ಎದ್ದೇಳು ಕರ್ನಾಟಕದ ಪ್ರತಿನಿಧಿಗಳ ತಂಡದಿಂದ ಮುಖ್ಯಮಂತ್ರಿಗಳೊಂದಿಗೆ ಭೇಟಿ ಮತ್ತು ಸಂವಾದ

Source: SOnews | By Staff Correspondent | Published on 8th June 2023, 10:34 PM | State News |

ಬೆಂಗಳೂರು: ಎದ್ದೇಳು ಕರ್ನಾಟಕದ ಕಾರ್ಯಕಾರಿ ಸಮಿತಿಯ ಪ್ರತಿನಿಧಿಗಳು ಮತ್ತು ವಿವಿಧ ಸಮುದಾಯಗಳ ಸಂಘಟನೆಗಳ ಮುಂದಾಳುಗಳ ನಿಯೋಗವು ಇಂದು(ಜೂನ್ 8) ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ಹಲವು ಸಂಗತಿಗಳನ್ನು ಚರ್ಚಿಸಿತು.

ಕರ್ನಾಟಕದಲ್ಲಿ ಚುನಾವಣೆಗೆ ಮೊದಲು ಕೋಮುವಾದಿ‌ ಬಿಜೆಪಿಯ ವಿರುದ್ಧ ಎದ್ದೇಳು ಕರ್ನಾಟಕವನ್ನೂ ಒಳಗೊಂಡಂತೆ ಶ್ರಮಿಸಿದ  ಜನಪರ ಚಳುವಳಿಗಳು, ಕೆಲವು ಜನಪರ ಮಾಧ್ಯಮಗಳು ಮತ್ತು ಪ್ರಜ್ಞಾವಂತರ ಪಾತ್ರದ ಬಗ್ಗೆ ವಿವರಿಸುವುದರೊಂದಿಗೆ, ಶೋಷಿತರು, ದಲಿತ ದಮನಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರೇ ಮುಂತಾದ ಎಲ್ಲರ ಎದೆಯ ಮೇಲಿದ್ದ ಭಾರವನ್ನು ಇಳಿಸಿದಂತೆ ಅಸ್ತಿತ್ವಕ್ಕೆ ಬಂದಿರುವ ಈ ಸರ್ಕಾರದ ನೇತೃತ್ವ ವಹಿಸಿರುವ‌ ಮುಖ್ಯಮಂತ್ರಿಯವರನ್ನು ಎದ್ದೇಳು ಕರ್ನಾಟಕದ ಕಾರ್ಯಕಾರಿ ಮಂಡಳಿ ಸದಸ್ಯರಾದ ಕೆ ಎಲ್ ಅಶೋಕ್‌ರವರು ಅಭಿನಂದಿಸಿದರು.

ಅದೇ ರೀತಿ ಸರ್ಕಾರವು ಮುಂದಿನ‌ ದಿನಗಳಲ್ಲಿ ಗ್ಯಾರಂಟಿಗಳನ್ನು ಈಡೇರಿಸುವುದರ ಜೊತೆಗೆ, ಬಿಜೆಪಿಯ ದುರಾಡಳಿತದಿಂದಾಗಿ ಜಾರಿಗೆ ಬಂದಂತಹ ತಪ್ಪುಗಳನ್ನು ಸರಿಪಡಿಸಬೇಕಾದ ಗುರುತರ ಹೊಣೆಯನ್ನೂ ನಿರ್ವಹಿಸಬೇಕಿದೆಯೆಂದು ಕರ್ನಾಟಕ ಜನಶಕ್ತಿಯ ನೂರ್ ಶ್ರೀಧರ್‌ರವರು ಹೇಳುತ್ತಾ ಆರು ಅಂಶಗಳನ್ನು ಮುಂದಿಟ್ಟರು. ಭೂಮಿ ಮತ್ತು ವಸತಿ ವಂಚಿತರಿಗೆ ಆಗಿರುವ ಅನ್ಯಾಯ ಸರಿಪಡಿಸುವುದು, ರೈತವಿರೋಧಿ ಕೃಷಿಕಾಯ್ದೆಗಳನ್ನು ಹಿಂಪಡೆಯುವುದು ಮತ್ತು ನ್ಯಾಯಬದ್ಧ ಬೆಲೆಯ‌ವಿಚಾರ ಪರಿಶೀಲಿಸುವುದು, ಪಠ್ಯಕ್ರಮ- ಶಿಕ್ಷಣದ ಕೇಸರೀಕರಣ, ಸರ್ಕಾರಿ ಶಾಲೆಗಳ ದುರವಸ್ಥೆ ಹಾಗೂ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿ ಮಾಡಲಾದ ತಪ್ಪು ನಿರ್ಧಾರಗಳನ್ನು ಸರಿಪಡಿಸುವುದು, ಒಳಮೀಸಲಾತಿ ವಿವಾದ ಸಮುದಾಯಗಳನ್ನು ಒಡೆಯದಂತೆ ಎಚ್ಚರಿಕೆ ವಹಿಸುತ್ತಲೇ ಅದಕ್ಕೊಂದು ಎಲ್ಲ ಶೋಷಿತ ಜನರ ಪರವಾದ ಪರಿಹಾರ ಒದಗಿಸುವುದು, ಕನ್ನಡದ‌ ಜನಮಾನಸದಲ್ಲಿ ಆರೆಸ್ಸೆಸ್‌ ಬಿತ್ತಿರುವ ವಿಷವನ್ನು ಇಲ್ಲವಾಗಿಸುವಂತಹ ಸಹಬಾಳ್ವೆ ಪರವಾದ ಹೆಜ್ಜೆಗಳನ್ನು ಸರ್ಕಾರವೇ ಮುಂದಾಳತ್ವ ತೆಗೆದುಕೊಂಡು ಮುಂದಿಡುವುದು, ಹಾಗೆಯೇ ಯುವಜನರಿಗೆ ಉದ್ಯೋಗ ಸೃಷ್ಟಿ- ಉದ್ಯೋಗ ಭದ್ರತೆಯ ವಿಷಯದಲ್ಲಿ ಪರಿಣತರೊಂದಿಗೆ ಚರ್ಚಿಸಿ ದಿಟ್ಟ ಕ್ರಮಗಳಿಗೆ ಮುಂದಾಗುವುದು- ಈ ವಿಷಯಗಳು ಬೊಕ್ಕಸಕ್ಕೆ ಹೆಚ್ಚುವರಿ ಹೊರೆಮಾಡದಂತೆ ಜನಸಮುದಾಯಗಳ ಮತ್ತು ಚಳುವಳಿಗಳ ಸಹಭಾಗಿತ್ವದಲ್ಲಿ ನಡೆಯುವಂಥವಾದ್ದರಿಂದ ಕೂಡಲೇ ನಿರ್ಧಾರಗಳನ್ನು ತೆಗೆದುಕೊಳ್ಳಬಹುದಾದ್ದರಿಂದ, ಈ ಬಗ್ಗೆ ಚಿಂತಿಸಬೇಕೆಂದು ಮನವಿ ಮಾಡಲಾಯಿತು. 

ಪರಿಸರ ಹೋರಾಟಗಾರ್ತಿ ಹಾಗೂ ಎದ್ದೇಳು ಕರ್ನಾಟಕದ ಚಾಲನಾ ಸದಸ್ಯರಲ್ಲೊಬ್ಬರಾದ ತಾರಾ‌ರಾವ್ ಅವರು ಆಡಳಿತದಲ್ಲಿ ಉತ್ತರದಾಯಿತ್ವ ಹಾಗೂ ಜನಪರತೆಗಾಗಿ ಸಮುದಾಯಗಳು ಮತ್ತು ತಜ್ಞರೊಂದಿಗೆ ಸರ್ಕಾರಕ್ಕೆ ತಳಮಟ್ಟದತನಕ ನಿರಂತರ ಸಮನ್ವಯ ಇರುವಂತೆ ನೋಡಿಕೊಳ್ಳುವ ಮೂಲಕ, ಬಿಜೆಪಿಯ ವಿರುದ್ಧ ಇಡೀ ಭಾರತಕ್ಕೆ ಕರ್ನಾಟಕ ಹೊಸದೊಂದು ಮಾದರಿ ಆಡಳಿತ ನೀಡಬಹುದಾಗಿದೆಯೆಂದು ವಿವರಿಸಿದರು. ಮುಸ್ಲಿಂ ಸಮುದಾಯದ ನಾಯಕರಾದ ಮಹಮ್ಮದ್ ಯೂಸುಫ್ ಕನ್ನಿಯವರು 2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾರ್ಯನಿರ್ವಹಿಸಲು ಎದ್ದೇಳು ಕರ್ನಾಟಕ ರೂಪಿಸಿಕೊಂಡಿರುವ ಯೋಜನೆಯನ್ನು ಮುಂದಿಟ್ಟರು. ಜಾಗತಿಕ ಲಿಂಗಾಯತ ಮಹಾಸಭಾದ ಜಿ.ಬಿ.ಪಾಟೀಲರು ವಾಟ್ಸಾಪ್ ಮೂಲಕ ವಿಷಬೀಜ ಬಿತ್ತುತ್ತಿರುವ ಸಂಘಪರಿವಾರದ ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಸಲುವಾಗಿ ನಿರ್ದಿಷ್ಟ ಯೋಜನೆ ರೂಪಿಸಬೇಕೆಂದರು.  

ಮುಖ್ಯಮಂತ್ರಿಗಳನ್ನು ಭೇಟಿಮಾಡಿದ ತಂಡದ ನೇತೃತ್ವವನ್ನು ಚಾಲನಾ ಸಮಿತಿಯ ಸದಸ್ಯರಲ್ಲೊಬ್ಬರೂ ಹಿರಿಯರೂ ಆದ ವಿಜಯಮ್ಮ ಅವರು ವಹಿಸಿದ್ದರು. ನಿಯೋಗದ ಭಾಗವಾಗಿ  ದಲಿತ ಚಳುವಳಿಯ ಹಿರಿಯ ನಾಯಕರಾದ‌ ಎನ್. ವೆಂಕಟೇಶ್, ರೈತಮುಖಂಡರಾದ ವೀರಸಂಗಯ್ಯ, ಕ್ರೈಸ್ತ ಸಮುದಾಯದ ಪ್ರತಿನಿಧಿಯಾಗಿ ಫಾ. ಅರುಣ್ ಲೂಯಿಸ್, ಜಾಗತಿಕ ಲಿಂಗಾಯತ ಮಹಾಸಭಾದ ನಾಯಕರಾದ ಜಿ.ಬಿ.ಪಾಟೀಲ್, ಹಿಂದುಳಿದ ವರ್ಗಗಳ ಸಂಘಟನೆಗಳ ನಾಯಕರಾದ ರಾಮಚಂದ್ರಪ್ಪ ಮತ್ತು ಎಣ್ಣೆಗೆರೆ ವೆಂಕಟರಾಮಯ್ಯ, ಸ್ವರಾಜ್ ಅಭಿಯಾನದ ವಿಜಯ್ ಕುಮಾರ್ ಸೀತಪ್ಪ, ಜಮಾತ್ ಎ ಇಸ್ಲಾಮಿ ಹಿಂದ್‌ನ ನಾಯಕರಾದ ಅಕ್ಬರ್ ಅಲಿ ಉಡುಪಿ ಮತ್ತು  ಮೌಲಾನಾ ಹಾಮಿದ್ ಉಮರಿ, ವಿಚಾರವಾದಿ ಸಂಘದ ಅರಳುಕುಪ್ಪೆ ನಾಗೇಶ್, ಎದ್ದೇಳು ಕರ್ನಾಟಕದ ವರದರಾಜ್, ಕರ್ನಾಟಕ ಜನಶಕ್ತಿಯ ಮಲ್ಲಿಗೆ ಉಪಸ್ಥಿತರಿದ್ದರು.  

ಮುಖ್ಯಮಂತ್ರಿಗಳಿಗೆ ಜನತೆಯ ನಿರೀಕ್ಷೆಗಳ ಪತ್ರ ಸಲ್ಲಿಸಲಾಯಿತು. ಮುಖ್ಯಮಂತ್ರಿಗಳನ್ನು ನಿಯೋಗದ ಸದಸ್ಯರನ್ನುದ್ದೇಶಿಸಿ ವಿವರವಾಗಿ ಸರ್ಕಾರ ಮುಂದಿಡುತ್ತಿರುವ ಹೆಜ್ಜೆಗಳನ್ನು ವಿವರಿಸಿದರು, ಹಾಗೆಯೇ ನಿರ್ದಿಷ್ಟವಾದ ಕೆಲವು ಸಂಗತಿಗಳನ್ನು ಚರ್ಚಿಸಲು ಮತ್ತೆ ಸಭೆ ಗೊತ್ತುಪಡಿಸುವುದಾಗಿ ತಿಳಿಸಿದರು

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...