ಹೊಸದಿಲ್ಲಿ: ನೈಋತ್ಯ ಮುಂಗಾರು ಗುರುವಾರ ಕೇರಳ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಸಾಮಾನ್ಯವಾಗಿ ಜೂನ್ 1ರ ಒಳಗೆ ಕೇರಳದಲ್ಲಿ ಹಾಗೂ ಜುಲೈ ಮಧ್ಯ ಭಾಗದ ಒಳಗೆ ದೇಶದಾದ್ಯಂತ ನೈಋತ್ಯ ಮುಂಗಾರು ಪ್ರವೇಶಿಸುತ್ತದೆ. ಆದರೆ, ಈ ಬಾರಿ ಕೇರಳದಲ್ಲಿ ವಾಡಿಕೆಗಿಂತ ಒಂದು ವಾರ ತಡವಾಗಿ ನೈಋತ್ಯ ಮುಂಗಾರು ಪ್ರವೇಶಿಸಿದೆ.
ಮುಂಗಾರು ಕೇರಳದ ಉಳಿದ ಭಾಗಗಳಿಗೆ, ತಮಿಳುನಾಡು, ಕರ್ನಾಟಕ ಹಾಗೂ ಈಶಾನ್ಯ ರಾಜ್ಯಗಳ ಇನ್ನು ಕೆಲವು ಭಾಗಗಳಿಗೆ ಮುಂದುವರಿಯಲು ಈ ಪರಿಸ್ಥಿತಿ ಪೂರಕವಾಗಿದೆ ಎಂದು ಭಾರತದ ಹವಾಮಾನ ಇಲಾಖೆ ಗುರುವಾರ ಹೇಳಿದೆ.
ಅರಬ್ಬಿ ಸಮುದ್ರದಲ್ಲಿ 'ಬಿಪೊರ್ಜಾಯ್' ಚಂಡಮಾರುತವು ರೂಪುಗೊಂಡಿರುವುದರಿಂದ ಈ ಬಾರಿ ಕನಿಷ್ಠ ಇನ್ನೂ ಒಂದು ವಾರ ಮುಂಗಾರು ದುರ್ಬಲವಾಗಿರುವ ಸಾಧ್ಯತೆ ಇದೆ.
ಅರಬಿ ಸಮುದ್ರದ ದಕ್ಷಿಣ ಭಾಗ, ಲಕ್ಷದ್ವೀಪದ ಸಂಪೂರ್ಣ ಪ್ರದೇಶ, ಕೇರಳದ ಬಹುತೇಕ ಭಾಗ, ದಕ್ಷಿಣ ತಮಿಳುನಾಡಿನ ಭಾಗಗಳು, ಕಮೋರಿನ್, ಮನ್ನಾರ್ ಕೊಲ್ಲಿ ಪ್ರದೇಶ, ನೈಋತ್ಯ, ಕೇಂದ್ರ ಹಾಗೂ ಈಶಾನ್ಯ ಬಂಗಾಲ ಕೊಲ್ಲಿ ಭಾಗಗಳಲ್ಲಿ ಮುಂಗಾರು ಚುರುಕುಗೊಂಡಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.