ಭಟ್ಕಳ: ಶಾಲೆಗೆ ಹೋಗುವ ಮಕ್ಕಳು ನಡೆದು ಸುಸ್ತಾಗದಿರಲಿ ಎಂದು ಸರಕಾರ ಸೈಕಲ್ ನೀಡುತ್ತಿದೆ. ಆದರೆ ಸೈಕಲ್ ತುಳಿದು ಶಾಲೆಯನ್ನು ತಲುಪುತ್ತಿದ್ದ ವಿದ್ಯಾರ್ಥಿಯೋರ್ವ ಅದೇ ಸೈಕಲ್ನಿಂದ ಶಾಲೆಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತರಕಾರಿ ಗಿಡಗಳಿಗೆ ನೀರುಣಿಸುವ ಸಾಧನವನ್ನು ಸಿದ್ಧಪಡಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ತಾಲೂಕಿನ ಹೆಬಳೆ ಗ್ರಾಮ ಪಂಚಾಯತ ವ್ಯಾಪ್ತಿಯ ಹೊನ್ನೆಗದ್ದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ಮನ್ವಿತ್ ಶಿವರಾಮ ನಾಯ್ಕ ಈ ನೀರೆತ್ತುವ ಸೈಕಲ್ನ್ನು ಚಲಾವಣೆಗೆ ತಂದವನಾಗಿದ್ದಾನೆ. ಈತ ಕೃಷಿಕ ಶಿವರಾಮ ಹಾಗೂ ಗೀತಾ ದಂಪತಿಗಳ ಪುತ್ರನಾಗಿದ್ದಾನೆ. ಭಟ್ಕಳ ಹೆಬಳೆ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಸೀಮಿತ ನೀರಿನ ಲಭ್ಯತೆಯನ್ನು ಬಳಸಿಕೊಂಡು ಹರಿಗೆ, ಮೂಲಂಗಿ, ಸಬ್ಬಸಿಗೆ ಇತ್ಯಾದಿ ತರಕಾರಿಗಳನ್ನು ಮೊದಲಿನಿಂದಲೂ ಬೆಳೆಯುತ್ತ ಬಂದಿದ್ದು, ಕಾಲಕ್ರಮೇಣ ನೀರು ಪೂರೈಸುವುದೇ ಕೃಷಿಕರಿಗೆ ಸವಾಲಾಗಿ ಪರಿಣಮಿಸುತ್ತಿದೆ. ತರಕಾರಿ ಗಿಡಗಳ ಮಗ್ಗುಲಿನಲ್ಲಿಯೇ ಗದ್ದೆಯಲ್ಲಿ ಹೊಂಡವನ್ನು ಕೊರೆದು ಸಿಕ್ಕಷ್ಟು ನೀರನ್ನು ಕೊಡದಲ್ಲಿ ತುಂಬಿಸಿಕೊಂಡು ಗಿಡಗಳಿಗೆ ನೀರುಣಿಸಲಾಗುತ್ತಿದೆ. ತರಕಾರಿ ಬೆಳೆಯುವ ಮನೆ ಮಂದಿಗೆ ನೀರೆತ್ತುವುದೇ ಹೊರೆಯಾಗುವುದನ್ನು ಗಮನಿಸಿದ ವಿದ್ಯಾರ್ಥಿ ಮನ್ವಿತ್, ಆನ್ಲೈನ್ ಹುಡುಕಾಟದಲ್ಲಿ ನೀರೆತ್ತುವ ಸೈಕಲ್ ತಂತ್ರಜ್ಞಾನವನ್ನು ತಲೆಗೆ ತುಂಬಿಸಿಕೊಂಡಿದ್ದಾನೆ. ಆತನಿಗೆ ಶಾಲೆಯ ವಿಜ್ಞಾನ ಶಿಕ್ಷಕಿಯಾಗಿರುವ ಜ್ಯೋತಿ, ಶಾಲಾ ಮುಖ್ಯೋಪಾಧ್ಯಾಯ ಡಿ.ಕೆ.ಅಳ್ವೆಕೋಡಿ, ಶಿಕ್ಷಕರಾದ ವಸಂತ ನಾಯ್ಕ, ಮತ್ತಿತರರ ನೆರವೂ ಸಿಕ್ಕಿದೆ. ಸೈಕಲ್ಗೆ ಮೋಟಾರ್ ಅಳವಡಿಸಿ, ಫೂಟ್ವಾಲ್ವ್ನ್ನು ಹೊಂಡಕ್ಕೆ ಇಳಿ ಬಿಟ್ಟು ಸೈಕಲ್ ತುಳಿದು ನೀರನ್ನು ಮೇಲಕ್ಕೆ ತರುವಲ್ಲಿ ಸಫಲನಾಗಿದ್ದಾನೆ. ಇದರಿಂದ ಈ ಭಾಗದಲ್ಲಿ ಗಿಡಗಳಿಗೆ ನೀರುಣಿಸಲು ಸುಲಭದ ತಂತ್ರಜ್ಞಾನ ಸಿಕ್ಕಂತಾಗಿದೆ! ಖರ್ಚುವೆಚ್ಚಗಳು ಕಡಿಮೆ ಆಗುವುದರಿಂದ ನೇರೆತ್ತುವ ಸೈಕಲ್ ಬಡ ರೈತನ ಸ್ನೇಹಿತ ಎಂದರೆ ತಪ್ಪೇನೂ ಇಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದ್ಯಾರ್ಥಿ ಮನ್ವಿತ್, ಸೈಕಲ್ ತುಳಿದು ನೀರು ಎತ್ತುವುದರಿಂದ ಪಾಲಕರಿಗೆ ಸಹಾಯ ಮಾಡಿದಂತಾಗುತ್ತದೆ. ಮಕ್ಕಳಷ್ಟೇ ಅಲ್ಲ, ದೊಡ್ಡವರೂ ಸೈಕಲ್ ತುಳಿದು ನೀರು ಎತ್ತಬಹುದು. ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಜಿಮ್ನ ದಾರಿ ಹಿಡಿಯುವವರು ಈ ಸೈಕಲ್ ತುಳಿದು ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ವಿದ್ಯುತ್ ಸಂಪರ್ಕ ಕಷ್ಟ ಇರುವ ಗದ್ದೆಗಳಲ್ಲಿ ಈ ಸೈಕಲ್ ಉಪಯೋಗಕ್ಕೆ ಬರುತ್ತದೆ ಎನ್ನುತ್ತಾನೆ. ಈತನ ಉತ್ಸಾಹಕ್ಕೆ ತಲೆದೂಗದೇ ನಮಗೆ ಬೇರೆ ದಾರಿ ಇಲ್ಲ! ಅಂದ ಹಾಗೆ ಮನ್ವಿತ್ ಓದುತ್ತಿರುವ ಹೊನ್ನೆಗದ್ದೆ ಶಾಲೆಯ ವಿದ್ಯಾರ್ಥಿಗಳು ಮಳೆಗಾಲದಲ್ಲಿ ಗದ್ದೆ ನಾಟಿ ಮಾಡಿ ರಾಜ್ಯಾದ್ಯಂತ ಸುದ್ದಿಯಾಗಿದ್ದನ್ನಿಲ್ಲಿ ಸ್ಮರಿಸಿಕೊಳ್ಳಬಹುದು.
ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಜಿಮ್ನ ದಾರಿ ಹಿಡಿಯುವವರು ಈ ಸೈಕಲ್ ತುಳಿದು ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ವಿದ್ಯುತ್ ಸಂಪರ್ಕ ಕಷ್ಟ ಇರುವ ಗದ್ದೆಗಳಲ್ಲಿ ಈ ಸೈಕಲ್ ಉಪಯೋಗಕ್ಕೆ ಬರುತ್ತದೆ.
- ನೀರೆತ್ತುವ ಸೈಕಲ್ನ ಒದಗಿಸಿದ ವಿದ್ಯಾರ್ಥಿ ಮನ್ವಿತ್