ಧಾರವಾಡ : ಹ್ಯುಮೇನ್ ಸೊಸೈಟಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆಯು ಹುಬ್ಬಳ್ಳಿ ಧಾರವಾಡ ಅವಳಿ ನಗರದ ಸಮುದಾಯ ಪ್ರಾಣಿಗಳ ಆರೋಗ್ಯ ರಕ್ಷಣೆ ಲಸಿಕೆ ಮತ್ತು ಸಂತಾನೋತ್ಪತ್ತಿ ನಿಯಂತ್ರಣ ಮತ್ತಿತರ ತುರ್ತು ವೈದ್ಯಕೀಯ ಆರೈಕೆಯನ್ನು ಪ್ರಾಣಿಗಳಿಗೆ ಒದಗಿಸಲು ನೀಡಿರುವ ಉತ್ತರ ಕರ್ನಾಟಕದ ಪ್ರಥಮ ಸಂಚಾರಿ ಪ್ರಾಣಿ ಚಿಕಿತ್ಸಾಲಯವನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ ಲೋಕಾರ್ಪಣೆ ಮಾಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ವಾಹನ ವೀಕ್ಷಿಸಿ ಮಾತನಾಡಿದ ಅವರು, ಸಮುದಾಯದ ನಾಯಿಗಳು, ಬೆಕ್ಕುಗಳು, ಬೀದಿ ಪ್ರಾಣಿಗಳ ಸಂರಕ್ಷಣೆಗೆ ಈ ಚಿಕಿತ್ಸಾಲಯ ನೆರವಾಗಲಿದೆ. ಎಚ್ಎಸ್ಐ ಸಂಸ್ಥೆಯ ಈ ಕೊಡುಗೆ ಶ್ಲಾಘನೀಯವಾಗಿದೆ ಎಂದರು.
ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಪರಮೇಶ್ವರ ನಾಯಕ್ ಮಾತನಾಡಿ, ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಈ ಸಂಚಾರಿ ಪ್ರಾಣಿ ಚಿಕಿತ್ಸಾಲಯ ಲಾಭದ ಉದ್ದೇಶವಿಲ್ಲದೆ ಪ್ರಾಣಿಗಳ ಸಂಕಟಕ್ಕೆ ಸ್ಪಂದಿಸಲು ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಎಚ್ ಎಸ್ ಐ ಇಂಡಿಯಾದ ಕಾರ್ಯಕ್ರಮ ವ್ಯವಸ್ಥಾಪಕ ಹೇಮಂತ್ ಬ್ಯಾಟರಾಯ್, ಡಾ.ವಿನಿತಾ ಪೂಜಾರಿ,ಡಾ.ಧೀರಜ್ ವೀರನಗೌಡರ್ ಸೇರಿದಂತೆ ಸಂಸ್ಥೆಯ ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.