ರಾಹುಲ್ ಗಾಂಧಿ ವಿರುದ್ಧದ ಮಾನಹಾನಿ ಪ್ರಕರಣ; ವಿಚಾರಣೆಗೆ ಪಟ್ನಾ ಹೈಕೋರ್ಟ್ ತಡೆ
ಪಟ್ನಾ: 'ಮೋದಿ ಉಪನಾಮ' ಕುರಿತ ಹೇಳಿಕೆಗೆ ಸಂಬಂಧಿಸಿದ ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಹಾರದ ವಿಶೇಷ ನ್ಯಾಯಾಲಯ ನಡೆಸುತ್ತಿರುವ ವಿಚಾರಣೆಗೆ ಪಟ್ನಾ ಉಚ್ಚ ನ್ಯಾಯಾಲಯ ಸೋಮವಾರ ಮೇ 16 ವರೆಗೆ ತಡೆ ನೀಡಿದೆ.
ಈ ಹೇಳಿಕೆಗೆ ಸಂಬಂಧಿಸಿ ಈಗಾಗಲೇ ಗುಜರಾತ್ ಸೂರತ್ ನ್ಯಾಯಾಲಯ ದಿಂದ ಶಿಕ್ಷೆ ವಿಧಿಸಲಾಗಿದೆ. ಆದುದರಿಂದ ಇದೇ ವಿಷಯಕ್ಕೆ ಮತ್ತೆ ವಿಚಾರಣೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ರಾಹುಲ್ ಗಾಂಧಿ ಅವರ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂದೀಪ್ ಕುಮಾರ್ ಅವರು ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಿದರು.
2019ರ ಲೋಕಸಭಾ ಚುನಾವಣೆ ಸಂದರ್ಭ ಕರ್ನಾಟಕದಲ್ಲಿ ನಡೆದ ಚುನಾವಣಾ ಡ್ಯಾಲಿಯಲ್ಲಿ ರಾಹುಲ್ ಗಾಂಧಿ ಅವರು ಈ ಮೋದಿ ಉಪನಾಮ ಹೇಳಿಕೆ ನೀಡಿದ್ದರು. ಇದರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಿಗರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಪ್ರತಿಪಾದಿಸಿ ಬಿಜೆಪಿ ನಾಯಕ ಸುಶೀಲ್ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿದ್ದರು.