ರಾಷ್ಟ್ರ, ರಾಷ್ಟ್ರೀಯ ಸಂಪತ್ತು ರಕ್ಷಣೆಗಾಗಿ ತ್ಯಾಗ, ಬಲಿದಾನ ಮಾಡಿದವರ ಸ್ಮರಣೆ ಮಾಡುವುದು ನಮ್ಮ ಸಂಸ್ಕøತಿ : ಪ್ರಧಾನ ಜಿಲ್ಲಾ ನ್ಯಾಯಾಧೀಶ ಈಶಪ್ಪ ಭೂತೆ
ಧಾರವಾಡ: ರಾಷ್ಟ್ರದ ರಕ್ಷಣೆ, ರಾಷ್ಟ್ರೀಯ ಸಂಪತ್ತು, ನೈಸರ್ಗಿಕ ಸಂಪತ್ತುಗಳನ್ನು ಸಂರಕ್ಷಣೆ ಮಾಡುವಲ್ಲಿ ಹೋರಾಡಿ ಹುತಾತ್ಮರಾದ ವೀರರನ್ನು ಸ್ಮರಿಸುವುದು ನಮ್ಮ ಸಂಸ್ಕøತಿ ಆಗಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಈಶಪ್ಪ ಭೂತೆ ಹೇಳಿದರು.
ಇಂದು ಬೆಳಿಗ್ಗೆ ಅರಣ್ಯ ಇಲಾಖೆಯಿಂದ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಅರಣ್ಯ ಸಂಪತ್ತು ರಾಷ್ಟ್ರದ ಸಮೃದ್ಧಿಯ ಸಂಕೇತ. ಅದನ್ನು ಉಳಿಸಿ, ಬೆಳೆಸುವುದು ಎಲ್ಲರ ಕರ್ತವ್ಯ. ಆದರೆ ಕೆಲ ಪಟ್ಟಬದ್ರಹಿತಾಸಕ್ತಿಗಳು ಸ್ವಾರ್ಥ ಭಾವದಿಂದಾಗಿ ಅರಣ್ಯ, ಅರಣ್ಯದಲ್ಲಿನ ನೈಸರ್ಗಿಕ ಸಂಪತ್ತನ್ನು ಕಬಳಿಸಲು ಸದಾ ಪ್ರಯತ್ನ ಮಾಡುತ್ತಾರೆ. ಇದನ್ನು ಹಿಮ್ಮೆಟ್ಟಿಸಬೇಕು ಎಂದು ಅವರು ಹೇಳಿದರು.
ಅರಣ್ಯ ರಕ್ಷಣೆಗಾಗಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ವಿವಿಧ ಹಂತದ ಅಧಿಕಾರಿ, ಸಿಬ್ಬಂದಿವರ್ಗದವರು 1966 ರಿಂದ ಇಲ್ಲಿಯವರೆಗೆ ಸುಮಾರು 47 ಜನ ಪ್ರಾಣತ್ಯಾಗ ಮಾಡಿದ್ದಾರೆ. ಸಾರ್ವಜನಿಕ ಸಂಘ, ಸಂಸ್ಥೆಗಳೂ ಸಹ ಅಂತಹ ವೀರರನ್ನು ಸ್ಮರಣೆಯ ಕಾರ್ಯಕ್ರಮದ ಮೂಲಕ ಅವರ ಬಲಿದಾನವನ್ನು ಗೌರವಿಸಬೇಕು. ಇದರಿಂದ ವೃತ್ತಿಯಲ್ಲಿರುವ ಅರಣ್ಯ ರಕ್ಷಕರಿಗೆ ಪ್ರೇರಣೆ ಸಿಗುತ್ತದೆ. ಸಮಾಜ, ಸರ್ಕಾರ ತಮ್ಮೊಂದಿಗೆ ಇದೆ ಎಂಬ ಭಾವ ಮೂಡಿ ಅವರಲ್ಲಿ ನೈತಿಕ ಧೈರ್ಯ ಹೆಚ್ಚುತ್ತದೆ ಎಂದು ಅವರು ಹೇಳಿದರು.
ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್. ರವಿಶಂಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಟಿ.ವಿ. ಮಂಜುನಾಥ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ: ಬಿ.ಸಿ. ಸತೀಶ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಆಕೃತಿ ಬನ್ಸಾಲ್, ಉಪಅರಣ್ಯ ಸಂರಕ್ಷಣಾಧಿಕಾರಿ ಡಿ. ಮಹೇಶ್ಕುಮಾರ್, ಬಿ.ಎಸ್. ಡಿಸೋಜಾ, ದೀಪಾ ಜೆ. ಕಂಟ್ರಾಕ್ಟರ್ ಸೇರಿದಂತೆ ವಿವಿಧ ಅಧಿಕಾರಿಗಳು ಪಾಲ್ಗೊಂಡು ಹುತಾತ್ಮ ಯೋಧರ ಸ್ಮಾರಕಕ್ಕೆ ಗೌರವ ಸಮರ್ಪಣೆ ಮಾಡಿದರು.
ಧಾರವಾಡ ವಲಯ ಅರಣ್ಯಾಧಿಕಾರಿ ಆರ್.ಎಸ್. ಉಪ್ಪಾರ ಸ್ವಾಗತಿಸಿ, ಹುತಾತ್ಮರ ವಿವರ ವಾಚಿಸಿದರು. ಪರೇಡ್ ಕಮಾಂಡರ್ ಈರೇಶ್ ನಾಯಕ ನೇತೃತ್ವದಲ್ಲಿ ಅರಣ್ಯ ಸಂರಕ್ಷಕ ದಳದ ರಕ್ಷಕರು ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಡಾ: ವೈ.ಪಿ. ಕಲ್ಲನಗೌಡರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸೆ.13 ಮತ್ತು 14 ರಂದು ರಾಷ್ಟ್ರೀಯ ಸಮಾಜಶಾಸ್ತ್ರ ಕಾರ್ಯಾಗಾರ
ಧಾರವಾಡ : ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ವತಿಯಿಂದ ವಿಜ್ಞಾನ, ತಂತ್ರಜ್ಞಾನ ಹಾಗೂ ಸಮಾಜ: ಪ್ರತಿಕ್ರಿಯೆಗಳು, ಪ್ರತಿಫಲನಗಳು ಮತ್ತು ಜವಾಬ್ದಾರಿ ವಿಷಯದ ಕುರಿತು ಸೆ.13 ಮತ್ತು 14 ರಂದು ಎರಡು ದಿನಗಳ ರಾಷ್ಟ್ರೀಯ ಸಮಾಜಶಾಸ್ತ್ರ ಕಾರ್ಯಾಗಾರವನ್ನು ಗೋಲ್ಡನ್ ಜುಬ್ಲಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ. ಜೋಗನ್ ಶಂಕರ ಅವರು ಉದ್ಘಾಟಿಸುವರು. ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಪ್ರೊ. ಆರ್. ಇಂದಿರಾ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಹರಿಯಾಣದ ರೋಥಕ್ನ ಎಮ್.ಡಿ. ವಿಶ್ವವಿದ್ಯಾಲಯದ ನಿವೃತ್ತ ಪಾಧ್ಯಾಪಕ ಪ್ರೊ. ಬಿ.ಕೆ. ನಾಗಲಾ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡುವರು. ಕವಿವಿಯ ಪ್ರಭಾರಿ ಕುಲಪತಿ ಪ್ರೊ. ಎ.ಎಸ್. ಶಿರಾಳಶೆಟ್ಟಿ ಅಧ್ಯಕ್ಷತೆ ವಹಿಸುವರು. ಸೆ. 14 ರಂದು ಕಾರ್ಯಾಗಾರದ ಸಮಾರೋಪ ಸಮಾರಂಭ ನಡೆಯಲಿದೆ.