ಬೆಳಗಾವಿ: ಸದಾ ಒಂದಿಲ್ಲೊಂದು ವಿವಾದಗಳನ್ನು ತನ್ನ ಮೈಮೇಲೆ ಎಳೆದುಕೊಳ್ಳುತ್ತಿರುವ ಉ.ಕ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ಖಾನಪುರದಲ್ಲಿ ರೈತರು ಮನವಿಯನ್ನು ಕೊಡಲು ಬಂದಾಗ ಅವರನ್ನು ನಿರ್ಲಕ್ಷಿಸಿ ಹೊರಟು ಹೋಗಿದ್ದು ಇದರಿಂದ ಆಕ್ರೋಷಿತ ರೈತಸಮುದಾಯ ಅನಂತ್ ಕುಮಾರ್ ವಿರುದ್ಧ ಧಿಕ್ಕಾರ ಕೂಗಿದ ಘಟನೆ ನಡೆದಿದೆ.
ಸಂಸದರಾಗಿ ಗೆದ್ದ ಬಳಿಕ ಮತ ಹಾಕಿ ಗೆಲ್ಲಿಸಿದ ಕ್ಷೇತ್ರದ ಮತದಾರರ ಕಣ್ಣಿಗೆ ಕಾಣಿಸಿಕೊಳ್ಳದೆ ದೂರ ಉಳಿದಿದ್ದ ಅನಂತಕುಮಾರ ಹೆಗಡೆ ಚುನಾವಣೆ ಸಮೀಪಿಸುತ್ತಿದ್ದಂತೆ ಸಕ್ರೀಯ ರಾಜಕಾರಣಕ್ಕೆ ಧುಮುಕಿದ್ದಾರೆ. ಕೆನರಾ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸಕೈಗೊಂಡಿರುವ ವೇಳೆ ಕ್ಷೇತ್ರದ ಸಮಸ್ಯೆ ಪರಿಹರಿಸುವಂತೆ ಸಂಸದರಿಗೆ ಮನವಿ ನೀಡಬೇಕೆಂದು ರೈತರು ಕಾಯುತ್ತಿದ್ದರು. ರೈತರು ನಿಂತಿದ್ದ ಮಾರ್ಗದಲ್ಲೆ ಬಂದ ಸಂಸರು ರೈತರನ್ನ ಕಂಡು ಕಾರಿನಿಂದ ಕೆಳಗಿಳಿಯದೆ ರೈತರ ಮನವಿಯನ್ನು ಕೂಡ ಪಡೆಯದೇ ಹೊರಟು ಹೋಗಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತು ರೈತರೊಬ್ಬರು ಅತ್ಯಂತ ಆಕ್ರೋಷಿತರಾಗಿ ಸಂಸದರನ್ನು ತರಾಟೆ ತೆಗೆದುಕೊಳ್ಳುತ್ತಿರುವ ವಿಡಿಯೋ ಸಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ.
ಸಂಸದರ ವರ್ತನೆಯಿಂದ ಆಕ್ರೋಶಗೊಂಡ ರೈತರು, ಕಾರ್ಗೆ ಮುತ್ತಿಗೆ ಹಾಕಲು ಯತ್ನಿಸಿದರು. ರೈತ ಸಂಘಟನೆ ಮುಖಂಡರು, ಸಂಸದರ ವಿರುದ್ಧ ಧಿಕ್ಕಾರ ಕೂಗಿ ಇವರಂತಹ ಸಂಸದರು ನಮ್ಮಗೆ ಬೇಡ. ಇವರು ಸಂಸದರಾಗಲಿ ಯೋಗ್ಯರಲ್ಲ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಕಾಣಿಸಿಕೊಂಡಿದೆ.