ತಬ್ಲಿಗಿ ಜಮಾಅತ್ ನ ಮುಂಚೂಣಿ ನಾಯಕ ಮೌಲಾನ ಗಝಾಲಿ ನಿಧನ
ಭಟ್ಕಳ: ಇಲ್ಲಿನ ತಬ್ಲಿಗಿ ಜಮಾಅತ್ ನ ಮುಂಚೂಣಿಯ ನಾಯಕರಲ್ಲೋರ್ವರಾಗಿದ್ದ ಮೌಲಾನ ಗಝಾಲಿ ಖತೀಬ್ ನದ್ವಿ (74) ಶುಕ್ರವಾರ ತಮ್ಮ ಸ್ವಗೃಹ ಮುಗ್ಲಿಹೊಂಡಿ(ಪುರವರ್ಗದಲ್ಲಿ) ನಿಧನರಾದರು.
ಅವರು ರಮಝಾನ ತಿಂಗಳ ಉಪವಾಸಾಚರಣೆಯ ಬೆಳಗಿನ ಪಾರಣೆ ಮುಗಿಸಿ ಫಝ್ರ್ ನಮಾಝ್ ನಿರ್ವಹಿಸಲು ಅಣಿಯಗುತ್ತಿದ್ದಂತೆ ಅವರು ನಿಧನರಾದರೆಂದು ಕುಟುಂಬ ಮೂಲಗಳು ತಿಳಿಸಿವೆ. ಅವರಿಗೆ ಯಾವುದೇ ದೈಹಿಕ ತೊಂದರೆಯಾಗಲಿ ಆರೋಗ್ಯ ಸಮಸ್ಯೆಯಾಗಲಿ ಇರಲಿಲ್ಲ.
ಮೌಲಾನ ಗಝಾಲಿ ತಬ್ಲಿಗಿ ಜಮಾಅತ್ ಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದು ಅಂಜುಮನ್ ಶಾಲೆಯಲ್ಲಿ 10ನೇ ತರಗತಿಯನ್ನು ಪೂರ್ಣಗೊಳಿಸಿ ನಂತರ ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯಲ್ಲಿ ಧಾರ್ಮಿಕ ವಿದ್ವಾಂಸ ಪದವಿಯನ್ನು ಪಡೆದುಕೊಂಡಿದ್ದರು. ಅವರು 1967 ರಿಂದಲೇ ಜಮಾಅತ್ ನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು ದೆಹಲಿಯ ತಬಲಿಗಿ ಜಮಾಅತ್ ನ ಕೇಂದ್ರವಾಗಿ ನಿಝಾಮುದ್ದೀನ್ ನಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ಅರಬಿಕ್ ಇಂಗ್ಲಿಷ್ ಹಾಗೂ ಉರ್ದು ಭಾಷೆಗಳನ್ನು ಚೆನ್ನಾಗಿ ಬಲ್ಲ ಇವರು ಧರ್ಮ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದರು. ಇವರು ಪತ್ನಿ 9ಪುತ್ರರು ಹಾಗೂ ಅಪಾರ ಬಂದುಗಳನ್ನು ಅಗಲಿದ್ದಾರೆ. ಇವರ ಜನಾಝ ನಮಾಝನ್ನು ಜಾಮಿಯಾ ಮಸೀದಿಯಲ್ಲಿ ನಿರ್ವಹಿಸಿ ಖಾಝೀಯಾ ಸ್ಟ್ರೀಟ್ ನಲ್ಲಿರುವ ಖಬರಸ್ಥಾನದಲ್ಲಿ ಅಂತಿಮ ಸಂಸ್ಕಾರವನ್ನು ನೆರವೇರಿಸಲಾಯಿತು.