ಸ್ಥಳೀಯರಿಂದ ವಿರೋಧ ; ಅಧಿಕಾರಿಗಳಿಂದ ಮನವೊಲಿಕೆ
ಭಟ್ಕಳ: ಭಟ್ಕಳದಲ್ಲಿ ಕೊರೋನಾ ಸೋಂಕು ತನ್ನ ಮೂರನೇ ಇನ್ನಿಂಗ್ಸ್ ಆರಂಭಿಸಿದ್ದು ಕಳೆದ ೩-೪ದಿನಗಳಿಂದ ಸೊಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಭಾನುವಾರ ಕೂಡ ೯ ಜನರಲ್ಲಿ ಕೊರೋನಾ ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಭಟ್ಕಳದ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯು ಕೊರೋನಾ ಸೋಂಕಿತರ ಆರೈಕೆಯಲ್ಲಿ ಹೆಚ್ಚಿನ ಮುತುವರ್ಜಿಯನ್ನು ವಹಿಸಿದ್ದು ಹೆಬಳೆ ಪಂಚಯತ್ ವ್ಯಾಪ್ತಿಯ ಸುಸಜ್ಜಿತ ವುಮೆನ್ಸ್ ಸೆಂಟರ್ ಕಟ್ಟಡವನ್ನು ಕೊರೋನಾ ಸೋಂಕಿತರ ಆರೈಕೆ ಕೇಂದ್ರವನ್ನಾಗಿ ಮಾರ್ಪಡಿಸಿದ್ದು ಭಾನುವಾರ ೬೪ ಸೊಂಕಿತರನ್ನು ಆರೈಕೆ ಕೇಂದ್ರದಲ್ಲಿ ಸ್ಥಳಾಂತರಿಸಿದ್ದಾರೆ. ಗರ್ಭಿಣಿ ಮಹಿಳೆ ಸೇರಿದಂತೆ ೭ಜನರನ್ನು ಸರ್ಕಾರಿ ಆಸ್ಪತ್ರೆಯಲ್ಲೇ ಇರಿಸಲಾಗಿದೆ ಎಂಬ ಮಾಹಿತಿ ದೊರಕಿದೆ.
ಕಾರವಾರದ ಕೋವಿಡ್ ಆಸ್ಪತ್ರೆಯಲ್ಲಿ ಹೆಚ್ಚಿನ ಸೌಲಭ್ಯಗಳು ಹಾಗೂ ಸ್ಥಳಾವಕಾಶ ಇಲ್ಲದೆ ಕಾರಣ ಗುಣಮುಖರಾಗಿ ಬಂದವರಿಂದ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಭಟ್ಕಳದಲ್ಲೇ ಸೋಂಕಿತರ ಆರೈಕೆ ಕೇಂದ್ರವನ್ನು ಮಾಡಬೇಕೆಂದು ತಂಝೀಮ್ ಸಂಸ್ಥೆಯು ಪ್ರಯತ್ನಿಸಿದ್ದು ಜಿಲ್ಲಾ ಹಾಗೂ ತಾಲೂಕಾಡಳಿತದ ಅನುಮತಿಯೊಂದಿಗೆ ಇಲ್ಲಿನ ಸೋನಾರಕೇರಿ ವಸತಿನಿಲಯವೊಂದರಲ್ಲಿ ತಾತ್ಕಾಲಿಕವಾಗಿ ಕೆಲವು ಸೋಂಕಿತರನ್ನು ಇಡಲಾಗಿತ್ತು. ಈ ಮಧ್ಯೆ ಅಲ್ಲಿನ ಸ್ಥಳಿಯರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಾರ್ವಜನಿಕರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.
ಶ್ರೀಮತಿ ಖದಿಜಾ ಖಾಜಿ ಹಾಗೂ ಅವರು ಪತಿ ಅಮೇರಿಕನ್ ಝುಬೈರ್ ತಮ್ಮ ಸುಸಜ್ಜಿತ ಕಟ್ಟಡವನ್ನು ಸೋಂಕಿತರ ಆರೈಕೆಯ ಕೇಂದ್ರವಾಗಿ ಬಿಟ್ಟುಕೊಡಲು ಮನಪೂರ್ವಕ ಒಪ್ಪಕೊಂಡಿದ್ದು ತಂಝೀಮ್ ಸಂಸ್ಥೆಯ ಮೇಲುಸ್ತುವಾರಿಯಲ್ಲಿ ಪ್ರ.ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ ಯವರು ಸುಮಾರು ೧೦೦ ಹಾಸಿಗೆಯುಳ್ಳ ಕೋವಿಡ್ -೧೯ ಅರೈಕೆ ಕೇಂದ್ರವನ್ನು ಅತ್ಯಂತ ಪರಿಶ್ರಮದಿಂದ ಸಿದ್ದಗೊಳಿಸಿದ್ದು ಈಗ ಸೊಂಕಿತರಿಗಾಗಿ ತೆರೆದುಕೊಂಡಿದೆ. ಇಲ್ಲಿ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದ್ದು ಸೋಂಕಿತರೆಲ್ಲವು ಉತ್ತಮ ಆರೋಗ್ಯಯುತ ವಾತವರಣದಲ್ಲಿ ಇರುವಂತಾಗಿದೆ ಎಂದು ತಿಳಿದುಬಂದಿದೆ.
ಇಲ್ಲಿಯೂ ವಿರೋಧಿಸಿದ ಸ್ಥಳೀಯರು: ಹೆಬಳೆ ಪಂಚಾಯತ್ ವ್ಯಾಪ್ತಿಯ ಈ ಕಟ್ಟಡದಲ್ಲಿ ಕೊರೋನಾ ಸೋಂಕಿತರನ್ನು ಸ್ಥಳಾಂತರಿಸಲಾಗುತ್ತಿದೆ ಎಂದ ಸುದ್ದಿ ತಿಳಿದ ಈ ಭಾಗದ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿ ಇಲ್ಲಿ ಕೊರೋನಾ ಸೋಂಕಿತರನ್ನು ಸ್ಥಳಾಂತರಿಸುವುದು ಬೇಡ ಎಂದು ಪಟ್ಟು ಹಿಡಿದಿದ್ದು ಇಲ್ಲಿಯೂ ಕೂಡ ಪೊಲೀಸರು ಹಾಗೂ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಾರ್ವಜನಿಕರ ಮನವೊಲಿಸಿದ್ದಾರೆ ಎಂದು ತಿಳಿದುಬಂದಿದೆ.