ಮಡಿಕೇರಿ: ತಡೆಗೋಡೆ ನಿರ್ಮಾಣಕ್ಕಾಗಿ ಮಣ್ಣು ಅಗೆಯುತ್ತಿದ್ದ ಸಂದರ್ಭ ಬರೆ ಕುಸಿದು ಬಿದ್ದು, ಮಣ್ಣಿನಡಿ ಸಿಲುಕಿದ ಇಬ್ಬರು ಮಹಿಳಾ ಕಾರ್ಮಿಕರು ದಾರುಣವಾಗಿ ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.
ಹಾಸನದ ಬೇಲೂರು ಸಮೀಪವಿರುವ ಯಲಹಂಕ ನಿವಾಸಿ ಗೌರಮ್ಮ (45) ಹಾಗೂ ಚಿಕ್ಕಮಗಳೂರು ಮಾದೇರಹಳ್ಳಿ ನಿವಾಸಿ ಯಶೋಧ (22) ಮೃತರು ಎಂದು ಗುರುತಿಸಲಾಗಿದೆ.
ಮಡಿಕೇರಿ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಪಿ. ರಮೇಶ್ ಎಂಬವರಿಗೆ ಸೇರಿದ ಮನೆಯ ಮುಂಭಾಗದ ತಡೆಗೋಡೆಗಾಗಿ ಮಣ್ಣು ತೆಗೆಯುತ್ತಿದ್ದಾಗ ಏಕಾಏಕಿ ಬರೆ ಕುಸಿದ ಪರಿಣಾಮ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ಗೌರಮ್ಮ ಅವರ ಪತಿ ಮಾಷ ಬೋವಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಒಟ್ಟು 6 ಮಂದಿ ಕೂಲಿ ಕಾರ್ಮಿಕರು ರಮೇಶ್ ಅವರ ಮನೆಯ ತಡೆಗೋಡೆ ನಿರ್ಮಿಸುವ ಕಾಮಗಾರಿಗೆ ಅಡಿಪಾಯ ತೋಡುವ ಕೆಲಸದಲ್ಲಿ ನಿರತರಾಗಿದ್ದರು ಎನ್ನಲಾಗಿದೆ. ಕಾರ್ಮಿಕರು ಕಾರ್ಯನಿರತರಾಗಿದ್ದ ಸಂದರ್ಭ ಸುಮಾರು 20 ಅಡಿ ಎತ್ತರದ ಬರೆ ಕುಸಿದು ಬಿದ್ದಿದ್ದು, 5 ಮಂದಿ ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದರು. ಈ ಸಂದರ್ಭ ಸವಿತಾ ಹಾಗೂ ಹೊನ್ನ ಬೋವಿ ಎಂಬವರು ತಕ್ಷಣ ಮಣ್ಣಿನಡಿಯಿಂದ ಹೊರ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಮಾತ್ರವಲ್ಲದೆ, ಮಣ್ಣಿನಡಿಯಲ್ಲಿ ಸಿಲುಕಿ ಗಾಯಗೊಂಡ ಮತ್ತೋರ್ವ ಕಾರ್ಮಿಕ ನಂಜುಂಡ ಎಂಬಾತನನ್ನು ಇತರ ಕಾರ್ಮಿಕರು ಹೊರ ತೆಗೆಯುವಲ್ಲಿ ಸಫಲರಾಗಿದ್ದಾರೆ. ಆದರೆ, ಮಾಷ ಬೋವಿ, ಯಶೋಧ ಮತ್ತು ಗೌರಮ್ಮ ಅವರುಗಳನ್ನು ಮೇಲೆತ್ತಲು ಸಾಧ್ಯವಾಗಲಿಲ್ಲ.
ಈ ಬಗ್ಗೆ ಮಾಹಿತಿ ಅರಿತ ಮಡಿಕೇರಿ ನಗರ ಪೊಲೀಸರು ಸಾರ್ವಜನಿಕರ ಸಹಾಯದೊಂದಿಗೆ ಮಣ್ಣಿನಡಿ ಸಿಲುಕಿದ್ದವರನ್ನು ರಕ್ಷಿಸಲು ಮುಂದಾದರು. ಅರ್ಧ ಗಂಟೆಗೂ ಹೆಚ್ಚು ಕಾಲ ರಕ್ಷಣಾ ಕಾರ್ಯಾಚರಣೆಯ ಬಳಿಕ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿದ್ದ ಮಾಷ ಬೋವಿಯನ್ನು ಹೊರತೆಗೆದು, ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಆ ಬಳಿಕ ಯಶೋಧ ಮತ್ತು ಗೌರಮ್ಮ ಅವರ ರಕ್ಷಣೆಯ ಕಾರ್ಯಾಚರಣೆ ಮುಂದುವರಿಸಲಾಯಿತು. ನಂತರ ಇಬ್ಬರ ಶರೀರಗಳನ್ನು ಮಣ್ಣಿನಡಿಯಿಂದ ಹೊರತೆಗೆದು ತಕ್ಷಣ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರೂ, ಆ ಹೊತ್ತಿಗೆ ಇಬ್ಬರು ಮೃತಪಟ್ಟಿರುವುದು ದೃಢವಾಗಿತ್ತು.
ವಿಷಯ ಅರಿತು ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನಾ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ನಗರಸಭಾ ಪೌರಾಯುಕ್ತ ರಮೇಶ್ ಆಗಮಿಸಿ ಪರಿಶೀಲನೆ ನಡೆಸಿದರು. ಮಡಿಕೇರಿ ನಗರ ಪೊಲೀಸರು ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹಾಗೂ ಠಾಣಾಧಿಕಾರಿ ಷಣ್ಮುಗ ನೇತೃತ್ವದಲ್ಲಿ ಅಗ್ನಿ ಶಾಮಕ ದಳ ಮತ್ತು ಸಾರ್ವಜನಿಕರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.