ಭಟ್ಕಳ: ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಹಾವು ಕಚ್ಚಿದ ಪರಿಣಾಮವಾಗಿ ಆಸ್ಪತ್ರೆಗೆ ಸಾಗಿಸಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ ಘಟನೆ ಭಾನುವಾರ ಇಲ್ಲಿನ ಮಾವಿನಕುರ್ವೆ ಗ್ರಾ.ಪಂ. ವ್ಯಾಪ್ತಿಯ ಬೆಳ್ನಿಯ ಎಂಬಲ್ಲಿ ಜರಗಿದೆ.
ಮೃತ ಕೃಷಿಕರನ್ನು ನಾರಾಯಣ ಕುಪ್ಪಯ್ಯ ದೇವಾಡಿಗ (45) ಎಂದು ತಿಳಿದು ಗುರುತಿಸಲಾಗಿದೆ. ಇವರು ಶನಿವಾರ ಬೇರೆಯವರ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಅಕಸ್ಮಿಕವಾಗಿ ಹಾವೊಂದು ಕಚ್ಚಿತ್ತು ಎಂದು ಹೇಳಲಾಗುತ್ತಿದ್ದು ಸ್ಥಳೀಯರು ತಕ್ಷಣವೇ ಅವರನ್ನು ಇಲ್ಲಿನ ಸರಕಾರಿ ಆಸ್ಪತ್ರೆಗೆ ಕರೆತಂದು ತುರ್ತು ಚಿಕಿತ್ಸೆಕೊಡಿಸಿದ್ದು, ವ್ಯಕ್ತಿಗೆ ಹೆಚ್ಚಿನ ಚಿಕಿತ್ಸೆಯ ಕಾರಣ ಕುಂದಾಪುರದ ಸರಕಾರಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಮೃತ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತಂತೆ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.