ಭಟ್ಕಳ: ಬಾಬ್ರಿ ಮಸೀದಿ ಭೂಮಿಯ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಗೊಂದಲಮಯವಾಗಿದ್ದು ಸಾಮಾಜಿಕ ನ್ಯಾಯ ಮತ್ತು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಸಂವಿಧಾನದ ತತ್ವಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಈ ವಿರೋಧಾಭಾಸವನ್ನು ಪ್ರತಿಭಟಿಸಿ ಶುಕ್ರವಾರದಂದು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ವತಿಯಿಂದ ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಬಾಬ್ರಿ ಮಸೀದಿ ವಕ್ಫ್ ಭೂಮಿಯ ಬಗ್ಗೆ ಎಲ್ಲ ದಾಖಲೆಗಳು ಸಾಕ್ಷ್ಯಗಳನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿ ಸಾಬೀತುಪಡಿಸಿದ ಮೇಲೆ ವಕ್ಫ್ ಭೂಮಿಯನ್ನು ಹಿಂದೂ ಗುಂಪಿಗೆ ನೀಡಿದ ತೀರ್ಪಿನ ಮೇಲೆ ದೇಶಾದ್ಯಂತ ತೀವ್ರ ಅಸಮಾಧಾನ ಹಾಗೂ ಖೇದವಿದೆ. ಊಹೆ ಹಾಗೂ ನಂಬಿಕೆಯ ಆಧಾರದಲ್ಲಿ ನೀಡಿದ ತೀರ್ಪು ದೇಶದ ಜಾತ್ಯಾತೀತ ಹಾಗೂ ಸಮಗ್ರತೆಯ ಎಳೆಯನ್ನು ಧ್ವಂಸಗೈಯುತ್ತಿದೆ.
ತೀರ್ಪು ನೀಡಿದ ದಿನದಿಂದಲೇ ಈ ಬಗ್ಗೆ ಪ್ರಕಟಿಸಲು ಜನತೆ ಮುಂದಾಗಿದ್ದರೂ ಕಠಿಣ ನಿರ್ಬಂಧ ಆಜ್ಞೆಗಳ ಮೂಲಕ ಜನರ ಧ್ವನಿಯನ್ನು ಹತ್ತಿಕ್ಕಿದ ಸರ್ಕಾರದ ಪ್ರಯತ್ನಗಳು ಕೂಡ ಧಮನಕಾರಿ ನೀತಿಯನ್ನು ಪ್ರತಿಫಲಿಸುತ್ತಿದೆ.
ಬಾಬ್ರಿ ಮಸೀದಿಯಲ್ಲಿ 1949 ರಲ್ಲಿ ರಾತ್ರಿಯ ಕತ್ತಲಿನ ಮರೆಯಲ್ಲಿ ವಿಗ್ರಹಗಳನ್ನು ಅಕ್ರಮವಾಗಿ ಇಡಲಾಗಿತ್ತೆಂದೂ,
1992ರಲ್ಲಿ ಮಸ್ಜಿದನ್ನು ಧ್ವಂಸಗೈದಿರುವುದು ಅಕ್ರಮವೆಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಉಲ್ಲೇಖಿಸಿದೆ. ಆದರೂ ಧ್ವಂಸ ನಡೆಸಿದ ದುಷ್ಕರ್ಮಿಗಳಿಗೆ ಶಿಕ್ಷೆಯನ್ನು ಪ್ರಕಟ ಪಡಿಸದೇ ಇರುವುದು ಕೂಡ ನ್ಯಾಯದ ನಿರಾಕರಣೆಯಾಗಿದೆ.
ಈ ಘೋರ ಅನ್ಯಾಯದ ವಿರುದ್ಧ ಎಸ್.ಡಿ.ಪಿ.ಐ. ಪ್ರತಿಭಟಿಸುತ್ತದೆ. ನ್ಯಾಯದ ಬೇಡಿಕೆಯೊಂದಿಗೆ ಬಾಬ್ರಿ ಮಸೀದಿ ಧ್ವಂಸಕಾರರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಹಾಗೂ ಅನ್ಯಾಯ ಕೊನೆಗೊಳ್ಳಬೇಕೆಂದು ಎಸ್.ಡಿ.ಪಿ.ಐ. ಆಗ್ರಹಿಸಿ ಮನವಿಯನ್ನು ಸಲ್ಲಿಸಿದರು.
ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ಕಛೇರಿ ಶಿರಸೇದ್ದಾರ ಎಲ್.ಎ.ಭಟ್ಟ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ಅಧ್ಯಕ್ಷ ವಸೀಂ ಮನೆಗಾರ, ತೌಫಿಕ್ ಬ್ಯಾರಿ ಹಾಗೂ ಮುಂತಾದವರು ಇದ್ದರು.