ಪಶ್ಚಿಮ ಪದವಿಧರರ ಕ್ಷೇತ್ರ ಚುನಾವಣೆ; ನೀತಿ ಸಂಹಿತೆ ಪಾಲಿಸದಿದ್ದರೆ ಕಾನೂನು ಕ್ರಮ-ತಹಸಿಲ್ದಾರ್
ಭಟ್ಕಳ: ಅ.28 ರಂದು ನಡೆಯಲಿರುವ ಕರ್ನಾಟಕ ಪಶ್ಚಿಮ ಪದವಿಧರರ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು ಈ ಸಂದರ್ಭದಲ್ಲಿ ಯಾರಾದರೂ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಲ್ಲಿ ಕಾನೂನು ಕ್ರಮ ಜರಗಿಸಲಾಗುವುದು ಎಂದು ಭಟ್ಕಳ ತಹಸಿಲ್ದಾರ ರವಿಚಂದ್ರ ಹೇಳಿದರು.
ಅವರು ಗುರುವಾರ ತಹಸಿಲ್ದಾರ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು.
ಭಟ್ಕಳ ಕರ್ನಾಟಕ ವಿಧಾನಪರಿಷತ್ತಿನ ದ್ವೈವಾರ್ಷಿಕ 2020 ಪಶ್ಚಿಮ ಪದವಿಧರರ ಚುನಾವಣೆಯ ನಿಮಿತ್ತ ಸೆ.29ರಿಂದ ನ.5 ರ ವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ ಯಾರಾದರೂ ಕಾನೂನು ಉಲ್ಲಂಘನೆ ಮಾಡಿದ್ದಲ್ಲಿ ಅಂಥವರ ವಿರುದ್ಧ ಸೂಕ್ರ ಕಾನೂನು ಕ್ರಮ ಜರಗಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಭಟ್ಕಳದಲ್ಲಿ ಕೊರೋನಾ ಸೋಂಕಿತ ಸಂಖ್ಯೆ ಕಡಿಯಾಗುತ್ತಿದೆ ಎಂಬ ಮಾಹಿತಿ ನೀಡಿದ ಅವರು ಯಾವುದೇ ಕಾರಣಕ್ಕೂ ಜನರು ಮಾಸ್ಕ್ ಹಾಕದೆ ಇದ್ದರೆ ದಂಡವನ್ನು ವಸೂಲು ಮಾಡಲಾಗುವುದು. ಇದುವರೆಗೂ ಸುಮಾರು 30ಸಾವಿರ ರೂ ದಂಡವನ್ನು ವಸೂಲು ಮಾಡಲಾಗಿದೆ ಎಂದರು. ಅಂಗಡಿ ವ್ಯಾಪರಸ್ಥರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಕೂಡ ಪ್ರತಿ ಹಂತದಲ್ಲಿ ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯಗೊಳಿಸಿದೆ ಎಂದ ಅವರು, ಆದಷ್ಟು ಹೆಚ್ಚು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಮೂಲಕ ಕೊರೋನಾ ಸೋಂಕು ತಡೆಗಟ್ಟುವಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಭಟ್ಕಳದಲ್ಲಿ ಕೇವಲ 997 ಮತದಾರರು: ಭಟ್ಕಳದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪದವಿದರರಿದ್ದರು ಕೂಡ ಕೇವಲ 997 ಜನರು ಮಾತ್ರ ಪದವಿದರ ಮತದಾರರಾಗಿದ್ದು ಉಳಿದ ಪದವಿಧರರು ಎಲ್ಲಿ ಹೋದರು ಎಂಬ ಪ್ರಶ್ನೆ ಸಾಮಾನ್ಯರಲ್ಲಿ ಉದ್ಭವಗೊಂಡಿದೆ. ಪ್ರತಿ ಚುನಾವಣೆಯಲ್ಲೂ ಮತದಾರರು ಪ್ರತ್ಯೇಕವಾಗಿ ನೊಂದಾಯಿಸಿಕೊಳ್ಳಬೇಕಾಗಿದ್ದರಿಂದ ಪ್ರತಿ ಚುನಾವಣೆಯಲ್ಲೂ ಮತದಾರರ ಸಂಖ್ಯೆಯಲ್ಲಿ ಏರುಪೇರು ಆಗುತ್ತಿದೆ. ಅಲ್ಲದೆ ಪದವಿಧರರು ಆಸಕ್ತಿ ವಹಿಸಿ ನೊಂದಾವಣೆ ಮಾಡಿಕೊಳ್ಳದಿರುವುದು ಕೂಡ ಮತದಾರರ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ ಎನ್ನಲಾಗಿದೆ.