ಕಾರವಾರ : ಭಟ್ಕಳ ತಾಲ್ಲೂಕಿನ ಮುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಲತೀರದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಕಾನೂನುಬಾಹೀರ ಚಟುವಟಿಕೆಯನ್ನ ತಡೆಯುವಂತೆ ಸ್ಥಳೀಯ ನಾಗರಿಕರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಮೊಗೇರಕೇರಿ, ನಸ್ತಾರ ಭಾಗದ ಕಡಲತೀರದಲ್ಲಿ ಶೇಖರಣೆಯಾದ ಮರಳನ್ನ ದಂಧೆಕೋರರು ಲೂಟಿಗೈಯ್ಯತ್ತಿದ್ದಾರೆಕಡಲತೀರದ ಮರಳನ್ನ ತುಂಬಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.
ಬಗ್ಗೆ ಗ್ರಾಮಸ್ಥರು ಸಾಕಷ್ಟು ಬಾರಿ ತಡೆಯಲು ಪ್ರಯತ್ನಿಸಿದರೂ ಸಹ ಸ್ಥಳೀಯ ಕೆಲವರ ಸಹಕಾರದಿಂದಾಗಿ ರಾತ್ರಿ ವೇಳೆ ಅಕ್ರಮ ಮರಳು ಸಾಗಾಟ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನ ಜಿಲ್ಲಾಧಿಕಾರಿಗಳ ಮುಂದೆ ತೋಡಿಕೊಂಡಿದ್ದಾರೆ.
ಈ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆ ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ಭೇಟಿ ಮಾಡಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದಾರೆ.
ಮೊಗೇರಕೇರಿ, ನಸ್ತಾರ ಭಾಗದಲ್ಲಿ ಸುಮಾರು 150ಕ್ಕೂ ಹೆಚ್ಚು ಮನೆಗಳಿದ್ದು ತೀರದ ಹತ್ತಿರವೇ ಶಾಲೆ, ದೇವಾಲಯಗಳು ಇದೆ. ಕಡಲತೀರದಲ್ಲಿ ಮರಳನ್ನು ಯಥೇಚ್ಛವಾಗಿ ತುಂಬಿ ಸಾಗಾಟ ಮಾಡುತ್ತಿದ್ದು ಕಡಲಕೊರೆತ ಉಂಟಾಗುವಂತಾಗಿದೆ. ಈಗಾಗಲೇ ಮಳೆಗಾಲದಲ್ಲಿ ಭಾರಿ ಅಲೆಗಳು ಎದ್ದಾಗ ನೀರು ಮನೆಗಳಿಗೆ ನುಗ್ಗುತ್ತಿದೆ. ಇನ್ನು ಈಗ ನಡೆಸುತ್ತಿರುವ ಮರಳು ದಂಧೆ ನಿಲ್ಲಿಸದಿದ್ದಲ್ಲಿ ಸಮುದ್ರತೀರವೇ ಇಲ್ಲದಂತಾಗಿ ಮನೆಗಳು ಸಂಪೂರ್ಣ ಕೊಚ್ಚಿ ಹೋಗುವ ಸಾಧ್ಯತೆ ಇರುವುದರಿಂದ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಜನರ ಹಿತದೃಷ್ಟಿಯಿಂದ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕಬೇಕು ಅನ್ನೋದು ಗ್ರಾಮಸ್ಥರ ಬೇಡಿಕೆಯಾಗಿದೆ.