ವೈದ್ಯಕೀಯ ಕಾಲೇಜು, ಆಸ್ಪತ್ರೆಗಳ ವಿದ್ಯಾರ್ಥಿಗಳು ಮತ್ತು ವೈದ್ಯಕೀಯ ಸಿಬ್ಬಂದಿ ಕಡ್ಡಾಯವಾಗಿ ಭಾಗವಹಿಸಲು ಸರ್ಕಾರದ ಆದೇಶ
ಧಾರವಾಡ : ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮತ್ತು ಸೋಂಕಿನ ತೀವೃತೆ ಕಡಿಮೆ ಇರುವುದರಿಂದ ಬಹಳಷ್ಟು ಜನ ಸೋಂಕಿತರು ಹೋಂ ಐಸೋಲೇಷನ್ ಆಗುತ್ತಿದ್ದಾರೆ. ರಾಜ್ಯಸರ್ಕಾರದ ಆದೇಶಗಳ ಪ್ರಕಾರ ಹೋಂ ಐಸೋಲೇಷನ್ ಅಡಿಯಲ್ಲಿ ರೋಗಿಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ತಂಡವನ್ನು ರಚಿಸಲಾಗಿದೆ.
ಸೋಂಕಿತ ವ್ಯಕ್ತಿಯ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಮತ್ತು ರೋಗಿಯ ಅನಗತ್ಯ ಒತ್ತಡವನ್ನು ತಪ್ಪಿಸುವ ದೃಷ್ಟಿಯಿಂದ ವೈದ್ಯಕೀಯ ಕಾಲೇಜುಗಳು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿನ ವಿದ್ಯಾರ್ಥಿಗಳು, ಅಧ್ಯಾಪಕರು, ವೈದ್ಯರು ಮತ್ತು ತಜ್ಞರು ವೃತ್ತಿಪರತೆಯಿಂದ ಭಾಗವಹಿಸಿ, ಹೋಂ ಐಸೋಲೇಷನ್ದಲ್ಲಿರುವ ರೋಗಿಗಳ ಸಮಾಲೋಚನೆ ಮಾಡುವುದು ಬಹು ಮುಖ್ಯವಾಗಿದೆ.
ವಿವಿಧ ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಹೋಂ ಐಸೋಲೇಷನ್ ಆಗಿರುವ ರೋಗಿಗಳ ಟೆಲಿ-ಟ್ರೈಜಿಂಗ್ ಮತ್ತು ಟೆಲಿ-ಕನ್ಸ್ಲ್ಟೇಶನ್ಗಳಲ್ಲಿ ಭಾಗವಹಿಸುವ ಕುರಿತು ಅಧಿಕಾರಿಗಳು ನೀಡಿದ ಆದೇಶವನ್ನು ಪಾಲಿಸದಿರುವ ಮತ್ತು ತಮ್ಮ ಕರ್ತವ್ಯಗಳಿಗೆ ಹಾಜರಾಗದಿರುವುದನ್ನು ಸರ್ಕಾರವು ಗಮನಿಸಿದೆ.
ವಿಪತ್ತು ನಿರ್ವಹಣಾ ಕಾಯ್ದೆ 2005 ಸೆಕ್ಷನ್ 24 (ಎಫ್) ಮತ್ತು (1) ರ ಅಡಿಯಲ್ಲಿ ನೀಡಲಾಗಿರುವ ಅಧಿಕಾರವನ್ನು ಚಲಾಯಿಸಿ ರಾಜ್ಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು, ಟೆಲಿ-ಟ್ರೈಜಿಂಗ್ ಮತ್ತು ಟೆಲಿ-ಕನ್ಸ್ಲ್ಟೇಶನ್ಗಳಲ್ಲಿ ಕೆಲಸ ನಿರ್ವಹಿಸಲು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ನಿಯೋಜಿಸಿದ್ದಾರೆ.
ಹೋಂ ಐಸೋಲೇಷನ್ ರೋಗಿಗಳ ಸಮಾಲೋಚನೆಯು ಕಾಲಕಾಲಕ್ಕೆ ಹೋಂ ಐಸೋಲೇಷನ್ ತಂಡ ಮತ್ತು ನಿಯಂತ್ರಣಾಧಿಕಾರಿಗಳು ನೀಡುವ ಸೂಚನೆಗಳ ಪ್ರಕಾರ ನಿಯೋಜಿಸಲಾದ ಕಾರ್ಯಗಳನ್ನು ವಿವಿಧ ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ನಿರ್ವಹಿಸಬೇಕಾಗುತ್ತದೆ.
ಯಾವುದೇ ವ್ಯಕ್ತಿ ಮತ್ತು ಸಂಸ್ಥೆಯು ಸರ್ಕಾರ ಹಾಗೂ ಸರ್ಕಾರದ ಅಧಿಕಾರಿಗಳು ನೀಡಿರುವ ನಿರ್ದೇಶನಗಳನ್ನು ಅನುಸರಿಸದಿರುವುದು ಮತ್ತು ನಿಯೋಜಿಸಿದ ಕರ್ತವ್ಯ ನಿರ್ವಹಿಸದಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ-2005 ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ-2020 ರ ಸಂಬಂಧಿತ ನಿಬಂಧನೆಗಳ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.