ಮುಂಬೈ: ಶಿವಸೇನೆಯ ಹೆಸರು ಹಾಗೂ ಅದರ 'ಬಿಲ್ಲು ಮತ್ತು ಬಾಣ' ಚುನಾವಣಾ ಚಿಹ್ನೆಯ ಖರೀದಿಗಾಗಿ ಈವರೆಗೆ 2,000 ಕೋ.ರೂ.ಗಳ ಡೀಲ್ ನಡೆದಿದೆ ಎಂದು ಶಿವಸೇನೆ (ಉದ್ದವ ಬಾಳಾಸಾಹೇಬ ಠಾಕ್ರೆ)ಯ ನಾಯಕ ಸಂಜಯ್ ರಾವುತ್ ಅವರು ರವಿವಾರ ಆರೋಪಿಸಿದ್ದಾರೆ.
ಚುನಾವಣಾ ಆಯೋಗವು ಶಿವಸೇನೆ ಹೆಸರು ಮತ್ತು ಚಿಹ್ನೆಯನ್ನು ಎರಡು ದಿನಗಳ ಹಿಂದಷ್ಟೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಬಣಕ್ಕೆ ನೀಡಿದೆ.
ಟ್ವೀಟ್'ನಲ್ಲಿ ಈ ಆರೋಪವನ್ನು ಮಾಡಿರುವ ರಾವುತ್, 2,000 ಕೋ ರೂ.ಗಳ ವ್ಯವಹಾರವು ಪ್ರಾಥಮಿಕ ಅಂಕಿಅಂಶವಾಗಿದೆ ಮತ್ತು ಇದು ಶೇ.100ರಷ್ಟು ನಿಜವಾಗಿದೆ ಎಂದೂ ಹೇಳಿದ್ದಾರೆ.
ತನ್ನ ಆರೋಪಕ್ಕೆ ಪುರಾವೆಗಳಿದ್ದು, ಅವುಗಳನ್ನು ಹಾಗೂ ಇತರ ಹಲವಾರು ವಿಷಯಗಳನ್ನು ಶೀಘ್ರವೇ ಬಹಿರಂಗಗೊಳಿಸಲಾಗುವುದು. ಈ ದೇಶದ ಇತಿಹಾಸದಲ್ಲಿ ಹಿಂದೆಂದೂ ಇದು ಸಂಭವಿಸಿರಲಿಲ್ಲ ಎಂದೂ ರಾವುತ್ ಟ್ವಿಟಿಸಿದ್ದಾರೆ. ಆಡಳಿತ ವ್ಯವಸ್ಥೆಯ ನಿಕಟವರ್ತಿಯಾಗಿರುವ ಬಿಲ್ಡರ್ ಓರ್ವರು ಈ ಮಾಹಿತಿಯನ್ನು ತನ್ನೊಂದಿಗೆ ಹಂಚಿಕೊಂಡಿದ್ದಾರೆ ಎಂದೂ ರಾವುತ್ ಹೇಳಿರುವುದನ್ನು ಸುದ್ದಿಸಂಸ್ಥೆಯು ಉಲ್ಲೇಖಿಸಿದೆ.
ಈ ಆರೋಪವನ್ನು ತಳ್ಳಿಹಾಕಿರುವ ಶಿಂದೆ ಬಣದ ಶಾಸಕ ಸದಾ ಸರ್ವಂಕ ಅವರು,ಸಂಜಯ್ ರಾವುತ್ ಕ್ಯಾಷಿಯರ್ ಆಗಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಶಿವಸೇನೆಯ ಹೆಸರನ್ನು ಖರೀದಿಸಲು 2000 ಕೋ.ರೂ. ಸಣ್ಣ ಮೊತ್ತವಲ್ಲ ಎಂದು ರವಿವಾರ ಹೇಳಿರುವ ರಾವುತ್, ಚುನಾವಣಾ ಆಯೋಗದ ನಿರ್ಧಾರವು ಒಂದು ಡೀಲ್ ಆಗಿದೆ ಎಂದು ಆರೋಪಿಸಿದ್ದಾರೆ.
ಇಂತಹ ಹೇಳಿಕೆಗಳು ಸರ್ವೋಚ್ಚ ನ್ಯಾಯಾಲಯ ಮತ್ತು ಚುನಾವಣಾ ಆಯೋಗದಂತಹ ಸ್ವತಂತ್ರ ಸಂಸ್ಥೆಗಳನ್ನು ಕಳಂಕಿತಗೊಳಿಸುವ ಪ್ರಯತ್ನವಾಗಿದೆ ಎಂದು ಬಿಜೆಪಿ ನಾಯಕ ಸುಧೀರ ಮು೦ಗ೦ಟಿವಾರ್ ಹೇಳಿದರು. ಪ್ರಜಾಪ್ರಭುತ್ವವನ್ನು ಅಗೌರವಿಸುವ ಇಂತಹ ಹೇಳಿಕೆಗಳನ್ನು ನೀಡುವವರಿಗೆ ಜನರು ಪಾಠವನ್ನು ಕಲ್ಪಿಸಲಿದ್ದಾರೆ ಎಂದರು.
ಇಂತಹ ಹೇಳಿಕೆಗಳನ್ನು ನೀಡುವವರು ತಮ್ಮ ಪ್ರಜ್ಞೆಯನ್ನು ಕಳೆದುಕೊಂಡಿದ್ದಾರೆ ಅಥವಾ ಹುಚ್ಚರಾಗಿದ್ದಾರೆ ಎಂದು ಮುಂಬೈ ಬಿಜೆಪಿ ಮುಖ್ಯಸ್ಥ ಆಶಿಷ್ ಶೇಲಾ ಟೀಕಿಸಿದರು.
ಈ ನಡುವೆ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ ಠಾಕ್ರೆಯವರು ವಿರುದ್ಧ ಸಿದ್ಧಾಂತವನ್ನು ಹೊಂದಿರುವವರ ಹಿಮ್ಮಡಿಯನ್ನು ನೆಕ್ಕುತ್ತಿದ್ದಾರೆ ಎಂಬ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ವ್ಯಂಗ್ಯದಾಳಿಯ ಕುರಿತು ಪ್ರಶ್ನೆಗೆ ರಾವುತ್, ಈಗಿನ ಮುಖ್ಯಮಂತ್ರಿಗಳು ಏನನ್ನು ನೆಕ್ಕುತ್ತಿದ್ದಾರೆ? ಶಾ ಹೇಳಿಕೆಗಳಿಗೆ ಮಹಾರಾಷ್ಟ್ರವು ಮಹತ್ವವನ್ನು ನೀಡುವುದಿಲ್ಲ. ಮುಖ್ಯಮಂತ್ರಿ ಶಿಂದೆಯವರಿಗೆ ಛತ್ರಪತಿ ಶಿವಾಜಿ ಮಹಾರಾಜರ ಹೆಸರೆತ್ತಲೂ ಹಕ್ಕು ಇಲ್ಲ ಎಂದು ಉತ್ತರಿಸಿದರು.