾಖಲಾಗಿದ್ದ ಚಿಟ್ಟಾಣಿಯವರು ನ್ಯುಮೋನಿಯಾ ಸಂಬಂಧಿ ಸಮಸ್ಯೆ ಹಾಗೂ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಚಿಟ್ಟಾಣಿಯವರ ಅಪೇಕ್ಷೆಯಂತೆ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ. ಅಂತಿಮ ಕ್ಷಣದಲ್ಲಿ ಅವರ ಪುತ್ರರು ಸೇರಿದಂತೆ ಕುಟುಂಬಿಕರು ಆಸ್ಪತ್ರೆಯಲ್ಲಿದ್ದರು. ಅವರ ಮೃತದೇಹವನ್ನು ಅ.4ರಂದು ಬೆಳಗ್ಗೆ 8 ಗಂಟೆಗೆ ಮಣಿಪಾಲದಿಂದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಹೇರಂಗಡಿಗೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಸಂಜೆ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಕೀಚಕ, ಕೌರವ, ದುಷ್ಟಬುದ್ಧಿ, ಭಸ್ಮಾಸುರ ಮುಂತಾದ ಖಳ ಛಾಯೆಯ ಪಾತ್ರಗಳ ಮೂಲಕ ನೋಡುಗರಲ್ಲಿ ಮಿಂಚಿನ ಸಂಚಾರ ಮೂಡಿಸುತ್ತಿದ್ದ ಚಿಟ್ಟಾಣಿಯವರು ಯಕ್ಷಗಾನಕ್ಕೆ ಚೊಚ್ಚಲ ಪದ್ಮಶ್ರೀ ಪ್ರಶಸ್ತಿಯನ್ನು 2012ರಲ್ಲಿ ತಂದುಕೊಟ್ಟಿದ್ದರು. ಉಳಿದಂತೆ 1991ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2004ರಲ್ಲಿ ಜನಪದಶ್ರೀ ಪ್ರಶಸ್ತಿ, 2013ರಲ್ಲಿ ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿಯನ್ನು ಇವರು ಗಳಿಸಿದ್ದರು.
1933ರ ಜನವರಿ 1ರಂದು ಉತ್ತರ ಕನ್ನಡದ ಹೊನ್ನಾವರದಲ್ಲಿ ಸುಬ್ರಾಯ ಹೆಗಡೆ, ಗಣಪಿ ಹೆಗಡೆ ದಂಪತಿಯ ಪುತ್ರರಾಗಿ ಜನಿಸಿದ ಚಿಟ್ಟಾಣಿ 70 ವರ್ಷಗಳ ಕಾಲ ಯಕ್ಷಗಾನ ರಂಗದಲ್ಲಿ ಅದ್ವೀತಿಯ ಕಲಾವಿದರಾಗಿ ಮೆರೆದಿದ್ದರು.
ಒಂದು ವಾರದ ಹಿಂದೆಯಷ್ಟೇ ಹೊನ್ನಾವರದ ಸಮೀಪ ನವರಾತ್ರಿ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ಯಕ್ಷಗಾನ ಪ್ರದರ್ಶನವೊಂದರಲ್ಲಿ ಶಂತನು ಪಾತ್ರ ನಿರ್ವಹಿಸಿದ ಬಳಿಕ ಅಸ್ವಸ್ಥರಾಗಿದ್ದರು. ಇದೇ ಅವರು ನಿರ್ವಹಿಸಿದ ಕೊನೆಯ ಪಾತ್ರವೂ ಆಗಿದೆ.