ಹೊಸದಿಲ್ಲಿ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಸಿಬಿಐ ರವಿವಾರ 9 ಗಂಟೆಗಳ ಕಾಲ ವಿಚಾರಣೆ ನಡೆಸಿತು.
ಸಿಬಿಐ ಶುಕ್ರವಾರ ಕೇಜ್ರಿವಾಲ್ ಅವರಿಗೆ ಸಮನ್ಸ್ ನೀಡಿತ್ತು. ಸಿಬಿಐ ಕೇಂದ್ರ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವ ಮುನ್ನ ಕೇಜ್ರಿವಾಲ್ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ತುಂಬಾ ಪ್ರಭಾವಶಾಲಿ. ಅಪರಾಧ ಮಾಡಿದ್ದರೂ ಮಾಡದೇ ಇದ್ದರೂ ಜೈಲಿಗೆ ಕಳುಹಿಸುವ ಸಾಮರ್ಥ್ಯವನ್ನು ಅದು ಹೊಂದಿದೆ ಎಂದಿದ್ದಾರೆ.
“ನನ್ನನ್ನು ಬಂಧಿಸಬಹುದು ಎಂದು ಬಿಜೆಪಿ ಸಿಬಿಐಗೆ ಆದೇಶಿಸಬಹುದು' ಎಂದು ಕೇಜ್ರಿವಾಲ್ ಹೇಳಿದರು.
ಬಿಜೆಪಿ ಈಗ ಆದೇಶ ಜಾರಿ ಮಾಡಿದರೆ ಸಿಬಿಐಗೆ ಏನು ಮಾಡಲು ಸಾಧ್ಯ? ಬಿಜೆಪಿಯವರು ಅಧಿಕಾರದ ಬಗ್ಗೆ ಅತ್ಯಂತ ಅಹಂಕಾರಿಗಳಾಗಿ ಮಾರ್ಪಟ್ಟಿದ್ದಾರೆ. ಅವರು ನ್ಯಾಯಾಧೀಶರು, ಮಾಧ್ಯಮ ಪ್ರತಿನಿಧಿಗಳು, ರಾಜ್ಯ ಸರಕಾರಗಳು, ಉದ್ಯಮಿಗಳ ವರೆಗೆ ಎಲ್ಲರಿಗೂ ಬೆದರಿಕೆ ಹಾಕುತ್ತಿದ್ದಾರೆ. “ನಮ್ಮ ಮಾತು ಕೇಳಿ, ಇಲ್ಲದೇ ಇದ್ದರೆ ಜೈಲಿಗೆ ಹಾಕುತ್ತೇವೆ'' ಎಂದು ಪರೋಕ್ಷವಾಗಿ ಹೇಳುತ್ತಿದ್ದಾರೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.