ಯಾವ ವ್ಯಕ್ತಿ ಸೋಲನ್ನು ಜೀರ್ಣಿಸಿಕೊಳ್ಳಲು ಕಲಿಯುತ್ತಾನೋ ಅಂತಹ ವ್ಯಕ್ತಿ ಜೀವನದಲ್ಲಿ ಅತ್ಯುತ್ತಮ ಸಾಧನೆ ಮಾಡಲು ಸಾಧ್ಯ: ಜಿಲ್ಲಾಧಿಕಾರಿ
ಮಂಡ್ಯ : ಪ್ರತಿಯೊಬ್ಬ ಮನುಷ್ಯನಿಗೆ ಓದು ಮತ್ತು ಕ್ರೀಡೆ ಎರಡು ಇರಬೇಕು. ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ಭೌತಿಕವಾಗಿ, ಆಧ್ಯಾತ್ಮಿಕವಾಗಿ, ಸಾಮಾಜಿಕವಾಗಿ ಮತ್ತು ಆರೋಗ್ಯವಾಗಿ ಇರಬೇಕು ಕೇವಲ ಕಾಯಿಲೆ ಇಲ್ಲ ಎಂದರೆ ಆರೋಗ್ಯವಾಗಿ ಇದ್ದಾನೆ ಎಂದು ಹೇಳಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಭೌತಿಕವಾಗಿ ಸಶಕ್ತವಾಗಿ ಲವಲವಿಕೆಯನ್ನು ಕಂಡುಕೊಳ್ಳಬೇಕೆಂದರೆ ಮತ್ತು ಮಾನಸಿಕವಾಗಿ ಕ್ರಿಯಾಶೀಲವಾಗಿರಬೇಕೆಂದರೆ ಕ್ರೀಡೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ಎಂ.ವಿ.ವೆಂಕಟೇಶ್ ಅವರು ಹೇಳಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಯುವಸಬಲೀಕರಣ, ಕ್ರೀಡಾ ಇಲಾಖೆ ಮತ್ತು ನೆಹರು ಯುವ ಕೇಂದ್ರ ಸಹಯೋಗದಲ್ಲಿ ಶ್ರೀರಂಗಪಟ್ಟಣ ಕರಿಗಟ್ಟದಲ್ಲಿ ಕ್ರೀಡಾ ದಸರಾ ಅಂಗವಾಗಿ ಚರಣ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಅವರು ಜಿಲ್ಲಾಡಳಿತ ಕಳೆದ ಬಾರಿ ಹತ್ತು ಹಲವು ಕಾರ್ಯಕ್ರಮವನ್ನು ಆಯೋಜಿಸಿತ್ತು ಈ ಬಾರಿಯ ದಸರಾವನ್ನು ಸರಳ, ಸಾಂಸ್ಕೃತಿಕ ಮತ್ತು ಪಾರಂಪರಿಕವಾಗಿ ಆಚರಣೆ ಮಾಡಬೇಕು ಎಂದು ನಿರ್ಧರಿಸಿರುವುದರಿಂದ ಕ್ರೀಡೆ, ಯೋಗ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗಬೇಕು ಎಂಬ ನಿರ್ಧಾರವನ್ನು ಕೈಗೊಂಡು ಆ ನಿಟ್ಟಿನಲ್ಲಿ ಈ ದಿನದ ಮುಂಜಾನೆ 6.30 ಗಂಟೆಯಿಂದಲೆ ಬೆಟ್ಟ ಹತ್ತುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರಲ್ಲಿ ತಾವೆಲ್ಲರೂ ಭಾಗವಹಿಸುತ್ತಿರುವುದು ಸಂತಸವಾಗಿದೆ ಎಂದರು.
ಮೂರು ವರ್ಷದಿಂದ 75 ವರ್ಷದ ವಯಸ್ಸಿನವರು ಭಾಗವಹಿಸಿ ಯಶಸ್ವಿಯಾಗಿ ಚಾರಣವನ್ನು ಮುಗಿಸಿದ್ದಾರೆ. ಹಾಗಾಗಿ ಎಲ್ಲರಿಗು ಅಭಿನಂದನೆಗಳು ಎಂದರು.
ಉತ್ಸಾಹ ಹೊಸ ಸಂಭ್ರಮವನ್ನು, ಖುಷಿ ಆನಂದವನ್ನು ನೀಡುವ ಭೌತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ನಮ್ಮ ದೇಹ ಮತ್ತು ಮನಸ್ಸು ಸಮತೋಲನವಾಗಿ ಅಭಿವೃದ್ಧಿಯಾಗುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಕಾಲಾನುಕಾಲಕ್ಕೆ ಭಾಗವಹಿಸುವುದರ ಮುಖಾಂತರ ಕ್ರೀಡಾ ಚಟುವಟುಕೆಗಳನ್ನು ನಿರಂತರವಾಗಿ ಕಾಪಾಡಿಕೊಂಡು ಬರಬೇಕು ಎಂದರು.
ಜಾಗತೀಕರಣದ ನಂತರ ಪ್ರತಿ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮಕಾರಿಯಾದಂತಹ ದುಷ್ಪರಿಣಾಮಗಳು ಬೀರುತ್ತಿದೆ. 30-35 ವರ್ಷಕ್ಕೆ ಹೃದಯಘಾತ, ಚಿಕ್ಕ ವಯಸ್ಸಿಗೆ ಕ್ಯಾನ್ಸರ್ ಮತ್ತು ಖಿನ್ನತೆಗೆ ಒಳಗಾಗುತ್ತಿದ್ದಾರೆ, ಆತ್ಮಹತ್ಯೆ ಪ್ರಕರಣಗಳು ಹೆಚ್ಚು ಕಂಡು ಬರುತ್ತಿವೆ. ಇದೆಲ್ಲದಕ್ಕೂ ಒಂದೇ ಪರಿಹಾರ ಮನುಷ್ಯನಾದವನು ಚಿಕ್ಕ ವಯಸ್ಸಿನಿಂದಲು ಕ್ರೀಡೆಯಲ್ಲಿ ತೊಡಗಿಸಿಕೊಂಡು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದು ಎಂದರು.
ಈ ಸಂದರ್ಭದಲ್ಲಿ ಶ್ರೀರಂಗಪಟ್ಟಣದ ತಹಶೀಲ್ದಾರರಾದ ರೂಪ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಅನಿತ, ಶ್ರೀರಂಗಪಟ್ಟಣದ ಸಹಾಯಕ ಆಯುಕ್ತರಾದ ಶಿವನಂದ ಮೂರ್ತಿ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.