ಮಂಗಳೂರು : ಸೋಮವಾರ ಪ್ರಕಟಗೊಂಡ ಇನ್ಸಿಟ್ಯೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ನಡೆಸಿದ (ಚಾರ್ಟಡ್ ಅಕೌಂಟೆಂಟ್) ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಮಂಗಳೂರಿನ ರುತ್ ಕ್ಲಾರ್ ಡಿಸಿಲ್ವ ಪ್ರಥಮ ರ್ಯಾಂಕ್ ಪಡೆದಿದ್ದಾರೆ
ರುತ್ ಅವರು ರಾಷ್ಟ್ರ ಮಟ್ಟದಲ್ಲಿ ಪ್ರಥಮ ಬ್ಯಾಂಕ್ ಪಡೆದ ಪ್ರಥಮ ಮಂಗಳೂರಿಗರಾಗಿದ್ದಾರೆ. ಈಕೆ ಮಂಗಳೂರಿನ ರೋಸಿ ಮಾರಿಯಾ ಡಿಸಿಲ್ವಾ ಮತ್ತು ರಫರ್ಟ್ ಡಿಸಿಲ್ವಾ ದಂಪತಿಯ ಪುತ್ರಿ.
ಸಿಎ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಬ್ಯಾಂಕ್ ಪಡೆದ ರುತ್ ಇತಿಹಾಸ ಸೃಷ್ಟಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಪರೀಕ್ಷೆಯನ್ನು ಎದುರಿಸಿದ್ದ ಆಕೆ ಛಲ ಬಿಡದೆ ಮತ್ತೆ ಪರೀಕ್ಷೆಯನ್ನು ಎದುರಿಸಿ ಸಾಧಿಸಿ ತೋರಿಸಿದ್ದಾರೆ ಎಂದು ಆಕೆಯ ಮಾರ್ಗದರ್ಶಕ ಹಾಗೂ ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ (ಸಿಐಎಲ್)ನ ಸಂಚಾಲಕ ನಂದಗೋಪಾಲ್ ಅಭಿಪ್ರಾಯಿಸಿದ್ದಾರೆ.
ಮನೆಯಲ್ಲಿ ಸಂಭೃಮ:
ರುತ್ ಅವರ ಸಾಧನೆ ಆಕೆಯ ಮಾರ್ಗದರ್ಶಕರ ಜತೆಗೆ ಆಕೆಯ ಮನೆಯಲ್ಲಿಯೂ ಸಡಗರಕ್ಕೆ ಕಾರಣವಾಗಿದೆ. ಸಿಎ ಪರೀಕ್ಷೆಯ ಮೂರನೇ ಪ್ರಯತ್ನದಲ್ಲಿಯೇ ರುತ್ ಕ್ಲಾರ್ ಅವರು ಪ್ರಥಮ ರ್ಯಾಂಕ್ ಪಡೆದಿರುವುದು ಮಂಗಳೂರಿಗೆ ಹೆಮ್ಮೆ ತರಿಸಿದೆ. ಪೋಷಕರು, ಮಾರ್ಗದರ್ಶಕರು ಹಾಗೂ ತರಬೇತುದಾರರು ರುತ್ ಅವರ ಸಾಧನೆಯನ್ನು ಅಭಿನಂದಿಸುತ್ತಿದ್ದಾರೆ.
ರುತ್ ಡಿಸಿಲ್ವಾರಿಗೆ ಸಿಎ ಬಗ್ಗೆ ತರಬೇತಿ ನೀಡಿರುವ ವಿವಿಯನ್ ಅವರು ಪ್ರತಿಕ್ರಿಯೆ ನೀಡಿ, ಆಕೆ ಸಂವಹನ ಕೌಶಲ್ಯ ಅತ್ಯುತ್ತಮವಾಗಿದ್ದು, ತನ್ನ ಸಾಮರ್ಥ್ಯದ ಬಗ್ಗೆ ದೃಢ ನಂಬಿಕೆಯನ್ನು ಆಕೆ ಹೊಂದಿರುವುದೇ ಆಕೆಯ ಈ ಸಾಧನೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಸಿಪಿಟಿ ಪರೀಕ್ಷೆಯಲ್ಲಿ ರುತ್ ಜಿಲ್ಲೆಗೆ ಪ್ರಥಮ ರ್ಯಾಂಕ್ ಗಳಿಸಿದ್ದರು. ಸೈಂಟ್ ತೆರೆಸಾದಲ್ಲಿ ಶಾಲಾ ವಿದ್ಯಾಭ್ಯಾಸ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ದೂರ ಶಿಕ್ಷಣದಿಂದ ಪದವಿ ಶಿಕ್ಷಣ ಪಡೆದಿದ್ದಾರೆ.
“ಈ ಬಾರಿಯ ಪರೀಕ್ಷೆ ಕಠಿಣವಾಗಿತ್ತು. ಆದರೆ ನಾನು ಅತ್ಯುತ್ತಮವಾಗಿ ಪರೀಕ್ಷೆಯನ್ನು ಬರೆದಿದ್ದೆ. ಆದರೆ ಪ್ರಥಮ ಬ್ಯಾಂಕ್ ನಿರೀಕ್ಷೆ ಮಾಡಿರಲಿಲ್ಲ. ಸಿಎ ಪರೀಕ್ಷೆಯನ್ನು ತೇರ್ಗಡೆಯಾಗುವುದೇ ಅದ್ಭುತ” ಎಂದು ರುತ್ ಡಿಸಿಲ್ವಾ ಅಭಿಪ್ರಾಯಪಟ್ಟಿದ್ದಾರೆ.