ಕೋಮುಪ್ರಚೋದಕ ಪೋಸ್ಟ್’ಗೆ ಭುಗಿಲೆದ್ದ ಗಲಭೆ,ಪರಿಸ್ಥಿತಿ ನಿಯಂತ್ರಣಕ್ಕೆ
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಾಕಾರಿ ಪೋಸ್ಟ್ ಹಿನ್ನೆಲೆ ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. 50ಕ್ಕೂ ಅಧಿಕ ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಡಿ.ಜೆ.ಹಳ್ಳಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಪುಲಕೇಶಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸಂಬಂಧಿಯೋರ್ವ ಮಹಮ್ಮದ್ ಫೈಗಂಬರ್ ಬಗ್ಗೆ ಫೇಸ್ ಬುಕ್ ಪೋಸ್ಟ್ ಹಾಕಿದ್ದ. ಈ ಪೋಸ್ಟ್ ಇದೀಗ ಆಕ್ರೋಶಕ್ಕೆ ಕಾರಣವಾಗಿದೆ. ಶಾಸಕರ ಮನೆಯ ಮೇಲೆ ದಾಳಿ ನಡೆಸಿದ್ದು ಮನೆಯ ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ. ಅಲ್ಲದೇ ಆಫೀಸ್ ಬಳಿ ನಿಂತಿದ್ದ ಕಾರುಗಳ ಜಖಂಗೊಂಡಿದೆ. ಇಷ್ಟಕ್ಕೆ ಸುಮ್ಮನಾಗದ ಉದ್ರಕ್ತರ ಗುಂಪು ನಿಂತಿತ್ತ ವಾಹನಗಳಿಗೂ ಬೆಂಕಿ ಹಚ್ಚಿದೆ.
ಆರಂಭದಲ್ಲಿ ಡಿ.ಜೆ.ಹಳ್ಳಿ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಗುಂಪು ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿದ್ದರು. ನಂತರ ಶಾಸಕರ ಮನೆಯ ಮೇಲೆ ದಾಳಿ ನಡೆಸಿದೆ. ಘಟನಾ ಸ್ಥಳಕ್ಕೆ ಡಿ.ಜೆ.ಹಳ್ಳಿ ಠಾಣೆಯ ಪೊಲೀಸರು ಆಗಮಿಸಿದ್ದರೂ ಕೂಡ ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಡಿಸಿಪಿ ಶರಣಪ್ಪ ಅವರ ಕಾರು ಹಾಗೂ ಗಸ್ತುವಾಹನವನ್ನು ಜಖಂಗೊಳಿಸಲಾಗಿದೆ.