ಕುಂದಾಪುರ : ಹೆದ್ದಾರಿ ದಾಟುತ್ತಿದ್ದ ಬೈಕಿಗೆ ಪ್ರವಾಸಿ ಮಿನಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮುಳ್ಳಿಕಟ್ಟೆ ಎಂಬಲ್ಲಿ ಶನಿವಾರ ರಾತ್ರಿ ಎಂಟು ಗಂಟೆ ಸುಮಾರಿಗೆ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರರನ್ನು ಗಂಗೊಳ್ಳಿಯ ಮಿಯಾ ಮೊಹಲ್ಲಾ ನಿವಾಸಿ ಶಾದಾಬ್ ಹಾಗೂ ಬೈಂದೂರಿನ ಅಬ್ದುಲ್ ರಹಿಮಾನ್ ಎಂದು ಗುರುತಿಸಲಾಗಿದೆ.
ಬೈಕ್ ಸವಾರರು ಆಲೂರು ರಸ್ತೆಯಿಂದ ಗುಜ್ಜಾಡಿ ರಸ್ತೆಗೆ ಹೋಗಲೆಂದು ಮುಳ್ಳಿಕಟ್ಟೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ದಾಡುತ್ತಿದ್ದರು. ಇದೇ ಸಂದರ್ಭ ಕಾರವಾರ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗವಾಗಿ ಬಂದ ಮದುವೆ ಕಾರ್ಯಕ್ರಮದ ಮಿನಿಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಮಿನಿಬಸ್ ನ ಅಡಿಯಲ್ಲಿ ಸಿಕ್ಕಿ ನುಜ್ಜುಗುಜ್ಜಾಗಿದೆ. ಸವಾರರೂ ಬಸ್ಸಿನಡಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈಗಾಗಲೇ ಈ ಪ್ರದೇಶದಲ್ಲಿ ಕಳೆದ ಒಂದು ವರ್ಷದಿಂದ ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಈ ಜಂಕ್ಷನ್ ಅಪಾಯಕಾರಿಯಾಗಿದೆ. ಈ ಬಗ್ಗೆ ಸ್ಥಳೀಯರು ಹೋರಾಟ ನಡೆಸಿ ಪೊಲೀಸರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದ್ದರು. ವೃತ್ತದಲ್ಲಿ ಸಿಗ್ನಲ್ ಅಳವಡಿಸಿ, ಅಥವಾ ಬ್ಯಾರಿಕೇಡ್ ಅಳವಡಿಸಿ ಅಥವಾ ಪೊಲೀಸ್ ನೇಮಿಸಿ, ಅದೂ ಸಾಧ್ಯವಾಗದೇ ಇದ್ದರೆ ರಸ್ತೆ ಉಬ್ಬುತಡೆಗಳನ್ನು ನಿರ್ಮಿಸಿ ಎಂದು ಮನವಿ ಮಾಡಿದ್ದರೂ ನಿರ್ಲಕ್ಷ್ಯ ವಹಿಸಿದ್ದರಿಂದಲೇ ಈ ರೀತಿಯ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಮೃತದೇಹಗಳನ್ನು 24x7 ಅಂಬ್ಯಲೆನ್ಸ್ ಮೂಲಕ ಸಾಗಿಸಿ ಕುಂದಾಪುರದ ಸರ್ಕಾರೀ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.