ಧಾರವಾಡ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ವಿವಿಯ ಮಹಾತ್ಮ ಗಾಂಧಿ ಅಧ್ಯಯನ ವಿಭಾಗ ಸಹಯೋಗದಲ್ಲಿ ಅ.18 ರಿಂದ 20 ರವರೆಗೆ ವಿವಿಯ ಗಾಂಧೀ ಭವನದಲ್ಲಿ ಏರ್ಪಡಿಸಿರುವ ಮಹಾತ್ಮ ಗಾಂಧೀಜಿಯವರ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ದೀಪಾ ಚೋಳನ್, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ, ಕವಿವಿ ಕುಲಪತಿ ಡಾ.ಎ.ಎಸ್. ಶಿರಾಳಶೆಟ್ಟಿ, ಗಾಂಧಿ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಶಿವಾನಂದ ಶೆಟ್ಟರ್ ಚಾಲನೆ ನೀಡಿದರು.
ಪ್ರದರ್ಶನಕ್ಕೆ ಮೆಚ್ಚುಗೆ : ಪ್ರದರ್ಶನ ವೀಕ್ಷಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಗಾಂಧೀಜಿ ಅವರ ಜೀವನ ಸಾಧನೆಗಳ ಅಪರೂಪದ ಛಾಯಾಚಿತ್ರಗಳನ್ನು ಅತ್ಯದ್ಭುತವಾಗಿ ಪ್ರದರ್ಶಿಸಲಾಗಿದೆ. ಎಲ್ಲರಿಗೂ ಇದೊಂದು ಸದವಕಾಶವಾಗಿದೆ. ಸತ್ಯ, ಅಹಿಂಸೆಯ ಮೂಲಕ ಸ್ವಾತಂತ್ರ್ಯ ಹೋರಾಟ ಹಾಗೂ ಅಪಾರ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ತೋರಿಸಿದ ಮಹಾತ್ಮ ಗಾಂಧೀಜಿ ಅವರ ಸ್ಮರಣೆ ಸದಾಕಾಲವೂ ನಮಗೆಲ್ಲ ಪ್ರೇರಣಾದಾಯಕವಾಗಿದೆ ಎಂದು ತಮ್ಮ ಅಭಿಪ್ರಾಯ ದಾಖಲಿಸಿದರು.
ಗಾಂಧಿ ಅಧ್ಯಯನ ವಿಭಾಗದ ಡಾ.ಎಸ್.ಬಿ .ಬಸೆಟ್ಟಿ, ಡಾ. ಶೌಕತ್ ಅಜೀಂ,ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ವಾರ್ತಾ ಸಹಾಯಕ ಸುರೇಶ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.
ಜಾಗೃತಿಗೀತೆಗಳು : ಹರ್ಲಾಪುರದ ಅಭಿನಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ರಮೇಶ ಸಜ್ಜಗಾರ ಮತ್ತು ತಂಡದಿಂದ ಬೀದಿ ನಾಟಕ ಹಾಗೂ ಬೆಳವಟಿಗೆಯ ಹುಲಕುಂದ ಶಿವಲಿಂಗೇಶ್ವರ ಗೀಗೀ ಪದ ಮೇಳದ ಕಲಾವಿದರಿಂದ ಜನಪದ ಗೀತೆಗಳು ಪ್ರದರ್ಶನಗೊಂಡವು.
ಅಪರೂಪದ ಛಾಯಾಚಿತ್ರಗಳು: ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದ್ದ ಶಾಂತಿ, ಅಹಿಂಸೆ, ಸತ್ಯ ಎಂಬ ಅಂಶಗಳನ್ನು ಅಸ್ತ್ರಗಳನ್ನಾಗಿ ಮಾರ್ಪಡಿಸಿದ ಮೋಹನದಾಸ್ ಕರಮ್ ಚಂದ್ ಗಾಂಧಿ ಅವರು ಅವುಗಳನ್ನೇ ಬ್ರಿಟಿಷರ ವಿರುದ್ಧ ಪ್ರಯೋಗಿಸಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಯಶಸ್ವಿಯಾದರು.
ಛಾಯಾಗ್ರಹಣವು ಪರಿಪಕ್ವವಾಗಿರದ ಕಾಲದಲ್ಲಿ ಅತಿಹೆಚ್ಚು ಛಾಯಾಚಿತ್ರೀಕರಿಸಲ್ಪಟ್ಟ ವ್ಯಕ್ತಿಗಳಲ್ಲಿ ಗಾಂಧೀಜಿ ಅವರು ಪ್ರಮುಖರಾಗಿದ್ದಾರೆ. ಗಾಂಧೀಜಿ ಅವರ 150 ನೇ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ ಅವರ ಸಂದೇಶಗಳನ್ನು ಜನಸಮೂಹಕ್ಕೆ ಕೊಂಡೊಯ್ಯುವ ಪ್ರಯತ್ನವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಏರ್ಪಡಿಸಿರುವ ಮಹಾತ್ಮ ಗಾಂಧಿಯವರ ಅಪರೂಪದ ಛಾಯಾಚಿತ್ರಗಳ ಪ್ರದರ್ಶನವು ಗಾಂಧೀಜಿ ಅವರ ಜನ್ಮಸ್ಥಳ, ವ್ಯಾಸಂಗ ಮಾಡಿದ ರಾಜಕೋಟನ ಅಲ್ಫ್ರೆಡ್ ಪ್ರೌಢಶಾಲೆ, ಲಂಡನ್, ಜೋಹಾನ್ಸ್ ಬರ್ಗ್ ನಲ್ಲಿ ಕಾನೂನು ಅಧ್ಯಯನ, ವಕೀಲಿ ವೃತ್ತಿ, ಜೀವನ ಸಂಗಾತಿ ಕಸ್ತೂರ ಬಾ ಅವರೊಂದಿಗಿನ ಅಪರೂಪದ ಕ್ಷಣಗಳು, ತಮ್ಮ ಸತ್ಯಾಗ್ರಹಗಳ ಪ್ರಯೋಗ ಆರಂಭಿಸಿದ ದಿನಗಳು, ಸಬರಮತಿ ಆಶ್ರಮ, ಜಲಿಯನ್ ವಾಲಾಬಾಗ್, ಅಹಮಾದಾಬಾದ್ ಬಟ್ಟೆ ಕಾರ್ಖಾನೆ ಕಾರ್ಮಿಕರ ಹೋರಾಟ, ಚಂಪಾರಣ್ಯದ ಇಂಡಿಗೋ ಚಳವಳಿ, ಗಾಂಧಿ ಟೊಪ್ಪಿಗೆ ಧರಿಸಿದ ಅಪರೂಪದ ಫೋಟೋ, ಏಷಿಯನ್ ರಾಷ್ಟ್ರಗಳೊಂದಿಗೆ ಸಂಬಂಧ, ಫೀನಿಕ್ಸ್ ವಸಾಹತು, ಮದ್ರಾಸಿನಲ್ಲಿ ದಲಿತರಿಗಾಗಿ ಕೈಗೊಂಡ ಕಾರ್ಯಕ್ರಮ, ಕುಷ್ಠರೋಗಿಗಳ ಉಪಚಾರ, ಕರ್ನಾಟಕದಲ್ಲಿ ಗಾಂಧೀಜಿ ಭೇಟಿ ನೀಡಿದ ಸ್ಥಳಗಳು, ಪುಣೆಯ ಆಗಾಖಾನ್ ಅರಮನೆಯಲ್ಲಿರುವ ಗಾಂಧಿಜಿಯವರ ಪತ್ನಿ ಕಸ್ತೂರಬಾ ಹಾಗೂ ನಿಷ್ಠಾವಂತ ಕಾರ್ಯದರ್ಶಿ ಮಹದೇವ ದೇಸಾಯಿ ಅವರೊಂದಿಗಿನ ಕ್ಷಣಗಳು ಸೇರಿದಂತೆ ಲಂಕಾಶೈರ್ ಬಟ್ಟೆ ಗಿರಣಿ ವಿರುದ್ಧ ಹೋರಾಟ, ಗೌರವಾನ್ವಿತ ದೊರೆ ಐದನೇ ಜಾರ್ಜ್ ಅವರ ಕರೆಯ ಮೇರೆಗೆ ಭೇಟಿಯಾಗಲು ಬಂಕಿಂಗ್ ಹ್ಯಾಮ್ ಅರಮನೆಗೆ ತಮ್ಮ ಎಂದಿನ ಸೊಂಟದವರೆಗಿನ ಉಡುಪಿನಲ್ಲಿ ತೆರಳಿದ ಆಯ್ದ ಫೋಟೋಗಳು, ಆಕರ್ಷಕ ಗಾಂಧೀ ಪ್ರತಿಮೆಗಳು, ಚರಕ, ಸಾಕ್ಷ್ಯಚಿತ್ರ ಪ್ರದರ್ಶನ ಮನಸೆಳೆಯುತ್ತಿವೆ.
ರವಿವಾರದವರೆಗೆ ಪ್ರದರ್ಶನ ಮುಂದುವರೆಯಲಿದ್ದು ಸಾರ್ವಜನಿಕರು ಭೇಟಿ ನೀಡಿ ವೀಕ್ಷಣೆ ಮಾಡಬಹುದಾಗಿದೆ